ಮಲೆ ಮಹದೇಶ್ವರ ಬೆಟ್ಟದ ದೊಡ್ಡಕೆರೆ ಅಪವಿತ್ರ, ಹೆಚ್ಚಿದ ಆತಂಕ
ಚಾಮರಾಜನಗರ, ಡಿಸೆಂಬರ್ 13: ಮಹದೇಶ್ವರ ನೆಲೆ ನಿಂತ ಭವ್ಯ ತಾಣ, ಯಾತ್ರಾಸ್ಥಳವೂ ಆಗಿರುವ ಮಲೆಮಹದೇಶ್ವರ ಬೆಟ್ಟದಲ್ಲಿರುವ ವಸತಿ ಗೃಹಗಳ ತ್ಯಾಜ್ಯ ನೀರು ಪಕ್ಕದಲ್ಲಿರುವ ದೊಡ್ಡಕೆರೆಗೆ ಸೇರುತ್ತಿರುವ ಕಾರಣ ಜಲಚರಗಳಿಗೆ ಮುಂದಿನ ದಿನಗಳಲ್ಲಿ ಸಂಕಷ್ಟ ಎದುರಾಗುವ ಸಾಧ್ಯತೆ ಹೆಚ್ಚಾಗಿದೆ.
ದೇವರ ತೆಪ್ಪೋತ್ಸವ ನಡೆಯುವ ಈ ಕೆರೆ ಮಲೀನವಾದರೆ ಹೇಗೆ ಎಂಬ ಅಸಮಾಧಾನವನ್ನು ಭಕ್ತರು ಹೊರಹಾಕುತ್ತಿದ್ದಾರೆ. ಮಲೆಮಹದೇಶ್ವರ ಬೆಟ್ಟಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು, ಪ್ರವಾಸಿಗರು ಬರುತ್ತಿದ್ದು, ಇಲ್ಲಿನ ವಸತಿ ಗೃಹಗಳಲ್ಲಿ ಒಂದಷ್ಟು ದಿನಗಳ ಕಾಲ ತಂಗಿದ್ದು ಹೋಗುತ್ತಾರೆ.
ಪ್ರವಾಸಿಗರ ಸಂಖ್ಯೆ ಹೆಚ್ಚಾಗುತ್ತಿದ್ದಂತೆಯೇ ಇಲ್ಲಿನ ವಸತಿ ಗೃಹಗಳು ಹೆಚ್ಚಾಗಿದ್ದು, ಎಷ್ಟೇ ಶುಚಿತ್ವಕ್ಕೆ ಒತ್ತು ನೀಡಿದರೂ ಅನೈರ್ಮಲ್ಯ ಹೆಚ್ಚಾಗುತ್ತಲೇ ಇದೆ. ಸದ್ಯ ಇಲ್ಲಿನ ವಸತಿಗೃಹಗಳ ತ್ಯಾಜ್ಯ ನೀರನ್ನು ಸಮರ್ಪಕವಾಗಿ ಚರಂಡಿಗೆ ಹರಿಯಲು ಬಿಡದ ಕಾರಣ ಅದು ನೇರವಾಗಿ ಕೆರೆಗೆ ಸೇರುತ್ತಿದೆ ಎನ್ನುವುದು ಸ್ಥಳೀಯರ ಆರೋಪವಾಗಿದೆ.
ಹಾಗೆ ನೋಡಿದರೆ ಮಹದೇಶ್ವರಬೆಟ್ಟದಲ್ಲಿ ಒಳಚರಂಡಿ ಕಾಮಗಾರಿಯನ್ನು ಆರಂಭಿಸಲಾಗಿದೆಯಾದರೂ ಅದು ಇನ್ನೂ ಪ್ರಗತಿಯಲ್ಲಿದೆ. ಹೀಗಾಗಿ ವಸತಿಗೃಹ, ಪಟ್ಟಣದ ಶೌಚಾಲಯಗಳು ಸೇರಿದಂತೆ ಇನ್ನಿತರಡೆಗಳಿಂದ ಹೊರ ಬರುವ ಮಲೀನ ನೀರು ಸಮರ್ಪಕವಾಗಿ ಹರಿಯುತ್ತಿಲ್ಲ. ಇದರಿಂದ ಜನಕ್ಕೆ ತೊಂದರೆಯಾಗುತ್ತಿದೆ.

ಸೊಳ್ಳೆಗಳು ಹೆಚ್ಚಲು ಕಾರಣ
ಜೊತೆಗೆ ನೀರು ಸರಾಗವಾಗಿ ಹರಿದು ಹೋಗದೆ ಒಂದೆಡೆ ಸಂಗ್ರಹವಾಗುತ್ತಿರುವುದರಿಂದ ದುರ್ವಾಸನೆ ಬೀರುತ್ತಿದೆಯಲ್ಲದೆ ಸೊಳ್ಳೆಗಳು ಹೆಚ್ಚಲು ಕಾರಣವಾಗಿದೆ.ಇದೆಲ್ಲದರ ನಡುವೆ ಇಡೀ ಪಟ್ಟಣದ ವಸತಿಗೃಹ ಮಾತ್ರವಲ್ಲದೆ ಶೌಚಗೃಹಗಳ ಮಲೀನ ನೀರು ನೇರವಾಗಿ ದೊಡ್ಡಕೆರೆಯನ್ನು ಸೇರುತ್ತಿರುವುದು ಕಂಡು ಬರುತ್ತಿದೆ.

ರೋಗ ರುಜಿನಗಳ ಭಯ
ಶೌಚಗೃಹಗಳ ಮಲೀನ ದೊಡ್ಡಕೆರೆಯನ್ನು ಸೇರುತ್ತಿರುವುದರಿಂದ ಕೆರೆಯ ಪಾವಿತ್ರ್ಯತೆ ಹಾಳಾಗುತ್ತಿದ್ದು, ಜಲಚರಗಳಿಗೆ ಕಂಟಕವಾಗುವುದಲ್ಲದೆ, ರೋಗ ರುಜಿನಗಳಿಗೂ ಕಾರಣವಾಗುವ ಭಯ ಸ್ಥಳೀಯರನ್ನು ಕಾಡತೊಡಗಿದೆ.

ಪವಿತ್ರ ಕೆರೆ ಎಂಬ ನಂಬಿಕೆ
ಪ್ರತಿ ತಿಂಗಳು ಕೋಟ್ಯಂತರ ರೂ ಆದಾಯ ತಂದುಕೊಡುತ್ತಿರುವ ಮಲೆಮಹದೇಶ್ವರ ಕ್ಷೇತ್ರದಲ್ಲಿನ ಸಮಸ್ಯೆಗಳನ್ನು ಪ್ರಾಧಿಕಾರವು ಪರಿಹರಿಸದೆ ಹೋದರೆ ಜನರ ಆಕ್ರೋಶಕ್ಕೆ ಕಾರಣವಾಗಬೇಕಾಗುತ್ತದೆ. ಏಕೆಂದರೆ ಇವತ್ತು ಮಲೀನ ನೀರು ಸೇರುತ್ತಿರುವ ದೊಡ್ಡಕೆರೆಯನ್ನು ಭಕ್ತರು ಪವಿತ್ರ ಕೆರೆ ಎಂಬ ನಂಬಿದ್ದಾರೆ.

ಕ್ರಮ ಕೈಗೊಳ್ಳಿ
ಇದೇ ಕೆರೆಯಲ್ಲಿ ಪ್ರತಿವರ್ಷ ವಿಜಯದಶಮಿ, ದೀಪಾವಳಿ ಹಾಗೂ ಕಡೆ ಕಾರ್ತಿಕ ಸೋಮವಾರದಂದು ಮಹದೇಶ್ವರನ ತೆಪ್ಪೋತ್ಸವ ನಡೆಯುತ್ತದೆ. ಹೀಗಿರುವಾಗ ಈ ಕೆರೆಗೆ ಮಲೀನ ನೀರು ಸೇರುತ್ತದೆ ಎಂದರೆ ಭಕ್ತರು ಆಕ್ರೋಶಗೊಳ್ಳುವುದು ಸಾಮಾನ್ಯ. ಇನ್ನು ಮುಂದೆಯಾದರೂ ಸಂಬಂಧಿಸಿದವರು ಇತ್ತ ಗಮನಹರಿಸಿ ಕ್ರಮ ಕೈಗೊಳ್ಳಬೇಕಾದ ಅಗತ್ಯವಿದೆ.












Click it and Unblock the Notifications