ಕರ್ನಾಟಕ; 6ನೇ ಹುಲಿ ಸಂರಕ್ಷಿತ ಪ್ರದೇಶ ಶೀಘ್ರವೇ ಘೋಷಣೆ
ಚಾಮರಾಜನಗರ, ಜನವರಿ 25; ಶೀಘ್ರದಲ್ಲಿಯೇ ಕರ್ನಾಟಕದಲ್ಲಿ 6ನೇ ಹುಲಿ ಸಂರಕ್ಷಿತ ಪ್ರದೇಶ ಘೋಷಣೆಯಾಗಲಿದೆ. ಇದಕ್ಕಾಗಿ ಈಗಾಗಲೇ ಕೇಂದ್ರ ಸರ್ಕಾರ ಪ್ರಾಥಮಿಕ ಅನುಮತಿಯನ್ನು ನೀಡಿದೆ. ರಾಜ್ಯ ಸರ್ಕಾರ ಈ ಕುರಿತು ಅಧಿಕೃತವಾಗಿ ಘೋಷಣೆ ಮಾಡಲಿದೆ.
ಮಲೆ ಮಹದೇಶ್ವರ ವನ್ಯಧಾಮವನ್ನು ಹುಲಿ ಸಂರಕ್ಷಿತ ಪ್ರದೇಶ ಎಂದು ಘೋಷಣೆ ಮಾಡಲಾಗುತ್ತದೆ. ಅರಣ್ಯ ಇಲಾಖೆ ಈ ಕುರಿತು ಅಧಿಕೃತ ಘೋಷಣೆ ಮಾಡಲು ತಯಾರಿಯನ್ನು ನಡೆಸುತ್ತಿದೆ. ಶನಿವಾರದಿಂದ ಬಂಡೀಪುರದಲ್ಲಿ ಹುಲಿ ಗಣತಿ ನಡೆಯುತ್ತಿದೆ. ಬಿಆರ್ಟಿ ವ್ಯಾಪ್ತಿಯಲ್ಲಿ ಜನವರಿ 27ರಿಂದ ಗಣತಿ ಕಾರ್ಯ ನಡೆಯಲಿದೆ. ಹುಲಿ ಗಣತಿ ಪೂರ್ಣಗೊಂಡ ಬಳಿಕ ಘೋಷಣೆಯಾಗುವ ನಿರೀಕ್ಷೆ ಇದೆ.
ನಿಟ್ಟುಸಿರು ಬಿಟ್ಟ ನೀಲಗಿರಿ ಜಿಲ್ಲೆ ಜನ; ನರಭಕ್ಷಕ ಹುಲಿ ಸೆರೆ
300 ಅರಣ್ಯ ಇಲಾಖೆ ಸಿಬ್ಬಂದಿ ಹುಲಿ ಗಣತಿಯಲ್ಲಿ ಪಾಲ್ಗೊಂಡಿದ್ದಾರೆ. ಕೋವಿಡ್ ಕಾರಣದಿಂದಾಗಿ ಯಾವುದೇ ಸ್ವಯಂ ಸೇವಕರು ಹುಲಿ ಗಣತಿಯಲ್ಲಿ ಪಾಲ್ಗೊಳ್ಳುತ್ತಿಲ್ಲ. ಸಿಬ್ಬಂದಿಗಳು ಪ್ರತಿದಿನ 5 ಕಿ. ಮೀ. ಸಂಚಾರ ನಡೆಸಿ 91 ಬೀಟ್ಗಳಲ್ಲಿ ಗಣತಿ ಕಾರ್ಯ ನಡೆಸಲಿದ್ದಾರೆ.
ಬಂಡೀಪುರ; ಹುಲಿ ಜೊತೆ ಸಸ್ಯಾಹಾರಿ ಪ್ರಾಣಿಗಳ ಗಣತಿ
2018ರಲ್ಲಿಯೇ ಪಸ್ತಾವನೆ; 2018ರಲ್ಲಿ ನಡೆದ ಹುಲಿ ಗಣತಿ ಸಂದರ್ಭದಲ್ಲಿ ಮಲೆ ಮಹದೇಶ್ವರ ವನ್ಯಧಾಮ ಪ್ರದೇಶದಲ್ಲಿ 18 ರಿಂದ 20 ಹುಲಿಗಳಿಗೆ ಎಂದು ತಿಳಿದು ಬಂದಿತ್ತು. ಆದ್ದರಿಂದ ಹುಲಿ ಸಂರಕ್ಷಿತ ಪ್ರದೇಶ ಎಂದು ಘೋಷಣೆ ಮಾಡಲು ರಾಜ್ಯ ಸರ್ಕಾರ ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರಕ್ಕೆ ಪ್ರಸ್ತಾವನೆ ಸಲ್ಲಿಕೆ ಮಾಡಿತ್ತು.
ಅಂತಾರಾಷ್ಟ್ರೀಯ ಹುಲಿ ದಿನ: ಇತಿಹಾಸ, ಮಹತ್ವ, ಘೋಷಣೆಗಳು
ಪ್ರಾಧಿಕಾರ ಕೇಳಿದ್ದ ಕೆಲವು ಸ್ಪಷ್ಟನೆಗಳನ್ನು ಸಹ ರಾಜ್ಯ ಸರ್ಕಾರ ಒದಗಿಸಿದ್ದು, ಹುಲಿ ಸಂರಕ್ಷಿತ ಪ್ರದೇಶ ಎಂದು ಘೋಷಣೆ ಮಾಡಲು ಹಸಿರು ನಿಶಾನೆ ಸಿಕ್ಕಿದೆ. ವನ್ಯಧಾಮದ ಉತ್ತರಕ್ಕೆ ಕಾವೇರಿ ವನ್ಯಧಾಮ, ದಕ್ಷಿಣಕ್ಕೆ ಸತ್ಯಮಂಗಲ ಹುಲಿ ಸಂರಕ್ಷಿತ ಪ್ರದೇಶ, ಪೂರ್ವಕ್ಕೆ ಬಿಳಿಗಿರಿ ರಂಗನಾಥ ಸ್ವಾಮಿ ದೇವಾಲಯ ಹುಲಿ ಸಂರಕ್ಷಿತ ಪ್ರದೇಶಗಳಿವೆ. ಆದ್ದರಿಂದ ಇದು ಹುಲಿಗಳ ವಾಸಕ್ಕೆ ಯೋಗ್ಯವಾದ ಪ್ರದೇಶ ಎಂಬುದು ಲೆಕ್ಕಾಚಾರವಾಗಿದೆ.
ಕರ್ನಾಟಕದಲ್ಲಿ ಈಗಾಗಲೇ 5 ಹುಲಿ ಸಂರಕ್ಷಿತ ಪ್ರದೇಶಗಳಿವೆ. ಮಲೆ ಮಹದೇಶ್ವರ ವನ್ಯಧಾಮ ಹುಲಿ ಸಂರಕ್ಷಿತ ಪ್ರದೇಶ ಎಂದು ಘೋಷಣೆಯಾದರೆ 6ನೇ ಹುಲಿ ಸಂರಕ್ಷಿತ ಪ್ರದೇಶವಾಗಲಿದೆ. ಚಾಮರಾಜನಗರ ಜಿಲ್ಲೆಯಲ್ಲಿಯೇ ಎರಡು ಹುಲಿ ಸಂರಕ್ಷಿತ ಪ್ರದೇಶವಿದ್ದು, ಮಲೆ ಮಹದೇಶ್ವರ ವನ್ಯಧಾಮ ಜಲ್ಲೆಯ 3ನೇಹುಲಿ ಸಂರಕ್ಷಿತ ಪ್ರದೇಶವಾಗಲಿದೆ.
ವನ್ಯಧಾಮ ಎಂದು ಘೋಷಣೆ; 2013ರಲ್ಲಿ ಮಹದೇಶ್ವರ ಬೆಟ್ಟ, ಹನೂರು, ಯಡೆಯಾರಳ್ಳಿ ರಕ್ಷಿತ ಅರಣ್ಯವನ್ನು ಒಗ್ಗೂಡಿಸಿ 906 ಚದರ ಕಿ. ಮೀ. ವಿಸ್ತೀರ್ಣದ ಮಲೆ ಮಹದೇಶ್ವರ ವನ್ಯಧಾಮ ಎಂದು ಘೋಷಣೆ ಮಾಡಲಾಯಿತು. ಈಗ ಈ ವನ್ಯಧಾಮವನ್ನು ಹುಲಿ ಸಂರಕ್ಷಿತ ಪ್ರದೇಶ ಎಂದು ಘೋಷನೆ ಮಾಡಲು ತಯಾರಿ ನಡೆದಿದೆ.
ಹುಲಿ ಸಂರಕ್ಷಿತ ಪ್ರದೇಶ ಎಂದು ಘೋಷಣೆ ಮಾಡುವ ಮೊದಲು ವ್ಯಾಪ್ತಿಗೆ ಸೇರುವ ಗ್ರಾಮಗಳು, ಜನವಸತಿ ಪ್ರದೇಶಗಳು, ಧಾರ್ಮಿಕ ಕ್ಷೇತ್ರ, ಪ್ರವಾಸೋದ್ಯಮ ಕ್ಷೇತ್ರ ಮುಂತಾವುಗಳ ಗಡಿಗಳನ್ನು ಗುರುತಿಸಬೇಕಿದೆ. ಭಾರತದಲ್ಲಿ ಪ್ರಸ್ತುತ 50 ಹುಲಿ ಸಂರಕ್ಷಿತ ಪ್ರದೇಶಗಳಿವೆ.
2020ರಲ್ಲಿ ನಡೆದ ಗಣತಿಯಂತೆ ಮಧ್ಯಪ್ರದೇಶದಲ್ಲಿ 526, ಕರ್ನಾಟಕದಲ್ಲಿ 524, ಉತ್ತರಾಖಂಡ ರಾಜ್ಯದಲ್ಲಿ 442 ಹುಲಿಗಳಿವೆ. ಈ ಬಾರಿಯ ಗಣತಿ ಪೂರ್ಣಗೊಂಡ ಬಳಿಕ ಕರ್ನಾಟಕದಲ್ಲಿ ಎಷ್ಟು ಹುಲಿಗಳಿವೆ? ಎಂಬ ಮಾಹಿತಿ ತಿಳಿಯಲಿದೆ.
ಹೇಗೆ ಹುಲಿ ಗಣತಿ ನಡೆಯಲಿದೆ?; ಮೈಸೂರು ಮತ್ತು ಕೊಡಗು ಗಡಿಭಾಗಕ್ಕೆ ಹೊಂದಿಕೊಂಡಿರುವ ನಾಗರಹೊಳೆ ಹುಲಿ ಅರಣ್ಯ ಸಂರಕ್ಷಿತ ಪ್ರದೇಶದಲ್ಲಿ ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದ ನಿರ್ದೇಶನದಂತೆ 5ನೇ ರಾಷ್ಟ್ರೀಯ ಹುಲಿ ಗಣತಿಯನ್ನು ನಾಗರಹೊಳೆ ಹುಲಿ ಅರಣ್ಯ ಸಂರಕ್ಷಿತ ಪ್ರದೇಶದಲ್ಲಿ ಜನವರಿ 23 ರಿಂದ ಫೆಬ್ರವರಿ 7ರವರೆಗೆ ಎರಡು ಹಂತದಲ್ಲಿ ಹಮ್ಮಿಕೊಳ್ಳಲಾಗಿದೆ.
ನಾಲ್ಕು ವರ್ಷಕ್ಕೊಮ್ಮೆ ನಡೆಯುವ ನಡೆಯುವ ಗಣತಿ ಇದಾಗಿದ್ದು, ಈ ಬಾರಿ ನಡೆಯುತ್ತಿರುವುದು ಐದನೇ ರಾಷ್ಟ್ರೀಯ ಹುಲಿ ಗಣತಿಯಾಗಿದೆ. ಇದಕ್ಕೆ ಪೂರಕವಾಗಿ 2021ರ ಏಪ್ರಿಲ್ ಮತ್ತು ಮೇ ತಿಂಗಳಲ್ಲಿಯೇ ಕ್ಯಾಮರಾ ಟ್ರ್ಯಾಪಿಂಗ್ ಮೂಲಕ ಹುಲಿ ಗಣತಿ ನಡೆಸಲಾಗಿತ್ತು.
ಈ ಬಾರಿಯ ಹುಲಿ ಗಣತಿಯಲ್ಲಿ ಸಸ್ಯಹಾರಿ ಪ್ರಾಣಿಗಳು ಹಾಗೂ ಸಸ್ಯ ಪ್ರಭೇಧಗಳ ಸಮೀಕ್ಷೆಯಲ್ಲಿ ರಣಹದ್ದುಗಳು ಹಾಗೂ ಮಾಂಸಹಾರಿ ಪಕ್ಷಿ ಪ್ರಬೇಧಗಳ ಮಾಹಿತಿಯನ್ನೂ ಕೂಡ ಸಂಗ್ರಹಿಸಲಾಗುತ್ತಿದೆ. ಮಾಂಸಹಾರಿ ಪ್ರಾಣಿ, ಪಕ್ಷಿಗಳ ಆಹಾರದ ಕುರಿತಾಗಿಯೂ ಗಣತಿಯನ್ನು ನಡೆಸಲಾಗುತ್ತದೆ.