ನನ್ನನ್ನು ಬರಿಗೈಯಲ್ಲಿ ಕಳುಹಿಸಬೇಡಿ, ಕಳುಹಿಸಿದರೆ ನಿಮಗೇ ಲಾಸ್: ಚಾಮರಾಜನಗರದಲ್ಲಿ ಮತದಾರರಿಗೆ ಸೋಮಣ್ಣ ಮನವಿ
ಚಾಮರಾಜನಗರ, ಏಪ್ರಿಲ್, 16: ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆ, ವರುಣಾ ಬಳಿಕ ಚಾಮರಾಜನಗರದಲ್ಲಿ ಬಿಬಿಜೆ ಅಭ್ಯರ್ಥಿ ವಿ.ಸೋಮಣ್ಣ ಮತಬೇಟೆ ಆರಂಭಿಸಿದ್ದು, ಚಾಮರಾಜನಗರ ತಾಲೂಕಿನ ಜಿಲ್ಲಾ ಪಂಚಾಯತ್ ಕ್ಷೇತ್ರಗಳಲ್ಲಿ ಬಹಿರಂಗ ಸಭೆಗಳನ್ನು ನಡೆಸಿದರು.
ಕೂಡ್ಲೂರು ಮಂಟೇಸ್ವಾಮಿ ದೇವಾಲಯಕ್ಕೆ ತೆರಳಿ ಪೂಜೆ ಸಲ್ಲಿಸುವ ಮೂಲಕ ಪ್ರಚಾರ ಆರಂಭಿಸಿದ ಸೋಮಣ್ಣ, ಆಲೂರು, ಚಂದಕವಾಡಿ, ಅರಕಲವಾಡಿ ಗ್ರಾಮಗಳಲ್ಲಿ ಬಹಿರಂಗ ಸಭೆ ನಡೆಸಿ ತಮಗೆ ಒಂದು ಅವಕಾಶ ಕೊಡುವಂತೆ ಕೈ ಮುಗಿದು ಪ್ರಾರ್ಥಿಸಿದರು.

20 ಸಾವಿರ ಮತಗಳ ಅಂತರದಿಂದ ಗೆಲ್ಲುತ್ತಿದ್ದೆ
ಇನ್ನು ಚಂದಕವಾಡಿ ಗ್ರಾಮದಲ್ಲಿ ನಡೆದ ಬಹಿರಂಗ ಸಮಾವೇಶದಲ್ಲಿ ಮಾತನಾಡಿದ ಅವರು, ನಾನು ಕೇಳಿಕೊಂಡು ಚಾಮರಾಜನಗರಕ್ಕೆ ಬರಲಿಲ್ಲ. ಮನೆಯಲ್ಲಿ ಮಲಗಿದ್ದರೂ 20 ಸಾವಿರ ಮತಗಳ ಅಂತರದಿಂದ ಗೋವಿಂದರಾಜನಗರದಲ್ಲಿ ಗೆಲ್ಲುತ್ತಿದ್ದೆ. ವರಿಷ್ಠರು ದೂರದೃಷ್ಟಿ ಇಟ್ಟುಕೊಂಡು ನನ್ನನ್ನು ಇಲ್ಲಿಗೆ ಕಳುಹಿಸಿದ್ದಾರೆ. ನನ್ನನ್ನು ಬರಿಗೈಯಲ್ಲಿ ಕಳುಹಿಸಬೇಡಿ, ಕಳುಹಿಸಿದರೇ ನಿಮಗೇ ಲಾಸ್ ಎಂದರು.
ನಾನು ನನ್ನ ಮಗನಿಗೆ ಟಿಕೆಟ್ ಕೇಳಿದ್ದೆ. ಆದರೆ ನಿನಗೇ ಇನ್ನೂ ಶಕ್ತಿ ಇದೆ ಎಂದು ಹೇಳಿ ಎರಡು ಟಿಕೆಟ್ ಕೊಟ್ಟರು. ಚಾಮರಾಜನಗರದ 4 ಕ್ಷೇತ್ರಗಳಲ್ಲೂ ಬಿಜೆಪಿ ಗೆಲ್ಲಬೇಕಿದ್ದು, ಪಕ್ಷಗಳನ್ನೆಲ್ಲ ಬದಿಗಿಟ್ಟು ನನಗೆ ಮತ ಕೊಡಿ. ನಿಮ್ಮ ಮತದ ಮೌಲ್ಯವನ್ನು ಅಭಿವೃದ್ಧಿ ಮೂಲಕ ತೋರಿಸುತ್ತೇನೆ. 24*7 ನಿಮ್ಮ ಸೇವೆ ಮಾಡುತ್ತೇನೆ. 3 ಸಾರಿ ಅವರಿಗೆ ಅವಕಾಶ ಕೊಟ್ಟಿದ್ದೀರಿ, ಒಂದು ಸಾರಿ ನನಗೆ ಅವಕಾಶ ಕೊಡಿ ಎಂದು ಮನವಿ ಮಾಡಿದರು.
ಗೋ ಬ್ಯಾಕ್ ಎಂದವರು ಈಗ ಜೊತೆ ಜೊತೆಯಲಿ
ಟಿಕೆಟ್ ಘೋಷಣೆಗೂ ಮುನ್ನ ಗೋ ಬ್ಯಾಕ್ ಸೋಮಣ್ಣ ಎಂದಿದ್ದ ಶಕ್ತಿ ಕೇಂದ್ರದ ಪ್ರಮುಖರು ಹಾಗೂ ಟಿಕೆಟ್ ಘೋಷಣೆಯಾದ ಬಳಿಕ ಅಸಮಾಧಾನಗೊಂಡಿದ್ದ ಪ್ರೊ.ಮಲ್ಲಿಕಾರ್ಜುನಪ್ಪ ಮತ್ತಿತರರು ವೇದಿಕೆ ಹಂಚಿಕೊಂಡು ಒಗ್ಗಟ್ಟು ಪ್ರದರ್ಶನ ಮಾಡಿದರು. ಸೋಮಣ್ಣ ಎಂದರೆ ಅಭಿವೃದ್ಧಿ, ಸೋಮಣ್ಣ ಎಂದರೆ ಕಾರ್ಯಕ್ಷಮತೆ ಎಂದು ಬ್ಯಾಟಿಂಗ್ ಪರವಾಗಿ ಮಾಡಿದರು.

ಹಾಗೆಯೇ ವರುಣ ಕ್ಷೇತ್ರದ ಬಗ್ಗೆ ಹೆಚ್ಚು ಗಮನ ಕೊಡಬೇಕಿರುವುದರಿಂದ ಚಾಮರಾಜನಗರಕ್ಕೆ ಹೆಚ್ಚು ಬರಲಾಗಲ್ಲ. ಇಲ್ಲಿನ ಮುಖಂಡರು, ಕಾರ್ಯಕರ್ತರೇ ಓಡಾಡಿ ಬಿಜೆಪಿ ಸಾಧನೆಗಳನ್ನು ತಿಳಿಸಿ ಅಭ್ಯರ್ಥಿ ಗೆಲುವಿಗೆ ಸಹಕರಿಸಬೇಕೆಂದು ಕೋರಿದರು.
ರಣನೀತಿ ರೂಪಿಸಲು ವಿ.ಸೋಮಣ್ಣ ಸಜ್ಜು
ವರುಣ ಕ್ಷೇತ್ರದ ಬಳಿಕ ಚಾಮರಾಜನಗರದಲ್ಲಿ ಚುನಾವಣಾ ರಣನೀತಿ ರೂಪಿಸಲು ಬಿಜೆಪಿ ಅಭ್ಯರ್ಥಿ ವಿ.ಸೋಮಣ್ಣ ಸಜ್ಜಾಗಿದ್ದಾರೆ. ಈಗಾಗಲೇ ಶನಿವಾರ ಪ್ರಚಾರ ಕೈಗೊಂಡಿದ್ದು, ಭಾನುವಾರವೂ ಕೂಡ ಚಾಮರಾಜನಗರದಲ್ಲೇ ವಾಸ್ತವ್ಯ ಹೂಡಿ ಪ್ರಚಾರ ನಡೆಸಲಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಚಾಮರಾಜನಗರದಲ್ಲಿ ಸಚಿವ ವಿ.ಸೋಮಣ್ಣ ಹೊಸ ಮನೆ ಮಾಡಿದ್ದು, ಸದ್ದಿಲ್ಲದೇ ಸೋಮಣ್ಣ ಪತ್ನಿ ಆಗಮಿಸಿ ಹೊಸ ಮನೆಗೆ ಪೂಜೆ ಸಲ್ಲಿಸಿ ತೆರಳಿದ್ದಾರೆ. ವರುಣದಷ್ಟೇ ಚಾಮರಾಜನಗರದಲ್ಲೂ ಸೋಮಣ್ಣ ಪ್ರಬಲ ಸ್ಪರ್ಧೆ ಎದುರಿಸಿಬೇಕಾಗಿದ್ದು, ಇದಕ್ಕಾಗಿ ಚಾಮರಾಜನಗರದಲ್ಲೇ ವಾಸ್ತವ್ಯ ಹೂಡಿ ರಣನೀತಿ ರೂಪಿಸುವುದರ ಜೊತೆಗೆ ಭರ್ಜರಿ ಮತಬೇಟೆಯನ್ನು ಮಾಡಲಿದ್ದಾರೆ.
ಸಮಯವಕಾಶ ಕಡಿಮೆ ಇರುವ ಹಿನ್ನೆಲೆಯಲ್ಲಿ ತಾಲೂಕು ಪಂಚಾಯತಿ ಕ್ಷೇತ್ರವಾರು ಪ್ರಚಾರ ನಡೆಸಿ, ಬಹಿರಂಗ ಸಭೆ, ಮುಖಂಡರನ್ನು ಭೇಟಿಯಾಗಿ ತಮ್ಮದೇ ಆದ ಶೈಲಿಯಲ್ಲಿ ಅಖಾಡಕ್ಕೆ ಇಳಿಯಲಿದ್ದಾರೆ.
ಬಂಡಾಯ ಶಮನದತ್ತ ಗಮನ
ಈಗಾಗಲೇ ಬಿಜೆಪಿಯಲ್ಲಿನ ಬಂಡಾಯ ಅರ್ಧ ಶಮನವಾಗಿದ್ದು, ಸೋಮಣ್ಣನವರ ಹಾದಿ ಸುಗಮವಾಗುತ್ತಿದೆ. ಒಟ್ಟಿನಲ್ಲಿ ವರುಣ ಹಾಗೂ ಚಾಮರಾಜನಗರದಲ್ಲಿ ಕಮಲ ವಿಜಯ ಪತಾಕೆ ಹಾರಿಸಲು ಹತ್ತಾರು ಅಸ್ತ್ರ ಪ್ರಯೋಗಿಸಲಿರುವ ಸೋಮಣ್ಣ ಇಲ್ಲೇ ಮೊಕ್ಕಾಂ ಹೂಡಿ ಕಾರ್ಯಕರ್ತರಲ್ಲಿ ರಣೋತ್ಸಾಹ ತುಂಬಲಿದ್ದಾರೆ.
ಅಲ್ಲದೇ ಈಗಾಗಲೇ ಶನಿವಾರ ಕೂಡ್ಲೂರು, ಆಲೂರು, ಚಂದಕವಾಜೀವ ಬೇಕಾದ್ರೆ ಬಿಡುತ್ತೇನೆ, ಬಿಜೆಪಿ ಪಕ್ಷ ತೊರೆಯುವುದಿಲ್ಲ: ಎಸ್.ಎ.ರಾಮದಾಸ್ ಸ್ಪಷ್ಟನೆ.












Click it and Unblock the Notifications