ಗ್ರಾ.ಪಂ ಚುನಾವಣೆ: ತಂಬೂರಿ ಕಲಾವಿದನ ವಿಶಿಷ್ಟ ಶೈಲಿಯ ಮತಯಾಚನೆ
ಚಾಮರಾಜನಗರ, ಡಿಸೆಂಬರ್ 21: ಚಾಮರಾಜನಗರ ಜಿಲ್ಲೆಯಲ್ಲಿ ಜಾನಪದ ತಂಬೂರಿ ನುಡಿಸುವ ಕಲಾವಿದರೊಬ್ಬರು ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಸ್ಪರ್ಧಿಸಿದ್ದು, ಇದೀಗ ವಿನೂತನ ರೀತಿಯಲ್ಲಿ ಮತಯಾಚನೆ ಮಾಡುತ್ತಿದ್ದಾರೆ.
ಗ್ರಾಮ ಪಂಚಾಯತಿ ಅಭ್ಯರ್ಥಿಯು ತಂಬೂರಿ ನುಡಿಸುವ ಮೂಲಕ ಮತದಾರರ ಮನೆಬಾಗಿಲಿಗೆ ತೆರಳಿ ಮತ ಯಾಚನೆ ಮಾಡಿ ಗಮನ ಸೆಳೆದಿದ್ದಾರೆ. ಇದು ಚಾಮರಾಜನಗರದ ಸಮೀಪದ ದೊಡ್ಡಮೋಳೆ ಗ್ರಾಮದಲ್ಲಿ ಕಂಡುಬಂದಿದ್ದು, 62 ವರ್ಷದ ಸಿದ್ದಶೆಟ್ಟಿ ಅವರು ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಕಣಕ್ಕಿಳಿದಿದ್ದಾರೆ.
ಇವರು ಕಳೆದ ಇಪ್ಪತ್ತು ವರ್ಷಗಳಿಂದಲೂ ಚುನಾವಣೆಯಲ್ಲಿ ಸ್ಪರ್ಧಿಸುತ್ತಾ ಬಂದಿದ್ದಾರೆ. ಆದರೆ ಗೆಲುವಂತೂ ಸಿಕಿಲ್ಲ. ಗೆಲ್ಲುವ ತನಕ ನಾನು ಸ್ಪರ್ಧಿಸಿಯೇ ತೀರುತ್ತೇನೆ ಎಂದು ಛಲ ಬಿಡದ ಈ ಕಲಾವಿದ ಹತ್ತಾರು ವರ್ಷಗಳಿಂದ ಮತ ಕೇಳುತ್ತಲೆ ಇದ್ದಾರೆ.

ಈ ಜಾನಪದ ಕಲಾದವಿದನಿಗೆ ಇದು ಐದನೇ ಚುನಾವಣೆಯಾಗಿದೆ. ದೊಡ್ಡಮೋಳೆ ಗ್ರಾಮದ ಮೊದಲನೆಯ ವಾರ್ಡ್ ನಿಂದ ಚುನಾವಣೆಗೆ ಸ್ಪರ್ಧಿಸಿರುವ ಸಿದ್ದಶೆಟ್ಟಿ, ಈ ಬಾರಿ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಗ್ರಾಮಾಭಿವೃದ್ಧಿಯ ಕನಸು ಹೊತ್ತಿರುವ ನನಗೆ ಮತವನ್ನು ಹಾಕುವ ಮೂಲಕ ನನ್ನ ಕನಸನ್ನು ನನಸನ್ನಾಗಿಸಿ ಎಂದು ತಾವು ಸ್ಪರ್ಧಿಸಿರುವ ವಾರ್ಡ್ ನಲ್ಲಿ ತಂಬೂರಿಯನ್ನು ನುಡಿಸುತ್ತಾ ಮತದಾರರಲ್ಲಿ ಮನವಿ ಮಾಡುತ್ತಿದ್ದಾರೆ. ನನಗೆ ಭಿಕ್ಷೆ ಬೇಡ, ಹಣ ಬೇಡ, ನನ್ನ ಸಿತಾರ್ ಗುರುತಿಗೆ ನಿಮ್ಮ ಮತ ಭಿಕ್ಷೆ ನೀಡಿ ಎಂದು ಮನವಿ ಮಾಡುವ ಮೂಲಕ ಗಮನ ಸೆಳೆದಿದ್ದಾರೆ.












Click it and Unblock the Notifications