ಚಾಮರಾಜನಗರದಲ್ಲಿ ಮಳೆ ಅವಾಂತರ: ನೆಲಕ್ಕುರುಳಿದ ವಿದ್ಯುತ್ ಕಂಬ
ಚಾಮರಾಜನಗರ, ಅಕ್ಟೋಬರ್ 16: ಜಿಲ್ಲೆಯಾದ್ಯಂತ ಕಳೆದ ಮೂರು ದಿನಗಳಿಂದ ಗುಡುಗು ಮಿಂಚು ಸಹಿತ ಭಾರಿ ಮಳೆಯಾಗುತ್ತಿದ್ದು ಜಲಾಶಯಗಳು, ಕೆರೆ ಕಟ್ಟೆಗಳಿಗೆ ಭಾರಿ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ.
ಚಾಮರಾಜನಗರ, ಗುಂಡ್ಲುಪೇಟೆ, ಹನೂರಿನ ಹತ್ತಾರು ಕೆರೆಗಳು ಕೋಡಿ ಬಿದ್ದಿವೆ, ಹಳ್ಳಗಳು ಉಕ್ಕಿ ಹರಿಯುತ್ತಿದ್ದು ಬೆಳೆಗಳು ಜಲಾವೃತವಾಗಿ ರೈತರು ನಷ್ಟದ ಭೀತಿಯನ್ನು ಎದುರಿಸುತ್ತಿದ್ದಾರೆ.
ಚಾಮರಾಜನಗರ ತಾಲ್ಲೂಕಿನ ಸುವರ್ಣಾವತಿ ಹಾಗೂ ಚಿಕ್ಕಹೊಳೆ ಜಲಾಶಯಗಳಿಂದ 1,400 ಕ್ಯುಸೆಕ್ಗಳಷ್ಟು ನೀರನ್ನು ನದಿಗೆ ಹರಿಸಲಾಗುತ್ತಿದೆ.

ಜಮೀನುಗಳಿಗೆ ನುಗ್ಗಿದ ಮಳೆ ನೀರು
ನಿರಂತರ ಮಳೆಯಿಂದ ಮರಗದಕೆರೆ, ಕೋಡಿಮೋಳೆ ಕೆರೆ ಸೇರಿದಂತೆ ವಿವಿಧ ಕೆರೆಗಳ ಹೆಚ್ಚುವರಿ ನೀರು ಕೂಡ ಸುವರ್ಣಾವತಿ ನದಿ ಸೇರುತ್ತಿದ್ದು, ನದಿಯ ನೀರಿನ ಮಟ್ಟ ಹೆಚ್ಚಾಗಿ ನದಿ ಪಾತ್ರದ ಜಮೀನುಗಳಿಗೆ ನೀರು ನುಗ್ಗಿದೆ. ನಿರಂತರ ಮಳೆಯಿಂದ ಯಳಂದೂರಿನಲ್ಲಿ ನೆರೆ ಪರಿಸ್ಥಿತಿ ನಿರ್ಮಾಣವಾಗಿದೆ. ಚಿಕ್ಕಮೋಳೆ, ದೊಡ್ಡಮೋಳೆ, ಬ್ಯಾಡಮೂಡ್ಲು ಗ್ರಾಮಗಳಲ್ಲಿ ಕೆರೆಗಳು ಉಕ್ಕಿ ಹರಿದಿರುವುದರಿಂದ ಪ್ರವಾಹ ಸ್ಥಿತಿ ನಿರ್ಮಾಣವಾಗಿದೆ.

ಕೊಳ್ಳೇಗಾಲ-ರಾಮಪುರ ರಸ್ತೆ ಬಂದ್
ಹನೂರು ತಾಲ್ಲೂಕಿನ ಹೂಗ್ಯಂ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಶನಿವಾರ ರಾತ್ರಿ ಸುರಿದ ಭಾರಿ ಮಳೆಗೆ ವಿದ್ಯುತ್ ಕಂಬಗಳು ನೆಲಕ್ಕುರುಳಿದೆ. ಕಳೆದ 3 ದಿನಗಳಿಂದ ಸತತ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಹೂಗ್ಯಂ ಜಲಾಶಯ ಭರ್ತಿಯಾಗಿ ಕೋಡಿ ಬಿದ್ದಿದ್ದು, ಕೊಳ್ಳೇಗಾಲದಿಂದ ರಾಮಪುರ ಮಾರ್ಗದ ರಸ್ತೆ ಬಂದ್ ಆಗಿದೆ. ಒಂದೆಡೆ ರಸ್ತೆ ಜಲಾವೃತ, ಮತ್ತೊಂದೆಡೆ ರಸ್ತೆ ಬಂದ್ ಆಗಿದ್ದು ವಾಹನ ಸವಾರರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.

ತಪ್ಪಿದ ಭಾರೀ ಅನಾಹುತ
ರಾಮಪುರದಿಂದ ಹೂಗ್ಯಂ ಗ್ರಾಮಕ್ಕೆ ತೆರಳುತ್ತಿದ್ದ ಬೊಲೆರೋ ವಾಹನದ ಮೇಲೆ ವಿದ್ಯುತ್ ಕಂಬ ಬಿದ್ದಿದೆ. ಭಾರಿ ಮಳೆ ಹಿನ್ನೆಲೆಯಲ್ಲಿ ವಿದ್ಯುತ್ ಸ್ಥಗಿತಗೊಳಿಸಲಾಗಿತ್ತು ಹೀಗಾಗಿ ಸಂಭವಿಸುತ್ತಿದ್ದ ದೊಡ್ಡ ಅನಾಹುತವೊಂದು ತಪ್ಪಿದೆ. ಇನ್ನು ಹೂಗ್ಯಂ ಮುಖ್ಯರಸ್ತೆಯಲ್ಲಿದ್ದ ಹತ್ತಕ್ಕೂ ಹೆಚ್ಚು ವಿದ್ಯುತ್ ಕಂಬಗಳು ನೆಲಕ್ಕುರುಳಿದ್ದು, ಜನ ಜೀವನ ಅಸ್ತವ್ಯಸ್ತಗೊಂಡಿದೆ.
ಚಾಮರಾಜನಗರ ಗುಂಡ್ಲುಪೇಟೆ ತಾಲೂಕಿನಲ್ಲೂ ಉತ್ತಮ ಮಳೆಯಾಗುತ್ತಿದ್ದು ಬೇಗೂರು, ಬೆಳಚವಾಡಿ ರಸ್ತೆ ಜಲಾವೃತಗೊಂಡಿದೆ. ಶಾಲೆಗಳ ಆವರಣ, ಮನೆಗಳಿಗೆ ಮಳೆ ನೀರು ನುಗ್ಗಿದ್ದು, ವರುಣನ ಆರ್ಭಟಕ್ಕೆ ಜನ ಹೈರಾಣಾಗಿದ್ದಾರೆ.

ಕಾಲು-ಕೈ ಸ್ವಾಧೀನ ಕಳೆದುಕೊಂಡ ಮಹಿಳೆ
ಸಿಡಿಲಿನ ಹೊಡೆತಕ್ಕೆ ಮಹಿಳೆಯೊಬ್ಬರು ಕಾಲು-ಕೈ ಸ್ವಾಧೀನ ಕಳೆದುಕೊಂಡಿರುವ ಘಟನೆ ಹನೂರು ತಾಲ್ಲೂಕಿನ ಪೊನ್ನಾಚಿ ಗ್ರಾಮದಲ್ಲಿ ನಡೆದಿದೆ. ಪೊನ್ನಾಚಿ ಗ್ರಾಮದ ಜಡೆ ಮಾದಮ್ಮ(39) ಎಂಬವರು ಗಾಯಗೊಂಡವರು. ಜಮೀನಿನಲ್ಲಿ ಕಳೆ ಕೀಳುತ್ತಿದ್ದ ವೇಳೆ ಸಿಡಿಲು ಬಡಿದಿದೆ ಎನ್ನಲಾಗಿದೆ. ಸಿಡಿಲ ಬಡಿತದಿಂದ ಜಡೆ ಮಾದಮ್ಮ ಅವರ ಕೈ-ಕಾಲು ಸ್ವಾಧೀನ ಕಳೆದುಕೊಂಡಿದೆ. ಅದೃಷ್ಟವಶಾತ್ ಜೀವ ಹಾನಿ ಸಂಭವಿಸಿಲ್ಲ. ಜಡೆ ಮಾದಮ್ಮ ಅವರನ್ನು ಸಮಾಜಸೇವಕ ರಾಜು ಕೊಳ್ಳೇಗಾಲ ಆಸ್ಪತ್ರೆಗೆ ದಾಖಲಿಸಿದ್ದಾರೆ.












Click it and Unblock the Notifications