ಹನೂರು: ಕೇವಲ 8 ತಿಂಗಳಲ್ಲಿ ನೂರಾರು ದೇಗುಲಗಳ ಜೀರ್ಣೋದ್ಧಾರ ಮಾಡಿದ ಬಿಜೆಪಿ ಟಿಕೆಟ್ ಆಕಾಂಕ್ಷಿ, ವಿವರ ಇಲ್ಲಿದೆ
ಹನೂರು ಕ್ಷೇತ್ರದಲ್ಲಿ ಕೇವಲ 8 ತಿಂಗಳಲ್ಲಿ ನೂರಾರು ದೇಗುಲಗಳ ಜೀರ್ಣೋದ್ಧಾರ ಮಾಡುವ ಮೂಲಕ ಬಿಜೆಪಿ ಟಿಕೆಟ್ ಆಕಾಂಕ್ಷಿಯೊಬ್ಬರು ಜನಮನ್ನಣೆ ಪಡೆದಿದ್ದಾರೆ. ಹಾಗಾದರೆ "ಆ" ಬಿಜೆಪಿ ಆಕಾಂಕ್ಷಿಯ ಯಾರು ಎನ್ನುವ ವಿವರ ಇಲ್ಲಿದೆ ನೋಡಿ.
ಚಾಮರಾಜನಗರ, ಫೆಬ್ರವರಿ, 24: ಹನೂರು ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿ ಗುರುತಿಸಿಕೊಂಡಿರುವ ನಿಶಾಂತ್ ಎಂಬವವರು ಕಳೆದ 8 ತಿಂಗಳಲ್ಲಿ ನೂರಾರು ದೇಗುಲ, ಭವನ ನಿರ್ಮಾಣ ಮಾಡಿ ಭಾವನಾತ್ಮಕ ಮತಬೇಟೆ ನಡೆಸಿದ್ದು ಬೇರೆ ಪಕ್ಷದವರಿಗೆ ನಿದ್ರೆಗೆಡಿಸುವಂತೆ ಮಾಡಿದ್ದಾರೆ.
ಹನೂರು ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿ ಗುರುತಿಸಿಕೊಂಡಿರುವ ನಿಶಾಂತ್ ಸರಿಸುಮಾರು 149 ದೇಗುಲ, 25 ಮಠಗಳನ್ನು ಜೀರ್ಣೋದ್ಧಾರ ಮಾಡಿ ಗಮನ ಸೆಳೆದಿದ್ದಾರೆ. ಈ ಮೂಲಕ ಕಡಿಮೆ ಅವಧಿಯಲ್ಲೇ ಜನರ ಗಮನ ಸೆಳೆದು ಅಚ್ಚರಿ ಮೂಡಿಸಿದ್ದಾರೆ.
ಬೇಡಗಂಪಣ ಹಾಗೂ ಸೋಲಿಗ ಮತವು ಹನೂರು ಕ್ಷೇತ್ರದಲ್ಲಿ ನಿರ್ಣಾಯಕ ಆಗಿರುವುದರಿಂದ ನಿಶಾಂತ್ ಅವರ ಈ ಧಾರ್ಮಿಕ ಕಾರ್ಯಗಳು ಜನರ ಮನ ಗೆಲ್ಲುತ್ತಿದೆ. ಸೋಲಿಗ ಮಹಿಳೆಯೊಬ್ಬರು ತಮ್ಮ ಮಗುವಿಗೆ ನಿಶಾಂತ್ ಎಂದು ನಾಮಕರಣ ಮಾಡಿರುವುದು 8 ತಿಂಗಳಲ್ಲಿ ನಿಶಾಂತ್ ಮಾಡಿರುವ ಮೋಡಿಗೆ ಸಾಕ್ಷಿಯಾಗಿದೆ. ಕಾಮಗೆರೆ ಗ್ರಾಮದಲ್ಲಿ ಕಂಡಾಯ ಉತ್ಸವ ನಡೆಸಲು ಹಾಗೂ ಬೆಳ್ಳಿ ಸಾಮಾನುಗಳನ್ನು ಮಾಡಿಸಲು ದೇಣಿಗೆ ಕೇಳಿದ ವೇಳೆ 5 ಕೆ.ಜಿ ಬೆಳ್ಳಿಯನ್ನೇ ನಿಶಾಂತ್ ಕೊಟ್ಟು ಮೆಚ್ಚುಗೆಗೆ ಪಾತ್ರವಾಗಿದ್ದಾರೆ. ಜೊತೆಗೆ, ಬೇರೆಯವರು ಹೌಹಾರುವಂತೆಯೂ ಮಾಡಿದ್ದಾರೆ.

ರಸ್ತೆ ದುರಸ್ತಿ ಮಾಡಿಸಿದ ನಿಶಾಂತ್
ಕಾಡಿನ ಹಾದಿಯಲ್ಲಿ ಮಕ್ಕಳನ್ನು ಶಾಲೆಗೆ ಕಳುಹಿಸಲು ಕಷ್ಟ ಸಾಧ್ಯ ಎಂದು ನಿಶಾಂತ್ ಬಳಿ ಅಳಲು ತೋಡಿಕೊಂಡ ವೇಳೆ ತಮ್ಮ ಹಣದಲ್ಲಿ 2.5 ಕಿ.ಮೀ. ಬಿದರಹಳ್ಳಿ ಸಮೀಪ ಕಚ್ಚಾ ರಸ್ತೆಯನ್ನು ನಿರ್ಮಾಣ ಮಾಡಿದ್ದಾರೆ. ಒಡೆಯರಪಾಳ್ಯದಲ್ಲಿ 20 ವರ್ಷಗಳಿಂದ ಶಿಥಿಲಾವಸ್ಥೆಗೆ ತಲುಪಿದ್ದ ಲಿಂಗಾಯತರ ಭವನವನ್ನು ಐದಾರು ತಿಂಗಳಲ್ಲಿ ಜೀರ್ಣೋದ್ಧಾರ ಮಾಡಿದ್ದಾರೆ. ಇದನ್ನು ಸುತ್ತೂರು ಶ್ರೀಗಳಿಂದ ಉದ್ಘಾಟಿಸಿದ್ದು, ಈ ಮೂಲಕ ಭಾವನಾತ್ಮಕವಾಗಿ ಜನರನ್ನು ತಮ್ಮತ್ತ ಸೆಳೆಯುತ್ತಿದ್ದಾರೆ.

500 ಜನರನ್ನು ಸೇರಿಸಿ ಎಂದು ಆಕ್ರೋಶ
ಕಳೆದ ಮಂಗಳವಾರ ಹನೂರಿನಲ್ಲಿ ನಡೆದ ಪ್ರಜಾಧ್ವನಿ ಯಾತ್ರೆಯಲ್ಲಿ ಶಾಸಕ ನರೇಂದ್ರ ಮಾತನಾಡಿ, ಬೆಂಗಳೂರಿನಿಂದ ಬಂದು ಇಲ್ಲಿ ಜನರನ್ನು ಖರೀದಿ ಮಾಡುತ್ತಿದ್ದಾರೆ. ಆದರೆ ಹನೂರು ಕ್ಷೇತ್ರ ಮಾರಟಕ್ಕಿಟ್ಟಿಲ್ಲ, ತಾಕತ್ತಿದ್ದರೇ ದುಡ್ಡು ಕೊಡದೇ 500 ಜನರನ್ನು ಸೇರಿಸಿ ಎಂದು ಕಿಡಿಕಾರಿದ್ದರು.
ಇದಕ್ಕೆ ನಿಶಾಂತ್ ಪ್ರತಿಕ್ರಿಯಿಸಿದ್ದು, ಬೆಂಗಳೂರಿನಲ್ಲಿ ಸೇವೆ ಮಾಡುವ ಅಗತ್ಯವಿಲ್ಲ. ಆದರೆ ಹನೂರಿನಲ್ಲಿ ಅದರ ಅವಶ್ಯಕತೆ ಇದೆ. ಕಳೆದ 75 ವರ್ಷಗಳಿಂದ ರಸ್ತೆ ಇಲ್ಲದಿರುವುದು ಶಾಸಕರಿಗೆ ಗೊತ್ತಿರಲಿಲ್ಲ. ಆದರೆ ಅದನ್ನು ನಾನು ಮಾಡಿದೆ, ನೂರಾರು ದೇವಾಲಯಗಳನ್ನು ಜೀರ್ಣೋದ್ಧಾರ ಮಾಡಿದ್ದೇನೆ. ಮಠಗಳನ್ನು ಜೀರ್ಣೋದ್ಧಾರ ಮಾಡಿದ್ದೇನೆ. ಅಭಿಮಾನಿಗಳು ತನ್ನ ಫೋಟೋ ಹಾಕಿ ಸೀರೆ ಕೊಟ್ಟರೆ ಅದಕ್ಕೆ ತಾನೇನು ಮಾಡಕ್ಕಾಗಲ್ಲ ಎಂದು ತಿರುಗೇಟು ಕೊಟ್ಟಿದ್ದಾರೆ.

ಪೈಪೋಟಿ ನಡೆಸುತ್ತಿರುವವರ ವಿವರ
ಹನೂರು ಕ್ಷೇತ್ರದಲ್ಲಿ ಈ ಹಿಂದೆ ದಿ. ನಾಗಪ್ಪ ಹಾಗೂ ದಿ.ರಾಜೂಗೌಡರ ಕುಟುಂಬಗಳ ನಡುವೆಯಷ್ಟೇ ಕಾದಾಟ ಇತ್ತು. ಅಧಿಕಾರ ಹಂಚಿಕೆ ಎಂಬ ಮಾತು ಈ ಬಾರಿ ಚುನಾವಣೆಯಲ್ಲಿ ಸುಳ್ಳಾಗುವ ವಾತಾವರಣ ಇದ್ದು, ನಾಗಪ್ಪನವರ ಮಗ ಡಾ.ಪ್ರೀತಂ, ಜನಧ್ವನಿ ವೆಂಕಟೇಶ್, ದತ್ತೇಶ್ ಹಾಗೂ ನಿಶಾಂತ್ ಈ ಬಾರಿ ಟಿಕೆಟ್ ಪಡೆಯಲು ಭಾರಿ ಪೈಪೋಟಿ ನಡೆಸುತ್ತಿದ್ದಾರೆ. ಆದರೆ ನಿಶಾಂತ್ ಅವರ ಧಾರ್ಮಿಕ ಕಾರ್ಯಗಳೇ ಇವರೆಲ್ಲರನ್ನು ಹೆಚ್ಚೆಚ್ಚು ಜನಪ್ರಿಯಗೊಳಿಸುತ್ತಿದೆ.

8 ತಿಂಗಳಲ್ಲಿ ನೂರಾರು ದೇಗುಲಗಳ ಜೀರ್ಣೋದ್ಧಾರ
ಜೆಡಿಎಸ್ ಕೂಡ ಭದ್ರ ನೆಲೆ ಕಂಡುಕೊಂಡಿದ್ದು, ಎಂ.ಆರ್.ಮಂಜುನಾಥ್, ಕಾಂಗ್ರೆಸ್ನ ಹಾಲಿ ಶಾಸಕ ನರೇಂದ್ರ ಮತ್ತು ಬಿಜೆಪಿ ನಡುವೆ ಈ ಕಾಳಗ ನಡೆಯುವುದು ನಿಶ್ಚಿತವಾಗಿದೆ. ಇಲ್ಲಿ ಎರಡು ಕುಟುಂಬಗಳ ನಡುವಿನ ಸ್ಪರ್ಧೆ ಈ ಬಾರಿ ಇರುವುದಿಲ್ಲ ಎಂಬುದು ಸರಿಯಾಗಿ ಗೋಚರವಾಗುತ್ತಿದೆ.
ಟಿಕೆಟ್ ಆಕಾಂಕ್ಷಿಯೊಬ್ಬರು ಕೇವಲ 8 ತಿಂಗಳಲ್ಲಿ ನೂರಾರು ದೇಗುಲ ಜೀರ್ಣೋದ್ಧಾರ ಮಾಡಿರುವುದು ಒಂದು ಅಚ್ಚರಿಯೇ ಆಗಿದೆ. ಒಟ್ಟಿನಲ್ಲಿ ಈ ಬಾರಿ ಹನೂರು ಕ್ಷೇತ್ರ ಕದನ ಕುತೂಹಲ ಕೆರಳಿಸಿದೆ. ಭಾವನಾತ್ಮಕವಾಗಿ ಮತ ಸೆಳೆಯುತ್ತಿರುವ ನಿಶಾಂತ್ ಬಿಜೆಪಿ ಇನ್ನಿತರ ಆಕಾಂಕ್ಷಿಗಳಿಗೆ ನಿದ್ರೆಗೆಡಿಸಿರುವುದಂತು ಸುಳ್ಳಲ್ಲ ಎಂಬುದು ಎದ್ದು ಕಾಣುತ್ತಿದೆ.












Click it and Unblock the Notifications