ಬಿಜೆಪಿಯಲ್ಲಿ ಮತ್ತೆ ಭಿನ್ನಮತ: ವಿ.ಸೋಮಣ್ಣಗೆ ಚಾಮರಾಜನಗರದ ಚುನಾವಣೆ ಉಸ್ತುವಾರಿ ಬೇಡವೇ ಬೇಡ: ಬಿಜೆಪಿ ಮುಖಂಡರ ಆಗ್ರಹ
ಚಾಮರಾಜನಗರ ಜಿಲ್ಲೆಯ ಚುನಾವಣಾ ಉಸ್ತುವಾರಿಯನ್ನು ಸಚಿವ ವಿ. ಸೋಮಣ್ಣಗೆ ಕೊಟ್ಟಿರುವುದಕ್ಕೇ ಜಿಲ್ಲಾ ಬಿಜೆಪಿ ಮುಖಂಡರೇ ವಿರೋಧ ವ್ಯಕ್ತಪಡಿಸಿದ್ದಾರೆ.
ಚಾಮರಾಜನಗರ, ಮಾರ್ಚ್, 21: ಇತ್ತೀಚೆಗಷ್ಟೇ ಉಸ್ತುವಾರಿ ವಿಚಾರವಾಗಿ ವಿ.ಸೋಮಣ್ಣ ಮುನಿಸಿಕೊಂಡಿದ್ದು, ಅವರು ಕಾಂಗ್ರೆಸ್ಗೆ ಸೇರ್ಪಡೆ ಆಗುತ್ತಾರೆ ಅನ್ನುವ ಸುದ್ದಿ ಹರಡಿತ್ತು. ಆಗಿನಿಂದ ಚಾಮರಾಜನಗರ ಕ್ಷೇತ್ರದ ರಾಜಕೀಯ ವಲಯದಲ್ಲಿ ತುಂಬಾ ಬೆಳೆವಣಿಗೆಗಳಾಗಿದ್ದವು. ನಂತರ ಸೋಮಣ್ಣ ದಿಢೀರ್ ನವದೆಹಲಿಗೆ ತೆರಳಿದ್ದು, ಈ ವೇಳೆ ಬಿಜೆಪಿ ವರಿಷ್ಠರು ಅವರ ಕೋಪಕ್ಕೆ ಮುಲಾಮು ಹಚ್ಚುವ ಕೆಲಸವನ್ನು ಮಾಡಿದ್ದರು. ಮತ್ತೆ ಇದೀಗ ಸೋಮಣ್ಣನ ವಿರುದ್ಧ ಕ್ಷೇತ್ರದಲ್ಲಿ ಸ್ವಪಕ್ಷಿಯರೇ ಕೆಂಡಕಾರುತ್ತಿದ್ದಾರೆ.
ಚಾಮರಾಜನಗರ ಜಿಲ್ಲೆಯ ಚುನಾವಣಾ ಉಸ್ತುವಾರಿಯನ್ನು ಸಚಿವ ವಿ. ಸೋಮಣ್ಣಗೆ ಕೊಟ್ಟಿರುವುದಕ್ಕೇ ಜಿಲ್ಲಾ ಬಿಜೆಪಿ ಮುಖಂಡರೇ ವಿರೋಧ ವ್ಯಕ್ತಪಡಿಸಿದ್ದಾರೆ. ಇಂದು ಜಿಲ್ಲಾ ಬಿಜೆಪಿ ಘಟಕದ ವಕ್ತಾರ ಅಯ್ಯನಪುರ ಶಿವಕುಮಾರ್ ಹಾಗೂ ಇನ್ನಿತರ ಬಿಜೆಪಿ ಮುಖಂಡರು ಚಾಮರಾಜನಗರದಲ್ಲಿ ಸುದ್ದಿಗೋಷ್ಠಿ ನಡೆಸಿದ್ದು, "ಗೋ ಬ್ಯಾಕ್ ಸೋಮಣ್ಣ" ಚಳವಳಿ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ.

"ಗೋ ಬ್ಯಾಕ್ ಸೋಮಣ್ಣ" ಚಳವಳಿಯ ಎಚ್ಚರಿಕೆ
ಸಚಿವ ಸೋಮಣ್ಣಗೆ ಚಾಮರಾಜನಗರ ಜಿಲ್ಲೆಯಿಂದ ಟಿಕೆಟ್ ಏನಾದರೂ ಕೊಟ್ಟರೇ "ಗೋ ಬ್ಯಾಕ್ ಸೋಮಣ್ಣ" ಚಳವಳಿ ಮಾಡಲಾಗುವುದು. ಜೊತೆಗೆ ಚುನಾವಣಾ ಉಸ್ತುವಾರಿಯನ್ನೂ ನೀಡಬಾರದು ಎಂದು ಒತ್ತಾಯಿಸಿರುವುದು ಬಿಜೆಪಿ ಪಾಳೇಯದಲ್ಲಿ ಮತ್ತೇ ಭಿನ್ನಮತ ಸ್ಫೋಟವಾದಂತಾಗಿದೆ.
ಪಕ್ಷಕ್ಕೆ ಯಾವುದೇ ಅನುಕೂಲವಾಗಿಲ್ಲ
ಸಚಿವ ಸೋಮಣ್ಣ ಚಾಮರಾಜನಗರ ಜಿಲ್ಲಾ ಉಸ್ತುವಾರಿ ಆದ ಬಳಿಕ ಅವರು ಪಕ್ಷದ ಸಂಘಟನೆಯಲ್ಲಿ ತೊಡಗಿಲ್ಲ. ಕಳೆದ ಲೋಕಸಭೆ ಚುನಾವಣೆಯಲ್ಲೂ ಕೆಲಸ ಮಾಡಿಲ್ಲ. 2018ರ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ ಸೋಲಿಗೆ ಕಾರಣರಾಗಿದ್ದರು. ಅವರಿಂದ ಪಕ್ಷಕ್ಕೆ ಯಾವುದೇ ಅನುಕೂಲವಾಗಿಲ್ಲ. ಇದನ್ನೆಲ್ಲ ಗಮನಿಸಿ ಅವರಿಗೆ ಚುನಾವಣಾ ಉಸ್ತುವಾರಿ ಕೊಡಬಾರದು ಎಂದು ಆಗ್ರಹಿಸಿದರು.

ಹನೂರು, ಚಾಮರಾಜನಗರ ಸೇರಿದಂತೆ ಕಾಂಗ್ರೆಸ್ ಶಾಸಕರನ್ನು ಹಾಡಿ ಹೊಗಳುತ್ತಾರೆ. ಆದರೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷರ ಕಾರ್ಯಕ್ರಮಕ್ಕೆ ಗೈರಾಗಿ ಪಕ್ಷದ ಸಂಘಟನೆಗೆ ವಿರುದ್ಧವಾಗಿ ನಡೆದುಕೊಂಡಿದ್ದಾರೆ. ಕಾಂಗ್ರೆಸ್ ಸೇರುತ್ತೇನೆಂದು ವರಿಷ್ಠರಿಗೆ ಬೆದರಿಕೆ ಒಡ್ಡುವ ತಂತ್ರವನ್ನು ಪ್ರಯೋಗಿಸಿದ್ದಾರೆ ಎಂದು ಬಿಜೆಪಿ ವಕ್ತಾರ ಅಯ್ಯನಪುರ ಶಿವಕುಮಾರ್ ಆರೋಪ ಮಾಡಿದ್ದಾರೆ.
ಇದೇ ವೇಳೆ ಚಾಮರಾಜನಗರ ಚುನಾವಣಾ ಉಸ್ತುವಾರಿಯಾಗಿ ವಿಜಯೇಂದ್ರ ಅವರನ್ನು ನೇಮಿಸಬೇಕು, ಯಡಿಯೂರಪ್ಪ ಅವರು ಹಳೇ ಮೈಸೂರು ಭಾಗದಲ್ಲಿ ಹೆಚ್ಚು ಪ್ರಚಾರ ನಡೆಸಬೇಕು. ಚಾಮರಾಜನಗರ ಸೇರಿದಂತೆ ಹಳೇ ಮೈಸೂರು ಭಾಗದಲ್ಲಿ ಬಿಜೆಪಿಗೆ ಉತ್ತಮ ವಾತಾವರಣ ಇದೆ ಎಂದರು.
ಒಟ್ಟಿನಲ್ಲಿ ಇನ್ನು ಕೂಡ ಬಿಜೆಪಿಯಲ್ಲಿ ಬಿ.ಎಸ್.ವೈ v|s ವಿ.ಸೋಮಣ್ಣ ಪರಿಸ್ಥಿತಿ ಇದೆ ಎಂಬುದಕ್ಕೆ ಇಂದಿನ ಸುದ್ದಿಗೋಷ್ಠಿಯೇ ಸಾಕ್ಷಿಯಾಗಿದೆ. ಜೊತೆಗೆ, ಭಾರತೀತ ಜನತಾ ಪಕ್ಷದ ಲೆಟರ್ ಹೆಡ್ನಲ್ಲೇ ಸುದ್ದಿಗೋಷ್ಠಿಗೆ ಆಹ್ವಾನಿಸಿದ್ದು, ಇದು ಬಿಜೆಪಿಯಲ್ಲಿ ಎಲ್ಲವೂ ಸರಿಯಿಲ್ಲ ಎಂದು ಸಾಭೀತುಪಡಿಸಿದಂತಾಗಿದೆ.
ಗೊಂದಲಕ್ಕೆ ತೆರೆ ಎಳೆದಿದ್ದ ಸೋಮಣ್ಣ
ಮಾರ್ಚ್ 27ಕ್ಕೆ ವಿ.ಸೋಮಣ್ಣ ಕಾಂಗ್ರೆಸ್ಗೆ ಸೇರುತ್ತಾರೆ ಎನ್ನುವ ಪೋಸ್ಟ್ ಹರಿದಾಡುತ್ತಿತ್ತು. ಇದಕ್ಕೆ ಸೋಮಣ್ಣ ಇತ್ತೀಚೆಗಷ್ಟೇ ಸ್ಪಷ್ಟನೆ ನೀಡಿದ್ದು, ನಾನು ಡೈರೆಕ್ಟ್ ರಾಜಕಾರಣಿ, ಅವೆಲ್ಲಾ ಮುಗಿದ ಅಧ್ಯಾಯ ಎಂದು ಹೇಳಿದ್ದರು.
ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎರಡು ತಿಂಗಳಿನಿಂದ ನನ್ನನ್ನು ಉಜ್ಜುತ್ತಿದ್ದೀರಾ, ಇನ್ನು ಎಷ್ಟು ಬೇಕಾದರೂ ಹಾಕಿಕೊಳ್ಳಿ. ಅವೆಲ್ಲಾ ನನ್ನ ತಲೆಯಲ್ಲೇ ಇಲ್ಲಾ, ನಾನೋರ್ವ ಡೈರೆಕ್ಟ್ ರಾಜಕಾರಣಿ. ನೇರವಾಗಿ ಮಾತನಾಡುತ್ತೇನೆ. ಈಗಾಗಲೇ ಅದರ ಬಗ್ಗೆ ಹೇಳುವುದನ್ನೆಲ್ಲಾ ಹೇಳಿದ್ದೇನೆ. ಅವೆಲ್ಲಾ ಮುಗಿದ ಅಧ್ಯಾಯ, ಇನ್ನು ಈ ವಿಚಾರಗಳಿಗೆ ಉತ್ತರಿಸುವುದಿಲ್ಲ ಎಂದಿದ್ದರು.












Click it and Unblock the Notifications