ಭಾರತ್ ಜೋಡೋ: 30 ಸಾವಿರ ಜನರಿಗೆ ಊಟ, VIPಗಳ ವಿರಾಮಕ್ಕೆ 1000 ಹಾಸಿಗೆ ರೆಡಿ!!
ಚಾಮರಾಜನಗರ, ಸೆಪ್ಟೆಂಬರ್ 30: ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆ ಶುಕ್ರವಾರ ಬೆಳಗ್ಗೆ 10.30ರಿಂದ ಗುಂಡ್ಲುಪೇಟೆಯಲ್ಲಿ ಆರಂಭವಾಗಲಿದ್ದು, 30 ಸಾವಿರಕ್ಕೂ ಹೆಚ್ಚು ಮಂದಿ ಪಾದಯಾತ್ರಿಗಳಿಗೆ ಹೆಜ್ಜೆ ಹಾಕುವ ನಿರೀಕ್ಷೆ ಇದೆ.
ರಾಹುಲ್ ಗಾಂಧಿ ಜೊತೆ ಪಾದಯಾತ್ರೆಯಲ್ಲಿ ಪಾಲ್ಗೊಳ್ಳುವ 30 ಸಾವಿರದಷ್ಟು ಮಂದಿಗೆ ಬೋಜನ ವ್ಯವಸ್ಥೆ ಕಲ್ಪಿಸಲಾಗಿದೆ. ಅನ್ನ, ಸಾಂಬಾರ್, ಪಲಾವ್, ಬಜ್ಜಿ ವ್ಯವಸ್ಥೆ ಮಾಡಲಾಗಿದೆ. ಇನ್ನು ಬೆಳಗ್ಗೆ ಬೆಳಗಿನ ತಿಂಡಿಗೆ ಈಗಾಗಲೇ ಹತ್ತಾರು ಸಾವಿರ ಮಂದಿಗೆ ಉಪ್ಪಿಟ್ಟು-ಕೇಸರಿಬಾತ್ ವಿತರಣೆ ಮಾಡಲಾಗಿದೆ.
ಭಾರತ್ ಜೋಡೋ ಯಾತ್ರೆ: ಬದಲಾಗಿದೆ ವಾಹನ ಸಂಚಾರ ಮಾರ್ಗ, ಮದ್ಯವೂ ನಿಷೇಧ
ಇನ್ನು, ಪಾದಯಾತ್ರೆಯಲ್ಲಿ ಭಾಗಿಯಾಗುವ ಶಾಸಕರು, ಸಂಸದರು ಸೇರಿದಂತೆ 1000 ಮಂದಿ ಗಣ್ಯರಿಗೆ ವಿರಮಿಸಿಕೊಳ್ಳಲು ಕೆಬ್ಬೆಕಟ್ಟೆ ಶನೈಶ್ಚರ ದೇವಾಲಯದ ಬಳಿ ತಾತ್ಕಾಲಿಕ ಟೆಂಟ್ಗಳನ್ನು ನಿರ್ಮಿಸಿ ಸಾವಿರ ಹಾಸಿಗೆಗಳನ್ನು ವ್ಯವಸ್ಥೆಗೊಳಿಸಲಾಗಿದೆ.
ಟೆಂಟ್ಗಳಲ್ಲೇ ಮೀಟಿಂಗ್ ಹಾಲ್, ಭೋಜನ ವ್ಯವಸ್ಥೆ ಇರಲಿದ್ದು ಸಾಕಷ್ಟು ತಯಾರಿ ಮಾಡಿಕೊಳ್ಳಲಾಗಿದೆ. ವೇದಿಕೆ ನಿರ್ಮಾಣದ ಸ್ಥಳದಿಂದ ರಾಷ್ಟ್ರೀಯ ಹೆದ್ದಾರಿ ಉದ್ದಕ್ಕೂ ಬ್ಯಾನರ್, ಬಂಟಿಂಗ್ಸ್ ಆಕರ್ಷಕ ಧ್ವಜಗಳನ್ನು ಕಟ್ಟಿ ಸಿಂಗರಿಸಲಾಗಿದೆ.
30 ಸಾವಿರಕ್ಕೂ ಹೆಚ್ಚು ಮಂದಿ ರಾಹುಲ್ ಗಾಂಧಿ ಜೊತೆಗೆ ಹೆಜ್ಜೆ ಹಾಕುವ ನಿರೀಕ್ಷೆ ಇರುವುದರಿಂದ ಕಾನೂನು ಸುವ್ಯವಸ್ಥೆ ಕಾಪಾಡಲು ಹೆಚ್ಚಿನ ಮುತುವರ್ಜಿಯನ್ನು ಪೊಲೀಸ್ ಇಲಾಖೆ ವಹಿಸಿದೆ. ಜೋಡೋ ಯಾತ್ರೆಗೆ ಮೂವರು ಎಸ್ಪಿ, ಎಂಟು ಜನ ಡಿವೈಎಸ್ಪಿ, 25 ಇನ್ಸಫೆಕ್ಟರ್, 50 ಜನ ಸಬ್ ಇನ್ಸ್ ಪೆಕ್ಟರ್, ಒಂದು ಸಾವಿರಕ್ಕೂ ಅಧಿಕ ಮಂದಿ ಪೇದೆ, ಕೆಎಸ್ ಆರ್ಪಿ, 10ಕ್ಕೂ ಅಧಿಕ ಡಿಆರ್ ಸಿಬ್ಬಂದಿ ನಿಯೋಜಿಸಲಾಗಿದೆ ಎಂದು ಎಸ್ಪಿ ಮಾಹಿತಿ ನೀಡಿದ್ದಾರೆ.
ವೇದಿಕೆ ಮೇಲೆ 240 ಮಂದಿ: ಡಾ.ಬಿ.ಆರ್.ಅಂಬೇಡ್ಕರ್ ಭವನದ ಮುಂಭಾಗ ಬೃಹತ್ ಸಭೆ ನಡೆಯಲಿದ್ದು ವೇದಿಕೆ ಮೇಲೆ 240 ಮಂದಿ ಆಸೀನರಾಗಲಿದ್ದಾರೆ. ರಾಗಾ ಜೊತೆ ಹೆಜ್ಜೆ ಹಾಕುವ ಪಾದಾಯತ್ರಿಗಳು, ರಾಜ್ಯ ಮಟ್ಟದ ನಾಯಕರುಗಳು ವೇದಿಕೆಯಲ್ಲಿ ಇರಲಿದ್ದು ರಾಜ್ಯದ ಎಲ್ಲಾ ನಾಯಕರುಗಳು ಹೆಜ್ಜೆ ಹಾಕಲಿದ್ದಾರೆ.