ಬಿಳಿಗಿರಿರಂಗನ ಬೆಟ್ಟದಲ್ಲಿ ಹುಂಡಿ ಎಣಿಕೆ: 35 ಲಕ್ಷ ಸಂಗ್ರಹ, ಹುಂಡಿಯಲ್ಲಿ ಡಾಲರ್!
ಚಾಮರಾಜನಗರ, ಜೂ28: ಯಳಂದೂರು ತಾಲ್ಲೂಕಿನ ಇತಿಹಾಸ ಪ್ರಸಿದ್ಧ ಬಿಳಿಗಿರಿ ರಂಗನಾಥಸ್ವಾಮಿ ಬೆಟ್ಟದ ದೇವಾಲಯ ಹುಂಡಿ ಎಣಿಕೆ ನಡೆದಿದ್ದು, 35 ಲಕ್ಷ ರೂ. ಹಣ ಸಂಗ್ರಹವಾಗಿದೆ. 3 ತಿಂಗಳು 8 ದಿನದ ಬಳಿಕ ನಡೆದ ಹುಂಡಿ ಎಣಿಕೆಯಲ್ಲಿ 35,59,990 ರೂ. ಹಣ ಸಂಗ್ರಹವಾಗಿದ್ದು 3 ಅಮೆರಿಕನ್ ಡಾಲರ್ ಕೂಡ ಕೆಲ ಭಕ್ತರು ಅರ್ಪಿಸಿದ್ದಾರೆ. ಚಿನ್ನ-ಬೆಳ್ಳಿ ತೂಕವನ್ನು ಮಾಡದೇ ಮರಳಿ ಹುಂಡಿಗೇ ಹಾಕಲಾಗಿದ್ದು, ಮುಂದಿನ ಬಾರಿ ಮಾಡಲಾಗುತ್ತದೆ ಎಂದು ಬಿಳಿಗಿರಿರಂಗನ ಬೆಟ್ಟದ ಇಒ ಮೋಹನ್ ಮಾಹಿತಿ ನೀಡಿದ್ದಾರೆ.
ಬೆಟ್ಟ ನವೀಕರಣಗೊಂಡ ನಂತರ ಪ್ರವಾಸಿಗರ ಸಂಖ್ಯೆ ಹೆಚ್ಚಳ
ಬಿಳಿಗಿರಿರಂಗನ ಬೆಟ್ಟ ನವೀಕರಣಗೊಂಡ ಬಳಿಕ ಭಕ್ತರು, ಪ್ರವಾಸಿಗರ ಸಂಖ್ಯೆ ದ್ವಿಗುಣಗೊಂಡಿದ್ದು ವಾರಾಂತ್ಯದಲ್ಲಿ ಪ್ರಕೃತಿ ಚೆಲುವು ಕಣ್ತುಂಬಿಕೊಳ್ಳಲು ಜನ ಕಿಕ್ಕಿರಿದು ಸೇರುತ್ತಿದ್ದಾರೆ. ಬಿಳಿಗಿರಿರಂಗನ ಬೆಟ್ಟ ಶ್ರೇಣಿಯು ಮೂಲವಾಗಿ ಚಾಮರಾಜನಗರ ಜಿಲ್ಲೆಯ ಯಳಂದೂರು ಮತ್ತು ಕೊಳ್ಳೆಗಾಲ ತಾಲೂಕಿನಲ್ಲಿ ಚಾಚಿವೆ. ಅಲ್ಲದೆ ಸತ್ಯಮಂಗಲಂ ಅಭಯಾರಣ್ಯ ಹಾಗೂ ತಮಿಳುನಾಡಿನ ಈರೋಡ್ ಜಿಲ್ಲೆಗೆ ಹತ್ತಿರವಾಗಿವೆ. ಪಶ್ಚಿಮ ಘಟ್ಟದ ಪೂರ್ವ ತುದಿಯಲ್ಲಿ ನೆಲೆಸಿರುವ ಈ ಬೆಟ್ಟ ಶ್ರೇಣಿಯು ವೈವಿಧ್ಯಮಯ ಪ್ರಾಣಿ ಸಂಪತ್ತು ಹಾಗೂ ಸಸ್ಯ ಸಂಪತ್ತಿನಿಂದ ಕೂಡಿದ್ದು, ದಟ್ಟವಾದ ಗಿಡ ಮರಗಳು ಪ್ರದೇಶಕ್ಕೆ ಹಸಿರು ಹಾಸಿಗೆಯನ್ನು ಹೊದಿಸಿದ ಹಾಗೆ ಮಾಡಿವೆ.

ಸೋಲಿಗರ ಪಾಲಿಗೆ ಅತ್ಯಂತ ಪವಿತ್ರವಾದ ದೊಡ್ಡಸಂಪಿಗೆ ಮರ
ವಿಷ್ಣುವಿನ ಅವತಾರವಾದ ಶ್ರೀ ರಂಗನಾಥ ಸ್ವಾಮಿಯು ಇಲ್ಲಿ ನೆಲೆಸಿರುವುದರಿಂದ ಇದಕ್ಕೆ ಬಿಳಿಗಿರಿ ರಂಗನ ಬೆಟ್ಟ ಎಂಬ ಹೆಸರು ಬಂದಿತೆಂದು ಹೇಳಲಾಗಿದೆ. ಪ್ರತಿ ವರ್ಷ ವೈಶಾಖ ಮಾಸ ಅಂದರೆ ಏಪ್ರಿಲ್ ಸಮಯದಲ್ಲಿ ಇಲ್ಲಿ ರಥೋತ್ಸವವನ್ನು ಅತಿ ವಿಜೃಂಭಣೆಯಿಂದ ನೆರವೇರಿಸಲಾಗುತ್ತದೆ. ಸ್ಥಳಿಯ ಸೋಲಿಗ ಸಮುದಾಯದವರು ಶ್ರೀರಂಗನಾಥನಿಗೆ ಎರಡು ವರ್ಷಕ್ಕೊಮ್ಮೆ ಒಂದು ಅಡಿ ಒಂಭತ್ತು ಅಂಗುಲಗಳಷ್ಟು ಆಕಾರದ ಚರ್ಮದ ಪಾದರಕ್ಷೆಗಳನ್ನು ಕಾಣಿಕೆಯಾಗಿ ಅರ್ಪಿಸುತ್ತಾರೆ.

ಸ್ಥಳೀಯ ಸೋಲಿಗರ ಪಾಲಿಗೆ ಅತ್ಯಂತ ಪವಿತ್ರವಾದ ದೊಡ್ಡಸಂಪಿಗೆ ಮರವನ್ನು ಇಲ್ಲಿ ಕಾಣಬಹುದು. ಅಲ್ಲದೆ ಸಾಕಷ್ಟು ಸಂಪಿಗೆ ಮರಗಳು ಇಲ್ಲಿ ಕಂಡುಬರುತ್ತವೆ. ಕಾವೇರಿಯ ಉಪನದಿಯಾದ ಭಾರ್ಗವಿ ನದಿಯ ದಡದ ಮೇಲೆ ಸುಮಾರು 2000 ವರ್ಷಗಳಷ್ಟು ಹಳೆಯದಾದ ಸುಮಾರು 40 ಮೀ ಗಳಷ್ಟು ಎತ್ತರದ ದೊಡ್ಡ ಸಂಪಿಗೆ ಮರವೊಂದನ್ನು ಇಂದಿಗೂ ಕಾಣಬಹುದಾಗಿದೆ. ಸೋಲಿಗರಿಂದ ಇದು ಪೂಜಿಸಲ್ಪಡುತ್ತದೆ.












Click it and Unblock the Notifications