ಚಿನ್ನದ ಠೇವಣಿ ಮೇಲೆ ಬಡ್ಡಿ, ಏನಿದು ಯೋಜನೆ?
ನವದೆಹಲಿ, ಮೇ.20: ಬ್ಯಾಂಕಿನಲ್ಲಿ ಠೇವಣಿ ಇಡುವ ಚಿನ್ನದ ಮೇಲೆ ಬಡ್ಡಿ ನೀಡುವ ವಿನೂತನ ಯೋಜನೆ ಕೇಂದ್ರ ಸರ್ಕಾರ ಜೂನ್ 2ರಿಂದ ಪ್ರಾಯೋಗಿಕವಾಗಿ ಕೆಲವು ನಗರಗಳಲ್ಲಿ ಜಾರಿಗೊಳಿಸುತ್ತಿದೆ.
ಈ ಯೋಜನೆ ಮುಖ್ಯ ಉದ್ದೇಶ ಚಿನ್ನದ ವಹಿವಾಟು ಚಾಲ್ತಿಯಲ್ಲಿಡುವುದು ಹಾಗೂ ಚಲಾವಣೆ ತ್ವರಿತಗೊಳಿಸುವುದಾಗಿದೆ ಈ ಮೂಲಕ ಬಂಗಾರದ ಕೊರತೆ ನೀಗಿಸಲು ಯತ್ನಿಸಲಾಗುತ್ತಿದೆ. [ಚಿನ್ನದ ಮೇಲಿನ ಮೋಹ ಶೇ 15ರಷ್ಟು ಏರಿಕೆ]
ಈ ಯೋಜನೆಯ ಲಭ್ಯ ಕರಡು ಪ್ರತಿ ಪ್ರಕಾರ ಕನಿಷ್ಠ ಠೇವಣಿ ಪ್ರಮಾಣ 30 ಗ್ರಾಂ ಆಗಿದ್ದು, ಇದರ ಮೇಲೆ ಸಿಗುವ ಬಡ್ಡಿ ದರವನ್ನು ಆದಾಯ ತೆರಿಗೆಯಿಂದ ಮುಕ್ತಗೊಳಿಸಲು ಸರ್ಕಾರ ಮುಂದಾಗಿದೆ. [ಅಕ್ಷಯ ತದಿಗೆ ಚಿನ್ನದ ಬೆಲೆ ಕೆಳಕ್ಕೆ, ಆಭರಣ ಮಾರಾಟ ಮೇಲಕ್ಕೆ]
ಕೆಲ ನಗರಗಳಲ್ಲಿ ಈ ಯೋಜನೆ ಪ್ರಾಯೋಗಿಕವಾಗಿ ಜಾರಿಗೊಳಿಸಿದ ನಂತರ ಸಾಧಕ, ಬಾಧಕಗಳನ್ನು ನೋಡಿಕೊಂಡು ದೇಶಾದ್ಯಂತ ಯೋಜನೆ ವಿಸ್ತರಿಸಲಾಗುವುದು ಎಂದು ವಿತ್ತ ಸಚಿವಾಲಯ ಹೇಳಿದೆ. [ಚಿನ್ನ ಸಾಲದ ಮಿತಿ 2 ಲಕ್ಷಕ್ಕೆ ಹೆಚ್ಚಿಸಿದ ರಿಸರ್ವ್ ಬ್ಯಾಂಕ್]
ದೇಶದಲ್ಲಿ ಸುಮಾರು 20,000 ಟನ್ಗಳಷ್ಟು ಚಿನ್ನ ಚಲಾವಣೆಯಾಗದೇ ಉಳಿದಿದೆ ಎಂದು ಅಂದಾಜು ಸಿಕ್ಕಿದೆ. ಈ ಹೊಸ ಯೋಜನೆ ಸಾಕಾರಗೊಂಡರೆ ಲಾಕರ್ಗಳಲ್ಲಿ ಭದ್ರವಾಗಿ ಕುಳಿತಿರುವ ಚಿನ್ನ ಚಲಾವಣೆಗೆ ಬಂದು ಕೊರತೆ ನೀಗಲಿದೆ. ಬೇಡಿಕೆ, ಆಮದು ಅನುಪಾತ ಸಮತೋಲನ ಕಾಣಲಿದೆ.[ವಿವಿಧ ನಗರಗಳಲ್ಲಿ ಇಂದಿನ ಚಿನ್ನದ ದರ ಎಷ್ಟಿದೆ?]
ಯೋಜನೆಯಲ್ಲಿ ತೊಡಗಿಕೊಳ್ಳುವುದು ಹೇಗೆ? ಬಡ್ಡಿ ದರ ಯಾರು ನಿರ್ಧರಿಸುತ್ತಾರೆ? ಠೇವಣಿ ಮೇಲೆ ತೆರಿಗೆ ವಿನಾಯಿತಿ ಇದೆಯೆ? ಸರ್ಕಾರದ ಗುರಿ ಏನು? ಎಂಬುದರ ಬಗ್ಗೆ ವಿವರಣೆ ಮುಂದಿದೆ...

ಯೋಜನೆಯಲ್ಲಿ ತೊಡಗಿಕೊಳ್ಳುವುದು ಹೇಗೆ?
ಬಿಐಎಸ್ ಪ್ರಮಾಣೀಕೃತ ಹಾಲ್ ಮಾರ್ಕಿಂಗ್ ಕೇಂದ್ರಗಳಲ್ಲಿ ಚಿನ್ನದ ಮೌಲ್ಯವನ್ನು ಸರಿಯಾಗಿ ಲೆಕ್ಕಹಾಕಿಸಬೇಕು. ಬ್ಯಾಂಕಿನಲ್ಲಿ ಚಿನ್ನ ಸೇವಿಂಗ್ ಅಕೌಂಟ್ ತೆರೆಯಬೇಕು. ಇದರ ಅವಧಿ ಕನಿಷ್ಠ 1 ವರ್ಷವಾಗಿರಬೇಕು. ಬಡ್ಡಿ ನಗದು ಹಾಗೂ ಡ್ರಾಫ್ಟ್ ರೂಪದಲ್ಲಿ ಪಡೆಯಬಹುದು. ['ಚಿನ್ನ ಖರೀದಿ'ಗೆ ಪ್ಯಾನ್ ಕಾರ್ಡ್ ಕಡ್ಡಾಯ, ಪ್ರತಿಭಟನೆ]

ಬಡ್ಡಿ ದರ ವ್ಯತ್ಯಾಸ ಸಾಧ್ಯತೆ
ಯಾವುದೇ ಬ್ಯಾಂಕ್ ನಲ್ಲಿ ಚಿನ್ನದ ಉಳಿತಾಯ ಖಾತೆ ತೆರೆಯಬಹುದು. ಅದರೆ, ಬಡ್ಡಿ ಪ್ರಮಾಣ ಏಕರೂಪದಲ್ಲಿ ಇರಲು ಸಾಧ್ಯವಿಲ್ಲ. ಆಯಾ ಬ್ಯಾಂಕುಗಳು ಬಡ್ಡಿದರವನ್ನು ನಿರ್ಧರಿಸಬಹುದು. ಒಂದು ವರ್ಷದ ಅವಧಿಯ ಠೇವಣಿಗೆ ಒಂದು ತಿಂಗಳು ಅಥವಾ ಎರಡು ತಿಂಗಳ ನಂತರ ಬಡ್ಡಿ ಸಿಗುತ್ತದೆ. ಬಡ್ಡಿದರ ಪ್ರಮಾಣವನ್ನು ನಿಮ್ಮ ಬ್ಯಾಂಕಿನಲ್ಲೇ ಕೇಳಿ ಪಡೆಯಬಹುದು.

ಇದು ವೈಯಕ್ತಿಕ ಖಾತೆ ಮಾತ್ರವೇ?
ಇಲ್ಲ. ಬ್ಯಾಂಕಿನಲ್ಲಿ ಚಿನ್ನದ ಉಳಿತಾಯ ಖಾತೆಯನ್ನು ಯಾವುದೇ ವ್ಯಕ್ತಿ ಅಥವಾ ಸಂಸ್ಥೆ ಚಿನ್ನವನ್ನು ಠೇವಣಿ ಇಟ್ಟು ಖಾತೆ ತೆರೆಯಬಹುದು. ಕನಿಷ್ಠ 30 ಗ್ರಾಂ ಬಂಗಾರ ಠೇವಣಿ ಇಡಲು ಅವಕಾಶವಿದ್ದು, ಇದಕ್ಕೆ ದೊರೆಯುವ ಬಡ್ಡಿಗೆ ತೆರಿಗೆ ವಿನಾಯಿತಿ ನೀಡಲಾಗುತ್ತದೆ.

ತೆರಿಗೆ ವಿನಾಯಿತಿ
ಠೇವಣಿದಾರನ (capital gains tax) ಬಂಡವಾಳ ಗಳಿಕೆ ತೆರಿಗೆ (ಷೇರು, ಬಾಂಡ್, ಲೋಹ, ಆಸ್ತಿ ವಹಿವಾಟಿನ ಗಳಿಕೆಗೆ ವಿಧಿಸಲಾಗುವ ತೆರಿಗೆ), ಸಂಪತ್ತಿನ ಮೇಲಿನ ತೆರಿಗೆ ಹಾಗೂ ಆದಾಯ ತೆರಿಗೆಗೂ ವಿನಾಯಿತಿ ಸಿಗಲಿದೆ.

ಸರ್ಕಾರದ ಗುರಿ ಏನು?
ವಿಶ್ವದಲ್ಲೇ ಅತಿ ಹೆಚ್ಚು ಚಿನ್ನದ ಗ್ರಾಹಕರನ್ನು ಭಾರತ ಹೊಂದಿದೆ. ಜೊತೆಗೆ ಪ್ರತಿ ವರ್ಷ 800-1000 ಟನ್ ಚಿನ್ನ ಆಮದು ಮಾಡಿಕೊಳ್ಳಲಾಗುತ್ತಿದೆ. ದೇಶದ ವಿವಿಧ ಸಂಸ್ಥೆ ಹಾಗೂ ವ್ಯಕ್ತಿಗಳ ಬಳಿ ಇರುವ ಸಾಕಷ್ಟು ಚಿನ್ನವನ್ನು ಈ ರೀತಿ ಠೇವಣಿ ಇಡುವ ಮೂಲಕ ಚಲಾವಣೆಗೆ ತಂದರೆ ಚಿನ್ನದ ಪ್ರಮಾಣ ಕೊರತೆ ನೀಗಲಿದೆ. ಆಮದು ಪ್ರಮಾಣ ತಗ್ಗಲಿದೆ ಎಂಬುದು ವಿತ್ತ ಸಚಿವ ಅರುಣ್ ಜೇಟ್ಲಿ ಅವರ ಆಲೋಚನೆ.












Click it and Unblock the Notifications