ಅಕ್ಕನ ಗಂಡನ ಜೊತೆ ಮದುವೆ, ಕೈ ತಪ್ಪಿದ ಜಡ್ಜ್ ಹುದ್ದೆ!
ಬೆಂಗಳೂರು, ಅ.21 : ನ್ಯಾಯಾಧೀಶರಾಗಿ ಆಯ್ಕೆಯಾಗುವ ಎಲ್ಲಾ ಅರ್ಹತೆ ಹೊಂದಿದ್ದರು, ತನ್ನ ಸಹೋದರಿಯ ಪತಿಯನ್ನು ವಿವಾಹವಾದ ಕಾರಣ ಮಹಿಳೆಯೊಬ್ಬರಿಗೆ ನ್ಯಾಯಾಧೀಶರ ಹುದ್ದೆ ಕೈ ತಪ್ಪಿದೆ. ಸರ್ಕಾರ ನ್ಯಾಯಾಧೀಶರ ಹುದ್ದೆಯಿಂದ ಮಹಿಳೆಯನ್ನು ಅನರ್ಹಗೊಳಿಸಿದೆ.
ರಾಧಾರಾಣಿ ಮಹದೇವ ಕಾಂಬಳೆ ಎಂಬುವವರು ನ್ಯಾಯಾಧೀಶರಾಗಿ ಸೇವೆ ಸಲ್ಲಿಸುವ ಅವಕಾಶ ಕಳೆದುಕೊಂಡ ಮಹಿಳೆ. ಸಿವಿಲ್ ನ್ಯಾಯಾಧೀಶರ ಹುದ್ದೆಗೆ ನಡೆದ ಪರೀಕ್ಷೆಯಲ್ಲಿ 41ನೇ ರ್ಯಾಂಕ್ ಗಳಿಸಿದ್ದರೂ, ನ್ಯಾಯಾಧೀಶರಾಗಿ ಆಯ್ಕೆಯಾಗುವ ಅರ್ಹತೆ ಕಳೆದುಕೊಂಡಿದ್ದಾರೆ.

ಮಹಿಳೆ, ಮೊದಲೇ ಮದುವೆ ಆಗಿರುವ ವ್ಯಕ್ತಿಯನ್ನು ಮತ್ತೆ ಮದುವೆ ಆದರೆ ಅಥವಾ ವ್ಯಕ್ತಿ ಒಂದಕ್ಕಿಂತ ಹೆಚ್ಚು ಮಹಿಳೆಯರನ್ನು ವಿವಾಹವಾದರೆ, ಅವರು ನಾಗರಿಕ ಸೇವೆಗೆ ಅನರ್ಹ ಎಂದು ಕರ್ನಾಟಕ ನಾಗರಿಕ ಸೇವಾ ನಿಯಮ 5(2) ಹೇಳುತ್ತದೆ. ಇದೇ ನಿಯಮದ ಪ್ರಕಾರ ರಾಧಾಮಣಿ ನ್ಯಾಯಾಧೀಶರ ಹುದ್ದೆ ಕಳೆದುಕೊಂಡಿದ್ದಾರೆ.
ಸಹೋದರಿಯ ಪತಿಯನ್ನು ವಿವಾಹವಾಗಿರುವುದಾಗಿ ರಾಧಾರಾಣಿ ಅವರು ಒಪ್ಪಿಕೊಂಡಿದ್ದಾರೆ. ಆದ್ದರಿಂದ ಸರ್ಕಾರ ಅವರನ್ನು ಸಿವಿಲ್ ನ್ಯಾಯಾಧೀಶರ ಹುದ್ದೆಗೆ ಪರಿಗಣಿಸದೆ ಅನರ್ಹಗೊಳಿಸಿರುವ ಕ್ರಮ ಸರಿಯಾಗಿದೆ ಎಂದು ಹೈಕೋರ್ಟ್ ಸಹ ತೀರ್ಪು ನೀಡಿದೆ.
ಪ್ರಕರಣವೇನು : ರಾಧಾರಾಣಿ ಅವರು 2002ರಲ್ಲಿ ಗೋಪಾಲ ಬಿ.ಪಾಟೀಲ್ ಅವರನ್ನು ವಿವಾಹವಾಗಿದ್ದರು, ಪಾಟೀಲ್ ಅದಕ್ಕೂ ಮುನ್ನ ಶೋಭಾ ಬಿ ಲಗಾಡೆ ಅವರನ್ನು ಮದುವೆ ಆಗಿದ್ದರು. ಅವರಿಗೆ ಮೂವರು ಮಕ್ಕಳಿದ್ದರು. ಆದರೆ, ಮದುವೆ ವಿಚ್ಛೇದನದಲ್ಲಿ ಮುಗಿದಿತ್ತು.
ಆನಂತರ ಪಾಟೀಲ್ ಅವರು ರಾಧಾರಾಣಿಯ ಹಿರಿಯ ಸಹೋದರಿ ಮಥುರಾ ಅವರನ್ನು ವಿವಾಹವಾಗಿದ್ದರು. ಅವರಿಗೂ ಮೂರು ಮಕ್ಕಳಾಗಿವೆ. ಮಥುರಾ ಈಗಲೂ ಪಾಟೀಲ್ ಅವರೊಂದಿಗೆ ಜೀವನ ಸಾಗಿಸುತ್ತಿದ್ದಾರೆ.
2006ರಲ್ಲಿ ಕರ್ನಾಟಕ ಹೈಕೋರ್ಟ್ ಸಿವಿಲ್ ನ್ಯಾಯಾಧೀಶರ ಹುದ್ದೆಗಳನ್ನು ಭರ್ತಿ ಮಾಡಲು ಅಧಿಸೂಚನೆ ಹೊರಡಿಸಿತ್ತು. ರಾಧಾರಾಣಿ ಕೂಡ ಒಬ್ಬ ಅಭ್ಯರ್ಥಿಯಾಗಿ ಅರ್ಜಿ ಸಲ್ಲಿಸಿದ್ದರು. ಲಿಖಿತ ಪರೀಕ್ಷೆ ಹಾಗೂ ಮೌಖಿಕ ಪರೀಕ್ಷೆಯಲ್ಲಿ ಎರಡರಲ್ಲೂ ಉತ್ತಮ ಅಂಕಗಳಿಸಿದ್ದರು.
2008ರಲ್ಲಿ ಪ್ರಕಟವಾದ 232 ಸಿವಿಲ್ ನ್ಯಾಯಾಧೀಶರ ಆಯ್ಕೆ ಪಟ್ಟಿಯಲ್ಲಿ ರಾಧಾರಾಣಿ 41ನೇ ರ್ಯಾಂಕ್ ಗಳಿಸಿ ನ್ಯಾಯಮೂರ್ತಿಗಳಾಗಲು ಎಲ್ಲ ರೀತಿಯ ಅರ್ಹತೆ ಪಡೆದ್ದಿರು. ಆದರೆ 2008ರ ಸೆಪ್ಟೆಂಬರ್ ನಲ್ಲಿ ಪ್ರಕಟಗೊಂಡ ನ್ಯಾಯಾಧೀಶರ ಆಯ್ಕೆ ಪಟ್ಟಿಯಲ್ಲಿ ರಾಧಾರಾಣಿ ಹೆಸರು ಇರಲಿಲ್ಲ.
ರಾಧಾರಾಣಿ ಇದಕ್ಕೆ ಕಾರಣ ಏನೆಂದು ತಿಳಿಯಲು ಹೋರಟಾಗ, ಅವರು ಮೊದಲೇ ಮದುವೆ ಆಗಿದ್ದ ವ್ಯಕ್ತಿಯನ್ನು ಮದುವೆ ಆಗಿರುವ ಕಾರಣಕ್ಕೆ ಆಕೆಯನ್ನು ನ್ಯಾಯಾಧೀಶರ ಹುದ್ದೆಯಿಂದ ಅನರ್ಹಗೊಳಿಸಲಾಗಿದೆ ಎಂದು ತಿಳಿಯಿತು.
ಸರ್ಕಾರದ ಈ ಕ್ರಮವನ್ನು ಪ್ರಶ್ನಿಸಿ ರಾಧಾರಾಣಿ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎ.ಎನ್.ವೇಣುಗೋಪಾಲಗೌಡ ಅವರ ಏಕಸದಸ್ಯಪೀಠ ಅವರ ಅರ್ಜಿಯನ್ನು ವಜಾಗೊಳಿಸಿದೆ.
ಬಹುಪತ್ನಿತ್ವ ಮಹಿಳೆಯರಿಗೆ ಸಂಕಷ್ಟ ತರುತ್ತದೆ. ಆದ್ದರಿಂದಲೇ ಹಿಂದೂ ವಿವಾಹ ಕಾಯಿದೆ ಹಿಂದೂಗಳಲ್ಲಿ ಬಹುಪತ್ನಿತ್ವವನ್ನು ನಿಷೇಧಿಸಿದೆ. ಇಲ್ಲಿ ಪ್ರಶ್ನಿಸಲಾಗಿರುವ ನಿಯಮ 5(2) ಕೂಡ ಏಕಪತ್ನಿ ವ್ಯವಸ್ಥೆ ಇರಬೇಕು ಎಂಬ ಮಹದಾಶಯವನ್ನು ಹೊಂದಿದೆ ಎಂದು ಪೀಠ ತನ್ನ ಆದೇಶದಲ್ಲಿ ಹೇಳಿದೆ.
ಹೈಕೋರ್ಟ್ ಸಹ ಸರ್ಕಾರದ ನಿಯಮವನ್ನು ಎತ್ತಿಹಿಡಿದಿದ್ದರಿಂದ ರಾಧಾಮಣಿ ಅವರು, ಸಿವಿಲ್ ನ್ಯಾಯಾಧೀಶರಾಗುವ ಅರ್ಹತೆ ಕಳೆದುಕೊಂಡಿದ್ದಾರೆ. ಪರೀಕ್ಷೆಯಲ್ಲಿ ಉತ್ತಮ ಅಂಕಗಳಿಸಿದ್ದರೂ, ನ್ಯಾಯಾಧೀಶರ ಹುದ್ದೆ ಅವರ ಕೈ ತಪ್ಪಿದೆ.












Click it and Unblock the Notifications