ದರ್ಶನ್ ಮಾಡಿದ ಸಹಾಯ ನೆನೆದು ಜೈಲಿಗೆ ನೋಡಲು ಬಂದ ಮಂಗಳಮುಖಿ ನಕ್ಷತ್ರ
ಬೆಂಗಳೂರು, ಜೂನ್ 24: ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಆರೋಪದಲ್ಲಿ ನಟ ದರ್ಶನ್ ಹಾಗೂ ಗ್ಯಾಂಗ್ ಜೈಲು ಪಾಲಾಗಿದೆ. ಕೋರ್ಟ್ ಆದೇಶದ ಮೇರೆಗೆ ಪವಿತ್ರಾ ಗೌಡ ಹಾಗೂ ನಟ ದರ್ಶನ್ ಸೇರಿದಂತೆ ಪ್ರಕರಣದ ಎಲ್ಲಾ ಆರೋಪಿಗಳು ಜೈಲುಪಾಲಾಗಿದ್ದಾರೆ. ಇಂದಿನಿಂದ ಆರೋಪಿಗಳಿಗೆ ಆಪ್ತರ ಭೇಟಿಗೆ ಅವಕಾಶ ನೀಡಲಾಗಿದ್ದು, ಇಂದು ಒಬ್ಬೊಬ್ಬರಾಗಿಯೇ ಬಂದು ನಟ ದರ್ಶನ್ನನ್ನು ಭೇಟಿಯಾಗುತ್ತಿದ್ದಾರೆ.
ದರ್ಶನ್ ಪತ್ನಿ ವಿಜಯಲಕ್ಷ್ಮಿ, ನಟ ವಿನೋದ್ ಪ್ರಭಾಕರ್ ಇಂದು ದರ್ಶನ್ನ್ನು ಭೇಟಿಯಾಗಿದ್ದು, ನಮ್ಮನೆ ಸುಮ್ಮನೆ ಆಶ್ರಮದ ಟ್ರಸ್ಟಿ ನಕ್ಷತ್ರ ಜೈಲಿನ ಬಳಿ ಆಗಮಿಸಿದ್ದಾರೆ. ಬೆಂಗಳೂರು ಕೇಂದ್ರ ಕಾರಾಗೃಹ ಅಂದರೆ ಪರಪ್ಪನ ಅಗ್ರಹಾರಕ್ಕೆ ಆಗಮಿಸಿದ ನಕ್ಷತ್ರ ನಟ ದರ್ಶನ್ ಹಾಗೂ ದರ್ಶನ್ ಆಪ್ತ ಹಾಗೂ ಎ-11 ಆರೋಪಿ ನಾಗರಾಜ್ ಭೇಟಿಗೆ ಆಗಮಿಸಿದ್ದಾರೆ.

ಆಶ್ರಮದ ಕಟ್ಟಡ ನಿರ್ಮಾಣಕ್ಕೆ ನಟ ದರ್ಶನ ಆರ್ಥಿಕ ನೆರವು ನೀಡಿದ್ದಾರೆ. ದರ್ಶನ್ ನೀಡಿರುವ ಅನ್ನ ತಿಂದಿದ್ದೇವೆ ಎಂದು ಹೇಳಿದರುವ ನಕ್ಷತ್ರ, ನಾಗರಾಜ್ನನ್ನ ಭೇಟಿಯಾಗಲು ಜೈಲಿನತ್ತ ತೆರಳಿದ್ದಾರೆ.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ನಕ್ಷತ್ರ, ದರ್ಶನ್ ಅವರ ಅನ್ನ ತಿಂದಿದ್ದೇವೆ. ಆ ನಿಯತ್ತು ನಮಗಿದೆ. ದರ್ಶನ್ ಅಣ್ಣ ಅವರು ನಮ್ಮ ಆಶ್ರಮಕ್ಕೆ ರೇಷನಿಂದ ಹಿಡಿದು ಎಲ್ಲಾದಕ್ಕೂ ಜೊತೆಯಲ್ಲಿ ನಿಂತಿದ್ದಾರೆ. ಕಷ್ಟ ಇರುವ ಸಮಯದಲ್ಲಿ ನೆರವಾಗಿದ್ದಾರೆ. ತಪ್ಪು ಮಾಡಿದರವರಿಗೆ ಕಾನೂನು ರೀತಿಯಲ್ಲಿ ಶಿಕ್ಷೆಯಾಗಲಿ. ಆದರೆ ಯಾವತ್ತೂ ಯಾರ ಮನೆ ಅನ್ನ ತಿಂದರೂ ಮರೆಯಬಾರದು ಎಂದು ಹೇಳಿಕೊಟ್ಟಿದ್ದಾರೆ ಎಂದರು.

ಕಾನೂನು ರೀತಿಯಲ್ಲಿ ತಪ್ಪು ಮಾಡಿದ್ದರೆ ಶಿಕ್ಷೆಯಾಗಲಿ. ಆದರೆ ನಾನು ಅವರ ಕೊಟ್ಟ ಅನ್ನ ತಿಂದಿದ್ದೇನೆ. ನಾನು ಒಬ್ಬಳೇ ಅಲ್ಲ ನಮ್ಮ ಆಶ್ರಮದಲ್ಲಿರುವ ಎಲ್ಲರೂ ತಿಂದಿದ್ದಾರೆ. ನಾವೀಗ ಕಟ್ಟುತ್ತಿರುವ ಒಂದು ಸಾವಿರ ಜನರ ಅನಾಥಾಶ್ರಮಕ್ಕೆ ಅದಕ್ಕೂ ಕೂಡ ದರ್ಶನ್ ಅಣ್ಣ ಬಹಳಷ್ಟು ಸಹಾಯ ಮಾಡಿದ್ದಾರೆ. ಆ ಮಾನವೀಯತೆಯಿಂದ ಭೇಟಿ ಮಾಡಲು ಬಂದಿದ್ದೇವೆ ಎಂದು ನಕ್ಷತ್ರ ಹೇಳಿದ್ದಾರೆ.
ರೇಣುಕಾಸ್ವಾಮಿ ಕೊಲೆ ಆರೋಪದ ಆರೋಪಿಯಾದ ನಟ ದರ್ಶನ್ ಹಾಗೂ ಇತರ ಆರೋಪಿಗಳು ಇಂದು ಜಾಮೀನು ಕೋರಿ ಅರ್ಜಿ ಸಲ್ಲಿಸುವ ಸಾಧ್ಯತೆ ಇದೆ ಎನ್ನಲಾಗಿದೆ. ಎಸಿಎಂಎಂ ಕೋರ್ಟ್ಗೆ ಜಾಮೀನು ಕೋರಿ ಅರ್ಜಿ ಸಲ್ಲಿಕೆ ಸಾಧ್ಯತೆ ಇದ್ದು ಜೂನ್ 22, 23 ಶನಿವಾರ ಹಾಗೂ ಭಾನುವಾರ ಆದ ಕಾರಣ ಯಾವುದೇ ಬೆಳವಣಿಗೆ ನಡೆದಿರಲಿಲ್ಲ. ಇಂದು ಕುಟುಂಬಸ್ಥರ ಭೇಟಿಗೂ ಕೂಡ ಅವಕಾಶ ಸಿಕ್ಕಿದ್ದು, ಜಾಮೀನು ಕೋರಿ ಅರ್ಜಿ ಸಲ್ಲಿಸುವ ಸಾಧ್ಯತೆ ಇದೆ.












Click it and Unblock the Notifications