ಬೆಂಗಳೂರು ರೈಲು ನಿಲ್ದಾಣ ನಕಲಿ ಟಿಕೆಟ್ ಹಾವಳಿ ತಡೆಯಲು ಹೊಸ ಐಡಿಯಾ
ಬೆಂಗಳೂರು, ಡಿಸೆಂಬರ್ 23; ರೈಲು ನಿಲ್ದಾಣದಲ್ಲಿ ಕಾಯ್ದಿರಿಸಿದ ನಕಲಿ ಟಿಕೆಟ್ಗಳನ್ನು ಪ್ರಿಂಟ್ ಮಾಡಿ ಮಾರಾಟ ಮಾಡುವ ಜಾಲವನ್ನು ಪತ್ತೆ ಹಚ್ಚಲಾಗಿದೆ. ಇಂತಹ ವಂಚನೆ ತಡೆದು ಪ್ರಯಾಣಿಕರಿಗೆ ಅನುಕೂಲ ಮಾಡಿಕೊಡಲು ಇಲಾಖೆ ಎಲ್ಲಾ ರೈಲ್ವೆ ವಲಯಗಳಿಗೆ ಸೂಚನೆ ನೀಡಿದೆ. ಆದ್ದರಿಂದ ಬೆಂಗಳೂರು ನಗರದ ಪ್ರಯಾಣಿಕರ ದಟ್ಟಣೆಯ ಕೆಎಸ್ಆರ್ ನಿಲ್ದಾಣದಲ್ಲಿ ಹೊಸ ಐಡಿಯಾ ಮಾಡಲಾಗಿದೆ.
ನೈಋತ್ಯ ರೈಲ್ವೆಯ ಬೆಂಗಳೂರು ವಿಭಾಗ ಮೆಜೆಸ್ಟಿಕ್ನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣ (ಕೆಎಸ್ಆರ್ ಬೆಂಗಳೂರು)ದಲ್ಲಿ ಥರ್ಮಲ್ ಪ್ರಿಂಟರ್ಗಳನ್ನು ಪರಿಚಯಿಸಿದೆ. ನಿಲ್ದಾಣದ ಮುಖ್ಯದ್ವಾರದ ಬಳಿಯ ಈ ಮಾದರಿಯ ಎರಡು ಕೌಂಟರ್ಗಳನ್ನು ತೆರೆಯಲಾಗಿದೆ.

ಉತ್ತರ ಭಾರತದಲ್ಲಿ ಕೆಲವು ದಿನಗಳ ಹಿಂದೆ ಕಾಯ್ದಿರಿಸಿದ ನಕಲಿ ಟಿಕೆಟ್ಗಳನ್ನು ಪ್ರಿಂಟ್ ಮಾಡಿ ಮಾರಾಟ ಮಾಡುವ ಜಾಲವನ್ನು ಪತ್ತೆಯಾಗಿತ್ತು. ಇದರಿಂದ ಎಚ್ಚೆತ್ತ ರೈಲ್ವೆ ಇಲಾಖೆ ಈ ಕುರಿತು ಎಲ್ಲಾ ವಲಯಗಳಿಗೆ ಮಾಹಿತಿ ನೀಡಿತ್ತು. ಇಂತಹ ವಂಚನೆ ತಡೆಯಲು ಕ್ರಮ ಕೈಗೊಳ್ಳಿ ಎಂದು ಸೂಚನೆ ಕೊಟ್ಟಿತ್ತು.
ನಕಲಿ ಟಿಕೆಟ್ ಜಾಲ: ಕೆಎಸ್ಆರ್ ಬೆಂಗಳೂರು ನಿಲ್ದಾಣದಲ್ಲಿ ಪ್ರತಿದಿನ ಅಂದಾಜು 12 ರಿಂದ 13 ಸಾವಿರ ಕಾಯ್ದಿರಿಸಿದ ಟಿಕೆಟ್ ನೀಡಲಾಗುತ್ತದೆ. ಆದ್ದರಿಂದ ನಿಲ್ದಾಣದಲ್ಲಿ ನಕಲಿ ಮುದ್ರಿತ ಟಿಕೆಟ್ ಹಂಚಿಕೆ ತಡೆಯಲು ಥರ್ಮಲ್ ಪ್ರಿಂಟರ್ ಪರಿಚಯಿಸಲಾಗಿದೆ. ಮುಂದಿನ ದಿನಗಳಲ್ಲಿ ಕೆಆರ್ ಪುರ, ಯಶವಂತಪುರ ಮತ್ತು ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ಗಳಲ್ಲಿ ಸಹ ಇದೇ ಮಾದರಿ ಪ್ರಿಂಟರ್ ಅಳವಡಿಕೆ ಮಾಡಲಾಗುತ್ತದೆ.
SWR has introduced thermal printers at KSR Bengaluru Railway Station to enhance ticketing efficiency and security. These printers offer faster printing, produce tamper-proof tickets, and feature a dynamic QR code for verification via the TTE App. Additionally, they operate on… pic.twitter.com/m0I4UFWjKN
— South Western Railway (@SWRRLY) December 23, 2024
ಥರ್ಮಲ್ ಪ್ರಿಂಟರ್ ಮೂಲಕ ನೀಡಿದ ಮುದ್ರಿತ ಟಿಕೆಟ್ಗಳನ್ನು ನಕಲು ಮಾಡುವುದು ಅಸಾಧ್ಯ. ಈ ಪ್ರಿಂಟರ್ ಮೂಲಕ ನೀಡಲಾಗುವ ಪ್ರತಿ ಟಿಕೆಟ್ಗೆ ಕ್ಯೂಆರ್ ಕೋಡ್ ಇರುತ್ತದೆ. ಇಂತಹ ಟಿಕೆಟ್ಗಳನ್ನು ಪರಿಶೀಲನೆ ನಡೆಸಲು ಅಪ್ಲಿಕೇಶನ್ ತಯಾರು ಮಾಡಲಾಗಿದೆ. ಸಾಮಾನ್ಯ ಪ್ರಿಂಟರ್ಗಳಲ್ಲಿ 20 ಸೆಕೆಂಡ್ಗೆ ಒಂದು ಟಿಕೆಟ್ ನೀಡಿದರೆ, ಥರ್ಮಲ್ ಪ್ರಿಂಟರ್ನಲ್ಲಿ 3 ಸೆಕೆಂಡ್ಗೆ ಒಂದು ಟಿಕೆಟ್ ನೀಡಲಾಗುತ್ತದೆ.
ಸಾಮಾನ್ಯ ಪ್ರಿಂಟರ್ಗಳಲ್ಲಿ 1000 ಟಿಕೆಟ್ ನೀಡಿದ ಬಳಿಕ ಕಾಟ್ರೇಜ್ ಬದಲಾವಣೆ ಮಾಡಬೇಕಿತ್ತು. ಇಲ್ಲವಾದಲ್ಲಿ ಟಿಕೆಟ್ನಲ್ಲಿ ವಿವರ ಅಸ್ಪಷ್ಟವಾಗಿ ಕಾಣುತ್ತಿತ್ತು. ಆದರೆ ಥರ್ಮಲ್ ಪ್ರಿಂಟರ್ನಲ್ಲಿ ಈ ಸಮಸ್ಯೆ ಇಲ್ಲ. ಭಾನುವಾರ ಪ್ರಾಯೋಗಿಕವಾಗಿ 100 ಟಿಕೆಟ್ ಮಾತ್ರ ನೀಡಲಾಗಿದ್ದು, ಸೋಮವಾರದಿಂದ ಥರ್ಮಲ್ ಪ್ರಿಂಟರ್ ಸಂಪೂರ್ಣವಾಗಿ ಕಾರ್ಯ ನಿರ್ವಹಣೆ ಮಾಡುತ್ತಿದೆ.
ಥರ್ಮಲ್ ಪ್ರಿಂಟರ್ ಮೂಲಕ ವೇಗವಾಗಿ ಟಿಕೆಟ್ಗಳನ್ನು ನೀಡಬಹುದು. ಇದರಿಂದಾಗಿ ಸರತಿ ಸಾಲಿನಲ್ಲಿ ಪ್ರಯಾಣಿಕರು ಹೆಚ್ಚು ಹೊತ್ತು ಕಾಯುವುದು ಸಹ ತಪ್ಪಲಿದೆ. 2025ರ ಅಕ್ಟೋಬರ್ ವೇಳೆಗೆ ಶೇ 90ರಷ್ಟು ಟಿಕೆಟ್ಗಳನ್ನು ಈ ಮಾದರಿ ಥರ್ಮಲ್ ಪ್ರಿಂಟರ್ ಮೂಲಕವೇ ನೀಡುವ ಗುರಿಯನ್ನು ನೈಋತ್ಯ ರೈಲ್ವೆ ವಲಯದ ಬೆಂಗಳೂರು ವಿಭಾಗ ಹೊಂದಿದೆ.
ಕೆಲವು ದಿನಗಳ ಹಿಂದೆ ನೈಋತ್ಯ ರೈಲ್ವೆ ರೈಲು ನಿಲ್ದಾಣಗಳಲ್ಲಿ ಪ್ರಯಾಣಿಕರ ದಟ್ಟಣೆ ಕಡಿಮೆ ಹೊಸ ಕ್ರಮ ಕೈಗೊಂಡಿತ್ತು. ಇದಕ್ಕಾಗಿ ಎಂ-ಯುಟಿಎಸ್ ಎಂಬ ಯಂತ್ರ ಪರಿಚಯಿಸಿತ್ತು. ಇದರ ಮೂಲಕ ನಿಲ್ದಾಣದಲ್ಲಿ ಪ್ರಯಾಣಿಕರು ಕ್ಯೂ ನಿಂತಿರುವ ಜಾಗಕ್ಕೆ ತೆರಳಿ ಟಿಕೆಟ್ ನೀಡಲಾಗುತ್ತಿದೆ. ಈ ಕ್ರಮಕ್ಕೆ ಪ್ರಯಾಣಿಕರು ಸಹ ಮೆಚ್ಚುಗೆ ವ್ಯಕ್ತಪಡಿಸಿದ್ದರು.












Click it and Unblock the Notifications