Cauvery Water: ತಮಿಳುನಾಡಿನಿಂದ ರೂಲ್ಸ್ ಬ್ರೇಕ್, ಗಟ್ಟಿ ನಿರ್ಧಾರಕ್ಕೆ ಸಿದ್ದರಾಮಯ್ಯಗೆ ಮಾಜಿ ಸಿಎಂ ಪತ್ರ
ಬೆಂಗಳೂರು, ಆಗಸ್ಟ್ 14: ಕಾವೇರಿ ನದಿಯಲ್ಲಿ ನೀರು ತುಂಬಿದರೆ ಸಾಕು ಖ್ಯಾತೆ ತೆಗೆಯುವ ಪಕ್ಕ ತಮಿಳುನಾಡು ರಾಜ್ಯವು ಈ ವರ್ಷ ಕಾವೇರಿ ಜಲ ವಿವಾದ ನ್ಯಾಯಮಂಡಳಿ (CWDT) ನಿಯಮ ಉಲ್ಲಂಘಿಸಿದೆ. ಈ ಸಂಬಂಧ ರಾಜ್ಯದ ಹಿತಾಸಕ್ತಿ ಕಾಯುವ ನಿಟ್ಟಿನಲ್ಲಿ ಕರ್ನಾಟಕ ಗಟ್ಟಿ ನಿಲು ತಾಳಬೇಕು ಎಂದು ಪತ್ರ ಮುಖೇನ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರು ತಿಳಿಸಿದ್ದಾರೆ.
ಸೋಮವಾರ ಕಾವೇರಿ ನೀರು ಹಂಚಿಕೆ ಕುರಿತು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದು ಆಗ್ರಹಿಸಿದ್ದಾರೆ. ಸಂಬಂಧ ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಪತ್ರ ಬರೆದಿದ್ದಾರೆ. ತಾವು ಕಾವೇರಿ ಜಲಾನಯನ ಪ್ರದೇಶದ ನೀರಿನ ಹಿತಾಸಕ್ತಿ ಕಾಪಾಡುವಂತೆ ಅವರು ಸಲಹೆ ನೀಡಿದ್ದಾರೆ.

ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರು ಬರೆದಿರುವ ಪತ್ರದಲ್ಲಿ ಏನೇನು ಅಂಶಗಳು ಇವೆ ಎಂದು ನೋಡುವುದಾದರೆ, ತಮಿಳುನಾಡು ಸರ್ಕಾರ ಕಾವೇರಿ ನೀರಿನ ಹಂಚಿಕೆ ವಿಚಾರದಲ್ಲಿ ಮತ್ತೆ ಕ್ಯಾತೆ ತೆಗೆದಿರುವುದು ನಿಮ್ಮ ಗಮನಕ್ಕೆ ಬಂದಿದೆ ಎಂದು ಭಾವಿಸಿದ್ದೇನೆ. ಅಲ್ಲದೇ ತಮಿಳುನಾಡು ಸುಪ್ರಿಂ ಕೋರ್ಟ್ ಗೆ ಹೋಗಬಹುದೆಂದು ಮಾಧ್ಯಮದಲ್ಲಿ ನಾವು ನೋಡಿದ್ದೇವೆ.
ಕಾನೂನಾತ್ಮಕ ಕ್ರಮಕ್ಕೆ ಬೊಮ್ಮಾಯಿ ಆಗ್ರಹ
ಈ ವಿಚಾರದಲ್ಲಿ ಕೆಳಕಂಡ ಮಹತ್ವದ ವಾಸ್ತವಿಕ ಅಂಶಗಳನ್ನು ಇಟ್ಟುಕೊಂಡು ಬರುವ ದಿನಗಳಲ್ಲಿ ಕಾನೂನಾತ್ಮಕ ಕ್ರಮ ಕೈಗೊಳ್ಳಬೇಕೆಂದು ಅವರು ಒತ್ತಾಯಿಸಿ ಪತ್ರ ಬರೆದಿದ್ದಾರೆ.
ಜೂನ್ 1 ರಂದು ಕರ್ನಾಟಕದ ನಾಲ್ಕು ಜಲಾಶಯಗಳಲ್ಲಿ ಒಟ್ಟು 24.352 ಟಿಎಂಸಿ ನೀರಿತ್ತು. ಅದೇ ರೀತಿ ಮೆಟ್ಟೂರು ಜಲಾಶಯದಲ್ಲಿ 69.77 ಟಿಎಂಸಿ, ಭವಾನಿ ಸಾಗರ ಜಲಾಶಯದಲದಲಿ 16.653 ಟಿಎಂಸಿ ಇದ್ದು, ಬಿಳಿಗುಂಡ್ಲು ಮಾಪನ ಕೇಂದ್ರದಿಂದ 6-8-2023 ಕ್ಕೆ 14.054 ಟಿಎಂಸಿ ನೀರು ಹೋಗಿರುವುದು ಮಾಧ್ಯಮಗಳಲ್ಲಿ ವರದಿ ಆಗಿದೆ. ಒಟ್ಟು ತಮಿಳುನಾಡಿದ ಮೆಟ್ಟೂರು ಡ್ಯಾಂನಲ್ಲಿ ಈ ವರ್ಷ 83.831ಟಿಎಂಸಿ ನೀರು ಸಂಗ್ರಹವಾಗಿದೆ ಎಂದರು.

ಕಾವೇರಿ ಜಲ ವಿವಾದ ನ್ಯಾಯಮಂಡಳಿ (CWDT) ಪ್ರಕಾರ ತಮಿಳುನಾಡು ಕುರುವೈ ಬೆಳೆಗೆ 1 ಲಕ್ಷ ಎಂಬತ್ತು ಸಾವಿರ ಎಕರೆ ಬೆಳೆ ಬೆಳೆಯಬೇಕು. ಅದಕ್ಕಾಗಿ 32 ಟಿಎಂಸಿ ನೀರು ಬಳಸಬೇಕು. ಆದರೆ, ತಮಿಳುನಾಡು ಇದೇ ಆಗಸ್ಟ್ 7ನೇ ದಿನಾಂಕವರೆಗೆ 60.97 ಟಿಎಂಸಿ ನೀರು ಕುರುವೈ ಬೆಳೆಗೆ ಬಳಕೆ ಮಾಡಲಾಗಿದೆ. ಇದು CWDT ಆದೇಶದ ಎರಡು ಪಟ್ಟು ಹೆಚ್ಚಾಗಿದೆ. ಈ ಮೂಲಕ ನಿಯಮ ಉಲ್ಲಂಘಿಸಲಾಗಿದೆ ಎಂದು ಅವರು ಹೇಳಿದರು.
ಕರ್ನಾಟಕ ಹಿತಾಸಕ್ತಿಗೆ ಧಕ್ಕೆ
ಕಾವೇರಿ ಜಲಾನಯನ ಪ್ರದೇಶದಲ್ಲಿ ನೀರಿನ ಕೊರತೆ ಇರುವುದನ್ನು ಲೆಕ್ಕಿಸದೇ ಸಿಡಬ್ಲುಡಿಟಿ ಆದೇಶ ಉಲ್ಲಂಘನೆ ಮಾಡಿ ನಾಲ್ಕು ಪಟ್ಡು ಕುರುವೈ ಏರಿಯಾ ಬೆಳೆಗೆ ನೀರನ್ನು ಒದಗಿಸಿದೆ. ಇದನ್ನು ನಮ್ಮ ಅಧಿಕಾರಿಗಳು CWDT ನಲ್ಲಿ ಪ್ರತಿಭಟಿಸದೇ ಸುಮ್ಮನೆ ಇದ್ದಿದ್ದರಿಂದ ಕರ್ನಾಟಕ ರಾಜ್ಯದ ಹಿತಾಸಕ್ತಿಗೆ ಧಕ್ಕೆ ಉಂಟಾಗಿದೆ.
ಈಗಿರುವ ನಮ್ಮ ನಾಲ್ಕು ಡ್ಯಾಮ್ ಗಳ ನಿರಿನ ಮಟ್ಟ ಬೆಂಗಳೂರು ನಗರ, ಕಾವೇರಿ ಜಲಾನಯನ ಪ್ರದೇಶದ ನಗರ ಮತ್ತು ಗ್ರಾಮಗಳ ಕುಡಿಯುವ ನೀರಿಗೆ ಕೊರತೆಯಾಗುತ್ತಿದೆ. ಅದೇ ರೀತಿ ಕಾವೇರಿ ಜಲಾನಯನ ಪ್ರದೇಶದ ಕರೀಫ್ ಬೆಳೆಗಳಿಗೆ ನಿರಿನ ಕೊರತೆಯಾಗುತ್ತದೆ. ಹೀಗಾಗಿ ನೀರು ಬಿಡುವುದು ಕರ್ನಾಟಕದ ಜನತೆ ಮತ್ತು ರೈತರನ್ನು ಸಂಕಷ್ಟಕ್ಕೆ ಈಡು ಮಾಡುತ್ತದೆ ಎಂದು ಅವರು ಕಳವಳ ವ್ಯಕ್ತಪಡಿಸಿದರು.
ತಮಿಳುನಾಡಿಗೆ ಮುಂಗಾರು ಮಳೆ ಆಗುತ್ತಿರುವುದರಿಂದ ಕರ್ನಾಟಕಕ್ಕೆ ಕಾವೇರಿ ನೀರು ಬಿಡಲು ಸಾಧ್ಯವಿಲ್ಲ ಎಂದು ಈ ವಾಸ್ತವಾಂಶದ ಮೇಲೆ ನಾವು ಗಟ್ಟಿ ನಿಲುವು ತೆಗೆದುಕೊಳ್ಳಬೇಕು ಎಂದು ನಾನು (ಬಸವರಾಜ ಬೊಮ್ಮಾಯಿ) ತಮ್ಮಲ್ಲಿ ಆಗ್ರಹ ಮಾಡುತ್ತೇನೆ. ಗಟ್ಟಿ ನಿಲುವಿನ ಮೂಲಕ ತಾವು (ಸಿದ್ದರಾಮಯ್ಯ) ಕಾವೇರಿ ಜಲಾನಯನ ಪ್ರದೇಶದ ನೀರಿನ ಹಿತಾಸಕ್ತಿ ಕಾಪಾಡುತ್ತೀರೆಂದು ನಂಬಿರುವೆ ಎಂದು ಅವರು ಪತ್ರದ ಮೂಲಕ ಆಗ್ರಹಿಸಿದ್ದಾರೆ.












Click it and Unblock the Notifications