ಬೆಂಗಳೂರು ಸಬ್ ಅರ್ಬನ್ ರೈಲು; KIAಗೆ ಹೊಸ ನಿಲ್ದಾಣ ಸೇರ್ಪಡೆ
ಬೆಂಗಳೂರು, ಅಕ್ಟೋಬರ್ 16; ಬೆಂಗಳೂರು ನಗರದಿಂದ ಪ್ರಯಾಣಿಕರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಚಾರ ನಡೆಸುವುದು ಸುಲಭವಾಗಲಿದೆ. ಕ್ಯಾಬ್, ನಮ್ಮ ಮೆಟ್ರೋ ಜೊತೆಗೆ ಉಪ ನಗರ ರೈಲು ಯೋಜನೆಯ 2 ನಿಲ್ದಾಣಗಳು ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸಲಿವೆ.
ಬೆಂಗಳೂರು ಉಪ ನಗರ ರೈಲು (ಸಬ್ ಅರ್ಬನ್) ಯೋಜನೆಯಡಿ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸಲು ಹೆಚ್ಚುವರಿಯಾಗಿ ನಿಲ್ದಾಣವೊಂದನ್ನು ನಿರ್ಮಾಣ ಮಾಡಲು ಪ್ರಸ್ತಾವನೆ ಸಿದ್ಧಪಡಿಸಲಾಗಿದೆ. ಈಗಾಗಲೇ ವಿಮಾನ ನಿಲ್ದಾಣದ ಕೆಲವೇ ದೂರದಲ್ಲಿ ಏರ್ಪೋರ್ಟ್ ರೈಲ್ವೆ ಹಾಲ್ಟ್ ಸ್ಟೇಷನ್ ಇದೆ.

ಭವಿಷ್ಯದಲ್ಲಿ ಬೆಂಗಳೂರು ನಗರದ ಸಂಚಾರ ದಟ್ಟಣೆಯನ್ನು ಸಬ್ ಅರ್ಬನ್ ರೈಲು ಯೋಜನೆ ಕಡಿಮೆ ಮಾಡಲಿದೆ ಎಂದು ಅಂದಾಜಿಸಲಾಗಿದೆ. ಯೋಜನೆಯಡಿ 4 ಕಾರಿಡಾರ್ ನಿರ್ಮಾಣವಾಗುತ್ತಿದೆ. ಇದರಲ್ಲಿ 'ಸಂಪಿಗೆ' ಕಾರಿಡಾರ್ 148.17 ಕಿ. ಮೀ. ವ್ಯಾಪ್ತಿ ಹೊಂದಿದೆ. ಇದೇ ಕಾರಿಡಾರ್ ವಿಮಾನ ನಿಲ್ದಾಣಕ್ಕೆ ಸಬ್ ಅರ್ಬನ್ ರೈಲು ಸಂಪರ್ಕ ಕಲ್ಪಿಸಲಿದೆ.
ಎಲ್ಲಿ ನಿಲ್ದಾಣ ನಿರ್ಮಾಣ?; ಸಬ್ ಅರ್ಬನ್ ರೈಲು ಯೋಜನೆಯಡಿ ದೇವನಹಳ್ಳಿಯಲ್ಲಿರುವ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಒಂದು ನಿಲ್ದಾಣವನ್ನು ಮೊದಲು ಯೋಜನೆ ಮಾಡಲಾಗಿತ್ತು. ಆದರೆ ಈಗ ಭವಿಷ್ಯದ ಪ್ರಯಾಣಿಕರ ದಟ್ಟಣೆ ಗಮನದಲ್ಲಿಟ್ಟುಕೊಂಡು ಮತ್ತೊಂದು ನಿಲ್ದಾಣ ನಿರ್ಮಾಣದ ಪ್ರಸ್ತಾಪ ಸಿದ್ಧಗೊಳಿಸಲಾಗಿದೆ.
ಸಬ್ ಅರ್ಬನ್ ರೈಲು ಯೋಜನೆಯಡಿ ಟರ್ಮಿನಲ್ ಸಮೀಪವೇ ಮೊದಲ ನಿಲ್ದಾಣ ನಿರ್ಮಾಣವಾಗಲಿದೆ. ಹೊಸ ಟೋಲ್ ಫ್ರೀ ರಸ್ತೆಯ ಸಮೀಪದಲ್ಲಿ ಎರಡನೇ ನಿಲ್ದಾಣ ನಿರ್ಮಾಣ ಮಾಡಲು ಯೋಜಿಸಲಾಗಿದೆ. ಈ ಮೂಲಕ ವಿಮಾನ ನಿಲ್ದಾಣ ಪ್ರಯಾಣಿಕರನ್ನು ಸೆಳೆಯಲು ಮುಂದಾಗಿದೆ. ಈ 'ಸಂಪಿಗೆ' ಕಾರಿಡಾರ್ ನಿರ್ಮಾಣಕ್ಕೆ ಡಿಸೆಂಬರ್ನಲ್ಲಿ ಟೆಂಡರ್ ಕರೆಯುವ ನಿರೀಕ್ಷೆ ಇದೆ.
ಸಬ್ ಅರ್ಬನ್ ರೈಲು ಯೋಜನೆಯ ಮೂಲ ಡಿಪಿಆರ್ನಲ್ಲಿ 2ನೇ ನಿಲ್ದಾಣ ಇರಲಿಲ್ಲ. ಆದರೆ ವಿಮಾನ ನಿಲ್ದಾಣಕ್ಕೆ ಪ್ರತಿನಿತ್ಯ ಸಂಚಾರ ನಡೆಸುವ ಸಿಬ್ಬಂದಿ, ವಿಮಾನ ನಿಲ್ದಾಣದ ಸುತ್ತಮುತ್ತಲಿನ ಗ್ರಾಮಗಳ ಜನರನ್ನು ಗಮನದಲ್ಲಿಟ್ಟುಕೊಂಡು ಈ ನಿಲ್ದಾಣದ ಪ್ರಸ್ತಾಪ ಮಾಡಲಾಗಿದೆ.
ಡಿಪಿಆರ್ನಲ್ಲಿ ಇರುವಂತೆ 'ಏರ್ಪೋರ್ಟ್ ಟರ್ಮಿನಲ್' ಹೆಸರಿನ ಮೊದಲ ನಿಲ್ದಾಣ ಪಾರ್ಕಿಂಗ್ ಲಾಟ್ ಸಮೀಪ ನಿರ್ಮಾಣವಾಗಲಿದೆ. ಮತ್ತೊಂದು ನಿಲ್ದಾಣ ಹೆಣ್ಣೂರು-ಬಾಗಲೂರು-ಬಾಗಲೂರು ರೋಡ್ ಬಳಿ ನಿರ್ಮಾಣಗೊಳ್ಳಲಿದೆ. 2ನೇ ನಿಲ್ದಾಣಕ್ಕೆ ಹೋಲಿಕೆ ಮಾಡಿದರೆ ಮೊದಲ ನಿಲ್ದಾಣ ದೊಡ್ಡದಾಗಿರಲಿದೆ.
ಸಬ್ ಅರ್ಬನ್ ರೈಲು ಯೋಜನೆಯಡಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ವ್ಯಾಪ್ತಿಯಲ್ಲಿ 2ನೇ ರೈಲು ನಿಲ್ದಾಣ ನಿರ್ಮಾಣ ಮಾಡಲು ಸಮೀಕ್ಷೆಯನ್ನು ಸಹ ಮಾಡಲಾಗಿದೆ. ನಿಲ್ದಾಣ ನಿರ್ಮಾಣವಾದರೆ ಹೇಗೆ ಪ್ರಯಾಣಿಕರಿಗೆ ಸಹಾಯಕವಾಗಲಿದೆ? ಎಂದು ವರದಿಯನ್ನು ತಯಾರು ಮಾಡಲಾಗಿದೆ.
ನೈಋತ್ಯ ರೈಲ್ವೆ ಈಗಾಗಲೇ 'ಸಂಪಿಗೆ' ಸಬ್ ಅರ್ಬನ್ ರೈಲು ಕಾರಿಡಾರ್ ಯೋಜನೆಯ ಸಮೀಕ್ಷೆ ಪೂರ್ಣಗೊಳಿಸಿದೆ. 2ನೇ ನಿಲ್ದಾಣ ನಿರ್ಮಾಣಕ್ಕೆ ಒಪ್ಪಿಗೆ ಅಗತ್ಯವಿಲ್ಲ. ಆದರೆ ಬೆಂಗಳೂರು ಉಪನಗರ ರೈಲು ಯೋಜನೆ (ಬಿಎಸ್ಆರ್ಪಿ) ಯೋಜನೆ ಅನುಷ್ಠಾನಗೊಳಿಸುತ್ತಿರುವ ರೈಲು ಮೂಲಸೌಕರ್ಯ ಅಭಿವೃದ್ಧಿ ಕಂಪನಿ (ಕರ್ನಾಟಕ) ಲಿಮಿಟೆಡ್ (ಕೆ-ರೈಡ್) ಬಿಐಎಎಲ್ನ ಒಪ್ಪಿಗೆಯನ್ನು ಪಡೆಯಬೇಕಿದೆ.
ಸಬ್ ಅರ್ಬನ್ ರೈಲು ಯೋಜನೆ 'ಸಂಪಿಗೆ' ಕಾರಿಡಾರ್ ಕೆಎಸ್ಆರ್ ಬೆಂಗಳೂರು-ದೇವನಹಳ್ಳಿಯನ್ನು ಸಂಪರ್ಕಿಸಲಿದೆ. ಕೆಎಸ್ಆರ್ ಬೆಂಗಳೂರು, ಶ್ರೀರಾಂಪುರ, ಮಲ್ಲೇಶ್ವರ, ಯಶವಂತಪುರ, ಮುತ್ಯಾಳ, ಲೊಟ್ಟೆಗೊಲ್ಲಹಳ್ಳಿ, ಕೊಡಿಗೆಹಳ್ಳಿ, ಜ್ಯುಡಿಶಿಯಲ್ ಲೇಔಟ್, ಯಲಹಂಕ, ನಿಟ್ಟೆ ಮೀನಾಕ್ಷಿ, ಬೆಟ್ಟಹಲಸೂರು, ದೊಡ್ಡಜಾಲ, ವಿಮಾನ ನಿಲ್ದಾಣ ಟರ್ಮಿನಲ್, ದೇವನಹಳ್ಳಿ ನಿಲ್ದಾಣಗಳನ್ನು ಒಳಗೊಂಡಿದೆ.
ನಮ್ಮ ಮೆಟ್ರೋ ನೀಲಿ ಮಾರ್ಗ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುತ್ತದೆ. ಈ ಯೋಜನೆಯಲ್ಲಿ ಸಹ ಏರ್ಪೋರ್ಟ್ ಸಿಟಿ ಮತ್ತು ಏರ್ಪೋರ್ಟ್ ಟರ್ಮಿನಲ್ ಎಂಬ ಎರಡು ಮೆಟ್ರೋ ನಿಲ್ದಾಣಗಳು ನಿರ್ಮಾಣಗೊಳ್ಳುತ್ತಿವೆ. 2025ರಲ್ಲಿ ವಿಮಾನ ನಿಲ್ದಾಣಕ್ಕೆ ನಮ್ಮ ಮೆಟ್ರೋ ಸಂಚಾರ ನಡೆಸಲಿದೆ ಎಂದು ಅಂದಾಜಿಸಲಾಗಿದೆ.












Click it and Unblock the Notifications