ಬೆಂಗಳೂರು ವಿವಿ ಆವರಣದಲ್ಲಿ ವಾಹನ ಸವಾರರಿಗೆ ಶೀಘ್ರವೇ ಹೊಸ ನಿಯಮ
ಬೆಂಗಳೂರು, ಸೆಪ್ಟೆಂಬರ್ 17: ಬೆಂಗಳೂರು ವಿಶ್ವವಿದ್ಯಾಲಯದ ಜ್ಞಾನ ಭಾರತಿ ಕ್ಯಾಂಪಸ್ನಲ್ಲಿ ವಾಹನಗಳ ಸಂಚಾರ ವಿದ್ಯಾರ್ಥಿಗಳಿಗೆ, ವಿಶ್ವವಿದ್ಯಾಲಯದ ಸಿಬ್ಬಂದಿಗೆ ಕಿರಿಕಿರಿ ತಂದಿದೆ. ಹಲವು ಬಾರಿ ವಿವಿ ಆವರಣದಲ್ಲಿ ರಸ್ತೆ ದಾಟಲು ಸಾಧ್ಯವಾಗದಷ್ಟು ವಾಹನಗಳ ಸಂಚಾರ ಇರುತ್ತದೆ. ವಾಹನಗಳ ಶಬ್ದ, ಹಾರನ್ಗಳಿಂದ ಕ್ಯಾಂಪಸ್ನ ವಾತಾವರಣಕ್ಕೆ ಸಹ ತೊಂದರೆಯಾಗಿದೆ. ಆದ್ದರಿಂದ ವಾಹನಗಳ ಸಂಚಾರಕ್ಕೆ ನಿಯಮ ರೂಪಿಸಬೇಕು ಎಂದು ಒತ್ತಾಯಿಸಲಾಗಿತ್ತು.
ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಸಹ ಸರ್ಕಾರಕ್ಕೆ ಈ ಕುರಿತು ಪತ್ರವನ್ನು ಬರೆದಿದ್ದರು. ಪೊಲೀಸ್ ಇಲಾಖೆ ಜ್ಞಾನ ಭಾರತಿ ಕ್ಯಾಂಪಸ್ನಲ್ಲಿ ವಾಹನಗಳ ಸಂಚಾರದ ಕುರಿತು ಅಧ್ಯಯನ ನಡೆಸಿ, ವರದಿಯೊಂದನ್ನು ತಯಾರಿಸಿದೆ. ಈ ವರದಿಯಲ್ಲಿ ಹಲವು ಶಿಫಾರಸುಗಳನ್ನು ಮಾಡಲಾಗಿದ್ದು, ಸರ್ಕಾರದ ಒಪ್ಪಿಗೆ ಸಿಕ್ಕಿದರೆ ಬೆಂಗಳೂರು ನಗರ ಸಂಚಾರಿ ಪೊಲೀಸರು ಕ್ಯಾಂಪಸ್ನಲ್ಲಿ ವಾಹನಗಳ ಸಂಚಾರಕ್ಕೆ ಹೊಸ ನಿಯಮ ರೂಪಿಸಲಿದ್ದಾರೆ.

ಕ್ಯಾಂಪಸ್ನಲ್ಲಿನ ವಾಹನಗಳ ಸಂಚಾರದಿಂದ ವಿದ್ಯಾರ್ಥಿಗಳಿಗೆ, ಸಿಬ್ಬಂದಿಗೆ ತೊಂದರೆ ಆಗುವ ಜೊತೆಗೆ ಶೈಕ್ಷಣಿಕ ಚಟುವಟಿಕೆಗಳಿಗೆ ಸಹ ಅಡಚಣೆ ಉಂಟಾಗುತ್ತಿತ್ತು. ಹತ್ತಿರವಾಗುತ್ತದೆ ಎಂಬ ಕಾರಣಕ್ಕೆ ಕ್ಯಾಂಪಸ್ ರಸ್ತೆಯಲ್ಲಿ ಸಾಗಿ ವಾಹನ ಸವಾರರು ಮುಂದಿನ ರಸ್ತೆಗೆ ಸೇರುತ್ತಿದ್ದರು. ಇವುಗಳಿಗೆ ತಡೆ ಹಾಕಲು ಪೊಲೀಸರು ಮುಂದಾಗಿದ್ದಾರೆ. ಸರ್ಕಾರದ ಅಂತಿಮ ಒಪ್ಪಿಗೆಗಾಗಿ ಕಾಯುತ್ತಿದ್ದಾರೆ.
ಉತ್ತಮ ಪರಿಸರ, ಶೈಕ್ಷಣಿಕ ಚಟುವಟಿಕೆ: ಜ್ಞಾನ ಭಾರತಿ ಕ್ಯಾಂಪಸ್ನಲ್ಲಿ ಉತ್ತಮವಾದ ಪರಿಸರವನ್ನು ಹೊಂದಿದೆ. ಆದರೆ ವಾಹನಗಳ ಸಂಚಾರದಿಂದ ಶೈಕ್ಷಣಿಕ ಚಟುವಟಿಕೆಗಳಿಗೆ ತೊಂದರೆ ಆಗುತ್ತಿದೆ. ಆದ್ದರಿಂದ ಪೊಲೀಸರು ಕಬ್ಬನ್ ಪಾರ್ಕ್ ಮಾದರಿಯಲ್ಲಿ ಜ್ಞಾನ ಭಾರತಿ ಕ್ಯಾಂಪಸ್ನಲ್ಲಿಯೂ ವಾಹನಗಳ ಸಂಚಾರಕ್ಕೆ ಹಲವು ನಿಯಮಗಳನ್ನು ಜಾರಿಗೆ ತರಲು ಮುಂದಾಗಿದ್ದಾರೆ.
ಹೊಸ ನಿಯಮಗಳ ಪ್ರಕಾರ ಶನಿವಾರ, ಭಾನುವಾರ ಮತ್ತು ಸರ್ಕಾರಿ ರಜೆ ದಿನಗಳಲ್ಲಿ ಕ್ಯಾಂಪಸ್ನಲ್ಲಿ ವಾಹನ ಸಂಚಾರಕ್ಕೆ ಯಾವುದೇ ನಿಯಮ ಇರುವುದಿಲ್ಲ. ಆದರೆ ವಾರದ ಉಳಿದ ದಿನ ಅದರಲ್ಲೂ ವಿವಿಯಲ್ಲಿ ತರಗತಿಗಳು ನಡೆಯುತ್ತಿರುವ ಸಂದರ್ಭದಲ್ಲಿ ವಾಹನ ಸಂಚಾರದಲ್ಲಿ ಕೆಲವು ಬದಲಾವಣೆ ಮಾಡಲಾಗುತ್ತದೆ.
ಬೈಕ್, ಆಟೋ, ಕಾರು, ಬಿಎಂಟಿಸಿ ಬಸ್ ಕ್ಯಾಂಪಸ್ ಒಳಗೆ ಸಂಚಾರ ನಡೆಸುತ್ತವೆ. ಆವರಣದಲ್ಲಿ ರಸ್ತೆ ದಾಟಲು ವಿದ್ಯಾರ್ಥಿಗಳು, ಸಿಬ್ಬಂದಿ ಕಷ್ಟಪಡುತ್ತಾರೆ. ರಸ್ತೆ ಅಪಘಾತಗಳು ಸಹ ನಡೆದಿವೆ. ಆದ್ದರಿಂದ ಕ್ಯಾಂಪಸ್ನ ಪ್ರಮುಖ ಸ್ಥಳ, ಹಾಸ್ಟೆಲ್ಗಳ ಹತ್ತಿರ ಎಲ್ಲಾ ಮಾದರಿ ವಾಹನಗಳಿಗೆ ತಡೆ ನೀಡಿ, ವಿದ್ಯಾರ್ಥಿಗಳು ಮತ್ತು ಸಿಬ್ಬಂದಿ ವಾಹನಕ್ಕೆ ಮುಕ್ತ ಅವಕಾಶ ನೀಡಲು ಪೊಲೀಸರು ಚಿಂತನೆ ನಡೆಸಿದ್ದಾರೆ.
ವಾರದ ದಿನಗಳಲ್ಲಿ ಕೆಲವು ಗಂಟೆಗಳ ಕಾಲ ಕ್ಯಾಂಪಸ್ ಒಳಗೆ ವಾಹನ ಸಂಚಾರಕ್ಕೆ ನಿರ್ಬಂಧ ಹೇರಲಾಗುತ್ತದೆ. ವಿವಿ ಅವಧಿ ಮುಗಿದ ಬಳಿಕ ವಾಹನ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗುತ್ತದೆ. ವಾಹನ ಸಂಚಾರಕ್ಕೆ ನಿರ್ಬಂಧ ಹೇರುವ ಕುರಿತು ಸರ್ಕಾರದ ಮಟ್ಟದಲ್ಲಿಯೂ ಚರ್ಚೆಗಳು ನಡೆಯುತ್ತಿವೆ. ಶೀಘ್ರವೇ ಈ ಕುರಿತು ಆದೇಶ ಹೊರ ಬೀಳಲಿದೆ ಎಂದು ವಿವಿಯ ಅಧಿಕಾರಿಗಳು ಹೇಳಿದ್ದಾರೆ.
ಜ್ಞಾನ ಭಾರತಿ ಕ್ಯಾಂಪಸ್ನಲ್ಲಿ ಬಿಎಂಟಿಸಿ ಬಸ್ ಡಿಕ್ಕಿ ಹೊಡೆದು ವಿದ್ಯಾರ್ಥಿನಿ ಸಾವನ್ನಪ್ಪಿದ, ಒಂದು ವಾರದಲ್ಲಿ ಮೂರು ಅಪಘಾತಗಳು ನಡೆದ ಪ್ರಕರಣಗಳು ದಾಖಲಾದ ಬಳಿಕ ವಿವಿಯ ವಿದ್ಯಾರ್ಥಿಗಳು, ಸಿಬ್ಬಂದಿಗಳ ಸುರಕ್ಷತೆ ಬಗ್ಗೆ ಪ್ರಶ್ನೆಗಳು ಎದ್ದಿದ್ದವು. ಕ್ಯಾಂಪಸ್ ಒಳಗೆ ಸಂಚಾರ ನಡೆಸುವ ವಾಹನಗಳಿಗೆ ಪರ್ಯಾಯ ರಸ್ತೆ ಕಲ್ಪಿಸಬೇಕು ಎಂದು ಒತ್ತಾಯಿಸಲಾಗಿತ್ತು.












Click it and Unblock the Notifications