ಮೋದಿ ಭಾಷಣ: ಬಸ್ಸು ಇಲ್ಲಾ, ಕರ್ಕೊಂಡು ಬಂದೋರು ಇಲ್ಲಾ!
ಬೆಂಗಳೂರು, ಏ. 3: ಶುಕ್ರವಾರ ಬೆಂಗಳೂರಲ್ಲಿ ಕೇಸರಿ ರಂಗು. ಬಿಜೆಪಿ ಕಾರ್ಯಕಾರಣಿ ನಿಮಿತ್ತ ರಾಷ್ಟ್ರದ ಎಲ್ಲ ಪ್ರಮುಖ ನಾಯಕರು, ವಿವಿಧ ರಾಜ್ಯದ ಮಂತ್ರಿಗಳು, ರಾಜ್ಯ ಬಿಜೆಪಿ ನಾಯಕರ ದಂಡೇ ಬಸವನಗುಡಿ ನ್ಯಾಶನಲ್ ಕಾಲೇಜು ಮೈದಾನದಲ್ಲಿತ್ತು.
ರಾಷ್ಟ್ರದ ಅಭಿವೃದ್ಧಿ, ಸಂಘಟನೆ, ಮುಂದೆ ದೇಶ ನಡೆಯಬೇಕಾದ ದಾರಿ, ರೈಲ್ವೆ ಬಜೆಟ್ ವಿಶೇಷ, ಖಜಾನೆ ತುಂಬಿಸುವುದು, ಖಾಲಿ ಮಾಡಿವುದು, ಪಕ್ಷ ಬೇಧ ಎಣಿಸಿದೇ ಎಲ್ಲ ರಾಜ್ಯಗಳಿಗೆ ಅನುದಾನ ನೀಡುವ ಬಗ್ಗೆ ಮೋದಿ ಸುಮಾರು ಮುಕ್ಕಾಲು ಗಂಟೆ ಕಾಲ ಮಾತನಾಡಿದರು. ಸುಮಾರು 15 ಸಾವಿರಕ್ಕೂ ಅಧಿಕ ಜನ ಮೈದಾನದಲ್ಲಿ ತುಂಬಿದ್ದರು. ಎಲ್ಲರೂ ಮೋದಿ ಭಾಷಣದ ಹೈಲೈಟ್ಸ್ ಬಗ್ಗೇನೆ ಬರೆಯುತ್ತಾರೆ. ಆದರೆ ಒಂದು ಬೃಹತ್ ಸಮಾವೇಶ ನೀಡುವ ಸೈಡ್ ಎಫೆಕ್ಟ್ ಮತ್ತು ಇತರ ಸಂಗತಿಗಳ ಬಗ್ಗೆಯೂ ಗಮನ ಹರಿಸುವ ಯತ್ನ ನಮ್ಮದು.

ಬಸ್ಸು ಇಲ್ಲಾ, ಕರ್ಕೊಂಡು ಬಂದೋರು ಇಲ್ಲಾ
ಎಚ್ ಎಎಲ್ ಸಮೀಪದ ಸುಧಾಮ ನಗರದಿಂದ ಸಮಾವೇಶಕ್ಕೆ ಆಗಮಿಸಿದ ಮಹಿಳೆಯರ ದಂಡು ಚಾಮರಾಜಪೇಟೆ ಸಮೀಪ ಪುಟ್ ಪಾತ್ ಮೇಲೆ ಕುಳಿತಿತ್ತು. ಏನಮ್ಮಾ ಸಮಾವೇಶಕ್ಕೆ ಬಂದಿದ್ರಾ, ಭಾಷಣ ಕೇಳಿದ್ರಾ ಅಂದ್ರೆ ಹೂಂ ಅಂದ್ರು. ಮೋದಿ ಏನಂದ್ರು ಅಂದರೆ 'ಅದು ಮಾಡ್ತಾರಂತೆ ಎಂದು ರಾಗ ಎಳೆದರು. ಇಲ್ಲೇಕೆ ಕುಳಿತಿದ್ದೀರಿ ಅಂದ್ರೆ 'ಸ್ವಾಮಿ ಬರಬೇಕಿದ್ದರೆ ಬಸ್ ಮಾಡಿ ಕರೆದಿಕೊಂಡು ಬಂದ್ರು, ಈಗ ಬಸ್ಸೂ ಇಲ್ಲಾ, ಕರೆದುಕೊಂಡು ಬಂದೋರು ಇಲ್ಲಾ! ಎಂಬ ಉತ್ತರ ಬಂತು.

ಇದೆಂಥ ಭದ್ರತೆ?
ಸಮಾವೇಶಕ್ಕೆ ತೆರಳುವಾಗ ಪ್ರತಿ ಗೇಟ್ ನಲ್ಲೂ ಜನರನ್ನು ತಡೆದು, ಮೆಟಲ್ ಡಿಟೆಕ್ಟರ್ ಮೂಲಕ ತಪಾಸಣೆ ನಡೆಸಿ ಒಳಬಿಡಲಾಯಿತು. ಕೆಲವು ಕಡೆ ಪತ್ರಕರ್ತರಿಗೂ ಪ್ರವೇಶ ನಿರಾಕರಣೆ ಮಾಡಲಾಯಿತು. ಮೋದಿ ಭಾಷಣ ಸುಮಾರು ಮುಕ್ಕಾಲು ಹಂತ ತಲುಪಿರಬಹುದು. ಎಲ್ಲ ನಾಯಕರು ವೇದಿಕೆಯಲ್ಲೇ ಇದ್ದಾರೆ. ಹೊರಗೆ ಬಂದು ನೋಡಿದರೆ ಯಾವ ಡಿಟೆಕ್ಟರ್ ಇಲ್ಲ. ಯಾರಿಗೆ ಬೇಕಾದರೂ ಫ್ರೀ ಪ್ರವೇಶ!

ಟ್ರಾಫಿಕ್ ಜಾಮ್
ಇದರ ಕತೆ ಹೇಳಲೇ ಬೇಕಿಲ್ಲ ಬಿಡಿ. ವಿವಿಐಪಿಗಳ ಸಹವಾಸದಿಂದ ಮನೆಗೆ ತೆರಳಬೇಕಿದ್ದ ಬೆಂಗಳೂರು ನಾಗರೀಕರು ಪರಿತಪಿಸಬೇಕಾಯಿತು. ಮಿನರ್ವ ಸರ್ಕಲ್ ಬಳಿ ಸಿಕ್ಕಾಕೊಂಡೋರು ರಾಜಕಾರಣಿಗಳಿಗೆ ಹಿಡಿಶಾಪ ಹಾಕುತ್ತ ಹಾರ್ನ್ ಒತ್ತುತ್ತಿದ್ದರು.

ಭರ್ಜರಿ ವ್ಯಾಪಾರ
ಬಸವನಗುಡಿ ಮೈದಾನದ ಸುತ್ತ ಕಡ್ಲೆಪುರಿ, ಶೇಂಗಾ, ಮಿನರಲ್ ವಾಟರ್ ಅಂಗಡಿ ಇಟ್ಟುಕೊಂಡವರಿಗೆ ಭರ್ಜರಿ ವ್ಯಾಪಾರ. ಬೆಳಗ್ಗೆಯಿಂದ ಡ್ಯೂಟಿ ಮಾಡಿ ಸುಸ್ತಾಗಿದ್ದ ಪೊಲೀಸರು ಕಡ್ಲೆಪುರಿ ತಿಂದು ದಣಿವಾರಿಸಿಕೊಳ್ಳುತ್ತಿದ್ದರು.

ಪೊಲೀಸರ ಬದಲಾದ ವರಸೆ
ಮೊದಲು ಬೈಕ್ ಹೆಲ್ಮೆಟ್ ನ್ನು ಒಳಕ್ಕೆ ಬಿಡಲ್ಲ ಎಂದು ತಡೆದ ಪೊಲೀಸರು ನಂತರ ಎಲ್ಲಿ ಮಾಯವಾಗಿದ್ದರೋ, ಸಮಾವೇಶ ಆರಂಭವಾದ ಮೇಲೆ ವಿವಿಐಪಿ ವಿಭಾಗದಲ್ಲೇ ಕೆಲವರು ಹೆಲ್ಮೆಟ್, ಚೀಲ ಹಿಡಿದು ಓಡಾಡುತ್ತಿದ್ದದು ಕಂಡು ಬಂತು.

ಹರಿದು ಬಂದ ಜನಸಾಗರ
ಸಮಾವೇಶಕ್ಕೆ ಸುಮಾರು 15 ಸಾವಿರ ಜನ ಸೇರಿದ್ದರು. ಮೋದಿ ವೇದಿಕೆಗೆ ಆಗಮಿಸಿದ ವೇಳೆ ಎಲ್ಲೆಡೆ ಮೋದಿ..ಮೋದಿ ಎಂಬ ಕೂಗು ಬಿಟ್ಟರೆ ಮತ್ತಿನ್ನೇನು ಕೇಳಿಸಲಿಲ್ಲ. ಸ್ವತಃ ಎಲ್ಲರೂ ಎದ್ದು ನಿಂತು ಪ್ರಧಾನಿಯನ್ನು ಬರಮಾಡಿಕೊಂಡರು.

ಮುರಿದುಬಿದ್ದ ಗೇಟ್
ಸಮಾವೇಶ ಆರಂಭಕ್ಕೂ ಮುನ್ನ ವಿಐಪಿ ಮತ್ತು ಮಾಧ್ಯಮದವರಿಗೆ ಮೀಸಲಾಗಿದ್ದ ಗೇಟ್ ನ್ನು ಬಂದ್ ಮಾಡಲಾಗಿತ್ತು. ಒಳಗೆ ಸ್ಥಳಾವಕಾಶವಿದ್ದರೂ ಗೇಟ್ ಮುಚ್ಚಲಾಗಿತ್ತು. ಈ ಬಗ್ಗೆ ಪೊಲೀಸರು ತಮಗೇನು ಗೊತ್ತಿಲ್ಲ ಎಂಬ ಉತ್ತರ ನೀಡುತ್ತಿದ್ದರು ಮತ್ತೂ ಹೆಚ್ಚಿಗೆ ಕೇಳಿದರೆ ಅವರನ್ನು ಕೇಳಿ, ಇವರನ್ನು ಕೇಳಿ ಎಂದು ಹಾರಿಕೆ ಉತ್ತರ ನೀಡುತ್ತಿದ್ದರು. ತಡೆಯುವವರೆಗೆ ತಡೆದ ಜನ ಗೇಟ್ ಮುರಿದುಕೊಂಡೆ ಒಳ ನುಗ್ಗಿದರು.

ಪಾರ್ಕಿಂಗ್ ನಲ್ಲಿ ಇಟ್ಟ ಗಾಡಿಯೂ ಹೊಯ್ತು!
ಸಮಾವೇಶದ ಸುತ್ತಮುತ್ತಲ ಜಾಗದಲ್ಲಿ ವಾಹನವಿಟ್ಟವರ ಪಡಿಪಾಟಿಲು ಹೇಳತೀರದು. ಅತ್ತ ಭಾಷಣ ಕೇಳಿ ಇತ್ತ ಆಗಮಿಸಿದರೆ ವಾಹನ ನಾಪತ್ತೆ. ಅಂತೂ ಪತ್ತೆ ಮಾಡಿದರೆ ಎಲ್ಲ ವಾಹನಗಳನ್ನು ಶಂಕರಮಠದ ಸಮೀಪದ ಮೈದಾನಕ್ಕೆ ಶಿಫ್ಟ್ ಮಾಡಲಾಗಿತ್ತು.

ಕಳಚಿದ ಬಾವುಟ
ಸಮಾವೇಶದ ಹಿನ್ನೆಲೆಯಲ್ಲಿ ಕಳೆದ ಎರಡು ದಿನಗಳಿಂದ ನಗರದ ತುಂಬ ಕೇಸರಿ ರಂಗು ಆವರಿಸಿತ್ತು. ಅತ್ತ ಪ್ರಧಾನಿ ಭಾಷಣ ಅಂತ್ಯವಾಗುವುದರೊಳಗೆ ಬಿಜೆಪಿ ಬಾವುಟಗಳು ನೆಲ ಸೇರಿದ್ದವು.

ವರುಣ ಸಿಂಚನ
ಮೋದಿ ಭಾಷಣಕ್ಕೂ ಮುನ್ನ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಮಾತನಾಡುತ್ತಿದ್ದ ವೇಳೆ ವರುಣ ಸಿಂಚನವಾಯಿತು. ಆದರೆ ನಂತರ ಮೋಡ ಚದುರಿ ಮಳೆ ಭೀತಿ ಮಾಯವಾಯಿತು.












Click it and Unblock the Notifications