ಕೇಸು ಹಾಕುವುದಾದರೆ ನಾನೇ ಹಣ ಕೊಡ್ತೀನಿ:ಹಾಲಿ ಸಿಎಂಗೆ ಮಾಜಿ ಸಿಎಂ ಸಲಹೆ
ಬೆಂಗಳೂರು, ನವೆಂಬರ್ 29: ಸಿದ್ದರಾಮಯ್ಯ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುತ್ತೇನೆ ಎಂದ ಯಡಿಯೂರಪ್ಪ ಹೇಳಿಕೆಯನ್ನು ಸಿದ್ದರಾಮಯ್ಯ ಸವಾಲಿನ ಮೂಲಕ ಸ್ವಾಗತಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಸಿದ್ದರಾಮಯ್ಯ, 'ನನ್ನ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವ ಯಡಿಯೂರಪ್ಪ ನಿರ್ಧಾರವನ್ನು ಸ್ವಾಗತಿಸುತ್ತೇನೆ, ದಾವೆಯ ಖರ್ಚನ್ನು ನಾನೇ ಕೊಡುತ್ತೇನೆ' ಎಂದು ಹೇಳಿದ್ದಾರೆ.
'ಆದರೆ.. ನಿಮ್ಮ ಹಿತಶತ್ರುಗಳ ಬಗ್ಗೆ ಎಚ್ಚರಿಕೆಯಿಂದಿರಿ. ನಿಮ್ಮ ಬಣ್ಣ ಬಯಲು ಮಾಡಲೆಂದೇ ಅವರು ನಿಮಗೆ ಈ ಐಡಿಯಾ ಕೊಟ್ಟಿರಬೇಕು' ಎಂದು ವ್ಯಂಗ್ಯಪೂರ್ವಕ ಎಚ್ಚರಿಕೆಯನ್ನೂ ಕೊಟ್ಟಿದ್ದಾರೆ.
ಯಡಿಯೂರಪ್ಪ ಅವರು ಹಣ ಕೊಟ್ಟು ಅನರ್ಹ ಶಾಸಕರನ್ನು ಖರೀದಿಸಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿದ್ದರು. ಇದರಿಂದ ಸಿಟ್ಟಾಗಿದ್ದ ಯಡಿಯೂರಪ್ಪ, ಅಗತ್ಯ ದಾಖಲೆಗಳನ್ನು ಸಂಗ್ರಹಿಸಿ ಸಿದ್ದರಾಮಯ್ಯ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಹೇಳಿದ್ದರು.
ಉಪಚುನಾವಣೆ ಪ್ರಚಾರ ವೇಳೆ ಯಡಿಯೂರಪ್ಪ ಮತ್ತು ಸಿದ್ದರಾಮಯ್ಯ ಪರಸ್ಪರ ವಾಗ್ದಾಳಿಯಲ್ಲಿ ನಿರತರಾಗಿದ್ದಾರೆ. ಅನರ್ಹರು ಹಣದ ಆಸೆಗೆ ಬಿಜೆಪಿಯನ್ನು ಸೇರಿದ್ದಾರೆ. ಯಡಿಯೂರಪ್ಪ ಹಣ ನೀಡಿ ಅವರನ್ನು ಕೊಂಡುಕೊಂಡಿದ್ದಾರೆ ಎಂದು ಸಿದ್ದರಾಮಯ್ಯ ಹೋದಲ್ಲೆಲ್ಲಾ ವಾಗ್ದಾಳಿ ನಡೆಸುತ್ತಿದ್ದಾರೆ.