ಪ್ರಮಾಣಕ್ಕೆ ಚಕ್ಕರ್; ಬೆಂಗಳೂರಿನಲ್ಲಿ ಸಿದ್ದು ಫುಲ್ ಬ್ಯುಸಿ
ಬೆಂಗಳೂರು, ಮೇ 26: ಅತ್ತ ರಾಜಧಾನಿ ದಿಲ್ಲಿಯಲ್ಲಿ ಬಿಜೆಪಿಯ ನರೇಂದ್ರ ಮೋದಿ ಅವರು ಇಂದು ಭಾರತದ ನೂತನ ಪ್ರಧಾನಿಯಾಗಿ ಪ್ರಮಾಣ ಸ್ವೀಕರಿಸುತ್ತಿದ್ದು, ಇತ್ತ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ನಾಡಿನ ದೊರೆ ಸಿದ್ದರಾಮಯ್ಯ ಅವರು ಸರಣಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಫುಲ್ ಬ್ಯುಸಿಯಾಗಿದ್ದಾರೆ.
ಅರ್ಥಾತ್, ಕರ್ನಾಟಕದ ಸಿಎಂ ಸಿದ್ದು ಮೋದಿ ಪದಗ್ರಹಣ ಸಮಾರಂಭದಲ್ಲಿ ಗೈರುಹಾಜರಾಗಲಿದ್ದಾರೆ. ಅವರೊಬ್ಬರೇ ಅಲ್ಲ ಒಟ್ಟು 5 ರಾಜ್ಯಗಳ ಮುಖ್ಯಮಂತ್ರಿಗಳು ಹಾಗೂ ನಟ ರಜನಿಕಾಂತ್ ಅವರುಗಳು ನಾನಾ ಕಾರಣಗಳನ್ನು ನೀಡಿ ಪ್ರಮಾಣ ವಚನ ಸಮಾರಂಭಕ್ಕೆ ಚಕ್ಕರ್ ಹಾಕಿದ್ದಾರೆ.
ಯಶವಂತಪುರ-ಮೇಖ್ರಿವೃತ್ತದ ನಡುವಿನ ಪ್ರೊ. ಸಿಎನ್ಆರ್ ರಾವ್ ಜಂಕ್ಷನ್ ನಲ್ಲಿ ಬಿಬಿಎಂಪಿ ನಿರ್ಮಿಸುತ್ತಿರುವ ಅಂಡರ್ ಪಾಸ್ ಕಾಮಗಾರಿ ಕೊನೆಗೂ ಮುಗಿದಿದ್ದು, ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉದ್ಘಾಟಿಸಿದ್ದಾರೆ. (ಯಡಿಯೂರಪ್ಪ ನಿಜವಾದ ಲೀಡರ್)

ಮಲ್ಲೇಶ್ವರ-ಯಶವಂತಪುರ ಹಾಗೂ ಶಿವಾಜಿನಗರ-ಯಶವಂತಪುರ ನಡುವೆ ಸುಗಮ ಸಂಚಾರಕ್ಕಾಗಿ ಪ್ರೊ. ಸಿಎನ್ಆರ್ ರಾವ್ ವೃತ್ತದಲ್ಲಿ 2010ರಲ್ಲಿ ಆರಂಭವಾದ 30 ಕೋಟಿ ರೂ ವೆಚ್ಚದ ಅಂಡರ್ ಪಾಸ್ ಕಾಮಗಾರಿ 2011ರ ಡಿಸೆಂಬರಿಗೆ ಮುಗಿಯಬೇಕಿತ್ತು. ಆದರೆ ಕುಟಂಟುತ್ತಾ ಸಾಗಿದ ಕಾಮಗಾರಿ ಕೊನೆಗೂ ಈಗ ಮುಗಿದಿದೆ. ಆದರೂ ಪಾದಚಾರಿ ಮಾರ್ಗ, ವಿದ್ಯುದ್ದೀಪ ಅಳವಡಿಕೆ ಮುಂತಾದ ಕಾರ್ಯಗಳು ಮೂರ್ಣಗೊಂಡಿಲ್ಲ.
ಇನ್ನು, ಅಂಡರ್ ಪಾಸ್ ನಂತರ ಕನ್ನಿಂಗ್ ಹ್ಯಾಂ ರಸ್ತೆಗೆ ತೆರಳಿ ಅಲ್ಲಿನ ಅಂತಾರಾಷ್ಟ್ರೀಯ ಮಟ್ಟದಲ್ಲಿ ಅಭಿವೃದ್ಧಿ ಪಡಿಸಲಾಗುತ್ತಿರುವ ಟೆಂಡರ್ ಶ್ಯೂರ್ ರಸ್ತೆ ಕಾಮಗಾರಿ ಪರಿಶೀಲಿಸುವರು. ನಂತರ ವಿಠಲ್ ಮಲ್ಯ ಆಸ್ಪತ್ರೆ ಬಳಿ ನಡೆಯುತ್ತಿರುವ ಕಾಮಗಾರಿ ಪರಶೀಲಿಸುವರು.
ಅದಾದ ನಂತ ಸಮೀಪದಲ್ಲೇ ಇರುವ ರವೀಂದ್ರ ಕಲಾಕ್ಷೇತ್ರಕ್ಕೆ ತೆರಳಿ ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ.
ಮುಂದಿನ ವಾರ ಸಾಧ್ಯವಾದರೆ ಪ್ರಧಾನಿ ಮೋದಿ ಜತೆ ಭೇಟಿ: ರಾಜ್ಯಸಭೆ ಹಾಗೂ ವಿಧಾನ ಪರಿಷತ್ ಚುನಾವಣೆ ಅಭ್ಯರ್ಥಿಗಳ ಹೆಸರು ಅಂತಿಮಗೊಳಿಸಲು ಸಿಎಂ ಸಿದ್ದರಾಮಯ್ಯ ಅವರು ಕೆಪಿಸಿಸಿ ಅಧ್ಯಕ್ಷರ ಜತೆಗೂಡಿ ಮೇ 29ರಂದು ದಿಲ್ಲಿಗೆ ತೆರಳಿ, ಹೈಕಮಾಂಡ್ ಅನ್ನು ಭೇಟಿ ಮಾಡುವ ಸಾಧ್ಯತೆ ಇದೆ. ಆ ಸಂದರ್ಭದಲ್ಲಿ ಸಾಧ್ಯವಾದರೆ ಪ್ರಧಾನಿ ಮೋದಿ ಅವರನ್ನು ಸಿಎಂ ಸಿದ್ದರಾಮಯ್ಯ ಅವರು ಭೇಟಿಯಾಗುವ ಅಂದಾಜಿದೆ.












Click it and Unblock the Notifications