ತಪ್ಪು ಯಾರೇ ಮಾಡಿದ್ರೂ ಶಿಕ್ಷೆ ಅನುಭವಿಸಲೇಬೇಕು: ದರ್ಶನ್ ನೆನೆದು ಕಣ್ಣೀರಿಟ್ಟ ಗಿರಿಜಾ ಲೋಕೇಶ್
ಬೆಂಗಳೂರು, ಜುಲೈ 25: ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಜೈಲು ಸೇರಿದ್ದು ಸದ್ಯ ನ್ಯಾಯಾಂಗ ಬಂಧನದಲ್ಲಿರಿಸಲಾಗಿದೆ. ದರ್ಶನ್ ಪ್ರಕರಣದ ಬಗ್ಗೆ ಮೊದಲ ಬಾರಿಗೆ ಕನ್ನಡ ಚಿತ್ರರಂಗದ ಹಿರಿಯ ನಟಿ ಗಿರಿಜಾ ಲೋಕೇಶ್ ಪ್ರತಿಕ್ರಿಯೆ ನೀಡಿದ್ದು, ದರ್ಶನ್ ನೆನೆದು ಕಣ್ಣೀರಿಟ್ಟಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಗಿರಿಜಾ ಲೋಕೇಶ್, ನಾನೇನು ಹೇಳಲಿ. ದರ್ಶನ್ ಈಗ ಕಷ್ಟಪಡುತ್ತಿರುವುದು ನೋಡಿದರೆ ತುಂಬಾನೇ ನೋವಾಗುತ್ತದೆ. ತುಂಬಾನೇ ಸಂಕಟವಾಗುತ್ತದೆ. ಆದಷ್ಟು ಬೇಗ ಇದರಿಂದ ಹೊರಬರಲಿ ಎಂದು ಆಶಿಸುತ್ತೇನೆ. ದೇವರಲ್ಲಿ ಬೇಡಿಕೊಳ್ಳುತ್ತೇನೆ. ಅಷ್ಟೇ ಹೇಳುತ್ತೇನೆ ಎಂದರು.

ಈ ಪ್ರಕರಣ ಕಾನೂನಿನ ಚೌಕಟ್ಟಿನಲ್ಲಿರುವಾಗ ನಾವೇನು ಮಾತನಾಡಬಾರದು. ಆದರೆ ಯಾರು ತಪ್ಪು ಮಾಡಿದ್ದಾರೋ ಏನು ಕಥೆನೋ ಎನ್ನುವುದು ಯಾರಿಗೂ ಗೊತ್ತಿಲ್ಲ. ಪೊಲೀಸರು ಮತ್ತು ನ್ಯಾಯಾಲಯ ಏನು ತೀರ್ಪು ಕೊಡುತ್ತೋ ಅದನ್ನು ಶಿರಾಸವಹಿಸಿ ನಾವು ಪಾಲಿಸಬೇಕು ಅಂತಾ ನನಗೆ ಅನಿಸುತ್ತದೆ ಎಂದು ಗಿರಿಜಾ ಲೋಕೇಶ್ ಹೇಳಿದರು.
ಈ ಎಲ್ಲಾ ಮಧ್ಯ ಅವನು ಆಚೆ ಬರಲಿ ಎನ್ನುವ ಆಶಯ ಇದ್ದೇ ಇದೆ. ಎಲ್ಲರ ಪ್ರಾರ್ಥನೆ ಕೂಡ ಅದೇ. ತಪ್ಪು ಮಾಡಿ ಹೊರಗೆ ಬರಲಿ ಅಂತಾ ಹೇಳಲ್ಲ. ಆ ತಪ್ಪು ಮಾಡಿದ್ದಾರೋ, ಇಲ್ಲವೋ, ನಿಜವೋ, ಸುಳ್ಳೋ ಯಾರಿಗೂ ಗೊತ್ತಿಲ್ಲ. ಮಾಧ್ಯಮಗಳಲ್ಲಿ ಬಂದಿದ್ದನ್ನೇ ನಾವು ನೋಡಿದ್ದೇವೆ.
ನಾನು ನೋಡಿದಾಗಿಂದನೂ ಆ ಮಗು ಹಾಗಿಲ್ಲ. 14 ವರ್ಷದಿಂದ ನಾನು ದರ್ಶನ್ ನೋಡಿದ್ದೇನೆ. ತುಂಬಾ ಮುಗ್ಧ ಹುಡುಗ ಎಂದು ಮಾತನಾಡುತ್ತಲೇ ಗಿರಿಜಾ ಲೋಕೇಶ್ ಕಣ್ಣೀರಿಟ್ಟಿದ್ದಾರೆ. ಇದೆಲ್ಲಾ ಹೇಗಾಯ್ತು. ಇದೆಲ್ಲಾ ಕನಸಾಗಿರಬಾರದಾ, ಇಂತಹ ಕನಸಿನಿಂದ ನಾವು ಹೊರಗೆ ಬರಬಾರದಾ ಅಂತಾ ಅನಿಸುತ್ತದೆ. ಯಾವುದೇ ವ್ಯಕ್ತಿ ತಪ್ಪು ಮಾಡಿದ್ರೂ ಶಿಕ್ಷೆ ಅನುಭವಿಸಲೇಬೇಕು. ಅದು ನಾನು ಆಗಿದ್ರೂ ಕೂಡ ಎಂದು ಕಣ್ಣೀರು ಹಾಕಿದ್ದಾರೆ.
ನಾನು ಒಂದು ಹೇಳಿಕೊಳ್ಳಬಹುದು ಎಂದಾದರೆ ಆ ಹುಡುಗನ ಸ್ವಭಾವ. ತಂದೆ ಸತ್ತಾಗಲೂ, ಅಕ್ಕನ ಮದುವೆ ಮಾಡಿದಾಗಲೂ ಅದನೆಲ್ಲಾ ಹೇಗೆ ಮಾಡಿದ, ಹೇಗೆ ಎದುರಿಸದ ಅನಿಸುತ್ತದೆ. ಅವನು ಫೀಲ್ಡ್ಗೆ ಬಂದಾಗ ಅವನಿಗೆ ಹೇಗೆ ಮಾರ್ಯಾದೆ ಸಿಕ್ಕಿತ್ತು. ಅದನೆಲ್ಲಾ ಕಂಡಿದ್ದೇವೆ, ಕೇಳಿದ್ದೇವೆ. ಅದನೆಲ್ಲಾ ಮೆಟ್ಟಿ ನಿಂತು ಬೆಟ್ಟದಂತೆ ಬೆಳೆದು ಬಿಟ್ಟ. ಅಂತವನಿಗೆ ದಿಢೀರ್ ಆಗಿ ಹೀಗಾಯ್ತು ಅಂದರೆ ಆಘಾತಕಾರಿ. ಆದಷ್ಟು ಬೇಗ ಇದರಿಂದ ಮುಕ್ತರಾಗಿ ದರ್ಶನ್ ಹೊರಬರಲಿ ಎಂದು ಗಿರಿಜಾ ಲೋಕೇಶ್ ಭಾವುಕರಾಗಿದ್ದಾರೆ.












Click it and Unblock the Notifications