ನೋಟುಗಳ ಬ್ಯಾನ್ : ಗಾಲಿ ರೆಡ್ಡಿ ಮಗಳ ಮದುವೆ ವೈಭೋಗದ ಕಥೆಯೇನು?
ಬೆಂಗಳೂರು, ನವೆಂಬರ್ 11: ಮಾಜಿ ಸಚಿವ ಜನಾರ್ದನ ರೆಡ್ಡಿ ಅವರ ಮಗಳು ಬ್ರಹ್ಮಿಣಿ ಮದುವೆಗೆ ಅರಮನೆ ಮೈದಾನ ಸಜ್ಜಾಗುತ್ತಿದೆ. ಬಳ್ಳಾರಿಯಲ್ಲಿ ಕಲ್ಯಾಣ ಮಹೋತ್ಸವದ ಕಾರ್ಯಕ್ರಮಗಳು ಈಗಾಗಲೆ ಆರಂಭಗೊಂಡಿದೆ.
ಈ ನಡುವೆ ಬೆಂಗಳೂರಿನ ವೈಭೋಗ, ಆಡಂಬರದ ಮದುವೆಗೆ ದೊಡ್ಡ ಮೌಲ್ಯದ ನೋಟುಗಳ ನಿಷೇಧ ಅಡ್ಡಿಯಾಗುತ್ತಿಲ್ಲವೇ ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಪ್ರಧಾನಿ ಮೋದಿ ಅವರ ಮಹತ್ವದ ಆದೇಶ ಗಾಲಿ ರೆಡ್ಡಿ ಮನೆ ಮದುವೆಯ ಸಂಭ್ರಮವನ್ನು ತಗ್ಗಿಸಿಲ್ಲ.[ಗಾಲಿ ಜನಾರ್ದನ ರೆಡ್ಡಿ ಪುತ್ರಿ ಬ್ರಹ್ಮಣಿ ವಿವಾಹಕ್ಕೆ ಬನ್ನಿ, ಬನ್ನಿ!]
ಬ್ರಹ್ಮಿಣಿ ಮದುವೆಯ ಆಹ್ವಾನ ಪತ್ರಿಕೆಯನ್ನು ವಿಡಿಯೋ ಜತೆಗೆ ಎಲ್ಲರಿಗೂ ತಲುಪಿಸಿದ ಕಾಲಕ್ಕೆ ಗಾಲಿ ರೆಡ್ಡಿಗೆ ಈ ಆದೇಶದ ಮುನ್ಸೂಚನೆ ಸಿಕ್ಕಿತ್ತು. ಬಿಜೆಪಿ ಹೈಕಮಾಂಡ್ ಕಡೆಯಿಂದ ಬಿಜೆಪಿಯ ಹಿರಿಯ ನಾಯಕರೆಲ್ಲರಿಗೂ ಇಂಥದ್ದೊಂದು ಆದೇಶದ ಬಗ್ಗೆ ಸೂಚನೆ ನೀಡಲಾಗಿತ್ತು ಎಂದು ರಹಸ್ಯ ಮಾಹಿತಿ ತಿಳಿದು ಬಂದಿದೆ. ಆದರೆ, ಈ ಬಗ್ಗೆ ಎಲ್ಲೂ ಅಧಿಕೃತ ಮಾಹಿತಿ ಇಲ್ಲ.
ಒಂದು ಕಾರ್ಡ್ ಮದುವೆ ಕರೆಯೋಲೆಗೆ ಸುಮಾರು 6 ಸಾವಿರ ಖರ್ಚು ಮಾಡಿದ್ದ ಗಾಲಿ ರೆಡ್ಡಿ ಅವರು ಮದುವೆಗಾಗಿ ಸುಮಾರು 200 ರಿಂದ 300 ಕೋಟಿ ರು ಮೀಸಲಿಟ್ಟಿದ್ದಾರೆ ಎಂಬ ಸುದ್ದಿಯಿದೆ.

ವಿಜಯನಗರ ಮರು ನಿರ್ಮಾಣ
ವಿಜಯನಗರ ಮರು ನಿರ್ಮಾಣ: ಈ ಹಿಂದೆ ಕೃಷ್ಣದೇವರಾಯ ಜಯಂತಿ ಸಂದರ್ಭದಲ್ಲಿ ತಮ್ಮನ್ನು ತಾವು ಅಭಿನವ ಶ್ರೀಕೃಷ್ಣದೇವರಾಯ ಎಂದು ಕರೆದುಕೊಂಡಿದ್ದ ಗಾಲಿ ಜನಾರ್ದನ ರೆಡ್ಡಿ ಈಗ ತಮ್ಮ ಮಗಳ ಮದುವೆಗೆ ಹಂಪಿಯ ಐತಿಹಾಸಿಕ ವಿಜಯ ವಿಠಲನ ನಕಲಿ ಮಂಟಪವೇ ನಾಚುವಂತೆ ವಿಜಯನಗರ ಸಾಮ್ರಾಜ್ಯದ ಪ್ರಮುಖ ಕಟ್ಟಡಗಳನ್ನು ಅರಮನೆ ಮೈದಾನದಲ್ಲಿ ಮರುಸೃಷ್ಟಿಸಿದ್ದಾರೆ.

ಅರಮನೆ ವೈಭೋಗದ ಜತೆಗೆ ಹಳ್ಳಿ ನಿರ್ಮಾಣ
ಅರಮನೆ ವೈಭೋಗದ ಜತೆಗೆ ಹಳ್ಳಿ ನಿರ್ಮಾಣ ಮಾಡಲಾಗಿದ್ದು, ವರ ರಾಜೀವ್ ರೆಡ್ಡಿ ಹಾಗೂ ಕುಟುಂಬಕ್ಕೆ. ಮತ್ತೊಂದು ವಧು ಹಾಗೂ ಕುಟುಂಬದ ಸದಸ್ಯರ ವಿಶ್ರಾಂತಿಗಾಗಿ ಮೀಸಲಾಗಿದೆ. ಒಂದೊಂದು ಮನೆಗೆ ಸುಮಾರು 60 ಲಕ್ಷ ಖರ್ಚು ಮಾಡಲಾಗಿದೆಯಂತೆ! ಇಡೀ ಮದುವೆ ಮನೆ ತಲುಪುವ ಹಾದಿಯುದ್ದಕ್ಕೂ ಪಕ್ಕಾ ಹಳ್ಳಿ ಸೊಗಡಿನ ಟಚ್ ಸಿಕ್ಕಿದೆಯಂತೆ.

ಕಲಾ ವಿನ್ಯಾಸ ಜವಾಬ್ದಾರಿ
ಕಲಾ ವಿನ್ಯಾಸ ಜವಾಬ್ದಾರಿ ಕರ್ನಾಟಕ ಹೆಸರಾಂತ ಕಲಾವಿದ ಶಶಿಧರ್ ಅಡಪ ಹಾಗೂ ಅವರ ತಂಡ ವಹಿಸಿಕೊಂಡಿದೆ. ಶಶಿಧರ ಅಡಪ ಅಲ್ಲದೆ ಬಾಲಿವುಡ್ ನ ಶ್ರೀರಾಮ್ ಅಯ್ಯಂಗಾರ್, ಸುರ್ಜಿತ್ ಸಾವಂತ್ ಅವರು ಹಂಪಿಯ ಗತ ವೈಭವ ಸೆಟ್ ನಿರ್ಮಿಸಿದ್ದಾರೆ.

ಬಳ್ಳಾರಿಯಲ್ಲಿ ಬರ, ಬೆಂಗಳೂರಲ್ಲಿ ಆಡಂಬರ
ಸುಮಾರು ವರ್ಷಗಳ ನಂತರ ಬಳ್ಳಾರಿಗೆ ವಾಪಸ್ ಬಂದ ಜನಾರ್ದನ ರೆಡ್ಡಿ ಅವರಿಗೆ ಬಳ್ಳಾರಿಯಲ್ಲಿ ಭರ್ಜರಿ ಸ್ವಾಗತ ಸಿಕ್ಕಿದ್ದು ತಿಳಿದಿರಬಹುದು. ನಂತರ 50-60 ಕೋಟಿ ರು ವೆಚ್ಚದಲ್ಲಿ ಹಾವಂಭಾವಿಯಲ್ಲಿ ಶ್ರೀರಾಮುಲು ಅವರು ನಿರ್ಮಿಸಿರುವ ಮನೆಯ ಗೃಹಪ್ರವೇಶ ಮುಗಿಸಿಕೊಂಡು ಮದುವೆ ಕಾರ್ಯದಲ್ಲಿ ಗಾಲಿ ರೆಡ್ಡಿ ನಿರತರಾಗಿದ್ದಾರೆ. ಬಳ್ಳಾರಿಯ ಏಳು ತಾಲೂಕುಗಳಲ್ಲಿ ಭೀಕರ ಬರ ಪರಿಸ್ಥಿತಿ ಇದೆ, ಬಳ್ಳಾರಿ ನಗರದ ಬಜೆಟ್ 200 ಕೋಟಿ ರು ಒಳಗಿದೆ. ರೆಡ್ಡಿ ಮಗಳ ಮದುವೆ ಬಜೆಟ್ ಮೀರಿ ಸಾಗಿದೆ.

ಭಾರಿ ಭದ್ರತೆ ನಡುವೆ ಮದುವೆ ಸಮಾರಂಭ
* ಸುಮಾರು 30 ಸೆಕ್ಯುರಿಟಿ ಗಾರ್ಡ್ ಗಳ ನಡುವೆ ಎರಡು ಎಂಟ್ರಿ ಹಾಗೂ ಮೂರು ಎಕ್ಸಿಟ್ ದ್ವಾರಗಳ ಮೂಲಕ ಮದುವೆ ಮನೆಗೆ ಪ್ರವೇಶ ಸಿಗಲಿದೆ. ಆಹ್ವಾನ ಪತ್ರಿಕೆ ಇದ್ದರೆ ಮಾತ್ರ ಪ್ರವೇಶ.
* ಶಾರುಖ್ ಖಾನ್, ಕತ್ರೀನಾ ಕೈಫ್, ಪ್ರಭುದೇವ ಹಾಗೂ ತಮನ್ನಾ ಮುಖ್ಯ ಅತಿಥಿಗಳಾಗಿದ್ದಾರೆ.
* ಬಿಜೆಪಿಯಿಂದ ಬಿಎಸ್ ಯಡಿಯೂರಪ್ಪ ಸೇರಿದಂತೆ ಅನೇಕ ಗಣ್ಯರು ಮದುವೆಗೆ ಆಗಮಿಸುವ ನಿರೀಕ್ಷೆ ಇದೆ. ಒಂದು ಕಾಲದ ಆಪ್ತ ಜಗನ್ ಮೋಹನ್ ರೆಡ್ಡಿ ಆಗಮನದ ಬಗ್ಗೆ ಖಾತ್ರಿಯಾಗಿಲ್ಲ.












Click it and Unblock the Notifications