ಆರ್. ಆರ್. ನಗರ ಉಪ ಚುನಾವಣೆ; ವಿವಾದ ಎಬ್ಬಿಸಿದ ಕೇಸರಿ ಮಾಸ್ಕ್!
ಬೆಂಗಳೂರು, ನವೆಂಬರ್ 03: ರಾಜರಾಜೇಶ್ವರಿ ನಗರ ಕ್ಷೇತ್ರದ ಉಪ ಚುನಾವಣೆಯ ಮತದಾನದ ವೇಳೆ ಕೇಸರಿ ಬಣ್ಣದ ಮಾಸ್ಕ್ ವಿವಾದಕ್ಕೆ ಕಾರಣವಾಗಿದೆ. ಕೇಸರಿ ಮಾಸ್ಕ್ ಅನ್ನು ತೆಗೆದ ಭದ್ರತಾ ಸಿಬ್ಬಂದಿಗಳು ಸರ್ಜಿಕಲ್ ಮಾಸ್ಕ್ ಧರಿಸಿ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ.
ಆರ್. ಆರ್. ನಗರ ವ್ಯಾಪ್ತಿಯ ಕನ್ಯಾಕುಮಾರಿ ಶಾಲೆಯ ಮತಗಟ್ಟೆ ಬಳಿ ಭದ್ರತೆಗೆ ನಿಯೋಜನೆಗೊಂಡಿದ್ದ ಅರೆಸೇನಾಪಡೆ ಸಿಬ್ಬಂದಿ ಕೇಸರಿ ಬಣ್ಣದ ಮಾಸ್ಕ್ ಹಾಕಿದ್ದರು. ಇದಕ್ಕೆ ಕಾಂಗ್ರೆಸ್ ಕಾರ್ಯಕರ್ತರು ಆಕ್ಷೇಪ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆಯಿತು. ಬಳಿಕ ಅರೆಸೇನಾಪಡೆ ಸಿಬ್ಬಂದಿ ಕೇಸರಿ ಬಣ್ಣದ ಮಾಸ್ಕ್ ಅನ್ನು ತೆಗೆದುಹಾಕಿದರು. ಬಳಿಕ ಅವರಿಗೆ ಸರ್ಜಿಕಲ್ ಮಾಸ್ಕ್ ನೀಡಲಾಯಿತು.

ಮತದಾನ ಆರಂಭವಾಗುವ ಮುನ್ನ ಬಿಜೆಪಿ ಕಾರ್ಯಕರ್ತರು ಕೇಸರಿ ಬಣ್ಣದ ಮಾಸ್ಕ್ ವಿತರಣೆ ಮಾಡಿದ್ದರು. ಅರೆಸೇನಾಪಡೆ ಸಿಬ್ಬಂದಿ ಅದನ್ನು ಧರಿಸಿ ಕಾರ್ಯ ನಿರ್ವಹಣೆ ಮಾಡುತ್ತಿದ್ದರು. ಇದಕ್ಕೆ ಕಾಂಗ್ರೆಸ್ ಕಾರ್ಯಕರ್ತರು ಆಕ್ಷೇಪ ವ್ಯಕ್ತಪಡಿಸಿದರು.
ಕೋವಿಡ್ ಸಮಯದಲ್ಲಿ ಮತದಾನ ನಡೆಯುತ್ತಿದೆ. ಆದ್ದರಿಂದ ಮತದಾರರು, ಮತಗಟ್ಟೆಯ ಸಿಬ್ಭಂದಿ ಮಾಸ್ಕ್ ಧರಿಸುವುದು ಕಡ್ಡಾಯವಾಗಿದೆ. ಮತದಾನ ಮಾಡುವಾಗಲೂ ಜನರು ಬಲಗೈಗೆ ಗ್ಲೌಸ್ ಧರಿಸಬೇಕು.
ಆರ್. ಆರ್. ನಗರ ಕ್ಷೇತ್ರದಲ್ಲಿ ಜೆಡಿಎಸ್ ನಿಂದ ವಿ. ಕೃಷ್ಣಮೂರ್ತಿ, ಕಾಂಗ್ರೆಸ್ನಿಂದ ಹೆಚ್. ಕುಸುಮಾ, ಬಿಜೆಪಿಯಿಂದ ಮುನಿರತ್ನ ಸೇರಿದಂತೆ 16 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಬೆಳಗ್ಗೆ 7 ಗಂಟೆಗೆ ಮತದಾನ ಆರಂಭವಾಗಿದ್ದು, ಸಂಜೆ 6 ಗಂಟೆಯ ತನಕ ಮತದಾನ ಮಾಡಲು ಅವಕಾಶವಿದೆ.












Click it and Unblock the Notifications