ಪ್ರೋ ಕಬಡ್ಡಿ: ಬೆಂಗಳೂರಿಗೆ ಜಯ ತಂದ ಅಜಯ್ ಠಾಕೂರ್
ಮುಂಬೈ, ಜು. 19: ಪ್ರೋ ಕಬಡ್ಡಿ ಲೀಗ್ ಆರಂಭವಾಗಿದ್ದು ಜನರಲ್ಲಿ ದೇಶಿಯ ಕ್ರೀಡೆಯ ಕಿಚ್ಚು ಹಚ್ಚಿದೆ. ಶನಿವಾರ ರಾತ್ರಿ ನಡೆದ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಜೈಪುರ ಪಿಂಕ್ ಪ್ಯಾಂಥರ್ಸ್ ತಂಡವನ್ನು ಹಾಲಿ ರನ್ನರ್ಅಪ್ ಯು ಮುಂಬಾ ಸೋಲಿಸಿದೆ.
ಮತ್ತೊಂದು ಪಂದ್ಯದಲ್ಲಿ ಬೆಂಗಳೂರು ಜಯಭೇರಿ ಬಾರಿಸಿದೆ. ಸ್ಟಾರ್ ರೈಡರ್ ಅಜಯ್ ಠಾಕೂರ್ (11 ಅಂಕ) ತೋರಿದ ಅದ್ಭುತ ಪ್ರದರ್ಶನದ ನೆರವಿನಿಂದ ಬೆಂಗಳೂರು ಬುಲ್ಸ್ ತಂಡ ಬೆಂಗಾಲ್ ವಾರಿಯರ್ಸ್ ತಂಡವನ್ನು 33-25ರಿಂದ ಮಣಿಸಿ ಶುಭಾರಂಭ ಮಾಡಿದೆ.[ಕಬಡ್ಡಿ ತಂಡದಲ್ಲಿ ಯಾರ್ಯಾರಿದ್ದಾರೆ?]

29-28 ರಿಂದ ಜೈಪುರ ಪಿಂಕ್ಪ್ಯಾಂಥರ್ಸ್ ತಂಡವನ್ನು ಯು ಮುಂಬಾ ಸೋಲಿಸಿತು. ಇದರಿಂದ ಕಳೆದ ಆವೃತ್ತಿಯ ಪ್ರಶಸ್ತಿ ಸುತ್ತಿನಲ್ಲಿ ಅನುಭವಿಸಿದ ಸೋಲಿಗೆ ಮುಂಬೈ ತಂಡ ಮೊದಲ ಪಂದ್ಯದಲ್ಲೇ ಸೇಡು ತೀರಿಸಿಕೊಂಡಿತು.
ರೋಚಕ ಪಂದ್ಯ
ಬೆಂಗಾಲ್ ವಾರಿಯರ್ಸ್ ತಂಡದ ಸವಾಲನ್ನು ಬೆಂಗಳೂರು ಮೆಟ್ಟಿ ನಿಂತಿದ್ದು ರೋಚಕ. ಪಂದ್ಯದ ಮೊದಲಾರ್ಧದಲ್ಲಿ 2-12 ರಿಂದ ಬೆಂಗಳೂರು ತಂಡವು ಹಿನ್ನಡೆ ಅನುಭವಿಸಿತ್ತು. ಇದರಿಂದ ಸೋಲಿನ ಭೀತಿಯೂ ಎದುರಾಗಿತ್ತು. ಆದರೆ, ಅಚ್ಚರಿಯ ರೀತಿಯಲ್ಲಿ ತಿರುಗಿಬಿದ್ದ ಬೆಂಗಳೂರು ತಂಡವು ಬೆಂಗಾಲ್ ವಾರಿಯರ್ಸ್ ತಂಡಕ್ಕೆ ಸೋಲಿನ ರುಚಿ ತೋರಿಸಿತು.
6-14ರ ಹಿನ್ನಡೆಯಲ್ಲಿದ್ದಾಗ ಬುಲ್ಸ್ ತಂಡದ ರೈಡರ್ ಅಜಯ್ ಠಾಕೂರ್ ಅವರ ಚುರುಕಿನ ದಾಳಿಯಿಂದಾಗಿ ಬುಲ್ಸ್ 15-16ರ ಅಂತರ ಸಾಧಿಸಿತು. 11 ಪಾಯಿಂಟ್ ಗಳಿಸಿಕೊಟ್ಟ ಅವರು ಪಂದ್ಯದ ಹೀರೋ ಆಗಿ ಮಿಂಚಿದರು.
ಗಣ್ಯರ ಉಪಸ್ಥಿತಿ:
ಉದ್ಘಾಟನಾ ಪಂದ್ಯದ ವೇಳೆ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್, ಬಿಗ್ ಬಿ ಅಮಿತಾಬ್ ಬಚ್ಚನ್, ಕೇಂದ್ರ ಕ್ರೀಡಾ ಸಚಿವ ಸರಬಾನಂದ ಸೋನೋವಾಲ್, ಬಾಲಿವುಡ್ ನಟ ಆಮೀರ್ ಖಾನ್ ದಂಪತಿ, ಕ್ರಿಕೆಟಿಗ ಕಪಿಲ್ ದೇವ್, ಜೈಪುರ ಪಿಂಕ್ ಪ್ಯಾಂಥರ್ಸ್ ತಂಡದ ಫ್ರಾಂಚೈಸಿ ಮಾಲೀಕ, ನಟ ಅಭಿಷೇಕ್ ಬಚ್ಚನ್, ಐಶ್ವರ್ಯ ರೈ ಬಚ್ಚನ್, ಸುನೀಲ್ ಶೆಟ್ಟಿ, ನಟ ರಿತೇಶ್ ದೇಶ್ವುುಖ್ ಹಾಗೂ ಜೆನಿಲಿಯಾ ಉಪಸ್ಥಿತರಿದ್ದರು.
ಇಂದಿನ ಪಂದ್ಯ, ಜುಲೈ 19
ತೆಲುಗು ಟೈಟಾನ್ಸ್ - ದೆಹಲಿ (ರಾತ್ರಿ 8ಕ್ಕೆ)
ಬೆಂಗಳೂರು ಬುಲ್ಸ್ - ಯು ಮುಂಬಾ (ರಾತ್ರಿ 9ಕ್ಕೆ)












Click it and Unblock the Notifications