ಭಾರತದ ಪ್ರಗತಿಗೆ ಮೋದಿ ಮಾಸ್ಟರ್ ಪ್ಲಾನ್ ಇದೇನಾ?
ನವದೆಹಲಿ, ಮೇ 23: ನಿಯೋಜಿತ ಪ್ರಧಾನಿ ನರೇಂದ್ರ ಮೋದಿ ಅವರ ವೇಗ, ರಾಜಕೀಯ ನಡೆಗಳು, ಪಟ್ಟುಗಳನ್ನು ಗಮನಿಸಿದರೆ ದೇಶದಲ್ಲಿ ಅಭಿವೃದ್ಧಿಯ ಶಕೆ ಆರಂಭಗೊಂಡಿದೆ ಅನ್ನಿಸುತ್ತಿದೆ.
ಅಂದಹಾಗೆ ಪ್ರಧಾನ ಮಂತ್ರಿಯಾಗಿ ಅವರಿನ್ನೂ ಪ್ರಮಾಣ ವಚನ ಸ್ವೀಕರಿಸದೇ ಇದ್ದರು ಆಡಳಿತ ವಿಕೇಂದ್ರಿಕರಣಕ್ಕೆ ತಮ್ಮದೇ ಆದ ಯೋಜನೆಗಳನ್ನು ರೂಪಿಸಿದ್ದಾರೆ. ಅಭಿವೃದ್ಧಿಗೆ ಅನುಕೂಲವಾಗುವಂತೆ ಕಾಶ್ಮಿರದಿಂದ ಕನ್ಯಾಕುಮಾರಿವರೆಗೆ ಭಾರತವನ್ನು ನಾಲ್ಕು ವಿಭಾಗಗಳಾಗಿ ವಿಂಗಡಿಸಿ, ಆಡಳಿತ ವಿಕೇಂದ್ರಿಕರಣಕ್ಕೆ ಮುನ್ನುಡಿ ಬರೆಯಲು ಚಿಂತನೆ ನಡೆದಿಸಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಈಗಿನ ವ್ಯವಸ್ಥೆಯಲ್ಲಿ ಪ್ರಧಾನ ಮಂತ್ರಿ ಕಚೇರಿಯೇ ಎಲ್ಲ ರಾಜ್ಯಗಳ ಆಡಳಿತ ಉಸ್ತುವಾರಿಯನ್ನು ನಿಯಂತ್ರಿಸುತ್ತಿದೆ. 32 ಲಕ್ಷ ಚದರ ಕಿಮೀ ವಿಸ್ತೀರ್ಣ, 29 ರಾಜ್ಯಗಳು, ಏಳು ಕೇಂದ್ರಾಡಳಿತ ಪ್ರದೇಶಗಳನ್ನು ಹೊಂದಿರುವ ಭಾರತವನ್ನು ನಿಭಾಯಿಸಲು ಏಕಮಾತ್ರ ಪ್ರಧಾನಿ ಕಚೇರಿಯಿಂದ ಸಾಧ್ಯವಾಗುತ್ತಿಲ್ಲ.

ಹಾಗಾಗಿ ಪ್ರಧಾನ ಮಂತ್ರಿಗೆ ಆಡಳಿತದಲ್ಲಿ ಸಹಕಾರ ನೀಡಲು ಮತ್ತು ಉತ್ತರದಾಯಿಯಾಗಿರಲು ದಕ್ಷಿಣ ಭಾರತ, ಉತ್ತರ ಭಾರತ, ವಾಯುವ್ಯ, ಈಶಾನ್ಯ ರಾಜ್ಯಗಳ ಒಕ್ಕೂಟ ಎಂದು ನಾಲ್ಕು ವಿಭಾಗಗಳನ್ನಾಗಿ ವಿಭಜಿಸಲಾಗುತ್ತಿದೆ. ಪ್ರತಿಯೊಂದು ವಿಭಾಗಕ್ಕೂ ಮುಖ್ಯ ಕಾರ್ಯದರ್ಶಿ ದರ್ಜೆಯ ಹಿರಿಯ ಐಎಎಸ್ ಅಧಿಕಾರಿಯನ್ನು ಉಸ್ತುವಾರಿಯನ್ನಾಗಿ ನೇಮಿಸಲಾಗುತ್ತದೆ. ಅದೇ ರೀತಿ ಪ್ರಾದೇಶಿಕತೆಯ ಆಧಾರದಲ್ಲಿಯೇ ಕೇಂದ್ರ ಸಂಪುಟಕ್ಕೆ ಸಚಿವರನ್ನು ನೇಮಿಸಿ ಉಸ್ತುವಾರಿಯ ಹೊಣೆ ಹೊರಿಸಲಾಗುತ್ತದೆ.
ಈ ಪ್ರಾದೇಶಿಕ ಭಾಗದ ಎಲ್ಲಾ ಅಭಿವೃದ್ಧಿಗೂ ನಿಯೋಜಿತ ಪ್ರಧಾನ ಕಾರ್ಯದರ್ಶಿಗಳನ್ನೇ ಹೊಣೆ ಮಾಡುವ ಚಿಂತನೆಯಿದೆ. ಕಾರ್ಪೋರೆಟ್ ಸಂಸ್ಥೆಗಳ ಮಾದರಿಯಲ್ಲಿ ಈ ಪ್ರಾದೇಶಿಕ ಅಧಿಕಾರಿಗಳಿಗೆ ಗುರಿ ನಿಗದಿ ಮಾಡಿ, ಅದರ ಅನುಷ್ಠಾನದ ವರದಿ ನೀಡಲು ಸೂಚಿಸಲಾಗುತ್ತದೆ. ಈ ಎಲ್ಲಾ ಪ್ರಾದೇಶಿಕ ಅಧಿಕಾರಿಗಳು ನೇರವಾಗಿ ಪ್ರಧಾನ ಕಾರ್ಯದರ್ಶಿಯ ಸಂಪರ್ಕ ಹಾಗೂ ನಿಯಂತ್ರಣದಲ್ಲಿ ಇರುತ್ತಾರೆ.
ಹಾಗಾಗಿ ಪ್ರತಿಯೊಂದು ವಿಷಯಕ್ಕೂ ದೆಹಲಿಗೆ ತೆರಳುವ ಪ್ರಯಾಸ ತಪ್ಪಲಿದೆ. ನಿಯೋಜಿತ ಸಚಿವರಿಗೂ ಈ ಭಾಗದ ಮೇಲೆ ಹೆಚ್ಚಿನ ಹಿಡಿತ ಧಕ್ಕಲಿದೆ. ಸ್ವಾತಂತ್ರ್ಯಾನಂತರದ 67 ವರ್ಷಗಳಿಂದಲೂ ಎಲ್ಲಾ ಆಡಳಿತವೂ ದಿಲ್ಲಿ ದರ್ಬಾರ್ನಿಂದಲೇ ನಡೆಯುತ್ತಿದೆ. 121 ಕೋಟಿ ಜನಸಂಖ್ಯೆ ಹೊಂದಿರುವ ಭಾರತದ ಆಡಳಿತವನ್ನು ನಿರ್ವಹಿಸುವುದು ಕಷ್ಟ ಸಾಧ್ಯವಾದರೂ ಅಧಿಕಾರ ವಿಕೇಂದ್ರಿಕರಣ ನಡೆದಿರಲಿಲ್ಲ.
ಪ್ರಧಾನಿ ಕಚೇರಿ ಉಸ್ತುವಾರಿಗೆ ಒಂದಿಬ್ಬರು ಸಚಿವರನ್ನು ನಿಯೋಜಿಸಿರುವುದನ್ನು ಬಿಟ್ಟು ಬೇರೆ ಪರಿಣಾಮಕಾರಿ ಕ್ರಮಗಳನ್ನು ಯಾವ ಸರ್ಕಾರಗಳು ತೆಗೆದುಕೊಂಡಿರಲಿಲ್ಲ. ಇಲಾಖೆ ಹೊರತು ಪಡಿಸಿ ರಾಷ್ಟ್ರೀಯ ವಿಚಾರಗಳಿಗೆ ಸಂಬಂಧಿಸಿದಂತೆ ಪ್ರಧಾನಿಯನ್ನು ಭೇಟಿ ಮಾಡಬೇಕಿದ್ದರೆ ತಿಂಗಳು ಗಟ್ಟಲೇ ಕಾಯಬೇಕಿತ್ತು. ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿಗೆ ಈ ಕಷ್ಟಗಳ ಅರಿವಿದ್ದು ಅದರ ಆಧಾರ ಮೇಲೆ ಆಡಳಿತವನ್ನು ಪ್ರಾದೇಶಿಕ ಮಟ್ಟಕ್ಕೆ ವಿಕೇಂದ್ರಿಕರಿಸಲು ನಿರ್ಧರಿಸಲಾಗಿದೆ.
ಬೆಂಗಳೂರಿಗೆ ಪ್ರಾದೇಶಿಕ ಕಚೇರಿ:
ಮೋದಿಯವರ ಈ ಅಭಿವೃದ್ಧಿಯ ನಕ್ಷೆ ಜಾರಿಗೆ ಬಂದಿದ್ದೆ ಆದರೆ ದಕ್ಷಿಣ ರಾಜ್ಯಗಳ ಪೈಕಿ ವಿಶ್ವದ ಗಮನ ಸೆಳೆದಿರುವ ಮತ್ತು ಕೇಂದ್ರ ಭಾಗವಾಗಿರುವ ಬೆಂಗಳೂರಿನಲ್ಲಿ ಕೇಂದ್ರ ಪ್ರಾದೇಶಿಕ ಕಚೇರಿ ಸ್ಥಾಪನೆಗೊಳ್ಳುವ ನಿರೀಕ್ಷೆಯಿದೆ. ಕರ್ನಾಟಕ ಇತ್ತೀಚೆಗೆ ಬಿಜೆಪಿಯ ಭದ್ರಕೋಟೆಯಾಗಿದ್ದು, ಸಂಪರ್ಕಕ್ಕೆ ಉತ್ತಮವಾದ ವಾಯು, ರಸ್ತೆ ಹಾಗೂ ಸಮುದ್ರ ಮಾರ್ಗವನ್ನು ಹೊಂದಿದೆ ಹಾಗೂ ಮಹಾರಾಷ್ಟ್ರ, ಕೇರಳ, ತಮಿಳುನಾಡು, ಆಂಧ್ರಪ್ರದೇಶಗಳಿಗೆ ಕೇಂದ್ರ ಭಾಗವಾಗಿದೆ. ಹಾಗಾಗಿ ಬೆಂಗಳೂರಿನಲ್ಲಿ ಪ್ರಾದೇಶಿಕ ಕಚೇರಿ ಸ್ಥಾಪಿಸುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ.












Click it and Unblock the Notifications