Karnataka-Mumbai Train: ಪ್ರಯಾಣಿಕ ಸ್ನೇಹಿ ವೇಳಾಪಟ್ಟಿಗೆ ರೈಲು ಬಳಕೆದಾರರ ಆಗ್ರಹ
ಬೆಂಗಳೂರು, ಅಕ್ಟೋಬರ್ 24: ಕರ್ನಾಟಕ ರಾಜಧಾನಿಯಿಂದ ವಾಣಿಜ್ಯ ನಗರಿ ಮುಂಬೈಗೆ ಸೂಪರ್ ಫಾಸ್ಟ್ ರೈಲು ಕಾರ್ಯಾಚರಣೆಗೆ ಆರಂಭವಾಗಿದೆ. ನೆನ್ನೆ ಗುರುವಾರವಷ್ಟೇ ಕೇಂದ್ರ ಸರ್ಕಾರ ಈ ರೈಲು ಸೇವೆ ಅನುಮೋದನೆ ನೀಡಿದೆ. ಈ ರೈಲು ತುಮಕೂರು, ದಾವಣಗೆರೆ, ಹಾವೇರಿ, ಹುಬ್ಬಳ್ಳಿ, ಧಾರವಾಡ, ಬೆಳಗಾವಿ ಮಾರ್ಗವಾಗಿ ಸಂಚರಿಸಲಿದೆ.
ಬೆಂಗಳೂರು-ಮುಂಬೈ ಸೂಪರ್ಫಾಸ್ಟ್ ರೈಲು ಸಂಚಾರ ವೇಳಾಪಟ್ಟಿ ಬಗ್ಗೆ ಔಪಚಾರಿಕೆ ಮಾಹಿತಿ ಸದ್ಯದಲ್ಲೇ ಸಿಗಲಿದೆ. ಕರ್ನಾಟಕದ ಹಲವು ಜಿಲ್ಲೆಗಳ ಮಾರ್ಗವಾಗಿ SMVT ಬೆಂಗಳೂರು ಮತ್ತು CSMT ಮುಂಬೈ ಅನ್ನು ಸಂಪರ್ಕಿಸಲಿದೆ. ಈ ಬಗ್ಗೆ ಸಂಸದರಾದ ಪಿಸಿ ಮೋಹನ್ ಅವರು ಪ್ರತಿಕ್ರಿಯಿಸಿದ್ದಾರೆ. ರಾಜ್ಯ ರೈಲ್ವೆ ಬಳಕೆದಾರರು ಸಂಸದ ತೇಜಸ್ವಿ ಸೂರ್ಯ, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ರಾಜ್ಯ ರೈಲ್ವೆ ಖಾತೆ ಸಚಿವ ವಿ.ಸೋಮಣ್ಣ ಅವರಿಗೆ ಅಭಿನಂದನೆ ತಿಳಿಸಿದ್ದಾರೆ.

1,227 ಕೀ.ಮೀ. ಪ್ರಯಾಣ ಎಷ್ಟು ಗಂಟೆ?
ಬೆಂಗಳೂರು-ಮುಂಬೈ ರೈಲು ನವೆಂಬರ್ನಲ್ಲಿ ಪ್ರಾರಂಭವಾಗುವ ನಿರೀಕ್ಷೆ ಇದೆ. ಒಟ್ಟು 1,227 ಕಿಲೋ ಮಿಟರ್ ದೂರವನ್ನು ಸುಮಾರು 18 ಗಂಟೆಗಳಲ್ಲಿ ಕ್ರಮಿಸಬಹುದೆಂದು ಅಂದಾಜಿಸಲಾಗಿದೆ. ಈ ಬಗ್ಗೆ ಮೊದಲ ಸಂಚಾರ ಆರಂಭವಾದ ಬಳಿಕ ನಿಖರ ಮಾಹಿತಿ ಸಿಗಲಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಸಂಸದ ಪಿ.ಸಿ. ಮೋಹನ್ ಅವರು, 'ಬೆಂಗಳೂರು ಮತ್ತು ಮುಂಬೈ ನಡುವೆ ಪ್ರಯಾಣಿಸುವ ಪ್ರಯಾಣಿಕರು ಶೀಘ್ರದಲ್ಲೇ ಹೊಸ ಸೂಪರ್ಫಾಸ್ಟ್ ರೈಲನ್ನು ಬುಕ್ ಮಾಡಬದಾಗಿದೆ. ನಾನು ಈ ಹಿಂದೆ ರೈಲ್ವೆ ಸಚಿವಾಲಯದೊಂದಿಗೆ ಈ ಮಾರ್ಗದ ರೈಲು ಸಂಚಾರ ಬಗ್ಗೆ ಪ್ರಸ್ತಾಪಿಸಿದ್ದೆ. ತುಮಕೂರು, ದಾವಣಗೆರೆ, ಹುಬ್ಬಳ್ಳಿ ಮತ್ತು ಬೆಳಗಾವಿ ಮೂಲಕ ಹೋಗುವ ಈ ರೈಲು ಪ್ರಯಾಣದ ಸಮಯವನ್ನು ಕಡಿತಗೊಳಿಸುತ್ತದೆ. ಈ ಭಾಗಗದಲ್ಲಿನ ಸಾರಿಗೆ ಸಂಪರ್ಕ, ವ್ಯಾಪಾರ ಮತ್ತು ಪ್ರವಾಸೋದ್ಯಮವನ್ನು ಹೆಚ್ಚಿಸುತ್ತದೆ' ಎಂದು ಅವರು ತಿಳಿಸಿದ್ದಾರೆ.
ರಾಜ್ಯ ರೈಲ್ವೆ ಬಳಕೆದಾರರು 'ಬಹುನಿರೀಕ್ಷೆಯ ಮುಂಬೈ-ಬೆಂಗಳೂರು ರೈಲು ಸಂಚಾರ ಸಮಯ ಸನ್ನಿಹಿತವಾಗಿದೆ. ರಾಜ್ಯದ ಜನರ ಬೇಡಿಕೆ ಈಡೇರಿದೆ. ದೀಪಾವಳಿಗೆ ಗುಡ್ ನ್ಯೂಸ್ ಸಿಕ್ಕಿದೆ. ದಶಕಗಳ ಬೇಡಿಕೆಯ ನಂತರ, ಬೆಂಗಳೂರು-ಮುಂಬೈ ಸೂಪರ್ಫಾಸ್ಟ್ ರೈಲು ಕೊನೆಗೂ ತನ್ನ ಮಾರ್ಗದಲ್ಲಿ ವಾಣಿಜ್ಯ ಕಾರ್ಯಾಚರಣೆ ನಡೆಸಲಿದೆ. ಎರಡು ಪ್ರಮುಖ ಮಹಾನಗರಗಳ ನಡುವೆ ಸಾವಿರಾರು ಪ್ರಯಾಣಿಕರಿಗೆ ಪ್ರಯೋಜನ ಸಿಗಲಿದೆ.
ಪ್ರಯಾಣಿಕ ಸ್ನೇಹಿ ವೇಳಾಪಟ್ಟಿಗೆ ಕೋರಿಕೆ
ಒಟ್ಟು 19 ಗಂಟೆಗಳಿಗಿಂತ ಕಡಿಮೆ ಪ್ರಯಾಣದ ಸಮಯದೊಂದಿಗೆ ಪ್ರಯಾಣಿಕ ಸ್ನೇಹಿ ವೇಳಾಪಟ್ಟಿಯನ್ನು ಖಚಿತಪಡಿಸಿಕೊಳ್ಳಬೇಕಿದೆ. ಜೊತೆಗೆ ಅತ್ಯಂತ ಅಗತ್ಯವಿರುವ ಸೇವೆಯನ್ನು ಸರ್ಕಾರದ ಗಮನಕ್ಕೆ ತಂದು ಜಾರಿತರುವಲ್ಲಿ ಶ್ರಮಿಸಿದ ಎಲ್ಲ ಸಂಸದರು ಸಚಿವರಿಗೆ ಕೃತಜ್ಞರಾಗಿರುತ್ತೇವೆ ಎಂದು ರೈಲ್ವೆ ಬಳಕೆದಾರರ ಎಕ್ಸ್ ಹ್ಯಾಂಡಲ್ ಖುಷಿ ಹಂಚಿಕೊಂಡಿದೆ. ಇದಕ್ಕೆ ಪ್ರತಿಕ್ರಿಯಿಸಿರುವ ತೇಜಸ್ವಿ ಸೂರ್ಯ ಅವರು ಧನ್ಯವಾದ ತಿಳಿಸಿ ಪ್ರತಿಕ್ರಿಯಿಸಿದ್ದಾರೆ. ಶೀಘ್ರವೇ ಯಾವೆಲ್ಲ ನಿಲ್ದಾಣಗಳಲ್ಲಿ ನಿಲುಗಡೆ ನೀಡುತ್ತದೆ. ಎಷ್ಟು ಗಂಟೆ ಸಮಯ, ಎರಡು ಕಡೆ ನಿಲ್ದಾಣ ಬಿಡುವ ಮತ್ತು ತಲುಪುವ ಸಮಯ ಹಾಗೂ ಒಟ್ಟು ಬೋಗಿಗಳು ಸೇರಿದಂತೆ ವೇಳಾಪಟ್ಟಿಯಲ್ಲಿ ಭಾರತೀಯ ರೈಲ್ವೆ ಇಲಾಖೆ ಪ್ರಕಟಿಸಲಿದೆ.












Click it and Unblock the Notifications