ಲಾಲ್ ಬಾಗಿನಲ್ಲಿ ಕಂಗೊಳಿಸುತ್ತಿದೆ ಕುಸುಮ ಕವಿಶೈಲ

ಬೆಂಗಳೂರು, ಆಗಸ್ಟ್ 5:
ರೂಪರೂಪಗಳನು ದಾಟಿ,
ನಾಮಕೋಟಿಗಳನು ಮೀಟಿ,
ಎದೆಯ ಬಿರಿಯೆ ಭಾವದೀಟಿ,
ಓ ನನ್ನ ಚೇತನ, ಆಗು ನೀ ಅನಿಕೇತನ...
ಎನ್ನುತ್ತ ಮಾನವ ಕೋಟಿಗೆ ವಿಶ್ವ ಮಾನವ ಸಂದೇಶ ಸಾರಿದ, ರಾಷ್ಟ್ರಕವಿ ಕುವೆಂಪು ಅವರ ಸಾಹಿತ್ಯದ ಕಂಪನ್ನೇ ತುಂಬಿದ್ದ ಹೂವುಗಳೆಲ್ಲ ಲಾಲ್ ಬಾಗ್ ತುಂಬ ಕಂಗೊಳಿಸುತ್ತಿವೆ!

ಲಾಲ್ ಬಾಗ್ ನಲ್ಲಿ ಕವಿಶೈಲ: ಸ್ವಾತಂತ್ರ್ಯ ದಿನಾಚರಣೆಯ ಪುಷ್ಪಪ್ರದರ್ಶನದ ವಿಶೇಷ

ಉದ್ಯಾನನಗರಿಯ ಸಸ್ಯಕಾಶಿ ಲಾಲ್ ಬಾಗ್ ನಲ್ಲಿ ಸಾಹಿತ್ಯದ ಅಮಲು ಸೃಷ್ಟಿಸುತ್ತಿರುವ ಕುವೆಂಪು ಅವರ ಮನೆ 'ಕವಿಶೈಲ'ದ ಮಾದರಿ ಕುಸುಮಗಳಿಂದ ಅಲಂಕೃತಗೊಂಡು ಕೇವಲ ಪುಷ್ಪಪ್ರಿಯರನ್ನಷ್ಟೇ ಅಲ್ಲ, ಸಾಹಿತ್ಯ ಪ್ರಿಯರನ್ನು, ಕುವೆಂಪು ಅಭಿಮಾನಿಗಳನ್ನು ತನ್ನತ್ತ ಸೆಳೆಯುತ್ತಿದೆ. ಕರ್ನಾಟಕಕ್ಕೆ ಮೊದಲ ಜ್ಞಾನಪೀಠ ಪ್ರಶಸ್ತಿ ಬಂದು 2017 ಕ್ಕೆ ಸರಿಯಾಗಿ 50 ವರ್ಷಗಳಾಗುತ್ತವೆ. ಅದಕ್ಕೆಂದೇ 'ಶ್ರೀರಾಮಾಯಣ ದರ್ಶನಂ' ಮೂಲಕ ಪ್ರಥಮ ಜ್ಞಾನಪೀಠ(1967) ತಂದುಕೊಟ್ಟ ಕುವೆಂಪು ಅವರಿಗೆ ಕೃತಜ್ಞತೆ, ನಮನ ಸಲ್ಲಿಸುವ ಸಲುವಾಗಿ ಈ ಪುಷ್ಪ ಪ್ರದರ್ಶನವನ್ನು ಮೀಸಲಿಡಲಾಗಿದೆ.

ಪ್ರತಿವರ್ಷವೂ ಕನ್ನಡ ನಾಡಿನ ಹಿರಿಮೆ-ಗರಿಮೆಯನ್ನು ಸಾರುವಂಥ ವಿನೂತನ ಪರಿಕಲ್ಪನೆಯೊಂದಿಗೆ ನಡೆಯುವ ಪುಷ್ಪಮೇಳ, ಈ ಬಾರಿ ಮತ್ತಷ್ಟು ವಿಭಿನ್ನ ಅನ್ನಿಸಿರುವುದಕ್ಕೆ ಕಾರಣ ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪ ಅವರ ಕವಿಶೈಲದ ಮಾದರಿ, ಜೊತೆಗೆ ಅವರ ಸಾಹಿತ್ಯ ಕೃತಿಗಳ ಪ್ರದರ್ಶನ, ಅವರ ನಾಟಕದ ದೃಶ್ಯಗಳ ಪ್ರದರ್ಶನ, ಅವರ ಸಮಾಧಿಯ ಮಾದರಿ ಸ್ಥಾಪನೆ... ಇತ್ಯಾದಿ ಕಾರಣಗಳಿಂದ.

ರಾಜ್ಯ ತೋಟಗಾರಿಕಾ ಇಲಾಖೆ, ಮೈಸೂರು ತೋಟಗಾರಿಕೆ ಇಲಾಖೆ, ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನದ ಸಹಯೋಗದಲ್ಲಿ ನಡೆಸಯುವತ್ತಿರುವ ಪುಷ್ಪಮೇಳ ಆಗಸ್ಟ್ 4 ರಿಂದ ಆರಂಭವಾಗಿದ್ದು, ಆಗಸ್ಟ್ 15 ರವರೆಗೆ ಅಂದರೆ ಸ್ವಾತಂತ್ರ್ಯೋತ್ಸವದವರೆಗೆ ನಡೆಯಲಿದೆ.

ಕಣ್ಮುಂದೆ ಬಂತು ಕವಿಶೈಲದ ಸೊಬಗು

ಕಣ್ಮುಂದೆ ಬಂತು ಕವಿಶೈಲದ ಸೊಬಗು

ಕುವೆಂಪು (29.12.1904 - 11.11.1994) ಅವರ ಪ್ರಸಿದ್ಧ ಕಾದಂಬರಿಗಳಾದ 'ಕಾನೂರು ಸುಬ್ಬಮ್ಮ ಹೆಗ್ಗಡತಿ', 'ಮಲೆಗಳಲ್ಲಿ ಮದುಮಗಳು', ಸಮಗ್ರ ಕೃತಿ ಸೇರಿದಂತೆ ಅವರ ಪ್ರಮುಖ ಕೃತಿಗಳು ಪ್ರದರ್ಶನದಲ್ಲಿವೆ. ಲಾಲ್ ಬಾಗಿನ ಗ್ಲಾಸ್ ಹೌಸ್ ನ ಮಧ್ಯಭಾಗದಲ್ಲಿ ಕೆಂಪು, ಹಳದಿ, ಶ್ವೇತ ವರ್ಣದ ಗುಲಾಬಿ ಹೂವುಗಳು, ಹಳದಿ ಬಣ್ಣದ ಕಾರ್ನೇಷನ್ ಹೂಗಳು, ಸೀತಾಳೆ(ಆರ್ಕಿಡ್ಸ್) ಹೂಗಳು ಮತ್ತು ಆಯ್ದ ಎಲೆ ಜಾತಿಯ ಜೋಡಣೆಯೊಂದಿಗೆ 21 ಅಡಿ ಎತ್ತರ, 30 ಅಡಿ ಅಗಲ ಹಾಗೂ 38 ಅಡಿ ಉದ್ದದಲ್ಲಿ ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪ ಅವರ ಮನೆಯ ಪ್ರತಿರೂಪವನ್ನು ನಿರ್ಮಿಸಲಾಗಿದ್ದು, ಮನೆಯ ಮುಂದೆ ಕುಳಿತ ಕುವೆಂಪು ಅವರ ಶ್ವೇತವರ್ಣದ ಪ್ರತಿಮೆ ಸಾಕ್ಷಾತ್ ಕವಿಯ ದರ್ಶನವಾದಂಥ ಅನುಭವ ನೀಡುತ್ತದೆ.

ಕವಿಸಮಾಧಿ

ಕವಿಸಮಾಧಿ

ಕಲಾನಿಪುಣ ರಂಜನ್ ರಾಮಚಂದ್ರ ಕೈಚಳಕದಿಂದ ರೂಪುಗೊಂಡಿರುವ ಕವಿಸಮಾಧಿ ಹಾಗೂ ಬಂಡೆಯ ಮೇಲೆ ಇರುವ ಬಿಎಂಶ್ರೀ, ಕುವೆಂಪು, ಟಿ.ಎಸ್ ವೆಂಕಣ್ಣಯ್ಯ ಹಾಗೂ ಪೂರ್ಣಚಂದ್ರ ತೇಜಸ್ವಿ ಅವರ ಸಹಿಗಳು ಕುಪ್ಪಳ್ಳಿಯ ಕವಿಶೈಲವನ್ನು ನೆನಪಿಗೆ ತರುದಿರುವುದಿಲ್ಲ. ಸಾವಿರಾರು ಸುಂದರ ಹೂವುಗಳ ನಡುವೆ ಕವಿಯ ಕವನದ ಸಾಲುಗಳು, ನಾಟಕದ ದೃಶ್ಯಗಳು, ಹಿನ್ನೆಲೆಯಲ್ಲಿ ಮೊಳಗುವ ಅವರೇ ಬರೆದ ಪದ್ಯಗಳು ಎಲ್ಲವೂ ಸೇರಿ ಬೆಂಗಳೂರಿನ ಯಾಮತ್ರಿಕ ಪ್ರಪಂಚದಿಂದ ನವಿರಾದ ಲೋಕವೊಂದಕ್ಕೆ ಕರೆದೊಯ್ಯುತ್ತವೆ.

ಜೋಗದಲ್ಲಿ ನೀರಿಲ್ಲ!

ಜೋಗದಲ್ಲಿ ನೀರಿಲ್ಲ!

ಈ ಎಲ್ಲವುಗಳೊಟ್ಟಿಗೆ ಮಲೆನಾಡಿನ ಪ್ರತಿರೂಪವನ್ನು ಕಟ್ಟಿಕೊಡುವುದಕ್ಕೆ ಸಿದ್ಧವಾದ ಜೋಗದಲ್ಲಿ ಮಾತ್ರ ನೀರಿಲ್ಲದಿದ್ದಿದ್ದುದು ನೋಡುಗರಿಗೆ ಕೊಂಚ ನಿರಾಸೆ ಮೂಡಿಸುತ್ತದೆ! ಬಹುಶಃ ಮಳೆಯಿಲ್ಲದೆ ಜೋಗ ಒಡಗಿರುವುದರ ಸಂಕೇತವೂ ಅದಿರಬಹುದು.

ಕಣ್ಣುಕೋರೈಸುವ ಚಿತ್ರ

ಕಣ್ಣುಕೋರೈಸುವ ಚಿತ್ರ

ಇದರೊಟ್ಟಿಗೆ ಕುವೆಂಪು ಅವರ ಅಪರೂಪದ ಫೋಟೋಗಳನ್ನು ಒಳಗೊಂಡ ಗ್ಯಾಲರಿ ಗಮನ ಸೆಳೆಯುತ್ತದೆ. ಆ.15ರವರೆಗೆ ನಡೆಯುವ ಫಲಪುಷ್ಪ ಪ್ರದರ್ಶನಕ್ಕೆ ರಾಜ್ಯಪಾಲ ವಿ.ಆರ್.ವಾಲಾ ಆಗಸ್ಟ್ 4 ರಂದೇ ಚಾಲನೆ ನೀಡಿದ್ದಾರೆ. ಈಗೇನಿದ್ದರೂ ಅಲ್ಲಿ ಜನರದ್ದೇ ಜಾತ್ರೆ. ಕಣ್ಣುಕೋರೈಸುವ ಅಪರೂಪದ ಪುಷ್ಪಗಳನ್ನು ಕಂಡು ಮನತಣಿಸಿಕೊಳ್ಳುತ್ತಿರುವ ಪ್ರೇಕ್ಷಕರು, ಸಾಲು ಸಾಲು ಅಂಗಡಿಗಳ ಮುಂದೆ ನಿಂತು ಅಪ್ಪ-ಅಮ್ಮನಿಗೆ ರಚ್ಚೆಹಿಡಿದ ಮಕ್ಕಳು, ಪುಷ್ಪ ಪ್ರದರ್ಶನದ ನೆಪದಲ್ಲಿ ಹೊಟ್ಟೆಗೆ ಒಂದಷ್ಟಾದರೂ ಹಿಟ್ಟು ಸಿಕ್ಕೀತೆಂದು ಕಡಲೆಕಾಯಿ, ಚುರುಮುರಿ ಮಾರುತ್ತ ಕುಳಿತ ವೃದ್ಧೆಯರು.... ಇವೆಲ್ಲವೂ ಲಾಲ್ ಬಾಗಿನಲ್ಲಿ ನೋಡುವುದಕ್ಕೆ ಸಿಗುತ್ತವೆ. ಆದರೆ ಹೊರಗಿನ ಟ್ರಾಫಿಕ್ ನೋಡಿ ಮಾತ್ರ ಹೌಹಾರಬಾರದಷ್ಟೆ!

ಪ್ರವೇಶ ದರ ಎಷ್ಟು?

ಪ್ರವೇಶ ದರ ಎಷ್ಟು?

ಆ. 4, 7, 8,9,10, 11 ಮತ್ತು 14ರಂದು ಖಾಸಗಿ ಮತ್ತು ಸರ್ಕಾರಿ ಶಾಲಾ ಮಕ್ಕಳಿಗೆ ಬೆಳಗ್ಗೆ 9 ರಿಂದ ಸಂಜೆ 5 ರವರೆಗೆ ಉಚಿತ ಪ್ರವೇಶ ಕಲ್ಪಿಸಲಾಗಿದೆ. ವಯಸ್ಕರಿಗೆ ವಾರದ ದಿನಗಳಾದರೆ ತಲಾ 50 ರೂ. ವಾರಾಂತ್ಯದಲ್ಲಿ ತಲಾ 60 ರೂ., ಮಕ್ಕಳಿಗಾದರೆ 20 ರೂ. ನಿಗದಿಪಡಿಸಲಾಗಿದೆ. ಕ್ಯಾಮೆರಾಕ್ಕೆ ಪ್ರತ್ಯೇಕ ಬೆಲೆತೆರಬೇಕಾಗಿಲ್ಲ.

ಪಾರ್ಕಿಂಗ್ ಗೇನೂ ಸಮಸ್ಯೆಯಿಲ್ಲ

ಪಾರ್ಕಿಂಗ್ ಗೇನೂ ಸಮಸ್ಯೆಯಿಲ್ಲ

ಮೆಟ್ರೋದಿಂದ ಅನೂಕುಲ ಲಾಲ್ ಬಾಗ್ ವರೆಗೂ ಮೆಟ್ರೋ ವ್ಯವಸ್ಥೆ ಇರುವುದರಿಂದ ಪುಷ್ಪಪ್ರದರ್ಶನಕ್ಕೆ ಬರುವ ಜನರಿಗೆ ಅನುಕೂಲವಾಗಲಿದೆ. ಲಾಲ್ ಬಾಗ್ ಸುತ್ತ ಮುತ್ತ ಪಾರ್ಕಿಂಗ್ ವ್ಯವಸ್ಥೆಯನ್ನೂ ಮಾಡಲಾಗಿದ್ದು ಜನರು ಪರದಾಡುವ ಕಷ್ಟವಿರುವುದಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+