ಎಚ್ಡಿಕೆ ಮಾಡಿದ ಸಹಾಯದಿಂದ ಬೇಕರಿ ಆರಂಭಿಸಿದ ಸವಿತಾ
ಬೆಂಗಳೂರು, ಜೂನ್ 09 : ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅವರು ದಲಿತ ಮಹಿಳೆ ಸವಿತಾ ಅವರು ಆರಂಭಿಸಿರುವ ನೂತನ ಬೇಕರಿಯನ್ನು ಉದ್ಘಾಟಿಸಿದರು. ಸವಿತಾ ಅವರು ಮುಖ್ಯಮಂತ್ರಿಗಳ ಜನತಾ ದರ್ಶನ ಕಾರ್ಯಕ್ರಮಕ್ಕೆ ಬಂದಾಗ ಅವರ ಮೇಲೆ ಪೊಲೀಸರು ದೌರ್ಜನ್ಯ ನಡೆಸಿದ್ದಾರೆ ಎಂಬ ಆರೋಪವಿದೆ.
ನೊಂದ ಮಹಿಳೆಗೆ ಸಹಾಯ ಮಾಡಲು ಸರ್ಕಾರಕ್ಕೆ ಕುಮಾರಸ್ವಾಮಿ ಅವರು ಮೂರು ದಿನಗಳ ಗಡುವು ನೀಡಿದ್ದರು. ಆದರೆ, ಸರ್ಕಾರ ಸಹಾಯ ಮಾಡಿರಲಿಲ್ಲ. ಕುಮಾರಸ್ವಾಮಿ ಅವರು ಸವಿತಾ ಅವರ ಜೀವನ ನಿರ್ವಹಣೆಗಾಗಿ ಬೇಕರಿ ಸ್ಥಾಪನೆ ಮಾಡಲು 2 ಲಕ್ಷ ರೂ.ಗಳ ಸಹಾಯ ಮಾಡಿದ್ದರು. [ದಲಿತ ಮಹಿಳೆಗೆ ಆರ್ಥಿಕ ಸಹಾಯ ಮಾಡಿದ]

ಕುಮಾರಸ್ವಾಮಿ ಅವರು ಮಾಡಿದ ಹಣದ ಸಹಾಯದಿಂದ ಸವಿತಾ ಅವರು 'ಎಸ್ ಮೈ ಬೇಕರಿ ಮತ್ತು ಕಾಂಡಿಮೆಂಟ್ಸ್ ಜ್ಯೂಸ್ ಮತ್ತು ಚಾಟ್ಸ್' ಎಂಬ ಬೇಕರಿ ತೆರೆದಿದ್ದಾರೆ. ಗುರುವಾರ ಕುಮಾರಸ್ವಾಮಿ ಅವರು ಬೇಕರಿಯನ್ನು ಉದ್ಘಾಟನೆ ಮಾಡಿದರು. [ಮಹಿಳೆಗೆ ಕಿರುಕುಳ, ಸರ್ಕಾರಕ್ಕೆ ಗಡುವು ಕೊಟ್ಟ ಎಚ್ಡಿಕೆ]
ಯಾರು ಈ ಸವಿತಾ? : ಬೆಂಗಳೂರಿನ ಹೊಸಹಳ್ಳಿ ನಿವಾಸಿ ಸವಿತಾ ಅವರು ಮೇ 17ರಂದು ಜನತಾ ದರ್ಶನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಲು ಹೋಗಿದ್ದರು. ಆದರೆ, ಮುಖ್ಯಮಂತ್ರಿಗಳ ಗೃಹ ಕಚೇರಿ ಬಳಿ ಇದ್ದ ಪೊಲೀಸರು ರಾತ್ರಿ 8 ಗಂಟೆಯ ತನಕ ಸವಿತಾ ಮುಖ್ಯಮಂತ್ರಿಗಳನ್ನು ಭೇಟಿ ಮಾಡಲು ಅವಕಾಶ ಕೊಟ್ಟಿರಲಿಲ್ಲ.

ಸವಿತಾ ಅವರನ್ನು ಸಿಎಂ ಮನೆ ಬಳಿಯಿಂದ ಹೈಗೌಂಡ್ಸ್ ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿ ಅಮಾನವೀಯವಾಗಿ ವರ್ತಿಸಲಾಗಿದೆ. ವೇಶ್ಯಾವಾಟಿಕೆ ಕೇಸು ದಾಖಲು ಮಾಡುವುದಾಗಿ ಬೆದರಿಸಿ ಪೊಲೀಸರು ದೌರ್ಜನ್ಯ ನಡೆಸಿದ್ದಾರೆ ಎಂಬುದು ಆರೋಪ.
ಧರಣಿ ನಡೆಸುವ ಎಚ್ಚರಿಕೆ : ಸವಿತಾ ಅವರಿಗೆ ಸಹಾಯ ಮಾಡಲು ಕುಮಾರಸ್ವಾಮಿ ಅವರು ಸರ್ಕಾರಕ್ಕೆ ಮೂರು ದಿನಗಳ ಗಡುವು ನೀಡಿದ್ದರು. ಆದರೆ, ಸರ್ಕಾರ ಸಹಾಯ ಮಾಡಿಲ್ಲ. 'ಚುನಾವಣೆ ಇರುವುದರಿಂದ ಮುಖ್ಯಮಂತ್ರಿಗಳ ಮನೆ ಮುಂದೆ ಧರಣಿ ನಡೆಸುವುದನ್ನು ಮುಂದೂಡಿದ್ದೇನೆ. ಮಹಿಳೆಗೆ ನ್ಯಾಯ ಸಿಗದಿದ್ದರೆ ಧರಣಿ ನಡೆಸುವುದು ಖಂಡಿತ' ಎಂದು ಕುಮಾರಸ್ವಾಮಿ ಕೆಲವು ದಿನಗಳ ಹಿಂದೆ ಹೇಳಿದ್ದರು.













Click it and Unblock the Notifications