ಪೀಣ್ಯದ ಬಸವೇಶ್ವರ ಬಸ್ ನಿಲ್ದಾಣ ಹೇಗಿದೆ ಗೊತ್ತೆ?
ಬೆಂಗಳೂರು, ಸೆ. 13 : ಸದಾ ಜನರಿಂದ ತುಂಬಿ ತುಳುಕುವ ಮೆಜೆಸ್ಟಿಕ್ ಬಸ್ ನಿಲ್ದಾಣ ನೋಡಿದ ಜನರು ಪೀಣ್ಯದ ಬಸವೇಶ್ವರ ಬಸ್ ನಿಲ್ದಾಣಕ್ಕೆ ಹೋದರೆ ಮನಃಶಾಂತಿ ಸಿಗುತ್ತದೆ. ಕೆಎಸ್ಆರ್ಟಿಸಿ ಪೀಣ್ಯದಲ್ಲಿ ನೂತನವಾಗಿ ನಿರ್ಮಿಸಿರುವ ಬಸ್ ನಿಲ್ದಾಣ ಮೂರು ದಿನಗಳ ಹಿಂದೆ ಕಾರ್ಯಾರಂಭ ಮಾಡಿದೆ. ಆದರೆ, ಜನ ಸಂಚಾರ ವಿರಳವಾಗಿದೆ.
ಸೆ.10ರಿಂದ ಪೀಣ್ಯದ ಬಸವೇಶ್ವರ ಬಸ್ ನಿಲ್ದಾಣ ಕಾರ್ಯಾರಂಭ ಮಾಡಿದ್ದು, ಉತ್ತರ ಕರ್ನಾಟಕದ ಕಡೆ ಸಾಗುವ 146 ವೇಗದೂತ ಬಸ್ಸುಗಳು ಇಲ್ಲಿಂದ ಕಾರ್ಯನಿರ್ವಹಿಸುತ್ತಿವೆ. ಕೆಂಪೇಗೌಡ ಬಸ್ ನಿಲ್ದಾಣದಿಂದ ಪೀಣ್ಯಕ್ಕೆ ಸಾಗಲು ಕೆಎಸ್ಆರ್ಸಿ ಸಂಪರ್ಕ ಸಾರಿಗೆ ಬಸ್ಸುಗಳ ವ್ಯವಸ್ಥೆ ಮಾಡಿದ್ದು 15 ರೂ. ಪ್ರಯಾಣ ದರ ನಿಗದಿಗೊಳಿಸಲಾಗಿದೆ. [ಬಸ್ ಹತ್ತಲು ಇಂದಿನಿಂದ ಪೀಣ್ಯಕ್ಕೆ ಹೋಗಿ]
ಮೂರು ಮಹಡಿಯ ಪೀಣ್ಯದ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಅಗತ್ಯ ಮೂಲಭೂತ ಸೌಕರ್ಯ ಒದಗಿಸಲಾಗಿದೆ. ಮಾಲ್, ಅಂಗಡಿಗಳು ಇನ್ನು ತೆರೆಯಬೇಕಾಗಿದ್ದು, ಸದ್ಯ ಕದಂಬ ಎರಡು ಅಂಗಡಿಗಳನ್ನು ತೆರೆದಿದೆ. ಶೌಚಾಲಯ, ಕುಡಿಯುವ ನೀರು ಸೇರಿದಂತೆ ಪ್ರತಿಯೊಂದು ಸೌಲಭ್ಯಗಳು ಪ್ರಯಾಣಿಕರಿಗೆ ಲಭ್ಯವಿದೆ.
ಮೊದಲ ಹಂತದಲ್ಲಿ ಚಿತ್ರದುರ್ಗ, ಸಿರಿಗೆರೆ, ದಾವಣಗೆರೆ, ಹರಿಹರ, ಹರಪನಹಳ್ಳಿ, ಹೂವಿನಹಡಗಲಿ, ರಾಣೆಬೆನ್ನೂರು, ಹಿರೇಕೆರೂರು, ಬ್ಯಾಡಗಿ, ಹಾವೇರಿ, ಹಾನಗಲ್, ಸವಣೂರು, ಹುಬ್ಬಳ್ಳಿ, ಗದಗ, ಧಾರವಾಡ, ಬೆಳಗಾವಿ, ಸಂಕೇಶ್ವರ, ಕೊಲ್ಲಾಪುರ, ಲಕ್ಷ್ಮೇಶ್ವರ, ರೋಣ, ನರಗುಂದ, ಸವದತ್ತಿ, ಬೈಲಹೊಂಗಲ, ಖಾನಾಪುರ ಮುಂತಾದ ಕಡೆ ಸಾಗುವ ಬಸ್ಸುಗಳು ಪೀಣ್ಯದಿಂದ ಸಂಚರಿಸುತ್ತಿವೆ. ಪೀಣ್ಯ ಬಸ್ ನಿಲ್ದಾಣ ಹೇಗಿದೆ ನೋಡೋಣ ಬನ್ನಿ

ಪೀಣ್ಯ ಬಸ್ ನಿಲ್ದಾಣ ಖಾಲಿ-ಖಾಲಿ
ಮೂರು ದಿನಗಳ ಹಿಂದೆ ಕಾರ್ಯಾರಂಭ ಮಾಡಿರುವ ಪೀಣ್ಯದ ಬಸವೇಶ್ವರ ಬಸ್ ನಿಲ್ದಾಣದಲ್ಲಿ ಜನ ಸಂಚಾರ ವಿರಳವಾಗಿದೆ. ಬಸ್ ಚಾಲಕರು, ನಿರ್ವಾಹಕರು ಕೆಲವು ಅಧಿಕಾರಿಗಳನ್ನು ಹೊರತು ಪಡಿಸಿದರೆ ಬಸ್ ನಿಲ್ದಾಣದ ರಕ್ಷಣೆಗೆ ನಿಂತಿರುವ ಪೊಲೀಸರು ಮಾತ್ರ ನಿಮಗೆ ಕಾಣಿಸುತ್ತಾರೆ. ನಿಲ್ದಾಣದ ಕೆಲವು ಭಾಗಗಳ ಕಾಮಗಾರಿ ನಡೆಯುತ್ತಿರುವದರಿಂದ ಕಾರ್ಮಿಕರು ಕಾಣಸಿಗುತ್ತಾರೆ.

ಮೆಜೆಸ್ಟಿಕ್ನಿಂದ ಸಂಪರ್ಕ ಸಾರಿಗೆ
ಕೆಂಪೇಗೌಡ ಬಸ್ ನಿಲ್ದಾಣದಿಂದ ಪೀಣ್ಯದ ಬಸವೇಶ್ವರ ಬಸ್ ನಿಲ್ದಾಣಕ್ಕೆ ತೆರಳಲು ಹಗಲು ಹೊತ್ತಿನಲ್ಲಿ ಪ್ರತಿ 15 ನಿಮಿಷಕ್ಕೊಮ್ಮೆ, ರಾತ್ರಿ 30 ನಿಮಿಷಕ್ಕೊಮ್ಮೆ ಸಂಪರ್ಕ ಸಾರಿಗೆ ಬಸ್ ವ್ಯವಸ್ಥೆ ಕಲ್ಪಿಸಲಾಗಿದ್ದು ಇದರಲ್ಲಿ ತೆರಳಲು 15 ರೂ. ಪ್ರಯಾಣ ದರ ನೀಡಬೇಕಾಗಿದೆ.

ಬಿಎಂಟಿಸಿಯಿಂದಲೂ ಬಸ್
ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಸಹ ಪೀಣ್ಯದ ಬಸವೇಶ್ವರ ಬಸ್ ನಿಲ್ದಾಣಕ್ಕೆ ಸಂಪರ್ಕ ಸೇವೆ ಒದಗಿಸುತ್ತಿದೆ. ಸದ್ಯ ಮಾರ್ಕೆಟ್, ಬೊಮ್ಮನಹಳ್ಳಿ, ಮೆಜೆಸ್ಟಿಕ್ ನಿಂದ ಪೀಣ್ಯಕ್ಕೆ ಬಸ್ ಸೌಲಭ್ಯವಿದೆ. ಸೆ.15ರ ಸೋಮವಾರದಿಂದ ನಗರದ ವಿವಿಧ ಪ್ರದೇಶಗಳಿಂದ ಬಸ್ ಸಂಪರ್ಕ ಕಲ್ಪಿಸಲಾಗುತ್ತದೆ ಎಂದು ಬಿಎಂಟಿಸಿ ತಿಳಿಸಿದೆ.

ಹೋಟೆಲ್ ಇನ್ನು ತೆರೆಯಬೇಕಾಗಿದೆ
ಕದಂಬ ಹೋಟೆಲ್ ಬಸವೇಶ್ವರ ಬಸ್ ನಿಲ್ದಾಣದಲ್ಲಿ ಆರಂಭಗೊಳ್ಳಲಿದೆ. ಸದ್ಯಕ್ಕೆ ಪ್ರಯಾಣಿಕರ ಅನುಕೂಲಕ್ಕಾಗಿ ಎರಡು ಸ್ಟಾಲ್ ಗಳನ್ನು ತೆರೆದಿದ್ದು ಕಾಫಿ, ಟೀ, ಹಾಲು, ಮಿನರಲ್ ವಾಟರ್ ಲಭ್ಯವಿದೆ. ತಿನ್ನಲು ಇಡ್ಲಿ ವಡೆ, ರೈಸ್ ಬಾತ್ ಸಿಗುತ್ತದೆ. ಕದಂಬ ದೊಡ್ಡ ಹೋಟೆಲ್ ತೆರೆದ ಬಳಿಕ ಊಟ ದೊರೆಯಲಿದೆ.

ಬುಕ್ಕಿಂಗ್ ಕೌಂಟರ್ ಇದೆ
ಬಸವೇಶ್ವರ ಬಸ್ ನಿಲ್ದಾಣದಿಂದ ಎಲ್ಲಿಗೆ ಸಾಗುವ ಬಸ್ಸುಗಳು ಲಭ್ಯವಾಗುತ್ತವೆ ಎಂದು ತಿಳಿಸಲು ವಿಚಾರಣಾ ಕೌಂಟರ್ ಮತ್ತು ಕೆಎಸ್ಆರ್ಟಿಸಿ ಬುಕ್ಕಿಂಗ್ ಕೌಂಟರ್ ಆರಂಭಿಸಲಾಗಿದೆ. ಆದರೆ, ನಿಲ್ದಾಣದಲ್ಲಿ ಎಟಿಎಂ ವ್ಯವಸ್ಥೆ ಇಲ್ಲ. ಆದ್ದರಿಂದ ಪೀಣ್ಯ ನಿಲ್ದಾಣಕ್ಕೆ ಹೋಗುವ ಮುನ್ನ ಜೇಬಿನಲ್ಲಿ ಹಣ ಇರಲಿ.

ಶೌಚಾಲಯ, ವಿಶ್ರಾಂತಿ ಕೊಠಡಿ ಇದೆ
ಬಸವೇಶ್ವರ ಬಸ್ ನಿಲ್ದಾಣದಲ್ಲಿ ಶೌಚಾಲಯ, ಮಹಿಳೆಯರಿಗೆ ವಿಶ್ರಾಂತಿ ಕೊಠಡಿ ಸಿದ್ದವಾಗಿದೆ. ಪ್ರಯಾಣಿಕರ ಅನುಕೂಲಕ್ಕಾಗಿ ಮತ್ತೆರಡು ಕೊಠಡಿಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ಪೊಲೀಸರು ನಿಲ್ದಾಣದ ರಕ್ಷಣೆಗೆ ನಿಂತಿದ್ದು, ನೀವು ಯಾವ ಸಮಯದಲ್ಲಿ ನಿಲ್ದಾಣಕ್ಕೆ ಹೋದರು ಭಯಪಡುವ ಅಗತ್ಯವಿಲ್ಲ.












Click it and Unblock the Notifications