'ಮರಳಿ ಗೂಡು ಸೇರುತ್ತೇವೆ' ಕಾಶ್ಮೀರದ ಗಾಯಕಿ ಕಣ್ತುಂಬಿ ಹೇಳಿದ ಮಾತು...
ಬೆಂಗಳೂರು, ಆಗಸ್ಟ್ 06: "ನಮ್ಮ ನಮ್ಮ ಮನೆಯನ್ನು ಮರಳಿ ಸೇರುವ ಕಾಲ ಕೊನೆಗೂ ಬಂದಿದೆ. ತವರಿನ ಹಾದಿ ಸುಗಮವಾಗಿದೆ. ಹೀಗೆ ಒಂದಲ್ಲ ಒಂದು ದಿನ ನಮ್ಮ ಗೂಡನ್ನು ಸೇರಬೇಕು ಎಂಬುದು ನನ್ನೊಬ್ಬಳದ್ದಲ್ಲ, ಪ್ರತಿ ಕಾಶ್ಮೀರಿಯ ಕನಸು..." ಹಾಗೆಂದು ಭಾವುಕರಾಗಿ ಬರೆದುಕೊಂಡಿದ್ದಾರೆ ಬೆಂಗಳೂರಿನಲ್ಲಿ ವಾಸವಿರುವ ಕಾಶ್ಮೀರಿ ಗಾಯಕಿ ಆಭಾ ಹಂಜುರಾ.
ಕೇಂದ್ರ ಸರ್ಕಾರವು ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ ಸಂವಿಧಾನದ 370 ನೇ ವಿಧಿಯನ್ನು ರದ್ದುಗೊಳಿಸುತ್ತಿದ್ದಂತೆಯೇ ತಮ್ಮ ಸಂತಸವನ್ನು ಮೈಕ್ರೋಬ್ಲಾಗಿಂಗ್ ಸೈಟ್ ಟ್ವಿಟ್ಟರ್ ನಲ್ಲಿ ಆಭಾ ಹೊರಹಾಕಿದ್ದಾರೆ.
"ನಾನು ಮೊಟ್ಟ ಮೊದಲ ಬಾರಿಗೆ ಸಾರ್ವಜನಿಕ ವೇದಿಕೆಯಲ್ಲಿ ಹಾಡಿದ್ದು ಶ್ರೀನಗರದಲ್ಲಿ. ಅದು ನನ್ನ ಜೀವನದ ಮರೆಯಲಾರದ ಘಟನೆ. ಇದು ವಿಧಿ ನಮ್ಮನ್ನು ಇಲ್ಲಿಯವರೆಗೆ ಕರೆತಂದಿದೆ. ಮತ್ತೆ ತವರನ್ನು ಸೇರುತ್ತೇವೆ, ಎಲ್ಲವೂ ಒಳಿತಾಗುತ್ತದೆ ಎಂಬ ಭರವಸೆ ನಮ್ಮದು" ಎನ್ನುತ್ತಾರೆ ಆಭಾ.

"ನನ್ನ ತಂದೆ ಪೋಸ್ಟಲ್ ಆಫೀಸ್ ನಲ್ಲಿ ಕೆಲಸ ಮಾಡಿ ಪೈಸೆ ಪೈಸೆಯನ್ನೂ ಕೂಡಿಟ್ಟು ಕಾಶ್ಮೀರದಲ್ಲಿ ಕಟ್ಟಿದ್ದ ಮನೆಯಲ್ಲಿ ಬದುಕುವ ಭಾಗ್ಯ ನಮ್ಮ ಹಣೆಯಲ್ಲಿರಲಿಲ್ಲ. ನಾವೆಲ್ಲ ಸಂಘರ್ಷದ ಶಿಶುವಾಗಿದ್ದೆವು. ನಾವು ನಮ್ಮದಲ್ಲದ ಕಾರಣದಿಂದ ನಮ್ಮ ಮನೆಯನ್ನು ಬಿಟ್ಟು ಬದುಕುತ್ತಿದ್ದೇವೆ. ಆ ಪರ್ವತ, ಆ ಚಳಿ ಎಲ್ಲವನ್ನೂ ನಾವು ಮಿಸ್ ಮಾಡಿಕೊಳ್ಳುತ್ತೇವೆ" ಎಂದು ಆಭಾ ಬರೆದೊಂಡಿದ್ದಾರೆ.












Click it and Unblock the Notifications