ತೀವ್ರಗೊಂಡ ಕಾವೇರಿ ಕಿಚ್ಚು:ಬಂಗಾರಪ್ಪನವರ ನಡೆ ಅನುಸರಿಸುವಂತೆ ಕರವೇ ಆಗ್ರಹ
ಬೆಂಗಳೂರು, ಸೆಪ್ಟೆಂಬರ್ 21: ಕಾವೇರಿ ಎಂದರೆ ಕರುನಾಡಿನ ಜನರಿಗೆ ಹೆತ್ತತಾಯಿಯಷ್ಟೇ ಪೂಜ್ಯನೀಯ. ತನ್ನ ನಂಬಿದ ರೈತರ ಕೈಹಿಡಿದು ಹರಸುವ ಕಾವೇರಿಗೆ ಇದೀಗ ಸಂಕಷ್ಟ ಶುರುವಾಗಿಬಿಟ್ಟಿದೆ. ಅಕಾಲಿಕ ಮಳೆಯಿಂದ ನೀರಿನ ಕೊರತೆ ಎದುರಾಗಿರುವ ಹೊತ್ತಲ್ಲೇ, ತಮಿಳುನಾಡಿಗೆ ಕಾವೇರಿ ನೀರು ನೀಡುವ ಬಗ್ಗೆ ಸುಪ್ರೀಂ ಕೋರ್ಟ್ ನೀಡಿದ ಆದೇಶ ಕಾವೇರಿ ಕಿಚ್ಚು ಕಾವೇರುವಂತೆ ಮಾಡಿದೆ.
ಅತ್ತ ಕೋರ್ಟ್ ಆದೇಶ ಹೊರಬೀಳುತ್ತಿದ್ದಂತೆ ರಾಜ್ಯಾದ್ಯಂತ ಕನ್ನಡಿಗರ ಕಿಚ್ಚು ಸ್ಫೋಟಗೊಂಡಿದ್ದರೆ, ಇತ್ತ ರಾಜ್ಯ ರಾಜಧಾನಿಯಲ್ಲಿ ಪ್ರತಿಭಟನೆ ನಡೆಸಿದ ಕರ್ನಾಟಕ ರಕ್ಷಣಾ ವೇದಿಕೆ, ರಾಜ್ಯಸರ್ಕಾರ ಹಾಗೂ ಕಾವೇರಿ ನೀರಾವರಿ ಪ್ರಾಧಿಕಾರದ ವಿರುದ್ಧ ರಣಕಹಳೆ ಮೊಳಗಿಸಿದೆ.

ಕನ್ನಡನಾಡಿನ ಜೀವನದಿಯಂತಿರುವ ಕಾವೇರಿ ವಿಚಾರವಾಗಿ ಕರುನಾಡಿಗೂ ಪಕ್ಕದ ತಮಿಳುನಾಡಿಗೂ ಶತ ಶತಮಾನಗಳಿಂದ ವಿವಾದ ನಡೆಯುತ್ತಲೇ ಬಂದಿದೆ. ಇದೀಗ ರಾಜ್ಯದಲ್ಲಿ ಮುಂಗಾರು ಮಳೆ ಕೈಕೊಟ್ಟು ಬರದ ಸ್ಥಿತಿ ನಿರ್ಮಾಣವಾಗಿರುವ ಹೊತ್ತಲ್ಲೇ ತಮಿಳುನಾಡಿಗೆ ನೀರು ಕೇಳುತ್ತಿರುವುದು ಕಾವೇರಿ ವಿವಾದಕ್ಕೆ ಮತ್ತೆ ಕಿಚ್ಚುಹಚ್ಚಿದೆ. ಇತ್ತ ಇಂದು ಕಾವೇರಿ ವಿಚಾರವಾಗಿ ಸುಪ್ರೀಂ ಕೋರ್ಟ್ ನೀಡಿರುವ ಆದೇಶ ಕನ್ನಡಿಗರನ್ನು ಮತ್ತಷ್ಟು ಕೆರಳಿಸಿದ್ದು, ರಾಜ್ಯಾದ್ಯಂತ ಕಾವೇರಿ ಕಿಚ್ಚು ಮತ್ತಷ್ಟು ಕಾವು ಪಡೆದುಕೊಂಡಿದೆ.
ಸದ್ಯ ತಮಿಳುನಾಡಿಗೆ ನೀರು ಬಿಡಬೇಕಾ, ಬೇಡವಾ ಎನ್ನುವ ವಿಚಾರವಾಗಿ ವಿಚಾರಣೆ ನಡೆಸಿದ ಸುಪ್ರೀಂ ಮುಂದಿನ 15 ದಿನಗಳವರೆಗೆ ತಮಿಳುನಾಡಿಗೆ 5 ಸಾವಿರ ಕ್ಯೂಸೆಕ್ ನೀರು ನೀಡುವಂತೆ ಆದೇಶ ನೀಡಿದ್ದಕ್ಕೆ ಕರುನಾಡಿನಾದ್ಯಂತ ಕನ್ನಡಿಗರು ಅಸಮಾಧಾನ ಹೊರಹಾಕಿದ್ದಾರೆ.
ಇತ್ತ ರಾಜ್ಯ ರಾಜಧಾನಿ ಬೆಂಗಳೂರಲ್ಲಿ ಪ್ರತಭಟನೆ ನಡೆಸಿದ ಕರವೇ ನಾರಾಯಣಗೌಡರ ಬಣ, ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ಯತ್ನಿಸಿ ಪೊಲೀಸರ ವಶಕ್ಕೆ ಸಿಲುಕಿದ್ದಾರೆ. ಕರುನಾಡಿಗೆ ಸುಪ್ರೀಂ ಕೋರ್ಟ್ ಮರಣ ಶಾಸನ ನೀಡಿದೆ ಅಂತಾ ಆಕ್ರೋಶ ಹೊರಹಾಕಿರುವ ಕರವೇ, ಈ ಬಗ್ಗೆ ರಾಜ್ಯಾದ್ಯಂತ ಹೋರಾಟ ನಡೆಸಲು ಸಜ್ಜಾಗಿದೆ. ಅಲ್ಲದೇ ಹೋರಾಟವನ್ನು ಮತಷ್ಟು ತೀವ್ರಗೊಳಿಸೋದಕ್ಕೂ ಸಿದ್ಥತೆ ಮಾಡಿಕೊಳ್ಳುತ್ತಿದೆ.
ಸದ್ಯ ರಾಜ್ಯದಲ್ಲಿ ಬರಗಾಲದ ಸ್ಥಿತಿ ನಿರ್ಮಾಣವಾಗಿರುವ ಹೊತ್ತಲ್ಲೇ, ಕಾವೇರಿ ನೀರಾವರಿ ನಿಗಮ ಹಾಗೂ ಸರ್ಕಾರ ನೀರು ಕೊಡಲು ಸಜ್ಜಾಗಿರೋದಕ್ಕೆ ಕರವೇ ಆಕ್ರೋಶ ಹೊರಹಾಕಿದೆ. ಈ ಹಿಂದೆ ಬಂಗಾರಪ್ಪ ಮುಖ್ಯಮಂತ್ರಿಯಾಗಿದ್ದಾಗ ಕಾವೇರಿಗಾಗಿ ಸುಗ್ರೀವಾಜ್ಞೆ ಹೊರಡಿಸಿದ್ದರು. ಅದರಂತೆ ಈಗ ಇರೋ ಸರ್ಕಾರ ಕೂಡ ನಡೆದುಕೊಳ್ಳಲಿ, ಇಲ್ಲದಿದ್ದರೆ ಉಗ್ರ ಹೋರಾಟ ನಡೆಸುತ್ತಿವೆ ಎಂದು ಕರವೇ ಸರ್ಕಾರಕ್ಕೆ ಎಚ್ಚರಿಕೆ ನೀಡಿದೆ.
ಒಟ್ಟಿನಲ್ಲಿ ಕಳೆದ 2-3 ತಿಂಗಳಿನಿಂದ ಸ್ವಲ್ಪ ಸ್ವಲ್ಪವೇ ಹೊಗೆಯಾಡ್ತಿದ್ದ ಕಾವೇರಿ ಕಿಚ್ಚು, ಇದೀಗ ಜ್ವಾಲಾಮುಖಿಯಾಗಿ ಸ್ಫೋಟಗೊಳ್ಳುವ ಲಕ್ಷಣಗಳು ಕಂಡುಬರುತ್ತಿದೆ. ನೀರಿಗಾಗಿ ಪರಿತಪಿಸುತ್ತಿರುವ ರಾಜ್ಯದ ಜನರಿಗೆ ಸುಪ್ರೀಂ ಆದೇಶ ಇದೀಗ ಬರಿಸಿಡಿಲು ಬಡಿದಂತಾಗಿದ್ದು, ಸದ್ಯ ಕಾವು ಪಡೆದಿರುವ ಕಾವೇರಿ ಹೋರಾಟ ಎಲ್ಲಿಗೆ ಹೋಗಿ ಮುಟ್ಟುತ್ತದೆ ಎನ್ನುವುದನ್ನು ಕಾದುನೋಡಬೇಕಿದೆ.












Click it and Unblock the Notifications