ಶಕ್ತಿ ಯೋಜನೆ: ಪ್ರಯಾಣಿಕರಿಲ್ಲದೇ ಖಾಸಗಿ ಬಸ್ ಖಾಲಿ ಖಾಲಿ, ಮಾಲೀಕರಿಗೆ ಆದಾಯ ಹೊಡೆತದ ಆತಂಕ
ಬೆಂಗಳೂರು, ಜೂನ್ 12: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಪ್ರಯಾಣಿಕರಿಲ್ಲದೇ ಖಾಸಗಿ ಬಸ್ಗಳು ಭಾನುವಾರ ಖಾಲಿ ಹೊಡೆದಿವೆ. ನಿತ್ಯ ಬಸ್ ತುಂಬ ಪ್ರಯಾಣಿಕರನ್ನು ನೋಡುತ್ತಿದ್ದ ಖಾಸಗಿ ಬಸ್ ಚಾಲಕ-ನಿರ್ವಾಹಕರು ಆದಾಯಕ್ಕೆ ಶಕ್ತಿ ಯೋಜನೆಯಿಂದ ಕತ್ತರಿ ಬೀಳುವ ಆತಂಕದಲ್ಲಿದ್ದಾರೆ. ರಾಜ್ಯದ ಖಾಸಗಿ ಸಾರಿಗೆ ವ್ಯವಸ್ಥೆ ಪರಿಸ್ಥಿತಿಯೂ ಹೀಗೆ ಆಗಲಿದೆ.
ಕರ್ನಾಟಕದಲ್ಲಿ 'ಶಕ್ತಿ ಯೋಜನೆ'ಯಿಂದಾಗಿ ಖಾಸಗಿ ಬಸ್ಗಳು ಖಾಲಿ ಹೊಡೆಯುತ್ತಿವೆ. ರಾಜ್ಯ ಕಾಂಗ್ರೆಸ್ ಸರ್ಕಾರ ಕರ್ನಾಟಕದಲ್ಲಿ ನೆನ್ನೆ ಭಾನುವಾರ (ಜೂನ್ 11) ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಅವಕಾಶ ಮಾಡಿಕೊಡುವ ಶಕ್ತಿ ಯೋಜನೆಗೆ ಮುಖ್ಯಮಮತ್ರಿ ಸಿದ್ದರಾಮಯ್ಯ ಚಾಲನೆ ನೀಡಿದ್ದಾರೆ.

ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಯೋಜನೆಯ ಪರಿಣಾಮವನ್ನು ಖಾಸಗಿ ಬಸ್ ನಿರ್ವಾಹಕರು ಅನುಭವಿಸುತ್ತಿದ್ದಾರೆ.
ಬೆಂಗಳೂರಿನ ಮಧ್ಯಭಾಗದ ಸಾರಿಗೆ ಕೇಂದ್ರವಾದ ಕಲಾಸಿಪಾಳ್ಯದಲ್ಲಿ ಪಾವಗಡಕ್ಕೆ ತೆರಳುವ ಖಾಸಗಿ ಬಸ್ನಲ್ಲಿ ನಿತ್ಯ 25-30 ಮಂದಿ ಪ್ರಯಾಣಿಕರು ಇರುತ್ತಿದ್ದರು. ಆದರೆ ಉಚಿತ ಪ್ರಯಾಣ ಯೋಜನೆಯಿಂದಾಗಿ ಭಾನುವಾರ ಆ ಬಸ್ನಲ್ಲಿ ಇಬ್ಬರು ಮಾತ್ರವೇ ಇದ್ದರು. ಆ ಖಾಸಗಿ ಬಸ್ ಚಾಲಕ ಮಂಜುನಾತ್ ತಮಗೆ ಬಂದ ದುಸ್ಥಿತಿ ಬಗ್ಗೆ ಅಳಲು ತೋಡಿಕೊಂಡರು.
ಸಕಾರಿ ಬಸ್ಗಳತ್ತ ವಾಲಿದ ಪ್ರಯಾಣಿಕರು
ನಿತ್ಯವು ಖಾಸಗಿ ಬಸ್ಗಳಲ್ಲಿ ಓಡಾಡುತ್ತಿದ್ದ ಮಹಿಳೆಯರಿಗೆ ಉಚಿತ ಪ್ರಯಾಣ ಸೌಲಭ್ಯ ಜಾರಿಯಾಗುತ್ತಿದ್ದಂತೆ ಭಾನುವಾರ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (KSRTC) ಬಸ್ ಗಳನ್ನು ಹತ್ತಲು ದೌಡಾಯಿಸಿದರು. ಇದರಿಂದ ಜನದಟ್ಟಣೆಯ ಮತ್ತು ಪ್ರಯಾಣಿಕರಿಂದ ತುಂಬಿರುತ್ತಿದ್ದ ಕಲಾಸಿಪಾಳ್ಯ, ಕೆ.ಆರ್ ಮಾರುಕಟ್ಟೆಯ ಖಾಸಗಿ ಬಸ್ ನಿಲ್ದಾಣವು ಭಾನುವಾರ ನಿರ್ಜನವಾಗಿದ್ದು ಕಂಡು ಬಂತು.
ಬೆಂಗಳೂರಿನಿಂದ ಕೋಲಾರ, ಚಿಕ್ಕಬಳ್ಳಾಪುರ ಭಾಗಕ್ಕೆ ನಿತ್ಯ ಪ್ರಯಾಣಿಕರನ್ನು ಕರೆದೊಯ್ಯತ್ತಿದ್ದ ಖಾಸಗಿ ಬಸ್ಗಳಲ್ಲಿ ಅಷ್ಟಾಗಿ ಪ್ರಯಾಣಿಕರು ಕಂಡು ಬರಲಿಲ್ಲ. ಮೊದಲ ದಿನವೇ ಖಾಸಗಿ ಬಸ್ ಮಾಲೀಕರಿಗೆ ಇಂತದ್ದೊಂದು ಅನುಭವ ಎದುರಿಸಿದರು. KSRTC ಬಸ್ನತ್ತ ದೌಡಾಯಿಸಿದ ಪ್ರಯಾಣಿಕರು ಮೆಜೆಸ್ಟಿಕ್ ಟರ್ಮಿನಲ್ ಗೆ ತೆರಳಲು ಸಹ ಉಚಿತವಿದ್ದ ಬಿಎಂಟಿಸಿ ಬಸ್ಗಳನ್ನೇ ಏರಿದರು. ಇದರಿಂದಾಗಿ ಖಾಸಗಿ ಬಸ್ ಆದಾಯಕ್ಕೆ ಕತ್ತರಿ ಬಿದ್ದಿದೆ.
ಖಾಸಗಿ ಬಸ್ ಚಾಲಕ/ನಿರ್ವಾಹಕರ ಅಳಲು ಏನು?
ಅದಲ್ಲದೇ ವಾರದ ಏಳು ದಿನಗಳು ಸಹ ಖಾಸಗಿ ಬಸ್ಗಳು ಸಂಚಾರ ಸೇವೆ ನೀಡುತ್ತವೆ. ಅವುಗಳನ್ನೇ ನಂಬಿಕೊಂಡು ಲಕ್ಷಾಂತರ ಜನ ಬದುಕುತ್ತಿದ್ದಾರೆ. ಸದ್ಯ ಜಾರಿಯಾದ ಶಕ್ತಿ ಯೋಜನೆಯಿಂದ ಮುಂದಿನ ದಿನಗಳಲ್ಲಿ ನಮ್ಮ ಆದಾಯದ ಮೇಲೆ ಗಂಭೀರ ಪರಿಣಾಮ ಬೀರಲಿದೆ ಎಂದು ಮತ್ತೊಬ್ಬ ಖಾಸಗಿ ಬಸ್ ಚಾಲಕರೊಬ್ಬರು ತಿಳಿಸಿದರು.
ಕೋಲಾರದ ಮುಳಬಾಗಲಿನಿಂದ ಕಲಾಸಿಪಾಳ್ಯಕ್ಕೆ ನಿತ್ಯ ವೃದ್ಧೆ ಯೊಬ್ಬರು ಓಡಾಡುತ್ತಾರೆ. ನನ್ನ ಮನೆಯ ಸಮೀಪವೇ ಖಾಸಗಿ ಬಸ್ ನಿಲ್ಲುವುದರಿಂದ ನಾನು ಅದರಲ್ಲಿಯೇ ನಗರಕ್ಕೆ ತೆರಳುತ್ತಿದ್ದ, ಅದಕ್ಕಾಗಿ ನಾನು ವಾರಕ್ಕೆ ಸುಮಾರು 500 ರೂಪಾಯಿ ಖರ್ಚು ಮಾಡುತ್ತಿದ್ದೆ. ಇದೀಗ ಸರ್ಕಾರಿ ಬಸ್ಳಲ್ಲಿ ಸರ್ಕಾರ ಉಚಿತ ಪ್ರಯಾಣ ಎಂದು ಹೇಳಿದೆ. ಹೀಗಾಗಿ ನಾನು ಅವುಗಳಲ್ಲಿಯೇ ಪ್ರಯಾಣ ಮಾಡಲು ಬಯಸುತ್ತೇನೆ ಇದರಿಂದ ಹಣ ಉಳಿಯಲಿದೆ ಎಂದು ಆ ವೃದ್ಧೆ ಅಭಿಪ್ರಯಾ ಹಂಚಿಕೊಂಡರು.
ಖಾಸಗಿಯವರಿಗೆ ಸರ್ಕಾರದ ಈ ಯೋಜನೆಯಿಂದ ಆರ್ಥಿಕ ನಷ್ಟವಾಗುತ್ತದೆ. ಹೆಣ್ಣು ಮಕ್ಕಳೊಂದಿಗೆ ಪ್ರಯಾಣಿಸುವ ಕುಟುಂಬಗಳು ಪ್ರಯಾಣ ದರ ಉಳಿಸಲು ಸರ್ಕಾರಿ ಸಾರಿಗೆಯನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಮಧ್ಯಮ ಮತ್ತು ಬಡವರಿಗೆ ನಿತ್ಯ 10 ರೂಪಾಯಿ ಉಳಿಯುವ ದಾರಿಯನ್ನೆ ಕಂಡು ಕೊಳ್ಳುತ್ತಾರೆ. ಅಂತದರಲ್ಲಿ ಉಚಿತ ಪ್ರಯಾಣ ಎಂದಾದರೆ ಖಾಸಗಿ ಬಸ್ಗಳತ್ತ ತಿರುಗಿ ಸಹ ನೋಡುವುದಿಲ್ಲ.
ಇನ್ನೂ ಡೀಸೆಲ್/ಪೆಟ್ರೋಲ್ ಬೆಲೆ ಹೆಚ್ಚಾಗುತ್ತಿದೆ. ಸಾರಿಗೆ ನಿರ್ವಹಣೆ ಖಾಸಗಿಯವರಿಗೆ ಹೊರೆಯಾದ ಇಂತಹ ಸಂದರ್ಭದಲ್ಲಿ ಪ್ರಯಾಣಿಕರ ಓಲೈಕೆಗಾಗಿ ಪ್ರಯಾಣ ಬೆಲೆ ಸಹ ಇಳಿಕೆ ಮಾಡಲು ಸಾಧ್ಯವಿಲ್ಲ. ಹೀಗಾದರೆ ನಮ್ಮ ಬದುಕಿನ ಗತಿ ಏನು?.
ನೂರಾರು ಖಾಸಗಿ ಬಸ್ ನಿರ್ವಾಹಕರು, ಚಾಲಕರು, ಬಸ್ ಮಾಲೀಕರು ಜೀವನ ನಿರ್ವಹಣೆಗೆ ದುಸ್ತರವಾಗಲಿದೆ. ನಮತ್ತ ವಿಶೇಷ ಗಮನ ಹರಿಸಬೇಕು. ನಮ್ಮ ಅಳಲುಗಳನ್ನು ಕೇಳಬೇಕು ಎಂಬ ಆಗ್ರಹ ಖಾಸಗಿ ಬಸ್ ಚಾಲಕ/ನಿರ್ವಾಹಕರಿಂದ ಕೇಳಿ ಬರುತ್ತಿದೆ.












Click it and Unblock the Notifications