Bengaluru 2nd International Airport: ಕರ್ನಾಟಕ ಸರ್ಕಾರದಿಂದ ಶೀಘ್ರವೇ ಮಹತ್ವದ ನಿರ್ಧಾರ ಘೋಷಣೆ?
ಬೆಂಗಳೂರು, ಜುಲೈ 19: ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ (ಕೆಐಎ) ಮೇಲೆ ವರ್ಷದಿಂದ ವರ್ಷಕ್ಕೆ ಪ್ರಯಾಣಿಕರ ಒತ್ತಡ ಹೆಚ್ಚಾಗುತ್ತಿದೆ. ಇದಕ್ಕೆ ಪರ್ಯಾಯವಾಗಿ 2ನೇ ವಿಮಾನ ನಿಲ್ದಾಣ ನಿರ್ಮಿಸಲು ಕರ್ನಾಟಕ ಸರ್ಕಾರ ಮೂರು ಜಾಗಗಳನ್ನು ಅಂತಿಮಗೊಳಿಸಿದೆ. ಈ ನಿಟ್ಟಿನಲ್ಲಿ ರಾಜ್ಯ ಪ್ರಯತ್ನ ತೀವ್ರಗೊಂಡಿದೆ. ಬೆಂಗಳೂರಿನಿಂದ 25 ಮತ್ತು 45 ಕಿಲೋ ಮೀಟರ್ ದೂರದ ಸ್ಥಳಗಳಲ್ಲಿ ಜಾಗ ಗುರುತಿಸಲಾಗಿದೆ.
ತಮಿಳುನಾಡಿಗೂ ಒಂದು ಹೆಜ್ಜೆ ಮುಂದಡಿ ಇಟ್ಟಿರುವ ರಾಜ್ಯ ಸರ್ಕಾರವು 2033ರ ಒಳಗಾಗಿ ಬೆಂಗಳೂರಿನ ಸಮೀಪ ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಿಸುವ ಉದ್ದೇಶ ಹೊಂದಿದೆ. ಈ ಸಂಬಂಧವೇ ನಗರದ ಕಗ್ಗಲಿಪುರ, ಹಾರೋಹಳ್ಳಿ ಮತ್ತು ಚಿಕ್ಕಸೋಲೂರು ಮೂರು ಪ್ರದೇಶಗಳನ್ನು ಆಯ್ಕೆ ಮಾಡಿದೆ ಎಂದು ಕೈಗಾರಿಕೆ ಸಚಿವ ಎಂಬಿ ಪಾಟೀಲ್ ಅವರು ತಿಳಿಸಿದ್ದಾರೆ. ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ (ಎಎಐ) ಈ ಸ್ಥಳಗಳ ಪರಿಶೀಲನೆ ಬಳಿಕ ಉಳಿ ಏಳು ಸ್ಥಳಗಳು ಪಟ್ಟಿಯಿಂದ ಹೊರಗುಳಿದವರು. ಸದ್ಯ ಎಎಐ ತಂಡದ ಅಂತಿಮ ವರದಿಗಾಗಿ ಕರ್ನಾಟಕ ಸರ್ಕಾರ ಕಾಯುತ್ತಿದೆ.

ವರದಿ ಮೂರು ತಿಂಗಳಿನಿಂದ ಬಾರದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವೇ ಈ ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣದ ಪ್ರಸ್ತಾವನೆಗೆ ತ್ವರಿತವಾಗಿ ಅನುಮೋದನೆ ನೀಡುವಂತೆ ಆಗ್ರಹಿಸಲಿದೆ. ಈ ಸಂಬಂಧ ಎಂಬಿ ಪಾಟೀಲ್ ಅವರು ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯದೊಂದಿಗೆ ಶೀಘ್ರವೇ ಮಾತನಾಡಲಿದ್ದಾರೆ. ಮುಂದಿನ ವಾರ ಅವರು ದೆಹಲಿಗೆ ತೆರಳುವ ನಿರೀಕ್ಷೆ ಇದೆ. ಅಲ್ಲಿಗೆ ಹೋಗಿ ಬಂದ ಬಳಿಕ ಮಹತ್ವದ ನಿರ್ಧಾರ ಕೈಗೊಳ್ಳಲಿದ್ದಾರೆ. ಯೋಜನೆ ಕುರಿತು ಪ್ರಮುಖ ಅಂಶಗಳನ್ನು ತಿಳಿಸಲಿದ್ದಾರೆ ಎನ್ನಲಾಗಿದೆ.
ಪಟ್ಟಿಯಿಂದ ಹೊರಗುಳಿದ ಜಾಗಗಳು ಮುನ್ನೆಲೆಗೆ..
ಬೆಂಗಳೂರಿನ ತ್ವರಿತ ಪ್ರಯಾಣಿಕರ ದಟ್ಟಣೆ ಕಾರಣದಿಂದಾಗಿ ಈ ಹೊಸ ವಿಮಾನ ನಿಲ್ದಾಣ ಯೋಜನೆಗೆ 4,500 ಎಕರೆ ಜಾಗದ ಅಗತ್ಯವಿದೆ. ವರದಿ ಸಲ್ಲಿಸಿದರೆ ಮೂರು ಸ್ಥಳದಲ್ಲಿ ಒಂದು ಕಡೆ ಜಾಗ ಫೈನಲ್ ಆಗುತ್ತೆ ಎಂದು ಭಾವಿಸಲಾಗಿತ್ತು. ಆದರೆ ತಜ್ಞರು ಈ ಮೂರು ಸ್ಥಳಗಳಲ್ಲಿ ನಿರ್ಮಾಣ ಮಾಡುವುದು ಸೂಕ್ತ ಅಲ್ಲ ಎಂದಿದ್ದಾರೆ. ಬೆಂಗಳೂರು-ಮೈಸೂರು ನಡುವೆ ನಿರ್ಮಿಸಲು ಸಲಹೆ ನೀಡಿದ್ದಾರೆ. ಹೀಗಾಗಿ ಪಟ್ಟಿಯಿಂದ ಹೊರಗುಳಿದ ಶಿರಾ, ಚಿತ್ರದುರ್ಗ, ಹಾಸನ ರಸ್ತೆ ಇನ್ನಿತರ ಸ್ಥಳಗಳ ಹೆಸರು ಮತ್ತೆ ಮುನ್ನೆಲೆಗೆ ಬಂದಿವೆ. ಈ ಬಗ್ಗೆ ಚರ್ಚೆಗಳು ಶುರುವಾಗಿದ್ದು, ಇನ್ನೇನು ಅವು ಸಹ ಬಹಿರಂಗಗೊಳ್ಳಲಿವೆ.

ಇನ್ನೂ ಇದೇ ರೀತಿ ಎರಡನೇ ಏರ್ಪೋರ್ಟ್ ನಿರ್ಮಿಸಲು ತಮಿಳುನಾಡು ಹಾತೊರೆಯುತ್ತಿದೆ. ಹೊಸೂರು ಸೇರಿ ವಿವಿಧ ಕಡೆ ಗುರುತಿಸಿದ್ದ ಜಾಗ ಪರಿಶೀಲಿಸಿದ ಎಎಐ ತಂಡ ವರದಿ ನೀಡಿದ್ದಾರೆ. ಅವರು ಯೋಜನೆ ಕಾರ್ಯ ತ್ವರಿತಗೊಳಿಸಿದ್ದಾರೆ. ಅಲ್ಲಿ ಏರ್ಪೊರ್ಟ್ ನಿರ್ಮಿಸಿದರೆ ಬೆಂಗಳೂರಿನ ದೇವನಹಳ್ಳಿ ವಿಮಾನ ನಿಲ್ದಾಣದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ. ಇದರಿಂದ ಆರ್ಥಿಕತೆ, ಕೈಗಾರಿಕೆ ಇನ್ನಿತರ ವಲಯಗಳಿಗೆ ದೊಡ್ಡ ನಷ್ಟವಾಗಲಿದೆ ಎಂದು ಅಂದಾಜಿಸಲಾಗಿದೆ.
ಯೋಜನೆಗೆ ನಿರಾಕ್ಷೇಪಣಾ ಪ್ರಮಾಣಪತ್ರ ಅಗತ್ಯ
ಅಲ್ಲದೇ ಹೊಸೂರು ಬೆಂಗಳೂರಿನ ಹಾಲಿ ಏರ್ಪೊರ್ಟ್ (KIA) ನಿಂದ 150 ಕಿಲೋ ಮೀಟರ್ ದೂರದಲ್ಲಿದೆ. ಒಪ್ಪಂದ ಪ್ರಕಾರ, KIA ವ್ಯಾಪ್ತಿಯ 150 ಕಿ.ಮೀ.ಒಳಗೆ ಹೊಸ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಿಸುವಂತಿಲ್ಲ. ಯಾವುದೇ ನಿಯಮ ಉಲ್ಲಂಘಿಸುವಂತಿಲ್ಲ. ಯೋಜನೆ ಕೈಗೆತ್ತಿಕೊಳ್ಳಲೇಬೇಕಾದರೆ BIAL ನಿಂದ ನಿರಾಕ್ಷೇಪಣಾ ಪ್ರಮಾಣಪತ್ರ ಪಡೆಯಬೇಕಿರುತ್ತದೆ.
ಸರ್ಕಾರದಿಂದ ಎಚ್ಚರಿಕೆ ಹೆಜ್ಜೆ..
ಬೆಂಗಳೂರು ಎರಡನೇ ವಿಮಾನ ನಿಲ್ದಾಣ ಯೋಜನೆಗೆ ಉಂಟಾಗುತ್ತಿರುವ ಅಡಚಣೆಗಳೆಂದರೆ ಭೂಮಿ ಸ್ವಾಧೀನ ಸಮಸ್ಯೆ, ರೈತರಿಂದ ಸರ್ಕಾರಕ್ಕೆ ಭೂಮಿ ಹಂಚಿಕೆ ವಿಚಾರದಲ್ಲಿ ಎದುರಾದ ಸವಾಲು. ಇತರ ಸಂಘರ್ಷಗಳು ಸಹ ಯೋಜನೆ ಕೊಂಚ ವಿಲಂಬವಾಗುವಂತೆ ಮಾಡುತ್ತಿವೆ. ಎಚ್ಚರಿಕೆ ಹೆಜ್ಜೆ ಇಡುತ್ತಿರುವ ರಾಜ್ಯ ಸರ್ಕಾರ ಪ್ರಮುಖ ನಿರ್ಧಾರ ಕೈಗೊಳ್ಳಲಿದೆ. ಶೀಘ್ರವೇ ದೆಹಲಿ ವಿಮಾನಯಾನ ಸಚಿವರೊಂದಿಗೆ ಚರ್ಚಿಸಲಿದೆ. ಯೋಜನೆಗೆ ಮತ್ತಷ್ಟು ವೇಗ ನೀಡಲಿದೆ. ಭವಿಷ್ಯದ ದೃಷ್ಟಿಯಿಂದ ಬೆಂಗಳೂರಿಗೆ ಎರಡನೇ ವಿಮಾನ ನಿಲ್ದಾಣ ಅಗತ್ಯವಾಗಿದೆ.












Click it and Unblock the Notifications