ಕಾಂಗ್ರೆಸ್ ಸರ್ಕಾರವನ್ನು ಮೋದಿ ನಿನ್ನೆ ಬೈದರು ಇಂದು ರಾಜ್ಯಪಾಲರು ಹೊಗಳಿದರು
ಬೆಂಗಳೂರು, ಫೆಬ್ರವರಿ 05: ಅರಮನೆ ಮೈದಾನದಲ್ಲಿ ನಿನ್ನೆ (ಭಾನುವಾರ) ನಡೆದ ಬಿಜೆಪಿ ಪರಿವರ್ತನಾ ಯಾತ್ರೆ ಸಮಾರೋಪ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ರಾಜ್ಯದ ಕಾಂಗ್ರೆಸ್ ಸರ್ಕಾರವನ್ನು ಹೀನಾ ಮಾನ ಟೀಕಿಸಿದರು. ಆದರೆ ಇಂದು ಅದೇ ಕಾಂಗ್ರೆಸ್ ಸರ್ಕಾರವನ್ನು ರಾಜ್ಯಪಾಲ ವಜುಭಾಯ್ ವಾಲಾ ಬಾಯ್ತುಂಬ ಹೊಗಳಿದರು.
ವಿಧಾನಮಂಡಲ ಅಧಿವೇಶನದ ಮೊದಲ ದಿನವಾದ ಇಂದು ಜಂಟಿ ಸದನವನ್ನು ಉದ್ದೇಶಿಸಿ ಮಾತನಾಡಿದ ರಾಜ್ಯಪಾಲ ವಜುಭಾಯಿ ವಾಲಾ ಅವರು ರಾಜ್ಯ ಸರ್ಕಾರದ ಸಾಧನೆಗಳು, ಅಭಿವೃದ್ಧಿ ಕಾರ್ಯಕ್ರಮಗಳ ಪಟ್ಟಿ ಓದಿದರು. ಸರ್ಕಾರದ ಸಾಧನೆಗೆ ಸಂತಸ ವ್ಯಕ್ತಪಡಿಸಿದರು.
ಸರ್ಕಾರವು ಕರ್ನಾಟಕವನ್ನು ಹಸಿವು ಮುಕ್ತ ರಾಜ್ಯ ಮಾಡಲು ಸರ್ಕಾರವು ದಿಟ್ಟ ಹೆಜ್ಜೆ ಇಟ್ಟಿದ್ದು, ಅನ್ನಭಾಗ್ಯ, ಇಂದಿರಾ ಕ್ಯಾಂಟಿನ್ನಂತಹಾ ಹಲವು ಕಾರ್ಯಕ್ರಮಗಳನ್ನು ಸರ್ಕಾರ ಹಮ್ಮಿಕೊಂಡಿದೆ ಎಂದು ಅವರು ಹೇಳಿದರು.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ರಾಜ್ಯ ಸರ್ಕಾರದ ಪ್ರಮುಖ ಆದ್ಯತೆ ಆಗಿದ್ದು, ಮಾತೃಪೂರ್ಣ ಸೇರಿದಂತೆ ಹಲವು ಮಹಿಳಾ ಕೇಂದ್ರಿತ ಹಾಗೂ ತಾಯಿ ಹಾಗೂ ಮಕ್ಕಳ ಆರೋಗ್ಯಕ್ಕಾಗಿ ಹಲವು ಕಾರ್ಯಕ್ರಮಗಳನ್ನು ಸರ್ಕಾರ ಹಮ್ಮಿಕೊಂಡಿದೆ ಎಂದು ರಾಜ್ಯಪಾಲರು ಹೇಳಿದರು.
ಪೊಲೀಸ್ ಠಾಣೆಗಳನ್ನು ಜನಸ್ನೇಹಿ ಮಾಡಲಾಗಿದೆ, ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಕಠಿಣ ಶ್ರಮ ಪಡಲಾಗಿದೆ ಎಂದ ರಾಜ್ಯಪಾಲರು ರಾಜ್ಯದಲ್ಲಿ ಕೋಮು ಸೌಹಾರ್ಧ ಕಾಪಾಡಲು ರಾಜ್ಯ ವಹಿಸಿರುವ ಶ್ರದ್ಧೆ ಮೆಚ್ಚುವಂತದ್ದು ಎಂದು ಅವರು ಹೇಳಿದರು.
ರಾಜ್ಯದ ನಾಲ್ಕು ವರ್ಷದ ಸಾಧನೆಗಳನ್ನು ಭಾಷಣದಲ್ಲಿ ಉಲ್ಲೇಖಿಸಿದ ರಾಜ್ಯಪಾಲರು. ಪ್ರತಿಯೊಂದು ಅಭಿವೃದ್ಧಿ ಕಾರ್ಯಕ್ರಮಗಳು ಅದಕ್ಕೆ ತಗುಲಿರುವ ವೆಚ್ಚ, ಲಾಭಗಳು ಎಲ್ಲವನ್ನೂ ಓದಿ ಹೇಳಿದರು. ರಾಜ್ಯ ಸರ್ಕಾರ ನೀಡಿರುವ ಬಹುತೇಕ ಎಲ್ಲ ಭಾಗ್ಯಗಳ ಉಲ್ಲೇಖ ಮಾಡಿದ ರಾಜ್ಯಪಾಲರು ಇಂದಿರಾ ಕ್ಯಾಂಟೀನ್ ಕಾರ್ಯಕ್ರಮವನ್ನು ಬಹುವಾಗಿ ಕೊಂಡಾಡಿದರು.
ರಾಜ್ಯಪಾಲರ ಭಾಷಣದ ನಂತರ ಗಣ್ಯರಿಗೆ ಸಂತಾಪ ಅರ್ಪಿಸಿ ಸದನ ಮಂಗಳವಾರಕ್ಕೆ ಮುಂದೂಡಲಾಗುವುದು ಅಂದು ಭಾಷಣದ ಮೇಲೆ ಚರ್ಚೆ ಪ್ರಾರಂಭವಾಗಲಿದೆ. ರಾಜ್ಯಪಾಲ ವಜುಭಾಯ್ ವಾಲಾ ಅವರೇ ರಾಜ್ಯ ಸರ್ಕಾರವನ್ನು ಹೊಗಳಿರುವುದು ಬಿಜೆಪಿಗೆ ಅಲ್ಪ ಹಿನ್ನಡೆ ಮಾಡುವ ಸಂಭವ ಇದೆ.
ಇಂದಿನಿಂದ ಫೆಬ್ರವರಿ 28 ರವರೆಗೆ ಅಧಿವೇಶನ ನಡೆಯಲಿದ್ದು, ಫೆಬ್ರವರಿ 16 ರಂದು ಸಿದ್ದರಾಮಯ್ಯ ಅವರು ರಾಜ್ಯ ಬಜೆಟ್ ಮಂಡಿಸಲಿದ್ದಾರೆ. 16 ರಿಂದ 28ರ ವರೆಗೆ ಬಜೆಟ್ ಮೇಲೆ ಚರ್ಚೆ ನಡೆಯಲಿದೆ.












Click it and Unblock the Notifications