Bengaluru Rain Alert: ಬೆಂಗಳೂರಿಗೆ ಭಾರೀ ಮಳೆ: ಯೆಲ್ಲೋ ಅಲರ್ಟ್
ಬೆಂಗಳೂರು, ಡಿಸೆಂಬರ್ 11: ರಾಜ್ಯ ರಾಜಧಾನಿ ಮತ್ತು ಉದ್ಯಾನ ನಗರಿ ಬೆಂಗಳೂರಿನಲ್ಲಿ ಒಂದು ವಾರದಿಂದ ಕಂಡು ಬರುತ್ತಿರುವ ಶುಷ್ಕ ವಾತಾವರಣಕ್ಕೆ ಬ್ರೇಕ್ ಬೀಳಲಿದೆ. ಹೊಸ ಎರಡು ವಾಯುಭಾರ ಕುಸಿತ, ಚಂಡಮಾರುತಗಳ ಪ್ರಭಾವದಿಂದ ಭಾರೀ ಮಳೆ ಸುರಿಯಲಿದ್ದು, ಯೆಲ್ಲೋ ಅಲರ್ಟ್ ಕೊಡಲಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಬೆಂಗಳೂರು ಕೇಂದ್ರವು ಮುನ್ಸೂಚನೆ ನೀಡಿದೆ.
ಬೆಂಗಳೂರು ನಗರ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ನಾಡಿದ್ದು ಡಿಸೆಂಬರ್ 13ರಂದು ಗುಡುಗು ಮಿಂಚು ಸಹಿತ ಒಂದು ದಿನ ಭಾರೀ ಪ್ರಮಾಣದಲ್ಲಿ ಮಳೆ ಅಬ್ಬರಿಸಲಿದೆ. ಕನಿಷ್ಠ 70 ರಿಂದ 110 ಮಿಲಿ ಮೀಟರ್ದವರೆಗೆ ಸಾಧಾರಣದಿಂದ ಭಾರೀ ಮಳೆ ಆಗುವ ಎಲ್ಲ ಸಾಧ್ಯತೆಗಳು ಇವೆ.

ಬೆಂಗಳೂರು ಚಳಿ ಇಳಿಕೆಗೆ ಕಾರಣವೇನು?
ಸದ್ಯ ಬೆಂಗಳೂರು ನಗರದಲ್ಲಿ ತಾಪಮಾನ ಏರುಗತಿಯಲ್ಲಿದೆ. ಎಲ್ಲೆಡೆ ಒಣಹವೆ ಕಂಡು ಬರುತ್ತಿದ್ದು, ಹಿಂಗಾರು ಋತುವಾದರೂ ಸಹಿತ ಬೆಳಗ್ಗೆ ಹಾಗೂ ರಾತ್ರಿ ಚಳಿಯ ವಾತಾವರಣ ಕೆಲ ದಿನಗಳಿಂದ ಕಣ್ಮರೆಯಾಗಿದೆ. ಇದಕ್ಕೆಲ್ಲ ಬದಲಾಗುತ್ತಿರುವ ಹವಾಮಾನ ವೈಪರಿತ್ಯಗಳು, ಬಂಗಾಳಕೊಲ್ಲಿ, ಹಿಂದೂ ಮಹಾಸಾಗರ ಮತ್ತು ಅರಬ್ಬಿ ಸಮುದ್ರಗಳ ಮೇಲ್ಮೈನಲ್ಲಿ ನಡೆಯುತ್ತಿರುವ ದಿಢೀರ್ ಬದಲಾವಣೆಯೇ ಕಾರಣ ಎನ್ನಲಾಗಿದೆ.
ಒಂದು ವಾರದ ಹಿಂದೆ ಫೆಂಗಲ್ ಚಂಡಮಾರುತದ ಅಬ್ಬರದಿಂದಾಗಿ ಆಗಾಗ ವ್ಯಾಪಕ ಮಳೆ ನಗರದಲ್ಲಿ ಸುರಿದಿತ್ತು. ಬಳಿಕ ತೀವ್ರ ರೂಪದ ಚಳಿ ಸೃಷ್ಟಿಯಾದ ಬೆನ್ನಲ್ಲೆ ತಾಪಮಾನದ ಬಿಸಿ ಏರತೊಡಗಿದೆ. ಇದೀಗ ಮತ್ತೆ ವಾಯುಭಾರ ಕುಸಿತ ಉಂಟಾಗಿದೆ. ಅದು ಚಂಡಮಾರುತವಾಗಿ ಬದಲಾಗುತ್ತಿದ್ದು, ಅದರ ಪ್ರಭಾವ ತಮಿಳುನಾಡಿನ ಚೆನ್ನೈ ಮಾತ್ರವಲ್ಲದೇ ಕರ್ನಾಟಕದ ಬೆಂಗಳೂರಿನ ಮೇಲೂ ಭೀರುವುದು ಬಹುತೇಕ ಖಚಿತವಾಗಿದೆ.
ಬೆಂಗಳೂರಿಗೆ ಭಾರೀ ಮಳೆ: ತಾಪಮಾನ ಎಷ್ಟಿದೆ?
ಬುಧವಾರ ನೀಡಿದ ರಾಜ್ಯ ಮಳೆ ಮುನ್ಸೂಚನೆ ವರದಿಯಲ್ಲಿ ಬೆಂಗಳೂರು ಎರಡು ಜಿಲ್ಲೆಗಳಿಗೆ ಒಂದು ದಿನ ಭಾರೀ ಮಳೆಯ ಎಚ್ಚರಿಕೆ ಕೊಡಲಾಗಿದೆ ಎಂದು ತಿಳಿಸಲಾಗಿದೆ.

ಬೆಂಗಳೂರಿನಲ್ಲಿ ಸದ್ಯ ಗರಿಷ್ಠ 28 ಡಿಗ್ರಿ ಸೆಲ್ಸಿಯಸ್ ಹಾಗೂ ಕನಿಷ್ಠ 19 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗುತ್ತಿದೆ. ಮಳೆಯ ಅಬ್ಬರಿಸುವ ದಿನ (ಡಿ.13 ರಂದು) ತಾಪಮಾನ ಇಳಿಕೆ ಆಗಲಿದ್ದು, ಮತ್ತೆ ಚಳಿ ಮತ್ತು ಶೀತದ ವಾತಾವರಣ ನಿರ್ಮಾಣವಾಗಲಿದೆ ಎಂದು ಬೆಂಗಳೂರು ಹವಾಮಾನ ಕೇಂದ್ರದ ಹವಾಮಾನ ತಜ್ಞರು ಮಾಹಿತಿ ನೀಡಿದ್ದಾರೆ.
ಡಿಸೆಂಬರ್ 14ರಂದು ಮಬ್ಬು ವಾತಾವರಣ ಕಂಡು ಬರುವ ಜೊತೆಗೆ ಆಗಾಗ ಸೋನೆ ಮಳೆ ಬರುಬಹುದು. ಉಳಿದಂತೆ ಯಾವ ಗಂಭೀರ ಸ್ವರೂಪದ ಬದಲಾವಣೆ ಇರುವುದಿಲ್ಲ. ನಂತರ ಡಿಸೆಂಬರ್ 17ರವರೆಗೆ ಅಧಿಕ ಬಿಸಿಲು, ಶುಷ್ಕ ವಾತಾವರಣವೇ ಮುಂದುವರಿಯುವ ಸಂಭವವಿದೆ.
ಕರ್ನಾಟಕ ಹವಾಮಾನ ವರದಿ: ಮುನ್ಸೂಚನೆ ಏನಿದೆ?
ಕರ್ನಾಟಕದ ಹವಾಮಾನ ವರದಿ ನೋಡುವುದಾದರೆ, ವಾಯುಭಾರ ಕುಸಿತ ಮತ್ತು ಚಂಡಮಾರುತ ಪರಿಚಲನೆಯಿಂದಾಗಿ ಮುಂದಿನ ಮೂರರಿಂದ ಐದು ದಿನಗಳ ಕಾಲ ಗುಡುಗು ಮಿಂಚು ಸಹಿತ ದಕ್ಷಿಣ ಒಳನಾಡಿನ ಸುಮಾರು 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಅಬ್ಬರಿಸಲಿದೆ. ಹೀಗಾಗಿ ಹಲವು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ನೀಡಲಾಗಿದೆ ಎಂದು ಬುಧವಾರದ ಐಎಂಡಿ ಮಳೆ ಮುನ್ಸೂಚನೆ ವರದಿಯು ತಿಳಿಸಿದೆ.












Click it and Unblock the Notifications