Hyderabad-Bengaluru Industrial Corridor: ಮಹತ್ವದ ಯೋಜನೆ ಕುರಿತು ಸಚಿವರ ಅಪ್ಡೇಟ್
ಬೆಂಗಳೂರು, ಡಿಸೆಂಬರ್ 17: ಹೈದರಾಬಾದ್-ಬೆಂಗಳೂರು ನಡುವಿನ ಕೈಗಾರಿಕಾ ಕಾರಿಡಾರ್ ಕುರಿತು ಅಪ್ಡೇಟ್ ಒಂದು ಸಿಕ್ಕಿದೆ. ಕೇಂದ್ರ ಮತ್ತು ಆಂಧ್ರ ಪ್ರದೇಶ ಸರ್ಕಾರ ಜಂಟಿಯಾಗಿ ಈ ಕಾರಿಡಾರ್ ನಿರ್ಮಾಣ ಮಾಡುತ್ತಿವೆ. 2007ರಲ್ಲಿ ಮೊದಲು ಘೋಷಣೆಯಾದ ಈ ಕಾರಿಡಾರ್ 2014ರ ತನಕ ಯಾವುದೇ ಪ್ರಗತಿ ಕಾಣಲಿಲ್ಲ. ಈ ಕಾರಿಡಾರ್ ನಿರ್ಮಾಣ ಮಾಡಲು ನಿಜವಾಗಿಯೂ ಒಪ್ಪಿಗೆ ಸಿಕ್ಕಿದ್ದು, 2020ರಲ್ಲಿ.
ಕಾಂಗ್ರೆಸ್ ಸದಸ್ಯ ಅನಿಲ್ ಕುಮಾರ್ ಪ್ರಶ್ನೆಗೆ ರಾಜ್ಯಸಭೆಯಲ್ಲಿ ಸಚಿವ ಪಿಯೂಷ್ ಗೋಯಲ್ ಉತ್ತರವನ್ನು ನೀಡಿದ್ದಾರೆ. ಹೈದರಾಬಾದ್-ಬೆಂಗಳೂರು ನಡುವಿನ ಕೈಗಾರಿಕಾ ಕಾರಿಡಾರ್ (ಹೆಚ್ಬಿಐಸಿ) ಯೋಜನೆಗೆ ಶೀಘ್ರದಲ್ಲಿಯೇ ಟೆಂಡರ್ ಕರೆಯಲಾಗುತ್ತದೆ ಎಂದು ಹೇಳಿದ್ದಾರೆ.

ಕೇಂದ್ರ ಮತ್ತು ಆಂಧ್ರ ಪ್ರದೇಶ ರಾಜ್ಯಗಳು ಜಂಟಿಯಾಗಿ ಈ ಯೋಜನೆಯನ್ನು ಗುತ್ತಿಗೆದಾರರು ನಿರ್ಮಾಣ ಪೂರ್ಣಗೊಳಿಸಿ ಸರ್ಕಾರಕ್ಕೆ ಹಸ್ತಾಂತರಿಸುವ ಮಾದರಿ (ಇಪಿಸಿ) ಅಡಿಯಲ್ಲಿ ಕೈಗೆತ್ತಿಕೊಳ್ಳಲಿವೆ. ಈ ಯೋಜನೆಯ ಹಿನ್ನಲೆ, ಸದ್ಯದ ಪ್ರಗತಿ ಕುರಿತು ಸಹ ಸಚಿವರು ಉತ್ತರವನ್ನು ನೀಡಿದ್ದಾರೆ.
ಹೆಚ್ಬಿಐಸಿ ಯೋಜನೆ: ವಾಣಿಜ್ಯ ಮತ್ತು ಕೈಗಾರಿಕಾ ಖಾತೆ ಸಚಿವ ಪಿಯೂಷ್ ಗೋಯಲ್ ಉತ್ತರದಲ್ಲಿ, "ಮೊದಲು ಯೋಜನೆಯನ್ನು 2007ರಲ್ಲಿ ಘೋಷಣೆ ಮಾಡಲಾಯಿತು. ಆದರೆ 2014ರ ತನಕ ಯಾವುದೇ ಪ್ರಗತಿ ಕಾಣಲಿಲ್ಲ. ಕೆಲವು ಘೋಷಣೆಗಳನ್ನು 2014ರ ಲೋಕಸಭೆ ಚುನಾವಣೆಗೂ ಮೊದಲು ಮಾಡಲಾಯಿತು. ಆದರೆ ಈ ಕಾರಿಡಾರ್ ನಿರ್ಮಾಣಕ್ಕೆ 2020ರ ಬಳಿಕ ಒಪ್ಪಿಗೆ ನೀಡಲಾಯಿತು" ಎಂದು ಹೇಳಿದರು.
"ಹೈದರಾಬಾದ್-ಬೆಂಗಳೂರು ನಡುವಿನ ಕೈಗಾರಿಕಾ ಕಾರಿಡಾರ್ ವಿಶೇಷತೆಗಳನ್ನು ಅಧಿಕೃತವಾಗಿ 2024ರ ಆಗಸ್ಟ್ 28ರಂದು ಘೋಷಣೆ ಮಾಡಲಾಯಿತು. ನಮ್ಮ ಮತ್ತು ಆಂಧ್ರ ಪ್ರದೇಶ ರಾಜ್ಯ ಸರ್ಕಾರದ ಜಂಟಿ ಯೋಜನೆ ಪಾರದರ್ಶಕ ಟೆಂಡರ್ ಪ್ರಕ್ರಿಯೆಯನ್ನು ಒಳಗೊಂಡಿದೆ. ರಾಜ್ಯ ಸರ್ಕಾರ ಟೆಂಡರ್ ಪ್ರಕ್ರಿಯೆಯನ್ನು ಪಾರದರ್ಶಕವಾಗಿ ಪೂರ್ಣಗೊಳಿಸಲಿದೆ" ಎಂದು ಸಚಿವರು ವಿವರಣೆ ನೀಡಿದರು.
ಹೈದರಾಬಾದ್-ಬೆಂಗಳೂರು ನಡುವಿನ ಕೈಗಾರಿಕಾ ಕಾರಿಡಾರ್ ಎರಡು ನಗರದ ನಡುವಿನ ಮೂಲ ಸೌಕರ್ಯ ಸಂಪರ್ಕವನ್ನು ಅಭಿವೃದ್ಧಿಗೊಳಿಸಲಿದೆ. ಎರಡು ಪ್ರಮುಖ ನಗರಗಳಾದ ಬೆಂಗಳೂರು ಮತ್ತು ಹೈದರಾಬಾದ್ ಸಂಪರ್ಕಿಸಲಿದೆ. ಅಲ್ಲದೇ ಇನ್ನೆರಡು ಪ್ರಮುಖ ಕಾರಿಡಾರ್ ಆದ ಚೆನ್ನೈ-ಬೆಂಗಳೂರು ಕೈಗಾರಿಕಾ ಕಾರಿಡಾರ್, ವಿಶಾಖಪಟ್ಟಣಂ-ಚೆನ್ನೈ ಇಂಡಸ್ಟ್ರಿಯಲ್ ಕಾರಿಡಾರ್ ಅನ್ನು ಸಂಪರ್ಕಿಸುವ ಗುರಿ ಹೊಂದಿದೆ.
ಹೈದರಾಬಾದ್-ಬೆಂಗಳೂರು ನಡುವಿನ ಕೈಗಾರಿಕಾ ಕಾರಿಡಾರ್ ಎರಡೂ ನಗರದ ಆರ್ಥಿಕ ಅಭಿವೃದ್ಧಿಗೆ ಕೊಡುಗೆಯನ್ನು ನೀಡಲಿದೆ. ಅಲ್ಲದೇ ಬಂಡಾವಳ ಹೂಡಿಕೆಗೆ ಸಹ ಹೆಚ್ಚಿನ ಒತ್ತನ್ನು ನೀಡಲಿದೆ ಎಂದು ಅಂದಾಜಿಸಲಾಗಿದೆ. ಕರ್ನೂಲ್ ಜಿಲ್ಲೆಯಲ್ಲಿ ಆರಂಭವಾಗುವ ಈ ಕಾರಿಡಾರ್ ಕರ್ನೂಲ್, ಕಡಪ, ತಿರುಪತಿ ಮೂಲಕ ಹಾದು ಹೋಗಲಿದೆ. ಯೋಜನೆಗೆ ಸುಮಾರು 4,742 ಎಕರೆ ಭೂಮಿ ಬೇಕು ಎಂದು ಅಂದಾಜಿಸಲಾಗಿದೆ.
ಕೇಂದ್ರದಲ್ಲಿ ಎನ್ಡಿಎ 3.0 ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ 2024-25ನೇ ಸಾಲಿನ ಪೂರ್ಣ ಪ್ರಮಾಣದ ಬಜೆಟ್ ಮಂಡಿಸಲಾಯಿತು. ಈ ಬಜೆಟ್ನಲ್ಲಿ ಹೈದರಾಬಾದ್-ಬೆಂಗಳೂರು ನಡುವಿನ ಕೈಗಾರಿಕಾ ಕಾರಿಡಾರ್ ಘೋಷಣೆ ಮಾಡಲಾಯಿತು.
ಈ ಕಾರಿಡಾರ್ ನಿರ್ಮಾಣದಿಂದ ರೈಲು, ವಿಮಾನ ನಿಲ್ದಾಣಗಳ ಸಂಪರ್ಕಕ್ಕೆ ಸಹ ಅನುಕೂಲವಾಗಲಿದೆ ಎಂದು ಅಂದಾಜಿಸಲಾಗಿದೆ. ಸರಕು ಸಾಗಾಣಿಕೆಗೆ ಇದು ಅನುಕೂಲ ಮಾಡಿಕೊಡಲಿದ್ದು, ನೇರ ಮತ್ತು ಪರೋಕ್ಷ ಉದ್ಯೋಗ ಸೃಷ್ಟಿಗೆ ಸಹ ಸಹಾಯಕವಾಗಲಿದೆ ಎಂದು ಅಂದಾಜಿಸಲಾಗಿದೆ.
ಕೇಂದ್ರ ಸರ್ಕಾರ ನ್ಯಾಷನಲ್ ಇಂಡಸ್ಟ್ರಿಯಲ್ ಕಾರಿಡಾರ್ ಯೋಜನೆಯಡಿ ನಿರ್ಮಾಣ ಮಾಡುತ್ತಿರುವ 11 ಕಾರಿಡಾರ್ನಲ್ಲಿ ಹೈದರಾಬಾದ್-ಬೆಂಗಳೂರು ಕೈಗಾರಿಕಾ ಕಾರಿಡಾರ್ ಸಹ ಸೇರಿದೆ.












Click it and Unblock the Notifications