Good News: ಬೆಂಗಳೂರು-ಚೆನ್ನೈ ಪ್ರಯಾಣಿಕರಿಗೆ ಸಿಹಿ ಸುದ್ದಿ- ಶೀಘ್ರದಲ್ಲೇ ಹೆದ್ದಾರಿ ಪೂರ್ಣ
ಭಾರತದ ಪ್ರಮುಖ ನಗರಗಳ ನಡುವೆ ಸಂಪರ್ಕ ಕಲ್ಪಿಸುವ ಬೆಂಗಳೂರು-ಚೆನ್ನೈ ಎಕ್ಸ್ಪ್ರೆಸ್ವೇ ನಿರ್ಮಾಣ ಕಾರ್ಯ ವೇಗ ಪಡೆದುಕೊಂಡಿದ್ದು ಪೂರ್ಣಗೊಳ್ಳುವ ಸಮಯ ಘೋಷಣೆಯಾಗಿದೆ. ಈ ಎಕ್ಸ್ಪ್ರೆಸ್ವೇ ಮೂಲಕ ಎರಡುವರೆ ಗಂಟೆಗಳಲ್ಲಿ ಎರಡು ಪ್ರಮುಖ ನಗರಗಳಿಗೆ (ಬೆಂಗಳೂರು-ಚೆನ್ನೈ) ಪ್ರಯಾಣ ಮಾಡಬಹುದು. ಇದೀಗ ಈ ಹೆದ್ದಾರಿ ನಿರ್ಮಾಣ ಕಾರ್ಯ ಪೂರ್ಣಗೊಳ್ಳುವ ಸಮಯವನ್ನು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ಬಹಿರಂಗಪಡಿಸಿದ್ದಾರೆ.
ಕಳೆದ ಕೆಲ ತಿಂಗಳುಗಳ ಹಿಂದೆ ನಿತಿನ್ ಗಡ್ಕರಿ ಅವರು ಬೆಂಗಳೂರು-ಚೆನ್ನೈ ಎಕ್ಸ್ಪ್ರೆಸ್ವೇ ನಿರ್ಮಾಣ ಕಾರ್ಯ 2025ರ ಅಂತ್ಯದಲ್ಲಿ ಪೂರ್ಣಗೊಳ್ಳಲಿದೆ ಎಂದು ಹೇಳಿದ್ದರು. ಆದರೆ ಈ ಬಗ್ಗೆ ಖಚಿತತೆ ಇರಲಿಲ್ಲ. ಆದರೀಗ ಈ ಯೋಜನೆ ಆಗಸ್ಟ್ ತಿಂಗಳಲ್ಲಿ ಪೂರ್ಣಗೊಳ್ಳಲಿದೆ ಎಂದು ನಿತಿನ್ ಗಡ್ಕರಿ ಹೇಳಿದ್ದಾರೆ. ಹೀಗಾಗಿ ಇದೇ ವರ್ಷ ವಾಹನ ಸವಾರರಿಗೆ ಹೆದ್ದಾರಿ ಬಳಕೆಗೆ ಸಿದ್ಧವಾಗಲಿದೆ.

ಅಂದಹಾಗೆ ಈ ಯೋಜನೆ 288 ಕಿ.ಮೀ ಉದ್ದದ ಹೆದ್ದಾರಿಯಾಗಿದೆ. ತಮಿಳುನಾಡು ಒಂದರಲ್ಲೇ 105.70ಕಿ.ಮೀವರೆಗೂ ವಿವಿಧ ಹಂತಗಳಲ್ಲಿ ಹೆದ್ದಾರಿಯನ್ನು ನಿರ್ಮಾಣಮಾಡಲಾಗುತ್ತಿದೆ. ಕರ್ನಾಟಕದಲ್ಲಿ 71 ಕಿಮೀ, ಆಂಧ್ರಪ್ರದೇಶದಲ್ಲಿ 72 ಕಿಮೀ ಉದ್ದವನ್ನು ಹೊಂದಿದೆ. ಈಗಾಗಲೇ ಬಹುತೇಕ ನಿರ್ಮಾಣ ಕಾರ್ಯ ಪೂರ್ಣಗೊಂಡಿದ್ದು ಮುಂದಿನ ವರ್ಷ ಆಗಸ್ಟ್ನಲ್ಲಿ ಹೆದ್ದಾರಿ ಉದ್ಘಾಟನೆಯಾಗುವುದು ಬಹುತೇಕ ಪಕ್ಕಾ ಆಗಿದೆ. ಹಾಗಾದರೆ ಎಕ್ಸ್ಪ್ರೆಸ್ವೇ ಎಷ್ಟು ಪೂರ್ಣಗೊಂಡಿದೆ ಅದರ ಸಂಪೂರ್ಣ ವಿವರ ಹೀಗಿದೆ....
ಪ್ರಸ್ತುತ ಹೆದ್ದಾರಿ ಪೂರ್ಣಗೊಂಡ ವಿವರ ಇಲ್ಲಿದೆ...
ಪ್ರಸ್ತುತ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಕುಡಿಪಾಲದಿಂದ ವಾಲಾಜಪೇಟೆವರೆಗಿನ 24 ಕಿ.ಮೀ ಉದ್ದದ ಹೆದ್ದಾರಿಯನ್ನು 72%ರಷ್ಟು ಪೂರ್ಣಗೊಳಿಸಿದೆ. ಹಾಗೇ ವಾಲಾಜಾಪೇಟ್ನಿಂದ ಅರಕ್ಕೋಣಂವರೆಗಿನ 24.5 ಕಿಮೀ ವ್ಯಾಪ್ತಿಯಲ್ಲಿ 86%ರಷ್ಟು, ಅರಕ್ಕೋಣಂನಿಂದ ಕಾಂಚೀಪುರಂವರೆಗಿನ 25.5 ಕಿಮೀ ವ್ಯಾಪ್ತಿಯಲ್ಲಿ 52%ರಷ್ಟು, ಇನ್ನೂ ಕಾಂಚೀಪುರಂನಿಂದ ಶ್ರೀಪೆರಂಬದೂರ್ವರೆಗಿನ 32.1 ಕಿಮೀ ವ್ಯಾಪ್ತಿಯ ಹೆದ್ದಾರಿ 65%ರಷ್ಟು ನಿರ್ಮಾಣ ಮಾಡಲಾಗಿದೆ. ಹಾಗಾದರೆ ಇದು ಪೂರ್ಣಗೊಳ್ಳುವುದು ಯಾವಾಗ?
ಪೂರ್ಣಗೊಳ್ಳುವ ವಿವರ ಹೀಗಿದೆ...
ಆಂಧ್ರಪ್ರದೇಶದ ಕುಡಿಪಾಲದಿಂದ ವಾಲಾಜಾಪೇಟ್, ವಾಲಾಜಪೇಟ್ನಿಂದ ಅರಕ್ಕೋಣಂ ಮತ್ತು ಅರಕ್ಕೋಣಂನಿಂದ ಕಾಂಚೀಪುರಂವರೆಗಿನ ಹೆದ್ದಾರಿ ಮುಂದಿನ ವರ್ಷ ಮಾರ್ಚ್ನಲ್ಲಿ ಪೂರ್ಣಗೊಳ್ಳಲಿದೆ. ಕೊನೆಯ ಹಂತವಾದ ಕಾಂಚೀಪುರಂನಿಂದ ಶ್ರೀಪೆರಂಬದೂರ್ವರೆಗಿನ ರಸ್ತೆ ಮುಂದಿನ ವರ್ಷ ಜುಲೈನಲ್ಲಿ ಪೂರ್ಣಗೊಳ್ಳುವ ಸಾಧ್ಯತೆ ಇದೆ. ಫೆಬ್ರವರಿಯಲ್ಲಿ ಆರಂಭವಾದ ಇಂಟರ್ ಚೇಂಜ್ ನಿರ್ಮಾಣ ಮುಂದಿನ ವರ್ಷ ಆಗಸ್ಟ್ ವೇಳೆಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ ಎಂದು ಪ್ರಾಧಿಕಾರ ಹೇಳಿದೆ.
ಅಡೆತಡೆಗಳಿಂದಾಗಿ ವಿಳಂಬ...
ಭೂಸ್ವಾಧೀನ, ಸಾಲ ಮಂಜೂರಾತಿ, ಪ್ರದೇಶದಲ್ಲಿ ಹಾದು ಹೋಗಿರುವ ಹೈಟೆನ್ಶನ್ ವಿದ್ಯುತ್ ತಂತಿಗಳ ಬದಲಾವಣೆಗೆ ಸಂಬಂಧಿಸಿದ ಸಮಸ್ಯೆಗಳಿಂದಾಗಿ ಹೆದ್ದಾರಿ ನಿರ್ಮಾಣ ಮಾಡಲು ಆರಂಭಿಕ ಸಮಸ್ಯೆಗಳು ಉಂಟಾಗಿವೆ ಎಂದು ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ತಿಳಿಸಿದ್ದಾರೆ. ಆದರೆ ಆ ಎಲ್ಲ ಸಮಸ್ಯೆಗಳು ಬಗೆಹರಿದ ಬಳಿಕ ಇದೀಗ ಕಾಮಗಾರಿ ಭರದಿಂದ ಸಾಗಿದ್ದು, ಮುಂದಿನ ವರ್ಷ ಆಗಸ್ಟ್ ವೇಳೆಗೆ ಕಾಮಗಾರಿ ಪೂರ್ಣಗೊಳ್ಳುವ ನಿರೀಕ್ಷೆಯಿದ್ದು, ಶೀಘ್ರದಲ್ಲೇ ರಸ್ತೆ ಸಂಚಾರಕ್ಕೆ ಮುಕ್ತವಾಗಲಿದೆ ಎಂದು ಪ್ರಾಧಿಕಾರ ಹೇಳಿಕೊಂಡಿದೆ.
ದಕ್ಷಿಣ ಭಾರತದ ಎರಡು ಪ್ರಮುಖ ನಗರಗಳಾದ ಬೆಂಗಲೂರು- ಚೆನ್ನೈ ನಡುವಿನ ಎಕ್ಸ್ಪ್ರೆಸ್ ವೇ ಹೆದ್ದಾರಿ ಈ ಹಿಂದೆ ಇದ್ದ ನಗರಗಳ ನಡುವಿನ ಅಂತರವನ್ನು 350 ಕಿಮೀ. ನಿಂದ 288 ಕಿಮೀವರೆಗೆ ಇಳಿಸುತ್ತದೆ. ಗಂಟೆಗೆ 120 ಕಿ.ಮೀ ವೇಗದಲ್ಲಿ ಚಲಿಸಲು ಇದು ಸಹಕಾರಿಯಾಗಲಿದೆ.
ಇನ್ನೂ ಚೆನ್ನೈ-ಬೆಂಗಳೂರು ಎಕ್ಸ್ಪ್ರೆಸ್ವೇನಲ್ಲಿ ಸರ್ವೀಸ್ ರಸ್ತೆ ಸೌಲಭ್ಯ ಇರುವುದಿಲ್ಲ. ಸರ್ವೀಸ್ ರಸ್ತೆಗಳಿದ್ದರೆ ಅಲ್ಲಿ ಅಪಘಾತಗಳು ಉಂಟಾಗುವ ಸಾಧ್ಯತೆ ಇದೆ. ಜೊತೆಗೆ ಈ ಹೆದ್ದಾರಿಯಲ್ಲಿ ಇತರ ಹೆದ್ದಾರಿಗಳಿಗೆ ಹೋಲಿಸಿದರೆ ಟೋಲ್ ದರ ಅಧಿಕವಾಗಿರುತ್ತದೆ. ಹೆಚ್ಚಿನ ಟೋಲ್ ಪಾವತಿಸುವ ಪ್ರಯಾಣಿಕರಿಗೆ ಯಾವುದೇ ಅಡಚಣೆ ಇಲ್ಲದೆ ಕಡಿಮೆ ಸಮಯದಲ್ಲಿ ಸ್ಥಳಗಳನ್ನು ತಲುಪುವ ಅವಕಾಶ ನೀಡಲು ಈ ಹೆದ್ದಾರಿ ಬಳಿ ಸರ್ವೀಸ್ ರಸ್ತೆ ಇರುವುದಿಲ್ಲ ಎಂದು ಪ್ರಾಧಿಕಾರ ಹೇಳಿದೆ.












Click it and Unblock the Notifications