ಮಾಜಿ ಸಚಿವೆ ಶಶಿಕಲಾ ಜೊಲ್ಲೆಗೆ ಬಿಗ್ ರಿಲೀಫ್: ಕೇಸ್ ರದ್ದು ಪಡಿಸಿದ ಹೈಕೋರ್ಟ್
ಬೆಂಗಳೂರು, ಏಪ್ರಿಲ್ 06: ಕಳೆದ ವಿಧಾನಸಭಾ ಚುನಾವಣೆ ವೇಳೆ ಚುನಾವಣಾ ಅಕ್ರಮ ನಡೆಸಿದ ಆರೋಪದ ಮೇಲೆ ನಿಪ್ಪಾಣಿ ಶಾಸಕಿ ಹಾಗೂ ಮಾಜಿ ಸಚಿವೆ ಶಶಿಕಲಾ ಅಣ್ಣಾಸಾಹೇಬ ಜೊಲ್ಲೆ ವಿರುದ್ಧ ದಾಖಲಿಸಲಾಗಿದ್ದ ಪ್ರಕರಣವನ್ನು ಹೈಕೋರ್ಟ್ ರದ್ದುಪಡಿಸಿದೆ. ಹಾಗಾಗಿ ಜೊಲ್ಲೆ ಅವರಿಗೆ ದೊಡ್ಡ ರಿಲೀಫ್ ಸಿಕ್ಕಿದೆ. ಅವರನ್ನು ನ್ಯಾಯಾಲಯ ಆರೋಪ ಮುಕ್ತಗೊಳಿಸಿದೆ.
ಪ್ರಕರಣ ರದ್ದು ಕೋರಿ ಶಶಿಕಲಾ ಜೊಲ್ಲೆ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ಏಕಸದಸ್ಯಪೀಠ ಶುಕ್ರವಾರ ವಿಚಾರಣೆ ನಡೆಸಿತು.

ವಾದ-ಪ್ರತಿವಾದ ಆಲಿಸಿದ ನ್ಯಾಯಪೀಠ ಪ್ರಕರಣ ಸಂಬಂಧ ಶಶಿಕಲಾ ಜೊಲ್ಲೆ ವಿರುದ್ಧ ನಿಪ್ಪಾಣಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎಫ್ಐಆರ್, ಅದನ್ನು ಆಧರಿಸಿ ತನಿಖೆ ನಡೆಸಿ ಪೊಲೀಸರು ಸಲ್ಲಿಸಿದ್ದ ಚಾರ್ಜ್ಶೀಟ್ ಮತ್ತು ಪ್ರಕರಣ ಸಂಬಂಧ ನಿಪ್ಪಾಣಿ ಜೆಎಂಎಫ್ಸಿ ನ್ಯಾಯಾಲಯದಲ್ಲಿ ನಡೆಯುತ್ತಿರುವ ವಿಚಾರಣೆಯನ್ನು ರದ್ದುಪಡಿಸಿ ಆದೇಶಿಸಿತು.
ಹೈಕೋರ್ಟ್ ಆದೇಶವೇನು?
ಐಪಿಸಿ 171 (ಬಿ) ಹಾಗೂ ಪ್ರಜಾಪ್ರತಿನಿಧಿ ಕಾಯ್ದೆಯ ಸೆಕ್ಷನ್ 123 (1) ಆಧರಿಸಿ ಲಂಚ ಮತ್ತು ಆಮಿಷದ ಆರೋಪ ಮಾಡಲಾಗಿದೆ. ಎಫ್ಐಆರ್ನಲ್ಲಿ ಉಲ್ಲೇಖಿಸಲಾದ ಅಂಶಗಳು ಮತ್ತು ಯಾವ ಘಟನೆ ಆಧರಿಸಿ ಪ್ರಕರಣ ದಾಖಲಿಸಿಲಾಗಿದೆಯೋ ಆ ಸಂದರ್ಭದ ಘಟನಾವಳಿಗಳನ್ನು ಗಮನಿಸಿದಾಗ ಅದ್ಯಾವುದೂ ಲಂಚ ಅಥವಾ ಆಮಿಷ ಆಗುವುದಿಲ್ಲ ಎಂದು ಹೇಳಿತು.
ಐಪಿಸಿ ಸೆಕ್ಷನ್ 171 (ಬಿ) ಪ್ರಕಾರ ಕೊಡುವ ಕೈ ತೆಗೆದುಕೊಳ್ಳುವ ಕೈ ಇದ್ದಾಗ ಅದು ಲಂಚ ಆಗುತ್ತದೆ. ಪ್ರಜಾಪ್ರತಿನಿಧಿ ಕಾಯ್ದೆಯ ಸೆಕ್ಷನ್ 123 (1) ಪ್ರಕಾರ ಉಚಿತ ಉಡುಗೊರೆ, ಆಮಿಷ, ಭರವಸೆ ಚುನಾವಣಾ ಅಕ್ರಮವೆನಿಸುತ್ತಿದೆ. ಈ ಪ್ರಕರಣದಲ್ಲಿ ಅಂತಹದ್ದೇನು ಕಾಣುತ್ತಿಲ್ಲ. ಯಾವುದೇ ಒಬ್ಬ ವ್ಯಕ್ತಿ ತನ್ನ ಬಳಿ ಹಣ ಇಟ್ಟುಕೊಳ್ಳುವುದು ಅಪರಾಧ ಅಥವಾ ಲಂಚ ಎನಿಸಿಕೊಳ್ಳುವುದಿಲ್ಲ. ಹಾಗಾಗಿ, ಕಾನೂನಿನಡಿ ಈ ಪ್ರಕರಣ ನಿಲ್ಲುವುದಿಲ್ಲ ಎಂದು ಹೇಳಿದ ನ್ಯಾಯಪೀಠ ಪ್ರಕರಣವನ್ನು ರದ್ದುಪಡಿಸಿ ಆದೇಶಿಸಿತು
ರಾಜಕೀಯ ಉದ್ದೇಶದ ಪ್ರಕರಣ
ಶಶಿಕಲಾ ಜೊಲ್ಲೆ ಪರ ವಾದ ಮಂಡಿಸಿದ ವಕೀಲ ಶಿವರಾಜ್ ಎಸ್. ಬಳ್ಳೊಳಿ, ರಾಜಕೀಯ ದುರುದ್ದೇಶದಿಂದ ಪ್ರಕರಣ ದಾಖಲಿಸಲಾಗಿದೆ. ಅರ್ಜಿದಾರರ ಚುನಾವಣಾ ಏಜೆಂಟ್ ಬಳಿ 10 ಸಾವಿರ ರೂ. ನಗದು ಸಿಕ್ಕಿದ್ದ ಮಾತ್ರಕ್ಕೆ ಪ್ರಕರಣ ದಾಖಲಿಸಲಾಗಿದೆ. ಪ್ರಕರಣದಲ್ಲಿ ಅರ್ಜಿದಾರರ ಪಾತ್ರವಿಲ್ಲ. ಹಣ ಯಾರಿಗೆ ಕೊಡಲಾಗುತ್ತಿತ್ತು ಎಂದು ಗೊತ್ತಿಲ್ಲ. ಹಣ ಪತ್ತೆಯಾದ ಸ್ಥಳದಲ್ಲಿ ಹಣ ಪಡೆದುಕೊಳ್ಳಲು ಬಂದವರೂ ಯಾರೂ ಇರಲಿಲ್ಲ. ಆರೋಪ ಸಾಬೀತುಪಡಿಸುವಂತ ಅಂಶಗಳು ಎಫ್ಐಆರ್ನಲ್ಲಿ. ಪ್ರಕರಣ ದಾಖಲಿಸಿರುವುದು ಕಾನೂನಿನ ದುರ್ಬಳಕೆಯಾಗಿದೆ ಎಂದು ನ್ಯಾಾಯಪೀಠಕ್ಕೆ ಮನವಿವರಿಕೆ ಮಾಡಿಕೊಟ್ಟರು.
ಪ್ರಕರಣದ ಹಿನ್ನೆಲೆ ಏನು..?
ನಿಪ್ಪಾಣಿಯ ಜಾಮದಾರ್ ಪ್ಲಾಟ್, ಲೇನ್ ನಂಬರ್ 1ರ ಬಳಿ ಕೆಲ ವ್ಯಕ್ತಿಗಳು ಜಮಾಯಿಸಿದ್ದು ಮತದಾರರ ಮೇಲೆ ಪ್ರಭಾವ ಬೀರುವ ಪ್ರಯತ್ನ ನಡೆಸುತ್ತಿದ್ದಾಾರೆ ಎಂದು ಚುನಾವಣಾಧಿಕಾರಿ 2023ರ ಮೇ 10ರಂದು ದೂರು ನೀಡಿದ್ದರು. ಅದನ್ನು ಆಧರಿಸಿ ನಿಪ್ಪಾಣಿ ಟೌನ್ ಪೊಲೀಸರು ಸ್ಥಳಕ್ಕೆ ಭೇಟಿ ಕೊಟ್ಟಾಗ ಅಲ್ಲಿ ಸೇರಿದ್ದ ಜನರ ಬಳಿ ಬಿಜೆಪಿ ಅಭ್ಯರ್ಥಿಯಾಗಿದ್ದ ಶಶಿಕಲಾ ಜೊಲ್ಲೆ ಅವರಿಗೆ ಸೇರಿದ್ದ ಕೆಲವು ಚುನಾವಣಾ ಸಾಮಾಗ್ರಿಗಳು, ವ್ಯಕ್ತಿಯೊಬ್ಬರ ಬಳಿ 10 ಸಾವಿರ ರೂ. ಸಿಕ್ಕಿತ್ತು. ಎಫ್ಐಆರ್ ದಾಖಲಿಸಿಕೊಂಡ ಪೊಲೀಸರು, ಮ್ಯಾಜಿಸ್ಟ್ರೇಟ್ ಕೋರ್ಟ್ ಅನುಮತಿ ಪಡೆದು ತನಿಖೆ ನಡೆಸಿ ಚಾರ್ಜ್ಶೀಟ್ ಸಲ್ಲಿಸಿದ್ದರು. ಅದನ್ನು ಪ್ರಶ್ನಿಸಿ ಅರ್ಜಿ ಸಲ್ಲಿಸಲಾಗಿತ್ತು.












Click it and Unblock the Notifications