ಬೆಂಗಳೂರಲ್ಲಿ ಮತ್ತೆ ಮಳೆ ಅವಾಂತರ, ಉರುಳಿ ಬಿದ್ದ ಮರಗಳು
ಬೆಂಗಳೂರು ಆಗಸ್ಟ್ 01: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಸೋಮವಾರ ಸಂಜೆ ಮತ್ತು ರಾತ್ರಿ ಸುರಿದ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತವಾಗಿದೆ. ಅನೇಕ ಕಡೆಗಳಲ್ಲಿ ಮರಗಳು ಧರೆಗುರುಳಿವೆ. ತಗ್ಗು ಪ್ರದೇಶದಲ್ಲಿರುವ ಕೆಲವು ಮನೆಗಳಿಗೆ ಮಳೆ ನೀರು ನುಗ್ಗಿದೆ.
ನಗರದಲ್ಲಿ ಬೆಳಗ್ಗೆಯಿಂದ ತುಸು ಬಿಸಿಲು ಕಂಡು ಬಂತಾದರೂ ಸಂಜೆ ಹೊತ್ತಿಗೆ ಸೂರ್ಯ ಮರೆಯಾಗಿ ಮೋಡ ಕವಿದ ವಾತಾವರಣ ನಿರ್ಮಾಣವಾಯಿತು. ಸಂಜೆಯಾಗುತ್ತಿದ್ದಂತೆ ತುಂತುರು ಮಳೆ ಆರಂಭವಾಗಿ ರಾತ್ರಿ 10ಗಂಟೆ ವೇಳೆ ಮುಂಗಾರಿನ ಅಬ್ಬರ ಹೆಚ್ಚಾಯಿತು. ಈ ವೇಳೆ ಗಂಟೆಗಳಿಗೂ ಹೆಚ್ಚು ಕಾಲ ಸುರಿದ ಮಳೆ ಮತ್ತು ಗಾಳಿ ರಭಸಕ್ಕೆ ನಗರದ ಸುಮಾರು ಎಂಟಕ್ಕೂ ಹೆಚ್ಚು ಮರಗಳು ಬಿದ್ದಿವೆ.
ಈ ಪೈಕಿ ಬಿಬಿಎಂಪಿ ವ್ಯಾಪ್ತಿಯ ರಿಚ್ಮಂಡ್ ಟೌನ್ನಲ್ಲಿ ಒಂದು ಮರ, ಬನಶಂಕರಿ ಎರಡನೇ ಹಂತದ ಮುಖ್ಯರಸ್ತೆ ಪಕ್ಕದಲ್ಲಿ, ಪೊಲೀಸ್ ಕಂಟ್ರೋಲ್ ರೂಮ್ ಶಾಂತಿ ನಗರ, ಹೆಬ್ಬಾಳ ಮೇಕ್ರಿ ವೃತ್ತ, ನಂದಿನಿ ಬಡಾವಣೆಯ ಪಂಚಮುಖಿ ಗಣೇಶ ಮಂದಿರ ಸಮೀಪ, ಡಾಲರ್ಸ್ ಕಾಲೋನಿ, ಎಚ್ಎಸ್ಆರ್ ಬಡಾವಣೆ ಐಪಿಎಸ್ ಕಾಲೋನಿ ರಸ್ತೆಯಲ್ಲಿ ತಲಾ ಒಂದು ಮರಗಳು ಉರಳಿ ಬಿದ್ದಿವೆ. ಹಲವು ಕಡೆಗಳಲ್ಲಿ ಮರ ಕೊಂಬೆಗಳು ಮುರಿದು ಬಿದ್ದ ವರದಿಯಾಗಿವೆ.
ತಡರಾತ್ರಿ ಮರಗಳು ಬಿದ್ದ ಪರಿಣಾಮ ದೃಷ್ಟವಶಾತ್ ಯಾವುದೇ ಹಾನಿ ಸಂಭವಿಸಿಲ್ಲ ಎಂದು ತಿಳಿದು ಬಂದಿದೆ. ದೂರಿನ ಮೇರೆಗೆ ಮಂಗಳವಾರ ಬೆಳಗ್ಗೆ ಬಿಬಿಎಂಪಿ ಸಿಬ್ಬಂದಿ ಆಯಾ ಸ್ಥಳಕ್ಕೆ ತೆರಳಿ ಮರ ತೆರವುಗೊಳಿಸಿ ಸಾರ್ವಜನಿಕ ಸಂಚಾರಕ್ಕೆ ಅನುಕೂಲ ಮಾಡಿದ್ದಾರೆ ಎಂದು ಬಿಬಿಎಂಪಿ ಅಧಿಕಾರಿಗಳು ಮಾಹಿತಿ ನೀಡಿದರು.

ತಗ್ಗು ಪ್ರದೇಶದ ಮನೆಗಳಿಗೆ ನುಗ್ಗಿದ ನೀರು
ತಡರಾತ್ರಿಯುದ್ದಕ್ಕೂ ಸುರಿದ ಜೋರು ಮಳೆಗೆ ಯಲಹಂಕ ವಲಯ ವ್ಯಾಪ್ತಿಯ ಟೆಲಿಕಾಂ ಲೇಔಟ್ಗಳಲ್ಲಿ ಕೆಲವು ಮನೆಗಳಿಗೆ ನೀರು ನುಗ್ಗಿದೆ. ಶೀರಾಂಪುರ ಮೂರನೇ ಅಡ್ಡರಸ್ತೆಯಲ್ಲಿನ ತಗ್ಗುಪ್ರದೇಶದ ಮನೆಗಳಿಗೆ ನೀರು ನುಗ್ಗಿದೆ. ಇದೇ ರೀತಿ ನಗರದ ವಿವಿಧೆಡೆ ತಗ್ಗು ಪ್ರದೇಶದಲ್ಲಿರುವ ಮನೆಗಳಿಗೆ ಮಳೆ ನುಗ್ಗಿದ್ದರಿಂದ ಮನೆ ಮಾಲೀಕರು ತೊಂದರೆ ಅನುಭವಿಸಿದರೆ, ಬೆಳಗ್ಗೆವರೆಗೂ ಮಳೆ ನೀರು ಹೊರ ಹಾಕಿದ್ದು ಕಂಡು ಬಂತು.

ರಸ್ತೆ ಮೇಲೆಲ್ಲ ಹರಿದ ನೀರು
ತಡರಾತ್ರಿವರೆಗೂ ನಗರದಲ್ಲಿ ಸಾಧಾರಣದಿಂದ ಭಾರೀ ಮಳೆ ಆಗಿದೆ. ಇದರಿಂದ ಕೆ. ಆರ್. ವೃತ್ತ, ರಾಜಾಜಿನಗರ, ಯಶವಂತಪುರ, ಸುಜಾತ ಬಸ್ ನಿಲ್ದಾಣ, ಓಕಳಿಪುರಂ, ಶಿವಾನಂದ ವೃತ್ತ, ಮಲ್ಲೇಶ್ವರಂ, ಕೆ. ಆರ್. ಮಾರುಕಟ್ಟೆ, ಟೌನ್ಹಾಲ್, ಹೆಬ್ಬಾಳ ರಸ್ತೆ ಅಂಡರ್ ಪಾಸ್ ಸೇರಿದಂತೆ ಅನೇಕ ಕಡೆಗಳಲ್ಲಿ ಕೆಲ ಕಾಲ ರಸ್ತೆಗಳ ಮೇಲೆ ಮಳೆ ನೀರು ಕೋಡಿ ಹರಿಯಿತು. ಈ ವೇಳೆ ವಾಹನ ಸವಾರರು ರಸ್ತೆ ದಾಟಲು ಪರಿತಪಿಸಿದರು. ಕೆಲವೆಡೆ ಸಂಚಾರ ದಟ್ಟಣೆಯೂ ಕಂಡು ಬಂತು.

ಪಶ್ಚಿಮ ವಲಯದಲ್ಲಿ ಹೆಚ್ಚು ಮಳೆ ದಾಖಲು
ಬೆಂಗಳೂರಿನ ಪಶ್ಚಿಮ ವಲಯದಲ್ಲಿ ಸೋಮವಾರ ಅತ್ಯಧಿಕ ಮಳೆ ದಾಖಲಾಗಿದೆ. ರಾಜಮಹಲ್ ಗುಟ್ಟಹಳ್ಳಿಯಲ್ಲಿ 76 ಮಿ.ಮೀ, ವಿದ್ಯಾಪೀಠ 61 ಮಿ.ಮೀ, ಸಂಪಂಗಿರಾಮನಗರ 57 ಮಿ.ಮೀ, ಎಚ್.ಗೊಲ್ಲಹಳ್ಳಿ 54 ಮಿ.ಮೀ, ಕೆಂಗೇರಿ 53 ಮಿ.ಮೀ, ಪುಲಕೇಶಿನಗರ 48 ಮಿ.ಮೀ, ಹೊರಮಾವು ಮತ್ತು ವಿಶ್ವನಾಥ ನಾಗೇನಹಳ್ಳಿಯಲ್ಲಿ ತಲಾ 46.5 ಮಿ.ಮೀ, ದೊಮ್ಮಲೂರು ಮತ್ತು ನಾಗಪುರ ತಲಾ 44.5 ಮಿ.ಮೀ, ಬಿಳೇಕಳ್ಳಿ 38ಮಿ.ಮೀ, ಸಂಪಂಗಿರಾಮನಗರ (2) 37.5 ಮಿ.ಮೀ, ದೊಡ್ಡಬಿದರಕಲ್ಲುಹಾಗೂ ಹಂಪಿನಗರ ತಲಾ 36 ಮಿ.ಮೀ, ಹೆಮ್ಮಿಗೆಪುರ 35 ಮಿ.ಮೀ ಮಳೆ ದಾಖಲಾಗಿದೆ. ಉಳಿದ ಬಡಾವಣೆಗಳ ಅನೇಕ ಪ್ರದೇಶಗಳಲ್ಲಿ ಹಗುರ ಮಳೆ ದಾಖಲಾಗಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ (ಕೆಎಸ್ಎನ್ಡಿಎಂಸಿ)ದ ಮಳೆ ವರದಿ ತಿಳಿಸಿದೆ.

ಮಂಗಳವಾರ ಕೂಡ ಭಾರೀ ಮಳೆ
ಸೋಮವಾರದಂತೆ ನಗರದಲ್ಲಿ ಮಂಗಳವಾರವು ಸಂಜೆ ನಂತರ ಜೋರು ಮಳೆ ಬರುವ ನಿರೀಕ್ಷೆ ಇದೆ. ಈ ಕಾರಣಕ್ಕೆ ಹವಾಮಾನ ಇಲಾಖೆ ಬೆಂಗಳೂರು ನಗರ ಜಿಲ್ಲೆಗೆ ಯೆಲ್ಲೋ ಅಲರ್ಟ್ ನೀಡಿದೆ. ಈ ವೇಳೆ ನಗರದಲ್ಲಿ ಸುಮಾರು 11 ಸೆಂ.ಮೀ. (110ಮಿ.ಮೀ.) ನಷ್ಟು ಮಳೆ ದಾಖಲಾಗಬಹುದು ಎಂದಿ ಅಂದಾಜಿಸಲಾಗಿದೆ. ಇಂದಿನ ವಾತಾವರಣ ನೋಡಿದರೆ ಬೆಳಗ್ಗೆಯಿಂದ ಬಿಸಿಲು ಕಂಡು ಮಧ್ಯಾಹ್ನದ ವೇಳೆಗೆ ಮೋಡ ಕವಿದ ವಾತಾವರಣವಿದೆ.












Click it and Unblock the Notifications