Bengaluru Rain: ಮೊದಲ ಮಳೆಗೆ ಬೆಂಗಳೂರು ಅಸ್ತವ್ಯಸ್ತ: ಇನ್ನೆರಡು ದಿನ ಕೂಡ ಮಳೆ ಅಬ್ಬರ
ಗುರುವಾರ ಬೆಂಗಳೂರಿನಲ್ಲಿ ಹಲವು ಕಡೆಗಳಲ್ಲಿ ಉತ್ತಮ ಮಳೆಯಾಗಿದ್ದು ಸಾಕಷ್ಟು ಅವಾಂತರ ಸೃಷ್ಟಿಯಾಗಿದೆ. ಕೋರಮಂಗಲ, ಹೆಚ್ಎಎಲ್, ಮಾರತ್ಹಳ್ಳಿ, ವಿದ್ಯಾಪೀಠ, ಗರುಡಾಚಾರ್ ಪಾಳ್ಯ, ಬೆಳ್ಳಂದೂರು, ಹೆಚ್ಎಸ್ಆರ್ ಲೇಔಟ್, ಬಿಟಿಎಂ ಲೇಔಟ್ ಸೇರಿದಂತೆ ಹಲವು ಭಾಗಗಳಲ್ಲಿ ಉತ್ತಮ ಮಳೆಯಾಗಿದೆ.
ನಗರದಲ್ಲಿ ಸುರಿದ ಮಳೆಯಿಂದಾಗಿ ಹಲವು ಕಡೆಗಳಲ್ಲಿ ರಸ್ತೆಗಳು ಮುಳುಗಡೆಯಾಗಿದ್ದು ವಾಹನ ಸಂಚಾರ ವ್ಯಸ್ತವಾಗಿತ್ತು. ಹಲವು ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದ್ದು, ಜನ ಪರದಾಡುವಂತಾಗಿದೆ. ಕಲ್ಯಾಣ ನಗರದ ಹೊರ ವರ್ತುಲ ರಸ್ತೆಯು ಜಲಾವೃತವಾಗಿದ್ದು ವಾಹನ ಸಂಚಾರಕ್ಕೆ ತೀವ್ರ ಅಡಚಣೆ ಉಂಟಾಗಿತ್ತು.

ರಾಜಾಜಿನಗರದಲ್ಲಿ ಬಿರುಗಾಳಿಗೆ ಬೃಹತ್ ಗಾತ್ರದ ಮರವೊಂದು ಉರುಳಿಬಿದ್ದ ಕಾರಣ ಮೂರು, ಎರಡು ಬೈಕ್ ಮತ್ತು ಗೂಡ್ಸ್ ಆಟೋಗೆ ಹಾನಿಯಾಗಿದೆ. ಮರ ತುಂಬಾ ಹಳೆಯದಾಗಿದ್ದು ತೆರವು ಮಾಡುವಂತೆ ಬಿಬಿಎಂಪಿ ಅಧಿಕಾರಿಗಳಿಗೆ ಮನವಿ ಮಾಡಿದರೂ ತಲೆ ಕೆಡಿಸಿಕೊಂಡಿಲ್ಲ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಿಲ್ಕ್ ಬೋರ್ಡ್, ಚಾಮರಾಜನಗರ, ಲಗ್ಗೆರೆ, ಯಶವಂತಪುರ, ಚಿಕ್ಕಪೇಟೆ, ಗಿರಿನಗರ, ನಾಯಂಡನಹಳ್ಳಿ, ಬಸವನಗುಡಿ, ಜಯನಗರ, ಬಿಟಿಎಂ ಲೇಔಟ್, ಬನಶಂಕರಿ, ಎಲೆಕ್ಟ್ರಾನಿಕ್ ಸಿಟಿ, ಬೊಮ್ಮನಹಳ್ಳಿ, ವೈಟ್ಫೀಲ್ಡ್ ಮುಂತಾದ ಭಾಗಗಳಲ್ಲಿ ಭಾರಿ ಮಳೆಯಾಗಿದೆ.
ಇನ್ನೂ ಮಳೆಗಾಲವೇ ಶುರುವಾಗಿಲ್ಲ ಇದಿನ್ನೂ ಬೇಸಿಗೆಯ ಮಳೆಯಾಗಿದ್ದು ಈ ಬಾರಿ ಉತ್ತಮ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ಕೊಟ್ಟಿದೆ. ಬೇಸಿಗೆಯಲ್ಲಿ ಸುರಿಯುತ್ತಿರುವ ಮಳೆಗೆ ನಗರದಲ್ಲಿ ಇಂತಹ ಪರಿಸ್ಥಿತಿ ಸೃಷ್ಟಿಯಾದರೆ ಮುಂದಿನ ದಿನಗಳಲ್ಲಿ ಪರಿಸ್ಥಿತಿ ಹೇಗಿರಬಹುದು ಎನ್ನುವುದನ್ನು ನೆನಪಿಸಿಕೊಂಡೇ ಜನ ಭಯಭೀತರಾಗಿದ್ದಾರೆ. ಬ್ರಾಂಡ್ ಬೆಂಗಳೂರು ಮಾಡುತ್ತೇವೆ ಎಂದು ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಸರ್ಕಾರ ಇಷ್ಟು ದಿನ ತೆಗೆದುಕೊಂಡಿರುವ ಕ್ರಮಗಳೇನು ಎಂದು ಪ್ರಶ್ನೆ ಮಾಡಲಾಗುತ್ತಿದೆ.
ಇನ್ನೆರಡು ದಿನ ಭಾರಿ ಮಳೆ
ಬೆಂಗಳೂರಿಗೆ ಗುರುವಾರ ಬಂದಿರುವುದು ಸಾಧಾರಣ ಮಳೆ ಮಾತ್ರ, ಇನ್ನೂ ಎರಡು ದಿನ ವ್ಯಾಪಕ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಶುಕ್ರವಾರ, ಶನಿವಾರ ಕೂಡ ನಗರದಲ್ಲಿ ಮಳೆ ಮುಂದುವರೆಯಲಿದೆ. ಯಲಹಂಕ, ಬೆಂಗಳೂರು ದಕ್ಷಿಣ, ಬೊಮ್ಮನಹಳ್ಳಿ ವಲಯದಲ್ಲಿ ಹೆಚ್ಚಿನ ಮಳೆಯಾಗುವ ಸಾಧ್ಯತೆ ಇದೆ.
ಇನ್ನೂ ಎರಡು ದಿನ ಮಳೆ ಇದೇ ರೀತಿ ಮುಂದುವರೆದರೆ ನಗರದ ಪರಿಸ್ಥಿತಿ ಇನ್ನಷ್ಟು ಹದಗಡೆಗಲಿದೆ. ಪ್ರತಿ ವರ್ಷ ಮಳೆ ಬಂದಾಗಲೂ ಸಮಸ್ಯೆಗಳು ಸೃಷ್ಟಿಯಾಗುತ್ತಲೇ ಇರುತ್ತವೆ. ಮಳೆ ಬಂದಾಗ ಕೊಡೆ ಹುಡುಕುವ ಅಭ್ಯಾಸ ಮಾಡಿಕೊಂಡಿರುವ ಬಿಬಿಎಂಪಿ ಅಧಿಕಾರಿಗಳು, ಪ್ರತಿ ಭಾರಿ ಸಮಸ್ಯೆ ಸರಿಪಡಿಸುವ ಆಶ್ವಾಸನೆ ನೀಡಿ ಕೈತೊಳೆದುಕೊಳ್ಳುತ್ತಿದ್ದಾರೆ.












Click it and Unblock the Notifications