ಪತ್ನಿ ಕೊಂದಿದ್ದ ಪತಿಗೆ ವಿಧಿಸಿದ್ದ ಶಿಕ್ಷೆ 7 ವರ್ಷಕ್ಕೆ ಇಳಿಸಿದ ಕೋರ್ಟ್
ಬೆಂಗಳೂರು, ಮೇ 26; ಪತ್ನಿಯನ್ನು ಕೊಲೆ ಮಾಡಿದ್ದ ಪತಿಗೆ ನೀಡಿದ್ದ ಜೀವಾವಧಿ ಶಿಕ್ಷೆಯನ್ನು ಕರ್ನಾಟಕ ಹೈಕೋರ್ಟ್ 7 ವರ್ಷಕ್ಕೆ ಇಳಿಕೆ ಮಾಡಿದೆ. ಅಲ್ಲದೇ, ಪತಿ ಉದ್ದೇಶಪೂರ್ವಕವಾಗಿ ಕೊಲೆ ಮಾಡಿಲ್ಲ, ಆ ಕ್ಷಣದಲ್ಲಿ ಆದ ಮಾನಸಿಕ ಆಘಾತದಲ್ಲಿ ಕೃತ್ಯ ಎಸಗಿದ್ದಾನೆಂದು ನ್ಯಾಯಾಲಯ ಹೇಳಿದೆ.
ದೊಡ್ಡಬಳ್ಳಾಪುರ ತಾಲ್ಲೂಕಿನ ದೊಡ್ಡಬೆಳವೆಂಗಲ ಹೋಬಳಿಯ ಬೊಮ್ಮನಹಳ್ಳಿಯ ರಾಜೇಶ್ ಬಿನ್ ವೆಂಕಟರಮಣಪ್ಪ ಸಲ್ಲಿಸಿದ್ದ ಕ್ರಿಮಿನಲ್ ಮೇಲ್ಮನವಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಬಿ. ವೀರಪ್ಪ ಹಾಗೂ ಕೆ. ಎಸ್. ಹೇಮಲೇಖಾ ಅವರಿದ್ದ ವಿಭಾಗೀಯಪೀಠ ಈ ಆದೇಶ ನೀಡಿದೆ.
ಆರೋಪಿಗೆ ವಿಧಿಸಲಾಗಿದ್ದ ಜೀವಾವಧಿ ಶಿಕ್ಷೆಯನ್ನು 7 ವರ್ಷಗಳ ಕಠಿಣ ಶಿಕ್ಷೆಗೆ ಮಾರ್ಪಡಿಸಿದ್ದು, ಆರೋಪಿಯು ತನ್ನ ಹೆಣ್ಣು ಮಕ್ಕಳ ಹೆಸರಿಗೆ 3 ಲಕ್ಷ ಮೊತ್ತವನ್ನು ಠೇವಣಿ ಇರಿಸಬೇಕೆಂದು ಕೋರ್ಟ್ ನಿರ್ದೇಶಿಸಿದೆ.

ಪತ್ನಿ ಕೊಲೆ ಉದ್ದೇಶವಿಲ್ಲ: ಅರ್ಜಿದಾರರ ಪರ ವಾದ ಮಂಡಿಸಿದ್ದ ವಕೀಲರು, 'ಆರೋಪಿಯು ತನ್ನ ಹೆಂಡತಿಯನ್ನು ಬೆಳಗಿನ ಜಾವದ 4 ಗಂಟೆಯಲ್ಲಿ, ಗ್ರಾಮದ ಹೊರ ವಲಯದ ಹೊಲದಲ್ಲಿ ಪರಪುರುಷನ ಜೊತೆ ಇದ್ದುದ್ದನ್ನು ನೋಡಿದ್ದ. ಈ ವೇಳೆ ಉಂಟಾದ ಗಂಭೀರ ಮತ್ತು ಹಠಾತ್ ಪ್ರಚೋದನೆಯಿಂದ ಸ್ವಯಂ ನಿಯಂತ್ರಣ ಹಾಗೂ ಮಾನಸಿಕ ಸಮತೋಲನ ಕಳೆದುಕೊಂಡು ಈ ಹತ್ಯೆ ನಡೆಸಿದ್ದಾನೆ' ಎಂದರು.
ಅಲ್ಲದೇ, ಪತಿ ಘಟನಾ ಸ್ಥಳಕ್ಕೆ ನಿರಾಯುಧನಾಗಿ ಹೋಗಿದ್ದ. ಹೆಂಡತಿಯನ್ನು ಕೊಲೆ ಮಾಡುವ ಯಾವುದೇ ಉದ್ದೇಶ ಹೊಂದಿರಲಿಲ್ಲ. ಹೀಗಾಗಿ, ಇದನ್ನು ಕೊಲೆಯೆಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ಪ್ರತಿಪಾದಿಸಿದ್ದರು.
ಪ್ರಕರಣದ ಹಿನ್ನೆಲೆ: ದೊಡ್ಡಬೆಳವೆಂಗಲ ಹೋಬಳಿಯ ಬೊಮ್ಮನಹಳ್ಳಿ ನಿವಾಸಿ ರಾಜೇಶ್ ವಿವಾಹ ತಪಸೀಹಳ್ಳಿಯ ಲಕ್ಷ್ಮೀ ಎನ್ನುವವರ ಜೊತೆ 2010ರ ಅಕ್ಟೋಬರ್ 22ರಂದು ನೆರವೇರಿತ್ತು. ತನಗೆ ಈ ವಿವಾಹ ಇಷ್ಟವಿಲ್ಲವೆಂದು, ತಾನು ರಾಜೇಶನ ಜೊತೆ ಬಾಳ್ವೆ ಮಾಡುವುದಿಲ್ಲವೆಂದು ಲಕ್ಷ್ಮೀ 2011ರ ಸೆಪ್ಟೆಂಬರ್ನಲ್ಲಿ ಹಿರಿಯರ ಸಮ್ಮುಖದಲ್ಲಿ ನಡೆದಿದ್ದ ಪಂಚಾಯಿತಿಯಲ್ಲಿ ತಿಳಿಸಿದ್ದರು.
ಈ ಸಮಯದಲ್ಲಿ ಆಕೆ, ರಾಜೇಶ್ ಎರಡನೆ ಮದುವೆಯಾಗಲು ನನಗೆ ಯಾವುದೇ ಅಭ್ಯಂತರವಿಲ್ಲ ಎಂದು ಒಪ್ಪಿಗೆ ಪತ್ರ ಬರೆದುಕೊಟ್ಟಿದ್ದರು. ಅದರಂತೆ ರಾಜೇಶ್ ಎರಡನೆ ಮದುವೆಯಾಗಿದ್ದರು. ಲಕ್ಷ್ಮೀಗೆ ಒಂದು ಹೆಣ್ಣು ಮಗು ಜನಿಸಿತ್ತು. ನಂತರ ಉಂಟಾದ ಕೌಟುಂಬಿಕ ವ್ಯಾಜ್ಯದಲ್ಲಿ ರಾಜೇಶ್ ಹಾಗೂ ಅವರ ಕುಟುಂಬದ ಸದಸ್ಯರ ವಿರುದ್ಧ ಭಾರತೀಯ ದಂಡ ಸಂಹಿತೆ-1860ರ (ಐಪಿಸಿ) ಕಲಂ 498ಎ ಅನುಸಾರ 2015ರಲ್ಲಿ ಲಕ್ಷ್ಮೀ ಕ್ರಿಮಿನಲ್ ಪ್ರಕರಣ ದಾಖಲಿಸಿದ್ದರು.

ಜೀವನ ನಿರ್ವಹಣೆಗಾಗಿ ಲಕ್ಷ್ಮೀ ಸಲ್ಲಿಸಿದ್ದ ಅರ್ಜಿಗೆ ಅನುಗುಣವಾಗಿ ನ್ಯಾಯಾಲಯ ಪ್ರತಿ ತಿಂಗಳೂ 2 ಸಾವಿರ ನೀಡುವಂತೆ ಆದೇಶಿಸಿತ್ತು. ಇಬ್ಬರು ಜೊತೆಗೂ ಸಂಸಾರ ನಡೆಸುತ್ತಿದ್ದರು. ಅದೊಂದು ದಿನ ಲಕ್ಷ್ಮೀ ಪರಪುರುಷನ ಜೊತೆಯಲ್ಲಿ ಇರುವುದನ್ನು ಕಂಡು ಪತಿ ಕುಪಿತರಾನು. ಅವಳು ತೊಟ್ಟಿದ್ದ ವೇಲ್ನಿಂದಲೇ ಅವಳ ಕುತ್ತಿಗೆಗೆ ಬಿಗಿದು ಅವಳನ್ನು ಸಾಯಿಸಿದ್ದರು. ಈ ವೇಳೆ ಆಕೆಯ ಜೊತೆಗಿದ್ದ ಪರಪುರುಷ ಸ್ಥಳದಿಂದ ಓಡಿ ಹೋಗಿದ್ದ.
ಆದರೆ, ತಾನು ಮಾಡಿದ ಅಪರಾಧವನ್ನು ಮುಚ್ಚಿಡಲು ಮನಸ್ಸಿಲ್ಲದೆ, ತನ್ನ ಗೆಳೆಯ ರಾಜಣ್ಣನ ಬಳಿ ಹೋಗಿ ನಡೆದ ಸಂಗತಿಯನ್ನೆಲ್ಲ ವಿವರಿಸಿ, ಇದನ್ನು ಪೊಲೀಸರಿಗೆ ತಿಳಿಸುವಂತೆ ಹೇಳಿದ್ದರು. ರಾಜಣ್ಣ ದಾಖಲಿಸಿದ ದೂರಿನ ಮೇರೆಗೆ ದೊಡ್ಡಬೆಳವೆಂಗಲ ಪೊಲೀಸರು ಕೊಲೆ ಪ್ರಕರಣವನ್ನು ದಾಖಲಿಸಿ, ಆರೋಪಿ ರಾಜೇಶನನ್ನು ಬಂಧಿಸಿದ್ದರು.
ನಂತರ ಮ್ಯಾಜಿಸ್ಟ್ರೇಟ್ ಸಮಕ್ಷಮದಲ್ಲಿ ಆರೋಪಿ ತುಂಡರಿಸಿ ಹೂತು ಹಾಕಿದ್ದ ದೇಹದ ಭಾಗಗಳನ್ನು ಹೊರ ತೆಗೆದು ತನಿಖೆ ಕೈಗೊಳ್ಳಲಾಗಿತ್ತು. ತನಿಖೆ ಪೂರ್ಣಗೊಂಡ ನಂತರ ಆರೋಪಿಯ ವಿರುದ್ಧ ಐಪಿಸಿ ಕಲಂ 302, 201 ಮತ್ತು 203ರ ಅಡಿಯಲ್ಲಿ ವಿಚಾರಣಾ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಲಾಗಿತ್ತು.
ವಿಚಾರಣೆ ನಡೆಸಿದ್ದ ದೊಡ್ಡಬಳ್ಳಾಪುರ 4ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ರಮೇಶ ದುರುಗಪ್ಪ ಏಕಬೋಟೆ, ಆರೋಪಿಯ ಕೃತ್ಯವನ್ನು ಪರಿಗಣಿಸಿ ಐಪಿಸಿ ಕಲಂ 302, 201 ಹಾಗೂ 203 ಅಡಿಯಲ್ಲಿ ಜೀವಾವಧಿ ಶಿಕ್ಷೆ ಹಾಗೂ 45 ಸಾವಿರ ರೂ. ದಂಡ ವಿಧಿಸಿ ಆದೇಶಿಸಿದ್ದರು. ಈ ಆದೇಶ ಪ್ರಶ್ನಿಸಿ ರಾಜೇಶ್ ಹೈಕೋರ್ಟ್ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು












Click it and Unblock the Notifications