ಹಜ್ ಯಾತ್ರಿಗಳು ಶಾಂತಿಯುತ ಸಮಾಜಕ್ಕಾಗಿ ಪ್ರಾರ್ಥಿಸಿ
ಬೆಂಗಳೂರು, ಸೆ. 13 : ಯಲಹಂಕ ಹೋಬಳಿಯ ತಿರುಮೇನಹಳ್ಳಿಯಲ್ಲಿ ನಿರ್ಮಿಸಲಾಗುತ್ತಿರುವ ಹಜ್ಘರ್ಗೆ ಈ ವರ್ಷದ ಬಜೆಟ್ನಲ್ಲಿ 17 ಕೋಟಿ ಅನುದಾನ ನೀಡಲಾಗಿದೆ. ಮುಂದಿನ ವರ್ಷದ ಹಜ್ ಶಿಬಿರ ಈ ಹಜ್ಘರ್ನಲ್ಲಿಯೇ ನಡೆಯಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಶುಕ್ರವಾರ ನಗರದ ಖುದ್ದೂಸ್ ಸಾಹೇಬ್ ಈದ್ಗಾ ಮೈದಾನದಲ್ಲಿ 2014ರ ಹಜ್ ಯಾತ್ರೆಗೆ ಚಾಲನೆ ನೀಡಿ ಮಾತನಾಡಿದ ಸಿಎಂ ಸಿದ್ದರಾಮಯ್ಯ ಅವರು, ಗುಲ್ಬರ್ಗ ಹಾಗೂ ಮಂಗಳೂರಿನಲ್ಲಿ ತಲಾ ಎರಡು ಎಕರೆ ಜಾಗದಲ್ಲಿ ನಿರ್ಮಿಸಲಾಗುತ್ತಿರುವ ಹಜ್ಘರ್ಗಳಿಗೂ ತಲಾ ಒಂದು ಕೋಟಿ ಅನುದಾನ ಪ್ರಕಟಿಸಲಾಗಿದೆ ಎಂದರು. ಹಜ್ಯಾತ್ರಿಗಳು ಶಾಂತಿ ಮತ್ತು ಭದ್ರತೆಗಾಗಿ ಪ್ರಾರ್ಥನೆ ಮಾಡಿ ಎಂದು ಸಿಎಂ ಕರೆ ನೀಡಿದರು.

ಮಕ್ಕಾ ಪಟ್ಟಣದ ಪವಿತ್ರ ಕಾಬಾ ಮಸೀದಿ ವಿಸ್ತರಣಾ ಕಾರ್ಯವು ನಡೆಯತ್ತಿರುವ ಹಿನ್ನೆಲೆಯಲ್ಲಿ ಸೌದಿ ಅರೇಬಿಯಾದ ಸರ್ಕಾರ ವಿಶ್ವದ ಎಲ್ಲಾ ದೇಶಗಳಿಂದ ಹಜ್ ಯಾತ್ರೆಗೆ ಆಗಮಿಸುವ ಯಾತ್ರಾರ್ಥಿಗಳ ಸಂಖ್ಯೆಯಲ್ಲಿ ಶೇಕಡಾ 20 ರಷ್ಟು ಕಡಿತಗೊಳಿಸಿದೆ. ಅಂತೆಯೇ ಭಾರತದ ಯಾತ್ರಿಗಳ ಸಂಖ್ಯೆಯೂ ಕಡಿಮೆಯಾಗಿದ್ದು, ರಾಜ್ಯದಿಂದ 5,193 ಯಾತ್ರಿಗಳು ತೆರಳಲಿದ್ದಾರೆ ಎಂದು ತಿಳಿಸಿದರು. [ಮಂಗಳೂರಿನಲ್ಲಿ ಹಜ್ ಯಾತ್ರೆಗೆ ಬೇಗ್ ಚಾಲನೆ]
ಮಂಗಳೂರಿನಿಂದ ಈಗಾಗಲೇ 731 ಮಂದಿ ಯಾತ್ರೆಗೆ ತೆರಳಿದ್ದಾರೆ. ಅಲ್ಲದೆ ರಾಜ್ಯದ ಯಾತ್ರಿಗಳು ಗೋವಾ ವಿಮಾನ ನಿಲ್ದಾಣದ ಮೂಲಕ, ಹೈದರಾಬಾದ್ ವಿಮಾನ ನಿಲ್ದಾಣದ ಮೂಲಕವೂ ಯಾತ್ರೆಗೆ ತೆರಳಲಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದರು.

ಈ ಸಂದರ್ಭದಲ್ಲಿ ಮಾತನಾಡಿದ ಮೂಲಸೌಕರ್ಯ ಅಭಿವೃದ್ಧಿ ಹಾಗೂ ಹಜ್ ಸಚಿವ ಆರ್. ರೋಷನ್ ಬೇಗ್ ಅವರು, ತಿರುಮೇನಹಳ್ಳಿಯಲ್ಲಿ ನಿರ್ಮಿಸಲಾಗುತ್ತಿರುವ ಹಜ್ಘರ್ನಲ್ಲಿ ಪರಸ್ಥಳದ ಮುಸ್ಲಿವ್ಮರಿಗೆ ವಾಸ್ತವ್ಯದ ಸೌಲಭ್ಯ ಹಾಗೂ ವಿವಿಧ ತರಬೇತಿ ಕಾರ್ಯಕ್ರಮಗಳನ್ನು ವರ್ಷವಿಡಿ ಹಮ್ಮಿಕೊಳ್ಳಾಗುವುದು ಎಂದರು. [ಹಜ್ ಯಾತ್ರೆಗೆ 5ಸಾವಿರ ಯಾತ್ರಿಕರು]
ಶುಕ್ರವಾರ ಬೆಂಗಳೂರಿನಿಂದ ಹೊರಟ ಮೊದಲ ತಂಡದಲ್ಲಿ 231 ಮಂದಿ ಯಾತ್ರೆಗೆ ತೆರಳಿದರು. ಸಮಾರಂಭದಲ್ಲಿ ಗೃಹ ಸಚಿವ ಕೆ.ಜೆ. ಜಾರ್ಜ್, ಆರೋಗ್ಯ ಸಚಿವ ಯು.ಟಿ. ಖಾದರ್, ಪೌರಾಡಳಿತ, ಅಲ್ಪಸಂಖ್ಯಾತರ ಕಲ್ಯಾಣ ಮತ್ತು ವಕ್ಫ್ ಸಚಿವ ಖಮರುಲ್ ಇಸ್ಲಾಂ ಮುಂತಾದವರು ಪಾಲ್ಗೊಂಡಿದ್ದರು.












Click it and Unblock the Notifications