Darshan Case Update: ದರ್ಶನ್ ವಾಟ್ಸಾಪ್ ಕರೆಗೆ ಮೊಬೈಲ್-ಸಿಮ್ ಪೂರೈಸಿದ್ದವನ ಬಂಧನ
ಬೆಂಗಳೂರು, ಅಕ್ಟೋಬರ್ 25: ನಟ ದರ್ಶನ್ ತೂಗುದೀಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ಆಗ್ನೇಯ ವಿಭಾಗದ ಪೊಲೀಸರು ತನಿಖೆ ಮುಂದುವರೆಸಿದ್ದಾರೆ. ಬೆಂಗಳೂರು ಪರಪ್ಪನ ಅಗ್ರಹಾರ ಜೈಲಿನಲ್ಲಿ ಬಂಧಿತ ನಟನಿಗೆ ರಾಜಾತಿಥ್ಯ ನೀಡಲಾಗುತ್ತಿದೆ ಎಂಬ ಆರೋಪ ಕುರಿತು ಪೊಲೀಸರು ತನಿಖೆ ಕೈಗೊಂಡಿದ್ದರು. ಇದೀಗ ಮತ್ತೊಬ್ಬ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಇದೇ ವ್ಯಕ್ತಿ ಅಂದು ಜೈಲಿನಲ್ಲಿ ನಟನಿಗೆ ಪರೋಕ್ಷವಾಗಿ ಸಂಕಷ್ಟ ತಂದೊಡ್ಡಿದ್ದ ಎಂದು ತಿಳಿದು ಬಂದಿದೆ.
ನಟ ದರ್ಶನ್ ಜೈಲಿನಲ್ಲಿ ಕಾಫಿ ಮಗ್, ಕೈಲಿ ಸಿಗರೇಟ್ ಹಿಡಿದಿದ್ದ ಫೋಟೋ ವ್ಯಾಪಕವಾಗಿ ವೈರಲ್ ಆಗಿತ್ತು. ಅದಾದ ಬಳಿಕ ನಟ ದರ್ಶನ್ ಬೆಳ್ಳಾರಿ ಜೈಲಿಗೆ ಶಿಫ್ಟ್ ಆಗುವಂತಾಯಿತು. ಅಲ್ಲದೇ ನಟ ದರ್ಶನ್ ಫ್ಯಾನ್ಸ್ ವೊಬ್ಬರಿಗೆ ವಿಡಿಯೋ ಕರೆಯಲ್ಲಿ ಮಾತನಾಡಿದ್ದ ಬಗ್ಗೆಯು ಪೊಲೀಸರು ತನಿಖೆ ತೀವ್ರಗೊಳಿಸಿದ್ದರು. ಇದೀಗ ಗುರುವಾರ (ಅಕ್ಟೋಬರ್ 24) ದಂದು ಟ್ರಾವೆಲ್ ಏಜೆನ್ಸಿ ಮಾಲೀಕನನ್ನು ಪೊಲೀಸರು ಬಂಧಿಸಿದ್ದಾರೆ.

ಬೆಂಗಳೂರು ಜೈಲಿನಲ್ಲಿದ್ದಾಗ ನಟ ದರ್ಶನ್ ಜೈಲಿನಿಂದ ವಾಟ್ಸಾಪ್ ಕರೆ ಮಾಡಿದ್ದ ವಿಡಿಯೋ ವೈರಲ್ ಆಗಿತ್ತು. ಹಾಗಾದರೆ ಜೈಲಿಗೆ ಸಿಮ್ ಕಾರ್ಡ್ ಮತ್ತು ಮೊಬೈಲ್ ಫೋನ್ ಸರಬರಾಜು ಮಾಡಿದ್ದು ಟ್ರಾವೆಲ್ ಏಜೆನ್ಸಿಯವನೆಂದು ಪತ್ತೆ ಆಗಿದ್ದು, ಆತನನ್ನು ಬಂಧಿಸಿದ್ದಾರೆ.
ಈ ಬಂಧಿತ ವ್ಯಕ್ತಿ ನಗರದ ಬಾಣಸವಾಡಿಯ ಟೂರ್ಸ್ ಮತ್ತು ಟ್ರಾವೆಲ್ ಏಜೆನ್ಸಿಯ ಮಾಲೀಕ ಮಣಿವಣ್ಣನ್ ಎಂದು ಗುರುತಿಸಲಾಗಿದೆ. ಈ ಮಣಿವಣ್ಣನ್ ಜೈಲಿನಲ್ಲಿರುವ ರೌಡಿ ಧರ್ಮ ಎಂಬಾತನಿಗೆ ಸಿಮ್ ಕಾರ್ಡ್ ಹಾಗೂ ಮೊಬೈಲ್ ಅನ್ನು ನೀಡಿದ್ದ. ಇದರಲ್ಲಿ ಜೈಲಾಧಿಕಾರಿಗಳ ಶಾಮೀಲು ಇದೆ ಎನ್ನಲಾಗಿದೆ. ಸದ್ಯ ಆರೋಪಿಯ ಕೃತ್ಯ ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಜೈಲಿನಲ್ಲಿಯೇ ಇದ್ದ ಧರ್ಮ ಎಂಬ ರೌಡಿ ದರ್ಶನ್ ಅಭಿಮಾನಿಯಾಗಿದ್ದ. ಆತ ತನ್ನ ಕಟುಂಬಕ್ಕೆ ಕರೆ ಮಾಡಿದಾಗ ವಾಟ್ಸಾಪ್ ಕರೆ ಯಲ್ಲಿ ನಟ ದರ್ಶನ್ ಅವರನ್ನು ತೋರಿಸಿದ್ದ. ಈ ಸ್ಕ್ರೀನ್ ರೆಕಾರ್ಡ್ ವಿಡಿಯೋ ಎಲ್ಲಡೆ ವೈರಲ್ ಆಗಿತ್ತು. ದರ್ಶನ್ ಫೋಟೋ, ಈ ವಿಡಿಯೋ ಭಾರಿ ಸುದ್ದು ಮಾಡಿತ್ತು. ಎಷ್ಟರ ಮಟ್ಟಿಗೆ ಅಂದರೆ, ನಟ ದರ್ಶನ್ ಅನ್ನು ಬೆಂಗಳೂರಿನ ಪರಪ್ಪನ ಅಗ್ರಹಾರದಿಂದ ಬಳ್ಳಾರಿ ಜೈಲಿಗೆ ಸ್ಥಳಾಂತರಿಸುವಂತೆ ಮಾಡಿತು.
ಸಿಮ್ ಸಂಖ್ಯೆ ಪತ್ತೆ: ಮೆಜೆಸ್ಟಿಕ್ನಲ್ಲಿ ಮೊಬೈಲ್ ಖರೀದಿ
ಇದೆಲ್ಲ ಘಟನೆ ಬೆಳಕಿಗೆ ಬರುತ್ತಿದ್ದಂತೆ ಮೊಬೈಲ್ ಹೊಂದಿದ್ದ ಕೈದಿ ಧರ್ಮ ಫೋನ್ ಮತ್ತು ಸಿಮ್ ಕಾರ್ಡ್ ಅನ್ನು ಶೌಚಾಲಯದಲ್ಲಿ ಫ್ಲಶ್ ಮಾಡಿ ಏನು ಆಗಿಲ್ಲವೆಂಬಂತೆ ವರ್ತಿಸಿದ್ದ. ಬಳಿಕ ಪೊಲೀಸರು ತನಿಖೆ ಆರಂಭಿಸಿದ್ದ ಆತನನ್ನು ವಿಚಾರಿಸಿದ್ದಾರೆ. ಸಿಮ್ ಸಂಖ್ಯೆಯನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿಸಿದ ಬಳಿಕ ಆತ ತಪ್ಪೊಪ್ಪಿಕೊಂಡಿದ್ದಾರೆ. ಪೋನ್, ಸಿಮ್ ಸರಬರಾಜು ತಾನೇ ಮಾಡಿದ್ದಾಗಿ ಒಪ್ಪಿಕೊಂಡಿದ್ದಾನೆ.. ಈತ ಮೆಜೆಸ್ಟಿಕ್ನಲ್ಲಿರುವ ಮೊಬೈಲ್ ಅಂಗಡಿಯಲ್ಲಿ ಕಡಿಮೆ ದುಡ್ಡಿಗೆ ಸೆಕೆಂಡ್ ಹ್ಯಾಂಡ್ ಫೋನ್ ಖರೀದಿಸಿದ್ದ. ಅದಕ್ಕೊಂದು ಸಿಮ್ ಹಾಕಿ ಎರಡನ್ನು ಧರ್ಮಗೆ ಪೂರೈಸಿದ್ದ ಎಂಬ ಮಾಹಿತಿ ಲಭ್ಯವಾಗಿದೆ.
ಇದೇ ತನಿಖೆ ಭಾಗವಾಗಿ ಪೊಲೀಸರು ಮೆಜೆಸ್ಟಿಕ್ನಲ್ಲಿರುವ ಮೊಬೈಲ್ ಅಂಗಡಿ ಮಾಲೀಕನ ಹೇಳಿಕೆಯನ್ನು ದಾಖಲಿಸಿಕೊಂಡಿದ್ದಾರೆ. ಅದನ್ನು ಸಾಕ್ಷ್ಯವಾಗಿ ಪರಿಗಣಿಸಿದ್ದಾರೆ. ಇನ್ನೂ ಜೈಲು ಅಧಿಕಾರಿಗಳ ಕೈವಾಡ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಬೆನ್ನು ನೋವಿಗೆ ಚಿಕಿತ್ಸೆ
ಸದ್ಯ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಬಳ್ಳಾರಿ ಜೈಲಿನಲ್ಲಿ ಬೆನ್ನು ನೋವುನಿಂದ ಒದ್ದಾಡುತ್ತಿದ್ದರು. ಅವರನ್ನು ಬಳ್ಳಾರಿಯ ವಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಎಂಆರ್ಐ ಸ್ಕ್ಯಾನ್ ನಲ್ಲಿ ಅವರಿಗೆ ಆರೋಗ್ಯ ಸಮಸ್ಯೆ ಇರುವುದು ದೃಢವಾಗಿದೆ. ವೈಧ್ಯಾಧಿಕಾರಿಗಳು ಸೂಕ್ತ ಚಿಕಿತ್ಸೆ ನೀಡುತ್ತಿದ್ದಾರೆ. ಜೈಲಾಧಿಕಾರಿಗಳ ಮೇಲ್ವಿಚಾರಣೆಯಲ್ಲಿ ಚಿಕಿತ್ಸೆ ಕೊಡಲಾಗುತ್ತಿದೆ. ಇತ್ತೀಚೆಗೆ ನಟ ದರ್ಶನ್ ಸಲ್ಲಿಸಿದ್ದ ಜಾಮೀನು ಅರ್ಜಿ ವಿಚಾರಣೆ ಹೈಕೋರ್ಟ್ನಲ್ಲಿ ಮುಂದೂಡಿಕೆ ಆಗಿದೆ.
ಸದ್ಯ ನಟ ದರ್ಶನ್ ಅವರ ಜಾಮೀನು ಅರ್ಜಿ ಕೆಳ ಹಂತದ ನ್ಯಾಯಾಲಯದಲ್ಲಿ ವಜಾಗೊಂಡಿತ್ತು. ಇದಾದ ಬಳಿಕ ಅವರು, ಹೈಕೋರ್ಟ್ಗೆ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದಾರೆ. ಸದ್ಯ ಮೊನ್ನೆಯಷ್ಟೇ ಅರ್ಜಿ ವಿಚಾರಣೆ ನಡೆಸಿರುವ ನ್ಯಾಯಪೀಠ ವಾದ ವಿವಾದ ಆಲಿಸಿದೆ. ಅರ್ಜಿ ವಿಚಾರಣೆಯನ್ನು ಮುಂದಿನ ಅಕ್ಟೊಬರ್ 28ರಂದು ಮುಂದೂಡಿಕೆ ಮಾಡಿದೆ.
ಈ ಬಾರಿ ಜಾಮೀನು ಸಿಕ್ಕೆ ಸಿಗುವ ವಿಶ್ವಾಸದಲ್ಲಿ ನಟ ದರ್ಶನ್ ಇದ್ದಾರೆ. ಇತ್ತ ಅವರಿಗೆ ಬೆನ್ನು ನೋವು ಸಮಸ್ಯೆ ತೀವ್ರಗೊಂಡಿದೆ. ಬೆಂಗಳೂರಿನಲ್ಲೇ ಚಿಕಿತ್ಸೆ ಪಡೆಯುವುದಾಗಿ ಹಠ ಹಿಡಿದಿದ್ದ ನಟ ದರ್ಶನ್ ಅವರು ಇದೀಗ ಬಳ್ಳಾರಿ ವಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.












Click it and Unblock the Notifications