ರಾಘವೇಶ್ವರ ಶ್ರೀಗಳಿಂದ ಆರ್ ಎಸ್ ಎಸ್ ಬಗ್ಗೆ ಮೆಚ್ಚುಗೆ ಮಾತು
ಬೆಂಗಳೂರು, ಆಗಸ್ಟ್, 21 : ರಾಷ್ಟ್ರೀಯ ಸ್ವಯಂ ಸೇವಾ ಸಂಘಗಳು(ಆರ್ ಎಸ್ ಎಸ್) ದೇಶ ಸೇವಾ ಮನೋಭಾವದಂತಹ ವಿಭಿನ್ನ ಆಲೋಚನೆಗಳು ಬೆಳೆಯಲು ಪ್ರೇರಣೆಯಾಗಲಿದೆ ಎಂದು ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀಸ್ವಾಮೀಜಿ ಹೇಳಿದರು.
ಬೆಂಗಳೂರಿನ ಗಿರಿನಗರ ರಾಮಾಶ್ರಮದಲ್ಲಿ ನಡೆಯುತ್ತಿರುವ 2 ತಿಂಗಳ ಛಾತ್ರಾ ಚಾತುರ್ಮಾಸ್ಯದ 21ನೇ ದಿನದ ಧಾರ್ಮಿಕ ಕಾರ್ಯಕ್ರಮದಲ್ಲಿ ನ. ಕೃಷ್ಣಪ್ಪ ಅವರ ನಮ್ಮ ಮಕ್ಕಳಿಗೆ ಎಂತಹ ಶಿಕ್ಷಣ ಬೇಕು? ಎಂಬ ಪುಸ್ತಕವನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದರು.[ಪ್ರಶ್ನೆ ಹುಟ್ಟಿದಾಗ ಬದುಕು ಆರಂಭವಾಗುವುದು: ರಾಘವೇಶ್ವರ ಶ್ರೀ]
ರಾಷ್ಟ್ರೀಯ ಸ್ವಯಂ ಸೇವಾ ಸಂಘದ ಮೂಲಕ ಸೇವೆ ಸಲ್ಲಿಸಿದ ನ. ಕೃಷ್ಣಪ್ಪ ಅವರಿಗೆ ಶಿಕ್ಷಣ ಕ್ಷೇತ್ರದಲ್ಲಿ ಆಸಕ್ತಿ ಪರಿಣತಿ ವಿಶಿಷ್ಟ ಪರಿಕಲ್ಪನೆ ಇತ್ತು. ಅವರ ಚಿಂತನಾ ಲಹರಿಯನ್ನು ಎಲ್ಲಾ ಪೋಷಕರು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಅವರ ಕಾರ್ಯವೈಖರಿ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದರು.
ಚಾತುರ್ಮಾಸ್ಯ ಕಾರ್ಯಕ್ರಮದಲ್ಲಿ ಯು.ಎಸ್ ಸುಬ್ರಾಯ ಭಟ್ ಹಾಗೂ ಅವರ ಕುಟುಂಬದವರಿಂದ ಸರ್ವಸೇವೆ ನೆರವೇರಿತು. ಯೋಗದಲ್ಲಿ ವಿಶೇಷ ಸಾಧನೆ ಮಾಡಿದ ಪೂಜಾ ಭಟ್ ಅವರಿಗೆ ಛಾತ್ರಾ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು.
ಶೋಭಾ ಅವರು ಡಾ. ಗಜಾನನ ಶರ್ಮಾ ರಚಿಸಿದ ಗೀತೆಗಳನ್ನು ಕೊಡವ ಭಾಷೆಗೆ ತರ್ಜುಮೆಗೊಳಿಸಿ ಬಹಳ ಸುಶ್ರಾವ್ಯವಾಗಿ ಪ್ರಸ್ತುತ ಪಡಿಸಿದರು.
ಈ ಸಂದರ್ಭದಲ್ಲಿ ಮಹಾಮಂಡಲ ಅಧ್ಯಕ್ಷ ಡಾ. ವೈ. ಕೃಷ್ಣ ಮೂರ್ತಿ, ಜಿ.ಪಂ ಸದಸ್ಯ ಪ್ರದೇಪ್ ನಾಯಕ್ ದೇವರಭಾವಿ, ಕೊರ್ಗಿ ಶಂಕರ ನಾರಾಯಣ ಉಪಾಧ್ಯಾಯ ಮತ್ತಿತರರು ಉಪಸ್ಥಿತರಿದ್ದರು.