Cauvery dispute: ಒಂದೇ ಪಕ್ಷದ 25 ಜನ ಸಂಸದರಿದ್ದೀರ, ನಾಚಿಕೆ ಆಗ್ಬೇಕು ನಿಮ್ ಜನ್ಮಕ್ಕೆ, ರೈತ ಸಂಘಟನೆಗಳ ಆಕ್ರೋಶ
ಬೆಂಗಳೂರು, ಸೆಪ್ಟೆಂಬರ್, 23: ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವುದನ್ನು ಖಂಡಿಸಿ ಈಗಾಗಲೇ ರಾಜ್ಯದೆಲ್ಲೆಡೆ ಆಕ್ರೋಶಗಳು ಭುಗಿಲೆದ್ದಿವೆ. ಅದೇ ರೀತಿ ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಜಯ ಕರ್ನಾಟಕ ಸಂಘಟನೆ ಪ್ರತಿಭಟನೆ ನಡೆಸಿ ರಾಜ್ಯ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದೆ.
ಈಗಾಗಲೇ ಹಲವು ಸಂಘಟನೆಗಳು ಫ್ರೀಡಂಪಾರ್ಕ್ನಿಂದ ಹೊರಟು ವಿಧಾನಸೌಧ ಮುತ್ತಿಗೆ ಹಾಕಲು ಮುಂದಾಗಿವೆ. ಇನ್ನು ಈ ಬಗ್ಗೆ ಮಾತನಾಡಿದ ಜಯ ಕರ್ನಾಟಕ ರಾಜ್ಯಾಧ್ಯಕ್ಷ ಜಗದೀಶ್, ರಾಜ್ಯ ಸಿಎಂ, ಡಿಸಿಎಂ ಅಧಿಕಾರ ಸ್ವೀಕರಿಸುವ ವೇಳೆ ದೇವರ ಹೆಸರಿನಲ್ಲಿ ಪ್ರಮಾಣ ಮಾಡಿದ್ದರು. ಅಲ್ಲದೆ ನೆಲ, ಜಲ ಸಂರಕ್ಷಣೆ ಮಾಡುವುದಾಗಿ ಹೇಳಿದ್ದರು. ಆದರೂ ಇವತ್ತು ನಮ್ಮ ನೀರನ್ನು ಉಳಿಸಿಕೊಳ್ಳುವಲ್ಲಿ ವಿಫಲಾಗಿದ್ದಾರೆ ಎಂದು ಅಸಮಾಧಾನ ಹೊರಹಾಕಿದರು.

ನಮ್ಮ ನಾಡು ಸಂಕಷ್ಟದಲ್ಲಿರುವಾಗ ಬೇರೆ ರಾಜ್ಯದ ನೀರು ಬಿಡುತ್ತಿರುವುದು ಸರಿಯಿಲ್ಲ. ತಮಿಳುನಾಡಿಗೆ ನೀರು ಹರಿಸುತ್ತಿರುವುದು ಖಂಡನೀಯವಾಗಿದೆ. ಕನ್ನಡಪರ ಸಂಘಟನೆಗಳು, ರೈತರನ್ನು ಹೊರಗಿಟ್ಟು ನಿರ್ಧಾರ ತೆಗೆದುಕೊಳ್ಳುತ್ತಾರೆ. ಇವರ ಜನ್ಮಕ್ಕೆ ನಾಚಿಕೆಯಾಗಬೇಕು. ಅಲ್ಲದೆ ಎಲ್ಲಾ ಪಕ್ಷಗಳು ಬರೀ ಆರೋಪಗಳನ್ನೇ ಮಾಡಿಕೊಳ್ಳುತ್ತಿದ್ದಾರೆ ಹೊರತು ನೀರನ್ನು ಉಳಿಸುವ ಕೆಲಸ ಮಾಡುತ್ತಿಲ್ಲ ಎಂದು ವಾಗ್ದಾಳಿ ನಡೆಸಿದರು.
ಇನ್ನು ಬ್ರಾಂಡ್ ಬೆಂಗಳೂರು ಮಾಡಲು ಹೊರಟಿರುವ ಉಪಮುಖ್ಯಮಂತ್ರಿಗಳೇ ಸ್ವಲ್ಪ ಬೆಂಗಳೂರಿನ ಕಡೆ ಗಮನ ಕೊಡಿ. ಬಂಗಾರಪ್ಪರಂತೆ ಇವರು ಕೂಡ ನಾಡಿನ ಹಿತದೃಷ್ಟಿಯಿಂದ ನಾವು ನೀರು ಬಿಡಲ್ಲ ಅಂತಾ ಹೇಳಬೇಕಿತ್ತು. ಅಲ್ಲದೆ ರಾಜ್ಯದ 28 ಜನ ಸಂಸದರಿದ್ದು, ಇದರಲ್ಲಿ 25 ಜನ ಒಂದೇ ಪಕ್ಷದಿಂದ ಆಯ್ಕೆಯಾಗಿದ್ದೀರ. ನೀವೆಲ್ಲ ಏನು ಮಾಡುತ್ತಿದ್ದೀರಾ ಸ್ವಾಮಿ ಎಂದು ಪ್ರಶ್ನೆಗಳ ಸುರಿಮಳೆಗೈಯ್ಯುವ ಮೂಲಕ ಆಕ್ರೋಶ ಹೊರಹಾಕಿದರು.
ಸುಪ್ರೀಂ ಕೋರ್ಟ್ಗೆ ದಾಖಲಾತಿ ಕೊಡಲು ಸರ್ಕಾರ ವಿಫಲವಾಗಿದೆ. ನಮ್ಮಲ್ಲಿ ಅನೇಕ ನಿವೃತ್ತ ಸುಪ್ರೀಂಕೋರ್ಟ್ ನ್ಯಾಯಾಧೀಶರು ಹಾಗೂ ವಕೀಲರಿದ್ದಾರೆ. ಅವರ ಬಳಿ ಸಲಹೆ ಪಡೆಯಬಹುದಿತ್ತು. ಅದನ್ನು ಬಿಟ್ಟು ರಾಜಕೀಯ ಬೇಳೆ ಬೇಯಿಸಿಕೊಳ್ಳುವ ಕೆಲಸ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಸುಪ್ರೀಂಕೋರ್ಟ್ ಆದೇಶದಂತೆ ತೆಮಿಳುನಾಡಿಗೆ ನೀರು ಬಿಡಲೆಬೇಕು ಅನ್ನುವ ಡಿ.ಕೆ.ಶಿ. ಹೇಳಿಕೆಗೆ ಪ್ರತಿಕ್ರಿಯಿಸಿ, ನಮ್ಮ ಮನೆಯಲ್ಲಿ ತಿನ್ನಲು ಕುಡಿಯಲು ನೀರಿಲ್ಲ ಅಂದಾಗ ಬೇರೆಯವರ ಮನೆಗೆ ಹೇಗೆ ಕೊಡಲು ಸಾಧ್ಯ. ಇದನ್ನೆಲ್ಲ ನೋಡುತ್ತಿದ್ದರೆ ಅಧಿಕಾರಿಗಳು ಮತ್ತು ನಿಗಮದ ಮೇಲೆ ನಿಮ್ಮ ವರ್ಚಸ್ಸು ಇಲ್ಲ ಅನಿಸುತ್ತಿದೆ ಎಂದು ಆಕ್ರೋಶ ಹೊರಹಾಕಿದರು.
ಕೂಡಲೇ ಸುಗ್ರಿವಾಜ್ಞೆ ತಂದು ನೀರು ನಿಲ್ಲಿಸಿ. ಇಲ್ಲದಿದ್ದರೆ 31 ಜಿಲ್ಲೆಗಳಲ್ಲೂ ಜನಪ್ರತಿನಿಧಿಗಳ ಮನೆಗೆ ಮುತ್ತಿಗೆ ಹಾಕುತ್ತೇವೆ. ಇವತ್ತಿನ ಸಭೆಯಲ್ಲಿ ಏನು ನಿರ್ಧಾರವಾಗುತ್ತದೆಯೋ ಅದಕ್ಕೆ ಜಯಕರ್ನಾಟಕ ಬದ್ಧವಾಗಿರುತ್ತದೆ ಎಂದರು.












Click it and Unblock the Notifications