Bengaluru Suburban Rail: ಸೋಲದೇವನಹಳ್ಳಿ ಡಿಪೋ ಟೆಂಡರ್ ಅಂತಿಮ, ಯೋಜನೆ ವಿವರ
ಬೆಂಗಳೂರು, ಜನವರಿ 21: ಉದ್ಯಾನ ನಗರಿ ಬೆಂಗಳೂರಿನ ಸಂಚಾರ ದಟ್ಟಣೆಯನ್ನು ಉಪ ನಗರ ರೈಲು ಯೋಜನೆ ಕಡಿಮೆ ಮಾಡಲಿದೆ ಎಂದು ಅಂದಾಜಿಸಲಾಗಿದೆ. ಬೆಂಗಳೂರು ಉಪನಗರ ರೈಲು ಯೋಜನೆಯ (ಬಿಎಸ್ಆರ್ಪಿ) ಕಾರಿಡಾರ್ನಲ್ಲಿ 2026ಕ್ಕೆ ರೈಲು ಸಂಚಾರ ಆರಂಭಿಸುವ ಗುರಿಯೊಂದಿಗೆ ಈ ಯೋಜನೆಯನ್ನು ರಾಜ್ಯ ಸರ್ಕಾರ ಕರ್ನಾಟಕ ರೈಲ್ ಇನ್ಫ್ರಾಸ್ಟ್ರಕ್ಚರ್ ಡೆವಲಪ್ಮೆಂಟ್ ಕಂಪನಿಯು (ಕೆ-ರೈಡ್) ಮೂಲಕ ಅನುಷ್ಠಾನಗೊಳಿಸುತ್ತಿದೆ.
ಬಿಎಸ್ಆರ್ಪಿ ಯೋಜನೆಯಲ್ಲಿ ಸೋಲದೇವನಹಳ್ಳಿ ಡಿಪೋ ನಿರ್ಮಾಣದ ಟೆಂಡರ್ ಅಂತಿಮವಾಗಿದೆ. ಈ ಡಿಪೋ ನಿರ್ಮಾಣವನ್ನು ಕೆಪಿಸಿ ಪ್ರಾಜೆಕ್ಟ್ ಲಿಮಿಟೆಡ್ ಪಡೆದುಕೊಂಡಿದೆ. ಸಬ್ ಅರ್ಬನ್ ರೈಲು ಯೋಜನೆಯ ಮಲ್ಲಿಗೆ ಕಾರಿಡಾರ್ (24.86 ಕಿ. ಮೀ.) ರೈಲುಗಳನ್ನು ನಿರ್ವಹಣೆ ಮಾಡಲು ಈ ಡಿಪೋ ನಿರ್ಮಾಣ ಮಾಡಲಾಗುತ್ತಿದೆ.

ಮಲ್ಲಿಗೆ ಕಾರಿಡಾರ್ ಬೈಯಪ್ಪನಹಳ್ಳಿ-ಚಿಕ್ಕಬಣಾವರ ನಡುವೆ ಸಂಪರ್ಕ ಕಲ್ಪಿಸುತ್ತದೆ, ಈ ಮಾರ್ಗದಲ್ಲಿ 14 ನಿಲ್ದಾಣಗಳಿವೆ. ಈ ಮಾರ್ಗದಲ್ಲಿ ಮತ್ತೊಂದು ಡಿಪೋ ದೇವನಹಳ್ಳಿ ಬಳಿಯ ಅಕ್ಕುಪೇಟ್ನಲ್ಲಿ ನಿರ್ಮಾಣವಾಗಲಿದೆ. ಎರಡು ಡಿಪೋಗಳು ಸೇರಿ 51 ರೈಲು (306 ಬೋಗಿ) ನಿರ್ವಹಣೆ ಮಾಡಲಿವೆ.
ಸೋಲದೇವನಹಳ್ಳಿ ಡಿಪೋ ವಿವರ: ಸೋಲದೇವನಹಳ್ಳಿ ಡಿಪೋ ನಿರ್ಮಾಣದ ಜೊತೆಗೆ ಒಂದು ಕಿ. ಮೀ. ಗ್ರೇಡ್ ಸೆಕ್ಷನ್ ಲೈನ್ ಸಹ ನಿರ್ಮಾಣ ಮಾಡಲಾಗುತ್ತದೆ. ಈ ಲೈನ್ ಚಿಕ್ಕಬಣಾವರ-ಸೋಲದೇವನಹಳ್ಳಿ ಡಿಪೋ ನಡುವೆ ಸಂಪರ್ಕ ಕಲ್ಪಿಸುತ್ತದೆ.
2024ರಲ್ಲಿ ಕೆ-ರೈಡ್ ಸೋಲದೇವನಹಳ್ಳಿ ಡಿಪೋ ನಿರ್ಮಾಣಕ್ಕೆ ಟೆಂಡರ್ ಕರೆದಿತ್ತು. ಅಂದಾಜು ವೆಚ್ಚ ಸುಮಾರು 170.93 ಕೋಟಿ ರೂ. ಆಗಿದ್ದು, ಈ ಯೋಜನೆಯನ್ನು 24 ತಿಂಗಳಿನಲ್ಲಿ ಪೂರ್ಣಗೊಳಿಸಬೇಕು ಎಂದು ತಿಳಿಸಲಾಗಿದೆ. 2024ರ ಡಿಸೆಂಬರ್ನಲ್ಲಿ ಟೆಂಡರ್ ತೆರೆದಾಗ ಕೇವಲ 2 ಕಂಪನಿಗಳು ಟೆಂಡರ್ ಸಲ್ಲಿಸಿದ್ದವು. ಕೆಪಿಸಿ ಪ್ರಾಜೆಕ್ಟ್ ಲಿಮಿಟೆಡ್ 209.72 ಕೋಟಿ ರೂ. ಬಿಡ್ ಮಾಡಿದೆ.
ಬಿಎಸ್ಆರ್ಪಿ ಯೋಜನೆಯಡಿ ರೈಲು ನಿರ್ವಹಣೆ/ ಆಡಳಿತ/ ವರ್ಕ್ ಶಾಪ್ ಕಟ್ಟಡಗಳು ಸೋಲದೇವನಹಳ್ಳಿಯಲ್ಲಿ ನಿರ್ಮಾಣವಾಗಲಿದೆ. ಒಳ ರಸ್ತೆ, ಸಿವಿಲ್ ಕಾಮಗಾರಿ, ಕಾಪೌಂಡ್, ಒಂದು ಕಿ. ಮೀ. ಗ್ರೇಡ್ ಲೈನ್ಗಳನ್ನು ಸಹ ಇದೇ ಕಂಪನಿ ನಿರ್ಮಾಣ ಮಾಡಬೇಕಿದೆ. ದೇವನಹಳ್ಳಿ ಬಳಿಯ ಅಕ್ಕುಪೇಟ್ನಲ್ಲಿ ಡಿಪೋ ನಿರ್ಮಾಣದ ಟೆಂಡರ್ ಇನ್ನೂ ಬಾಕಿ ಇದೆ.
ಬೆಂಗಳೂರು ಸಬ್ ಅರ್ಬನ್ ರೈಲು ಯೋಜನೆಯಲ್ಲಿ 4 ಕಾರಿಡಾರ್ ಇವೆ. ಇವುಗಳಲ್ಲಿ ಮಲ್ಲಿಗೆ ಕಾರಿಡಾರ್ನಲ್ಲಿ ಮೊದಲು ರೈಲು ಸಂಚಾರ ಆರಂಭವಾಗುವ ನಿರೀಕ್ಷೆ ಇದೆ. ಕರ್ನಾಟಕ ಸರ್ಕಾರ ಸಚಿವ ಸಂಪುಟ ಸಭೆಯಲ್ಲಿ ಈಗಾಗಲೇ ಈ ಯೋಜನೆಗೆ ರೈಲು ಬೋಗಿಯನ್ನು ಖರೀದಿ ಮಾಡಲು ಒಪ್ಪಿಗೆ ನೀಡಿದೆ.
ಬಿಎಸ್ಆರ್ಪಿ 4 ಕಾರಿಡಾರ್ ಒಳಗೊಂಡಿದ್ದು, 148 ಕಿ. ಮೀ. ಉದ್ದವನ್ನು ಹೊಂದಿದೆ. ಮಲ್ಲಿಗೆ ಕಾರಿಡಾರ್ (ಬೈಯಪ್ಪನಹಳ್ಳಿ-ಚಿಕ್ಕಬಣಾವರ 24.8 ಕಿ. ಮೀ.), ಕನಕ ಕಾರಿಡಾರ್ (ಹೀಲಲಿಗೆ-ರಾಜನಕುಂಟೆ 46.2 ಕಿ. ಮೀ.), ಸಂಪಿಗೆ ಕಾರಿಡಾರ್ (ಕೆಎಸ್ಆರ್ ಬೆಂಗಳೂರು-ಯಲಹಂಕ 41 ಕಿ. ಮೀ.) ಮತ್ತು ಪಾರಿಜಾತ ಕಾರಿಡಾರ್ (ಕೆಂಗೇರಿ-ವೈಟ್ಫೀಲ್ಡ್ 35.52 ಕಿ. ಮೀ.).
ತುಮಕೂರು ಸಂಸದ ಹಾಗೂ ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಸಬ್ ಅರ್ಬನ್ ರೈಲು ಯೋಜನೆ ಕುರಿತು ಅಧಿಕಾರಿಗಳ ಸಭೆ ಮಾಡಿದ್ದರು. ಸಭೆಯಲ್ಲಿ 2026ರ ಡಿಸೆಂಬರ್ನಲ್ಲಿ ಬೆನ್ನಿಗಾನಹಳ್ಳಿ-ಚಿಕ್ಕಬಣಾವರ ಮತ್ತು ಹೀಲಲಿಗೆ-ರಾಜನಕುಂಟೆ ಕಾರಿಡಾರ್ಗಳು ಸಂಚಾರಕ್ಕೆ ಮುಕ್ತವಾಗಲಿವೆ ಎಂದು ಎಂದು ಹೇಳಿದ್ದಾರೆ.











Click it and Unblock the Notifications