ಬ್ರಿಗೇಡ್: ಯಡ್ಡಿ-ಈಶು ಜಗಳ, ಬಿಜೆಪಿ ಸದಸ್ಯರು ವಿಲವಿಲ
ಬೆಂಗಳೂರು, ಜನವರಿ 13: ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ವಿಧಾನ ಪರಿಷತ್ ನಾಯಕ ಈಶ್ವರಪ್ಪ ನಡುವಿನ ರಾಯಣ್ಣ ಬ್ರಿಗೇಡ್ ಸಂಘರ್ಷ ತಾರಕಕ್ಕೇರಿದ್ದು, ಪರಿಣಾಮ ಪಕ್ಷದ ಸದಸ್ಯರ ಮೇಲೆ ಬೀರಿದೆ. ಪ್ರಸ್ತುತ ಬ್ರಿಗೇಡಿನಲ್ಲಿ ತೊಡಗಿದ್ದ ಅವ್ವಣ್ಣ ಮ್ಯಾಕೇರಿ ಅವರನ್ನು ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದ ಉಪಾಧ್ಯಕ್ಷ ಸ್ಥಾನದಿಂದ ವಜಾಗೊಳಿಸಲಾಗಿದೆ.
ಬ್ರಿಗೇಡಿನ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿರುವ ಡಿ.ವೆಂಕಟೇಶ ಮೂರ್ತಿಯವರನ್ನು ಬಿಜೆಪಿ ಪ್ರಾಥಮಿಕ ಸದಸ್ಯತ್ವ ದಿಂದ ಮಂಗಳವಾರ ಅಮಾನತು ಮಾಡಲಾಗಿತ್ತು. ಈಗ ಅವ್ವಣ್ಣ ಮ್ಯಾಕೇರಿಯವರನ್ನು ಪದಚ್ಯುತಿಗೊಳಿಸಲಾಗಿದೆ.

ಯಡಿಯೂರಪ್ಪನವರಿಗೆ ಸಂಗೋಳ್ಳಿ ರಾಯಣ್ಣ ಬ್ರಿಗೇಡ್ ಗೆ ವಿರೋಧ ಮೊದಲಿನಿಂದಲೂ ಇದೆ. ಆದರೆ ಈಶ್ವರಪ್ಪನವರು ಮಾತ್ರ ಬ್ರಿಗೇಡ್ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸುತ್ತಲೇ ಇದ್ದಾರೆ. ಏತನ್ಮಧ್ಯೆ ಈಶ್ವರಪ್ಪನವರು ಯಡಿಯೂರಪ್ಪ ಮುಖ್ಯಮಂತ್ರಿಯಾಗುವುದಾದರೆ ಬ್ರಿಗೇಡಿನ ಬೆಂಬಲ ಸಿಗುವುದಿಲ್ಲ ಎಂದು ಬಾಂಬ್ ಸಿಡಿಸಿದ್ದರು. ಅದಕ್ಕೆ ಉತ್ತರವಾಗಿ ಯಡಿಯೂರಪ್ಪ ಬಿಜೆಪಿಗೂ - ರಾಯಣ್ಣ ಬ್ರಿಗೇಡಿಗೂ ಯಾವುದೇ ಸಂಬಂಧವಿಲ್ಲ, ಬಿಜೆಪಿ ಸದಸ್ಯರು ಯಾವುದೇ ಕಾರಣಕ್ಕೂ ಬ್ರಿಗೇಡ್ ಕಾರ್ಯಕ್ರಮದಲ್ಲಿ ಭಾಗವಹಿಸದಿರುವಂತೆ ತಾಕೀತು ಮಾಡಿದ್ದರು.
ಅಲ್ಲದೆ ಆಗ್ನೇಯ ಶಿಕ್ಷಕರ ಕ್ಷೇತ್ರದ ಉಪಚುನಾವಣೆ ಸಂಬಂಧ ಚರ್ಚಿಸಲು ಬುಧವಾರವೇ ಬಿಜೆಪಿ ವಿಧಾನ ಪರಿಷತ್ ಸದಸ್ಯರಿಗೆ ಹೇಳಲಾಗಿದೆ ಎನ್ನಲಾಗಿತ್ತು. ಆದರೆ ಈಶ್ವರಪ್ಪನವರು ಆಹ್ವಾನವೇ ಬಂದಿಲ್ಲ ಎಂದಿದ್ದರು. ಸಂಜೆ ದಿಢೀರ್ ಸಭೆ ನಡೆಸಿ ಪಕ್ಷಕ್ಕೆ ಈಶ್ವರಪ್ಪನವರು ಅನಿವಾರ್ಯವಲ್ಲ ಎಂದು ಬಿಂಬಿಸುವುದು ಯಡಿಯೂರಪ್ಪನವರ ತಂತ್ರವಾಗಿತ್ತು. ಅಲ್ಲದೆ ವಿರೋಧ ಪಕ್ಷ ಸ್ಥಾನಕ್ಕೆ ಹಿರಿಯ ಬಿಜೆಪಿ ಸದಸ್ಯ ಕೆ.ಬಿ.ಶ್ಯಾಮಣ್ಣ ಅವರನ್ನು ಶಿಫಾರಸು ಮಾಡಲು ಉದ್ದೇಶಿಸಲಾಗಿತ್ತು ಎನ್ನಲಾಗಿದೆ.

ಈ ಸಂಬಂಧ ಈಶ್ವರಪ್ಪನವರು ನಾನು ಸತ್ತರೂ ಪಕ್ಷವನ್ನುಬಿಡುವ ಮಾತೇ ಇಲ್ಲ ಎಂದು ನುಡಿದಿದ್ದಾರೆ. ಅಲ್ಲದೆ ರಾಯಣ್ಣ ಬ್ರಿಗೇಡನ್ನು ಮುಂದುವರೆಸುವ ನಿರ್ಧಾರವನ್ನು ತಿಳಿಸಿದ್ದಾರೆ.
ಇನ್ನು ಸಭೆಯಲ್ಲಿ ವಿಧಾನಪರಿಷತ್ತಿನಲ್ಲಿ ಬಿಜೆಪಿಯ 24 ಸದಸ್ಯರಿದ್ದು, ಈ ಪೈಕಿ 12 ಸದಸ್ಯರು ಮಾತ್ರ ಭಾಗವಹಿಸಿದ್ದು, ವಿ. ಸೋಮಣ್ಣ ಹಾಗೂ ತಾರಾ ಅವರು 10 ನಿಮಿಷದಲ್ಲೇ ಸಭೆಯಿಂದ ಹೊರನಡೆದರು. ನಂತರ ಆಗ್ನೇಯ ಶಿಕ್ಷಕರ ಕ್ಷೇತ್ರ ವ್ಯಾಪ್ತಿಯ ಐದು ಜಿಲ್ಲೆಗಳ ಪಕ್ಷದ ಪದಾಧಿಕಾರಿಗಳು ಹಾಗೂ ಪರಿಷತ್ತಿನ ಸದಸ್ಯರ ಜತೆ ಚರ್ಚೆ ನಡೆಯಿತು. 9.30ರ ಸಮಯದಲ್ಲಿ ಪದಾಧಿಕಾರಿಗಳನ್ನು ಹೊರಗೆ ಕಳುಹಿಸಿ, ಪರಿಷತ್ತಿನ ಸದಸ್ಯರ ಜತೆ ಮಾತ್ರ ಯಡಿಯೂರಪ್ಪ ಚರ್ಚಿಸಿದರು. ಏನು ಚರ್ಚಿಸಿದರು ತಿಳಿಯಬೇಕಿದೆ.












Click it and Unblock the Notifications