Namma Metro: ಕೆಂಗೇರಿ-ಚಲ್ಲಘಟ್ಟ ನೇರಳೆ ಮಾರ್ಗದ ಮಹತ್ವದ ಮಾಹಿತಿ
ಬೆಂಗಳೂರು, ಸೆಪ್ಟಂಬರ್ 01: ಬೆಂಗಳೂರು ನಮ್ಮ ಮೆಟ್ರೋದ ನೇರಳೆ ಮಾರ್ಗವು 'ವೈಟ್ಫಿಲ್ಡ್ (ಕಾಡುಗೋಡಿ)ದಿಂದ ಚಲ್ಲಘಟ್ಟವರೆಗೆ ಇದೆ. ಈ ಪೈಕಿ ವಿಸ್ತರಣೆ ಮಾರ್ಗವಾದ ಕೆಂಗೇರಿ-ಚಲ್ಲಘಟ್ಟವರೆಗಿನ ಐದು ದಿನಗಳ ಪರೀಕ್ಷೆ ಪೂರ್ಣಗೊಂಡಿದೆ.
ಹೌದು, ಎಲ್ಲರೂ ನಿರೀಕ್ಷೆಯಿಂದ ಕಾಯುತ್ತಿರುವ ನೇರಳೆ ಮಾರ್ಗ ಓಡಾಟವು ಶೀಘ್ರವೇ ಆರಂಭವಾಗಲಿದೆ. ಅದಕ್ಕು ಮುನ್ನ ಒಂದೊಂದೆ ಪರೀಕ್ಷೆಗಳು ಯಶಸ್ವಿಯಾಗುತ್ತಿವೆ. ಇದೀಗ ಪರ್ಪಲ್ ಲೈನ್ನ ಸಂಪೂರ್ಣ ವಿಸ್ತರಣೆ ಮಾರ್ಗದ ಸ್ಟೀಲ್ ಗರ್ಡರ್ ಐದು ದಿನದ ಪರೀಕ್ಷೆಯನ್ನು ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ (BMRCL) ಶುಕ್ರವಾರ ಸೆಪ್ಟೆಂಬರ್ 1 ರಂದು ಪೂರ್ಣಗೊಳಿಸಿತು ಎಂದು ದಿ ಹಿಂದು ವರದಿ ಮಾಡಿದೆ.
ಬಿಎಂಆರ್ಸಿಎಲ್ 30 ಕೆಜಿ ತೂಕದ ಒಟ್ಟು 2,827 ಮರಳಿನ ಚೀಲಗಳನ್ನು ಟ್ರ್ಯಾಕ್ಗಳು ಮತ್ತು ಪ್ಲಿಂತ್ ಬೀಮ್ ನಡುವೆ ಇರಿಸಿ ಯಶಸ್ವಿ ಪರೀಕ್ಷೆ ನಡೆಸಿತು. ರಚನಾತ್ಮಕ ಸ್ಥಿರತೆ ಖಚಿತತೆಗಾಗಿ ಪೂರ್ಣ ಪ್ರಯಾಣಿಕರ ಸಾಮರ್ಥ್ಯಕ್ಕೆ ಅನುಗುಣವಾಗಿ ಎರಡು ರೈಲುಗಳ ಮೂರು ಬೋಗಿಗಳಲ್ಲಿ 621 ಬ್ಯಾಗ್ಗಳನ್ನು ಇಡಲಾಗಿತ್ತು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಬೈಯಪ್ಪನಹಳ್ಳಿ ಮತ್ತು ಬೆನ್ನಿಗಾನಹಳ್ಳಿ ಮೆಟ್ರೋ ನಿಲ್ದಾಣಗಳ ಮಧ್ಯದ ಭಾರತೀಯ ರೈಲ್ವೆಯ ಟ್ರ್ಯಾಕ್ನ ಮೇಲೆ ಪ್ರಾರಂಭಿಸಲಾದ ಓಪನ್ ವೆಬ್ ಗಿರ್ಡರ್ (OWG) ನ ಲೋಡ್ ಪರೀಕ್ಷೆ ಆಗಸ್ಟ್ ತಿಂಗಳಲ್ಲಿ BMRCL ಮುಗಿಸಿತ್ತು.
ಮೆಟ್ರೋ ರೈಲು ಸುರಕ್ಷತೆ ಕಮಿಷನರ್ (CMRS) ಪರೀಕ್ಷೆಗೆ ಅಧಿಕಾರಿಗಳ ಪರೀಕ್ಷೆಗೂ ಮುನ್ನ ನಿಗದಿಯಂತೆ ಮರಳು ಚೀಲ ಇಟ್ಟು ಸಾಮರ್ಥ್ಯ ಪರಿಕ್ಷೆ ಮುಗಿದೆ. ಇನ್ನೇನು ಸೆಪ್ಟಂಬರ್ 7ರಂದು ಕೆಂಗೇರಿ-ಚಲ್ಲಘಟ್ಟ ವಿಸ್ತರಣೆ ಮಾರ್ಗ ಮತ್ತು ಕೆಆರ್ಪುರ-ಬೈಯಪ್ಪನಹಳ್ಳಿ ನೂತನ ಮಾರ್ಗದ ಪರಿಶೀಲನೆಯನ್ನು ಸಿಎಂಆರ್ಸ್ ಅಧಿಕಾರಿಗಳ ತಂಡ ನಡೆಸುವ ಸಾಧ್ಯತೆಗಳು ಇವೆ.
ಇದೇ ತಿಂಗಳಾಂತ್ಯಕ್ಕೆ ಪೂರ್ಣ ನೇರಳೆ ಮಾರ್ಗದಲ್ಲಿ ಸಂಚಾರ
ವಿಸ್ತರಿತ ಚಲ್ಲಘಟ್ಟದಿಂದ ವೈಟ್ಫಿಲ್ಡ್ (ಕಾಡುಗೋಡಿ)ವರೆಗೆ ಬೆಂಗಳೂರಿನಲ್ಲಿ ನಮ್ಮ ಮೆಟ್ರೋದ ಪೂರ್ಣ ನೇರಳೆ ಮಾರ್ಗವು ಸೆಪ್ಟಂಬರ್ ತಿಂಗಳಾಂತ್ಯಕ್ಕೆ ವಾಣಿಜ್ಯ ಸಂಚಾರಕ್ಕೆ ಮುಕ್ತಗೊಳ್ಳಲಿದೆ ಎಂದು ಆಗಸ್ಟ್ 15ರ ಸ್ವಾತಂತ್ರ್ಯ ದಿನಾಚರಣೆ ವೇಳೆ ತಮ್ಮ ಭಾಷಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಹಿತಿ ನೀಡಿದ್ದರು.
ಬಿಎಂಆರ್ಸಿಎಲ್ ಬೆಂಗಳೂರಿನಲ್ಲಿ ಹಾಲಿ 69.66 ಕಿ.ಮೀ. ಮೆಟ್ರೋ ಸಾರಿಗೆ ಸೇವೆ ನೀಡುತ್ತಿದೆ. ನಿತ್ಯ ಮೆಟ್ರೋ ರೈಲುಗಳ ಮೂಲಕ ಸುಮಾರು 6.1 ಲಕ್ಷ ಮಂದಿ ಪ್ರಯಾಣ ಮಾಡುತ್ತಿದ್ದಾರೆ. ಮುಂದಿನ ತಿಂಗಳ ಸೆಪ್ಟೆಂಬರ್ ನಲ್ಲಿ 2023 ರ ವೇಳೆಗೆ ಬೈಯಪ್ಪನಹಳ್ಳಿ-ಕೆ.ಆರ್.ಪುರ ಮಾರ್ಗ ಮತ್ತು ಚಲ್ಲಘಟ್ಟವರೆಗಿನ ಮಾರ್ಗ ಸಿದ್ಧವಾಗಿದೆ ಎಂದು ಅವರು ತಿಳಿಸಿದ್ದರು.













Click it and Unblock the Notifications