Namma Metro: ನಮ್ಮ ಮೆಟ್ರೋದಲ್ಲಿ ತೆಜಸ್ವಿ ಸೂರ್ಯ, ಪಿಸಿ ಮೋಹನ್ ಸಂಚಾರ; ಪ್ರಯಾಣಿಕರ ಸಮಸ್ಯೆ ಆಲಿಸಿದ ಸಂಸದರು
ಬೆಂಗಳೂರಿನಲ್ಲಿ ಟ್ರಾಫಿಕ್ ಸಮಸ್ಯೆಯನ್ನು ನಿಯಂತ್ರಿಸುವಲ್ಲಿ ನಮ್ಮ ಮೆಟ್ರೋ ಸಹಾಯ ಮಾಡುತ್ತಿದೆ. ಈಗಾಗಲೇ ನಮ್ಮ ಮೆಟ್ರೋದಲ್ಲಿ ದೈನಂದಿನ ಪ್ರಯಾಣಿಕರ ಸಂಖ್ಯೆ 8 ಲಕ್ಷ ಸಮೀಪಕ್ಕೆ ಬಂದಿದೆ. ಪ್ರಯಾಣಿಕರ ಸಂಖ್ಯೆ ಹೆಚ್ಚಾದಂತೆ ಸಮಸ್ಯೆ ಕೂಡ ಆರಂಭವಾಗಿದ್ದು, ಪ್ರಯಾಣಿಕರ ದಟ್ಟಣೆ ನಿರ್ವಹಣೆ ಸದ್ಯಕ್ಕೆ ಸಮ್ಯೆಯಾಗಿದೆ. ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಮತ್ತು ಬೆಂಗಳೂರು ಕೇಂದ್ರ ಸಂಸದ ಪಿ.ಸಿ ಮೋಹನ್ ಸೋಮವಾರ ಮೆಟ್ರೋದಲ್ಲಿ ಸಂಚರಿಸುವ ಮೂಲಕ ಪ್ರಯಾಣಿಕರ ಸಮಸ್ಯೆಯನ್ನು ಆಲಿಸಿದರು.
ನೇರಳೆ ಮಾರ್ಗದಲ್ಲಿನ ವೈಟ್ಫೀಲ್ಟ್ - ಚಲ್ಲಘಟ್ಟ ಮಾರ್ಗದಲ್ಲಿ ಸಂಸದರು ಪ್ರಯಾಣಿಸಿ, ಪ್ರಯಾಣಿಕರ ಕುಂದು ಕೊರತೆಗಳನ್ನು ಆಲಿಸಿದರು. ಮುಖ್ಯವಾಗಿ ಬೆಳಿಗ್ಗೆ ಮತ್ತು ಸಂಜೆ ವೇಳೆ ವಿಪರೀತ ಪ್ರಯಾಣಿಕರ ದಟ್ಟಣೆ ಇರುವುದರಿಂದ, ರೈಲುಗಳ ಸಂಖ್ಯೆಯನ್ನು ಹೆಚ್ಚಿಸುವಂತೆ ಸಂಸದರಿಗೆ ಪ್ರಯಾಣಿಕರು ಮನವಿ ಮಾಡಿದರು.

ಅಲ್ಲದೆ ನಾಡಪ್ರಭು ಕೆಂಪೇಗೌಡ (ಮೆಜೆಸ್ಟಿಕ್) ಮೆಟ್ರೋ ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಗೊಂದಲ ಆಗುವ ರೀತಿಯಲ್ಲಿ ಸೂಚನಾ ಫಲಕಗಳನ್ನು ಅಳವಡಿಸಲಾಗಿದ್ದು, ಪ್ರಯಾಣಿಕರಿಗೆ ತೊಂದರೆಯಾಗಿದೆ ಎನ್ನುವ ದೂರುಗಳು ಕೂಡ ಕೇಳಿಬಂದವು. ಇದನ್ನು ಆಲಿಸಿದ ಸಂಸದರು ಅಧಿಕಾರಿಗಳು ಸರಿಯಾದ ರೀತಿಯಲ್ಲಿ ಸೂಚನಾ ಫಲಕಗಳನ್ನು ಅಳವಡಿಸುವಂತೆ ಸೂಚನೆ ಕೊಟ್ಟರು.
ತೇಜಸ್ವಿ ಸೂರ್ಯ ಟ್ವೀಟ್
ಮೆಟ್ರೋ ಪ್ರಯಾಣಿಕರ ಸಮಸ್ಯೆಗಳನ್ನು ಆಲಿಸಿದ ಬಳಿಕ ಸರಣಿ ಟ್ವೀಟ್ ಮಾಡಿರುವ ಸಂಸದ ತೇಜಸ್ವಿ ಸೂರ್ಯ, ಪ್ರಯಾಣಿಕರ ಸಮಸ್ಯೆಗಳನ್ನು ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದ್ದಾರೆ.
At Majestic and other Stations, commuters often complain about confusing and poorly designed signages. We inspected few such spots to highlight these issues to BMRCL.
— Tejasvi Surya (@Tejasvi_Surya) September 2, 2024
Also urged BMRCL to install platform screen doors to prevent accidents and mishaps, especially in light of… pic.twitter.com/4VLgdC0kuy
ಮೆಜೆಸ್ಟಿಕ್ ಮತ್ತು ಇತರ ನಿಲ್ದಾಣಗಳಲ್ಲಿ, ಪ್ರಯಾಣಿಕರು ಸಾಮಾನ್ಯವಾಗಿ ಗೊಂದಲಮಯ ಮತ್ತು ಕಳಪೆ ವಿನ್ಯಾಸದ ಸೂಚನಾ ಫಲಕಗಳ ಬಗ್ಗೆ ದೂರು ನೀಡಿದ್ದಾರೆ. ಈ ಸಮಸ್ಯೆಗಳನ್ನು ಪರಿಶೀಲನೆ ಮಾಡುವಂತೆ ಬಿಎಂಆರ್ ಸಿಎಲ್ಗೆ ತಿಳಿಸಿದ್ದೇವೆ. ಅಪಘಾತಗಳನ್ನು ತಡೆಗಟ್ಟಲು, ವಿಶೇಷವಾಗಿ ಇತ್ತೀಚಿನ ಸುರಕ್ಷತಾ ಕಾಳಜಿಗಳನ್ನು ಗಮನದಲ್ಲಿಟ್ಟುಕೊಂಡು ಸ್ಕ್ರೀನ್ ಡೋರ್ ಅಳವಡಿಸುವಂತೆ ಕೇಳಿದ್ದೇವೆ ಎಂದು ತಿಳಿಸಿದ್ದಾರೆ.
ಕಳೆದ ವರ್ಷ ನಾನು ನಿರಂತರವಾಗಿ ಪ್ರಯತ್ನ ಮಾಡಿದ್ದರಿಂದ, ಬನಶಂಕರಿ ಮೆಟ್ರೋ ಮತ್ತು ಬಸ್ ನಿಲ್ದಾಣಗಳನ್ನು ಸಂಪರ್ಕಿಸುವ ಸ್ಕೈವಾಕ್ ನಿರ್ಮಾಣಕ್ಕಾಗಿ ನಾವು ಬಿಬಿಎಂಪಿಯಿಂದ 50 ಕೋಟಿ ಅನುದಾನ ಸಿಕ್ಕಿದೆ, ಅದರ ಅನುಷ್ಠಾನದಲ್ಲಿ ಕೂಡ ಪ್ರಗತಿಯಾಗುತ್ತಿದೆ ಎಂದು ಹೇಳಿದ್ದಾರೆ.
ಮೆಟ್ರೋ ಸೇವೆಗಳನ್ನು ಸುಧಾರಿಸಲು ಕಾಮೆಂಟ್ ಮಾಡಿದ, ಇಮೇಲ್ ಮಾಡಿದ ಮತ್ತು ತಮ್ಮ ಸಲಹೆಗಳನ್ನು ಕೈಬಿಟ್ಟ ಎಲ್ಲಾ ಮೆಟ್ರೋ ಪ್ರಯಾಣಿಕರಿಗೆ ನಾನು ಧನ್ಯವಾದ ಹೇಳುತ್ತೇನೆ ಎಂದಿರುವ ತೇಜಸ್ವಿ ಸೂರ್ಯ, ಪ್ರಯಾಣಿಕರ ದೂರುಗಳನ್ನು ಆಧರಿಸಿ ಬಿಎಂಆರ್ ಸಿಎಲ್ಗೆ ವಿವರವಾದ ವರದಿ ನೀಡಿದ್ದು, ಪ್ರಯಾಣಿಕರ ಸುರಕ್ಷತೆ ಮತ್ತು ಅನುಭವಕ್ಕೆ ಆದ್ಯತೆ ನೀಡುವಂತೆ ಮನವಿ ಮಾಡಿದ್ದಾರೆ.












Click it and Unblock the Notifications