Monsoon Active in Benglauru: ಸೋಮವಾರ ಹಗುರ ಮಳೆ ದಾಖಲು, ಜೂನ್ 23ರವರೆಗೆ ಮಳೆ ಆಗಮನ
ಬೆಂಗಳೂರು, ಜೂನ್ 19: ಸಿಲಿಕಾನ್ ಸಿಟಿಯಲ್ಲಿ ಕೆಲವು ದಿನಗಳಿಂದ ಕಣ್ಮರೆಯಾಗಿದ್ದ ವರುಣ ಸೋಮವಾರ ರಾತ್ರಿ ಮತ್ತೆ ಪ್ರತ್ಯಕ್ಷವಾಗಿದ್ದಾನೆ. ಬಿಸಿಲಿಗೆ ಕಂಗೆಟ್ಟಿದ್ದ ನಗರದ ಬಡಾವಣೆಗಳಿಗೆ ಮಳೆರಾಯ ತಂಪೆರೆದಿದ್ದಾರೆ. ಕೆಲವು ಪ್ರದೇಶಗಳಲ್ಲಿ ಬೆಳಗ್ಗೆವರೆಗೂ ಮಳೆ ಮುಂದುವರಿದಿದೆ. ಇನ್ನೂ ಕೆಲವು ದಿನ ಹೀಗೆ ಮಳೆ ಮುಂದುವರಿಯಲಿದೆ.
ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ (KSNDMC) ಮಳೆ ಮುನ್ಸೂಚನೆ ಪ್ರಕಾರ, ಮುಂದಿನ ಜೂನ್ 23 ರವರೆಗೂ ನಗರದಲ್ಲಿ ನಿತ್ಯ ಮಳೆ ಮುಂದುವರಿಯಲಿದೆ. ನಿತ್ಯವು ಇಳಿ ಸಂಜೆಗೆ ಮಳೆಯ ಆಗಮನವಾಗಲಿದೆ, ಮಳೆಗೆ ಕೆಲವೆಡೆ ಸಾಕಷ್ಟು ಸಮಸ್ಯೆ ಉಂಟಾಗು ಸಾಧ್ಯತೆ ಇದೆ.

ನಗರದಲ್ಲಿ ಭಾನುವಾರ ಒಂದೆರಡು ಕಡೆಗಳಲ್ಲಿ ತುಂತುರು ರೂಪದಲ್ಲಿ ಬಂದಿದ್ದ ಮಳೆ ಸೋಮವಾರ ರಾತ್ರಿ 9 ನಂತರ ಸುರಿಯಲು ಶುರುವಿಟ್ಟುಕೊಂಡಿದೆ. ತುಂತುರು ರೂಪದಲ್ಲಿ ಆರಂಭವಾಗಿದ್ದ ಮಳೆ, ಇಡಿ ರಾತ್ರಿ ಜಿಟಿ ಜಿಟಿ ರೂಪದಲ್ಲಿ ಸುರಿಯಿತು.
ಮೆಜೆಸ್ಟಿಕ್ ಸುತ್ತಮುತ್ತಲಿನ ಪ್ರದೇಶಗಳು, ಹೆಬ್ಬಾಳ, ಯಲಹಂಕ, ವಿದ್ಯಾರಣ್ಯಪುರ, ಯಶವಂತಪುರ, ಮಲ್ಲೇಶ್ವರಂ, ರಾಜಾಜಿನಗರ, ವಿಜಯನಗರ, ಹಂಪಿನಗರ, ನಾಯಂಡಹಳ್ಳಿ, ಚಾಮರಾಟಪೇಟೆ, ಕೋರಮಂಗಳ, ಮಡಿವಾಳ, ಲಾಲ್ಬಾಗ್, ಹೊರಮಾವು, ಮಹಾದೇವಪುರ, ಆರ್ಆರ್ ನಗರ, ಕೆಂಗೇರಿ ಸೇರಿದಂತೆ ನಗರರ ವಿವಿಧ ಬಡಾವಣೆಗಳಲ್ಲಿ ಜಿಟಿ ಜಿಟಿ ಮಳೆ ದಾಖಲಾಯಿತು. ಆದರೆ ಎಲ್ಲಿಯೂ ಸಹ (ರಾತ್ರಿ 11ರವರೆಗಿನ ಮಾಹಿತಿ) ವ್ಯಾಪಕ ಮಳೆ ಬಿದ್ದ ಬಗ್ಗೆ ವರದಿ ಯಾಗಿಲ್ಲ.
ಬೆಂಗಳೂರು ನಗರ ಜಿಲ್ಲೆ ರಾಜ್ಯದ ದಕ್ಷಿಣ ಒಳನಾಡು ಭಾಗದ ವ್ಯಾಪ್ತಿಗೆ ಒಳಪಡುತ್ತದೆ. ಬಿಪರ್ಜಾಯ್ ಚಂಡಮಾರುತವು ತೀವ್ರ ಸ್ವರೂಪ ಪಡೆದಾಗಿನಿಂದ ದಕ್ಷಿಣ ಒಳನಾಡಿನ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ ನೀಡಲಾಗಿದೆ. ಹೀಗದ್ದರೂ ಸಹ ಎರಡು ಮೂರು ದಿನ ಜೋರು ಮಳೆ ಸುರಿದಿದ್ದು ಬಿಟ್ಟರೆ ಬೆಂಗಳೂರು ನಗರಕ್ಕೆ ಹೇಳಿಕೊಳ್ಳುವಷ್ಟು ಮಳೆ ಬರಲಿಲ್ಲ.

ಮುಂಗಾರು ಚುರುಕಾಗುವ ಸಾಧ್ಯತೆ
ದಿನ್ಯ ಬೆಳಗ್ಗೆಯಿಂದ ಸಂಜೆ ವರೆಗೆ ಬಿಸಿಲಿನ ಶಾಖ ಹೆಚ್ಚಿತ್ತು. ಆಗೋಮ್ಮೆ ಈಗೊಮ್ಮೆ ಮಬ್ಬು ವಾತಾವರಣ ಕಂಡು ಬರುತ್ತಿದ್ದಾದರೂ ಸಹ ಎಲ್ಲೋ ಕೆಲವೆಡೆ ಚದುರಿದಂತೆ ಮಳೆ ಬೀಳುತ್ತಿತ್ತು. ಹೀಗಾಗಿ ಬಿಸಿಲಿಗೆ ನಗರ ತತ್ತರಿಸಿತ್ತು. ಇದೀಗ ಸೋಮವಾರ ಮಳೆ ಆಗಮನವಾಗಿದೆ. ಇತ್ತ ಬಿಪರ್ಜಾಯ್ ತೀವ್ರತೆಯಲ್ಲಿ ತುಸು ಇಳಿಕೆ ಆಗಿದೆ. ಇದಲ್ಲೆ ನೋಡಿದರೆ ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಮುಂಗಾರು ಚುರುಕುಕೊಳ್ಳುವ ಲಕ್ಷಣಗಳು ಕಂಡು ಬರುತ್ತಿವೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಈ ವಾರಪೂರ್ತಿ ನಗರಕ್ಕೆ ಮಳೆ ಸಾಧ್ಯತೆ
ಎರಡು ವಾರದ ಬಳಿಕ ಬೆಂಗಳೂರಿನಲ್ಲಿ ಮುಂಗಾರು ಚುರುಕುಗೊಳ್ಳುವ ಸಾಧ್ಯತೆ ಇದೆ. ಈ ಕಾರಣದಿಂದಲೇ ಜೂನ್ 23 ಶುಕ್ರವಾರವರೆಗೆ ಮಳೆ ಮುಂದುವರಿಯಲಿದೆ. ನಿತ್ಯ ಕೆಲವೊಮ್ಮೆ ಬಿಸಿಲು ಕಂಡು ಬಂದರೂ ಸಹ ಮಧ್ಯಾಹ್ನ ನಂತರ ಜೋರು ಮಳೆ ಸುರಿಯಲಿದೆ. ಮಳೆ ನೀರು ರಸ್ತೆ, ತಗ್ಗು ಪ್ರದೇಶಗಳಲ್ಲಿ ನಿಲ್ಲದಂತೆ, ಅಂಡರ್ಪಾಸ್ಗಳಲ್ಲಿ ಬಿದ್ದ ನೀರು ಸರಾಗವಾಗಿ ಹರಿದು ಹೋಗುವಂತೆ ಬಿಬಿಎಂಪಿ ಸೂಕ್ತ ಕ್ರಮ ಕೈಗೊಳ್ಳುತ್ತಿದೆ. ಕೆಲವೆಡೆ ರಾಜಕಾಲುವೆ ಒತ್ತುವರಿ ತೆರವು ಕಾರ್ಯ ಸಹ ಆರಂಭವಾಗಿದೆ.
ಮಳೆ ಬರುವ ಮುಂದಿನ ನಾಲ್ಕೈದು ದಿನಗಳು ನಗರದಲ್ಲಿ ತಾಪಮಾನದಲ್ಲಿ ತೀವ್ರ ಇಳಿಕೆ ಆಗಲಿದೆ. ಗರಿಷ್ಠ ತಾಪಮಾನ 28 ಡಿಗ್ರಿಸೆಲ್ಸಿಯಸ್ ಮತ್ತು ಕನಿಷ್ಠ 20 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ ಎಂದು ಹವಾಮಾನ ಇಲಾಖೆ ವರದಿ ತಿಳಿಸಿದೆ.












Click it and Unblock the Notifications