ಬೆಂಗಳೂರಲ್ಲಿ ಬಸ್ ಇಲ್ಲ, ಬಾಕಿ ಎಲ್ಲ ಎಂದಿನಂತೆ
ಬೆಂಗಳೂರು, ಸೆ. 02: ಕಾರ್ಮಿಕ ಸಂಘಟನೆಗಳು ಕರೆ ನೀಡಿರುವ ಭಾರತ್ ಬಂದ್ ಗೆ ಬೆಂಗಳೂರಿನಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಮೆಜೆಸ್ಟಿಕ್ ಸುತ್ತಮುತ್ತ, ಗಾಂಧಿನಗರದಲ್ಲಿ ದಿನದ ವಹಿವಾಟು ಎಂದಿನಂತೆ ನಡೆಯುತ್ತಿದೆ.
ಕೆಆರ್ ಮಾರುಕಟ್ಟೆಯಲ್ಲೂ ಸಹ ಕೆಲ ಅಂಗಡಿಗಳು ಬಾಗಿಲು ತೆರೆದಿವೆ. ಜಯನಗರ, ಬಸವನಗುಡಿ, ಗಾಂಧಿಬಜಾರ್, ಮಲ್ಲೇಶ್ವರಂ ಸೇರಿದಂತೆ ಕೆಲ ಅಂಗಡಿಗಳು ಮಾತ್ರ ಬಾಗಿಲು ಹಾಕಿದ್ದವು. ಬಸ್ ಸಂಚಾರ ಮಾತ್ರ ಸಂಪೂರ್ಣ ಬಂದಾಗಿದ್ದು ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಮೆಟ್ರೋ ಸಂಚಾರ ಎಂದಿನಂತೆ ಇದೆ. ಕೆಲ ರೈಲುಗಳನ್ನು ಮಾತ್ರ ಸ್ಥಗಿತ ಮಾಡಲಾಗಿದೆ.[ಭಾರತ ಬಂದ್: ಬೆಂಗಳೂರಲ್ಲಿ ಏನಾಗುತ್ತಿದೆ]
ಖಾಸಗಿ ಸಂಸ್ಥೆಗಳು ಕಾರ್ಯ ನಿರ್ವಹಿಸುತ್ತಿವೆ. ಜನರು ಸ್ವಂತ ವಾಹನದ ಮೂಲಕ ತೆರಳುತ್ತಿದ್ದಾರೆ. ಪುರಭವನದಿಂದ ಮೆರವಣಿಗೆ ಹೊರಟ ಕಾರ್ಮಿಕ ಸಂಘಟನೆ ಕಾರ್ಯಕರ್ತರು ಸ್ವಾತಂತ್ರ್ಯ ಉದ್ಯಾನದ ಬಳಿ ಇರುವ ಕಾಳಿದಾಸ ಮಾರ್ಗದಲ್ಲಿ ಸಮಾವೇಶಗೊಂಡರು. ಬೆಂಗಳೂರಿನಲ್ಲಿ ಬಂದ್ ಯಾವ ರೀತಿ ಇತ್ತು, ನೋಡಿಕೊಂಡು ಬರೋಣ.

ಟ್ರಾಫಿಕ್ ಜಾಮ್
ಪುರಭವನದ ಎದುರು ಪ್ರತಿಭಟನೆ ನಡೆಯುತ್ತಿದ್ದ ಹಿನ್ನೆಲೆಯಲ್ಲಿ ಜೆಸಿ ರಸ್ತೆಯಲ್ಲಿ ಅರ್ಧ ಕಿಲೋಮೀಟರ್ ದೂರ ಟ್ರಾಫಿಕ್ ಜಾಮ್ ಉಂಟಾಗಿತ್ತು. ಕಚೇರಿಗೆ ತೆರಳುವವರು ಟ್ರಾಫಿಕ್ ಮಧ್ಯೆ ಸಿಕ್ಕಿಹಾಕಿಕೊಂಡು ಸಂಕಟ ಅನುಭವಿಸಬೇಕಾಯಿತು.

ಬಿಎಂಟಿಸಿ ಬಸ್ ಇಲ್ಲ
ಈ ಬಾರಿಯ ಬಂದ್ ಬಗ್ಗೆ ಮೊದಲಿನಿಂದಲೂ ಮಾಹಿತಿ ಇದ್ದ ಕಾರಣ ಜನರು ಮನೆಬಿಟ್ಟು ಹೊರ ಬರುವ ಸಾಹಸ ಮಾಡಲಿಲ್ಲ. ಬೆಂಗಳೂರು ಮಾರ್ಗವಾಗಿ ಕೆಲ ಊರಿಗೆ ತೆರಳಬೇಕಾದವರು ಮಧ್ಯದಲ್ಲಿ ಸಿಕ್ಕಿಹಾಕಿಕೊಂಡರು. ಮೆಜೆಸ್ಟಿಕ್ ಸಿಟಿ ನಿಲ್ದಾಣ ಬಿಕೋ ಎನ್ನುತ್ತಿತ್ತು.

ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ
ಸಿಐಟಿಯು, ಬೃಹತ್ ಬೆಂಗಳೂರು ಬೀದಿ ವ್ಯಾಪಾರಿಗಳ ಸಂಘ ಸೇರಿದಂತೆ 10 ಕ್ಕೂ ಅಧಿಕ ಸಂಘಟನೆಗಳು ಒಂದೆಡೆ ಸೇರಿ ಕೇಂದ್ರ ಸರ್ಕಾರ ಮತ್ತು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಘೋಷಣೆ ಕೂಗಿದರು. ವಿದೇಶಿ ನೇರ ಬಂಡವಾಳ ಹೂಡಿಕೆಗೆ ನೀಡುರುವ ಅವಕಾಶ ಹಿಂಪಡೆಯಬೇಕು ಎಂದು ಒತ್ತಾಯಿಸಿದರು.

ಜನ ಸಂಚಾರ ಎಂದಿನಂತೆ
ಕಾರ್ಮಿಕರು ಕರೆ ನೀಡಿರುವ ಬಂದ್ ಗೆ ಖಾಸಗಿ ಸಂಸ್ಥೆಗಳು ಬೆಂಬಲ ಸೂಚಿಸಲಿಲ್ಲ. ಖಾಸಗಿ ಬಸ್ ಗಳು ಮತ್ತು ಕ್ಯಾಬ್ ಗಳು ಸಂಚಾರ ನಡೆಸುತ್ತಿದ್ದವು. ಖಾಸಗಿ ಕಂಪನಿಗಳು ತಮ್ಮ ಉದ್ಯೋಗಿಗಳಿಗೆ ಕಚೇರಿಗೆ ಆಗಮಿಸಲು ವ್ಯವಸ್ಥೆ ಮಾಡಿದ್ದರು.

ಮದ್ಯದಂಗಡಿಯೂ ತೆರೆದೇ ಇದೆ!
ಮದ್ಯದಂಗಡಿಗಳು ಸಹ ಅಲ್ಲಲ್ಲಿ ಬಾಗಿಲು ತೆರೆದುಕೊಂಡಿರುವುದು ಕಂಡು ಬಂತು. ಶಾಂತಿ ನಗರದ ಬಳಿಯ ಮದ್ಯದಂಗಡಿಯಲ್ಲಿ ವ್ಯಾಪಾರ ನಿರಾತಂಕವಾಗಿ ಸಾಗಿತ್ತು.












Click it and Unblock the Notifications